ಕಥೆ

 ಕೃಷ್ಣ-ರುಕ್ಮಣಿ ಪರಿಣಯ-2

    ಕೃಷ್ಣ-ರುಕ್ಮಣಿ ಪರಿಣಯ-1

ಇತ್ತ ಕಂಸನಿಗೆ ನಿದ್ದೆಯಿಲ್ಲ..!! ಅವನು ಕಳುಹಿಸಿದ್ದ ರಾಕ್ಷಸರು ಒಬ್ಬೊಬ್ಬರಾಗಿ ಸತ್ತುಹೋಗಿದ್ದರು..ಇನ್ನು ಉಳಿದಿರುವುದು ಒಂದೇ ದಾರಿ..!! ತಾನೇ ನೇರವಾಗಿ ಕೃಷ್ಣನನ್ನು ಮುಗಿಸುವುದು..ಅದಕ್ಕಾಗಿ ತನ್ನ ಮಂತ್ರಿ ಅಕ್ರೂರರನ್ನು ಗೋಕುಲಕ್ಕೆ ಶ್ರೀಕೃಷ್ಣನನ್ನು ಕರೆದುಕೊಂಡು ಬರಲು ಕಳುಹಿಸಿದ..ಅಕ್ರೂರ ಗೋಕುಲಕ್ಕೆ ಹೋದವನು ಕೃಷ್ಣನಿಗೆ ಅವನ ಜನ್ಮ ವೃತ್ತಾಂತ ಎಲ್ಲವನ್ನೂ ತಿಳಿಸಿದ..ತನ್ನ ಜನ್ಮ ರಹಸ್ಯವನ್ನು ತಿಳಿದವನಿಗೆ ಹೆತ್ತವರಿಗಾದ ಅನ್ಯಾಯವನ್ನು ಕೇಳಿ ನೋವಾಗಿತ್ತು..!! ಕಂಸನಿಗೆ ತಕ್ಕ ಪಾಠ ಕಲಿಸಿ ಜನ್ಮಧಾತರನ್ನು ಸೆರೆಯಿಂದ ಬಿಡಿಸಲು ನಿಶ್ಚಯಿಸಿ ಮಥುರೆಗೆ ಬರಲು ಒಪ್ಪಿಗೆ ಸೂಚಿಸಿದ..ಕೃಷ್ಣನ ಜೊತೆ ಅಣ್ಣ ಬಲರಾಮನೂ ಹೊರಟು ನಿಂತ..!! ಆಗ ಇಡೀ ಗೋಕುಲವೇ ಕೃಷ್ಣ ಬಲರಾಮರು ತಮ್ಮನ್ನು ಬಿಟ್ಟು ಹೋಗುತ್ತಿರುವುದನ್ನು ಕಂಡು ಕಣ್ಣೀರಿಟ್ಟಿತ್ತು..ತನ್ನ ಸಾಕು ತಂದೆ ನಂದ ತಾಯಿ ಯಶೋದೆ

ಸಹಿತ ಎಲ್ಲರನ್ನೂ ಸಮಾಧಾನ ಪಡಿಸಿ ಕೊನೆಗೆ ಕೃಷ್ಣ ಬಲರಾಮರು ಅಕ್ರೂರನೊಡನೆ ಮಥುರೆಯತ್ತ ಪಯಣ ಬೆಳೆಸಿದರು..ಅಲ್ಲಿ ಕಂಸನ ಮದವೇರಿದ ಕವಲಯಾಪೀಡಾ ಎಂಬ ಆನೆಯನ್ನು ವಧಿಸಿದ ಕೃಷ್ಣ ಮಲ್ಲಯುದ್ಧದಲ್ಲಿ ಅಣ್ಣ ಬಲರಾಮನೊಡನೆ ಸೇರಿ ಚಾಣೂರ ಮುಷ್ಟಿಕ ಎಂಬ ಮಲ್ಲರನ್ನು ಸೋಲಿಸಿ ಕೊಂದ..

ಇನ್ನು ಉಳಿದವನು ಕಂಸನೊಬ್ಬನೇ..ಇನ್ನು ಅವನನ್ನು ಸುಮ್ಮನೆ ಬಿಟ್ಟು ಬಿಡುತ್ತಾನೆಯೇ..?! ಕುಳಿತಿದ್ದ ಸಿಂಹಾಸನದಿಂದ ಎಳೆದು ಹಾಕಿ ಕಂಸನನ್ನು ಗುದ್ದಿ ಗುದ್ದಿಯೇ ಕೊಂದು ಬಿಟ್ಟ ಕೃಷ್ಣ..ಆಮೇಲೆ ಸೆರೆಮನೆಯಲ್ಲಿರುವ ಅಜ್ಜ ಉಗ್ರಸೇನ,ತಂದೆ ವಸುದೇವ ತಾಯಿ ದೇವಕಿ ಎಲ್ಲರನ್ನೂ ಬಿಡುಗಡೆಗೊಳಿಸಿದ..ಇದಾದ ಬಳಿಕ ಸಂದೀಪಿನಿ ಋಷಿಯ ಬಳಿ ತನ್ನ ಮುಂದಿನ ವಿದ್ಯಭ್ಯಾಸ ಮುಗಿಸಿದ ಕೃಷ್ಣ ಈಗ ಒಂದೇ ಸಮನೆ ಉಪಟಳ ಕೊಡುತ್ತಿರುವ ಕಂಸನ ಮಾವ ಜರಾಸಂಧರಿಂದ ತಪ್ಪಿಸಲು ದ್ವಾರಕೆಯಲ್ಲಿ ಬಂದು ನೆಲೆಸಿದ್ದ..

ಸಮೀಪದಲ್ಲಿ ಉಂಟಾದ ಹೆಜ್ಜೆ ಸಪ್ಪಳಕ್ಕೆ ಎಚ್ಚೆತ್ತ ಮಾಧವನಿಗೆ ಕಾಣಿಸಿದ್ದು ವಂದಿಸಿ ನಿಂತಿರುವ ಕಾವಲುಭಟರು..!! ತನ್ನ ಕೊಳಲು ಗಾನವನ್ನು ನಿಲ್ಲಿಸಿ ಏನು ಎಂಬಂತೆ ಅವರನ್ನು ನೋಡಿದ..

“ನಿಮ್ಮನ್ನು ಕಾಣಲು ಬ್ರಾಹ್ಮಣರೊಬ್ಬರು ಬಂದಿದ್ದಾರೆ..!!” ಎಂದರು ಅವರು..”ಸರಿ..ಅವರನ್ನು ಬರಲು ಹೇಳಿ..” ಎಂದ ಕೃಷ್ಣನ ಮಾತಿಗೆ ತಲೆದೂಗಿ ಹೊರಟು ಹೋದರು..ಸ್ವಲ್ಪ ಸಮಯದಲ್ಲಿ ಸುನಂದರು

ಆಗಮಿಸಿದರು..ಕೃಷ್ಣ ಕುಳಿತಿದ್ದ ಉಯ್ಯಾಲೆಯಿಂದ ಎದ್ದು ಅವರಿಗೆ ನಮಸ್ಕರಿಸಿ ಉಪಚರಿಸುತ್ತಾ ಉಯ್ಯಾಲೆಯಲ್ಲಿ ಕುಳ್ಳಿರಿಸಿದ..ಅವರು ಅವನ ಆತಿಥ್ಯಕ್ಕೆ ಸಂತಸಗೊಂಡರು..ಆಶೀರ್ವದಿಸಿದರು..!! ತಾವು ಬಂದ ಕಾರ್ಯವನ್ನು ತಿಳಿಸಿ ರುಕ್ಮಿಣಿ ಕಳುಹಿಸಿದ ಓಲೆಯನ್ನು ಅವನಿಗೆ ಕೊಟ್ಟರು..ಕೃಷ್ಣ ಓಲೆಯನ್ನು ಬಿಡಿಸಿ ಓದತೊಡಗಿದ..ಅದರಲ್ಲಿ ಹೀಗೆ ಬರೆದಿತ್ತು..”ಸ್ವಾಮೀ..ನಾನು ಚಿಕ್ಕ ವಯಸ್ಸಿನಿಂದಲೇ ನಿಮ್ಮನ್ನೇ ಮನಸ್ಸಲ್ಲಿ ನನ್ನ ಪತಿಯೆಂದು ಆರಾಧಿಸುತ್ತಾ ಬಂದಿದ್ದೇನೆ..ಆದರೆ ಇಲ್ಲಿ ಈಗ ನನ್ನ ಅಣ್ಣ ಇದನ್ನು ವಿರೋಧಿಸುತ್ತಿದ್ದಾನೆ..ಚೇದಿ ರಾಜ ಶಿಶುಪಾಲನ ಜೊತೆ ನನ್ನ ವಿವಾಹ ಮಾಡಲು ಹೊರಟಿದ್ದಾನೆ..ಹಾಗಾಗಿ ನಾನು ಏನನ್ನೂ ಮಾಡಲಾಗದೆ ಅಣ್ಣನ ನಿಲುವನ್ನು ವಿರೋಧಿಸಲಾಗದೆ ಧರ್ಮ ಸಂಕಟದಲ್ಲಿ ಮುಳುಗಿದ್ದೇನೆ..ನನ್ನನ್ನು ರಕ್ಷಿಸಿ ಸ್ವಾಮೀ..!!” ಕೃಷ್ಣನು ರುಕ್ಮಿಣಿಯನ್ನು ಬಗ್ಗೆ ಆಲೋಚಿಸಿದ..ನಾನು ರುಕ್ಮಿಣಿಯನ್ನು ನೋಡದಿದ್ದರೂ ಅವಳ ಚೆಲುವಿನ ಬಗ್ಗೆ ಅವರಿವರಿಂದ ಕೇಳಿ ತಿಳಿದಿದ್ದು ಮನಸ್ಸಲ್ಲೇ ಅವಳ ರೂಪವನ್ನು ಕಲ್ಪಿಸಿದ್ದೆ..ಅಲ್ಲದೆ ನಮ್ಮದು ಜನ್ಮ ಜನ್ಮದ ಸಂಬಂಧವಲ್ಲವೇ..ಹಿಂದಿನ ಜನ್ಮದಲ್ಲಿ ಸೀತೆಯಾಗಿದ್ದಾಗ ಅದೆಷ್ಟು ನೋವು,ಕಷ್ಟಗಳನ್ನು ಅನುಭವಿಸಿದಳು..ಅದೇ ರೀತಿ ಈ ಜನ್ಮದಲ್ಲಿಯೂ ಅವಳು ಕಷ್ಟ,ನೋವುಗಳಿಗೆ ಗುರಿಯಾಬೇಕೇ..?! ಇಲ್ಲ..ಹಾಗಾಗಬಾರದು..ಈಗ ಅವಳಿಗೊದಗಿದ ಸಂಕಷ್ಟದಿಂದ ಕಾಪಾಡಲೇಬೇಕು..ಅದು ನನ್ನ ಕರ್ತವ್ಯ ಕೂಡ..?! ಆದರೆ

 “ಸ್ತ್ರೀಯರ ಅಂತಪುರಕ್ಕೆ ಅದೂ ಅನ್ಯ ಪುರುಷರು ಹೋಗುವುದು ನ್ಯಾಯವಲ್ಲ..ಧರ್ಮವೂ ಅಲ್ಲ..ಈಗೇನು ಮಾಡುವುದು ಗುರುಗಳೇ..” ಕೃಷ್ಣನ ಚಿಂತಿತ ಮಾತಿಗೆ ಸುನಂದರು ಪರಿಹಾರ ಸೂಚಿಸಿದರು..”ಅದಕ್ಕೂ ದಾರಿಯಿದೆ..!! ನಾಳೆ ಬೆಳಗ್ಗೆ ರುಕ್ಮಿಣಿ ಕನ್ಯಾ ಗೌರಿ ಪೂಜೆ ಮಾಡಲು ದೇವಿ ದೇವಾಲಯಕ್ಕೆ ಬರುತ್ತಾಳೆ..ಅಲ್ಲಿಂದಲೇ ನೀವು ಕರೆದುಕೊಂಡು ಹೋಗಬಹುದು..” “ಸರಿ..ಹಾಗೆಯೇ ಮಾಡುತ್ತೇನೆ..” ಎಂದ ಕೃಷ್ಣ..ಸುನಂದರು ಅವನಿಗೆ ವಂದಿಸಿ ಅಲ್ಲಿಂದ ತೆರಳಿದರು..ಕೃಷ್ಣ ಆ ಕೂಡಲೇ ಸಾರಥಿಯೊಡನೆ ತನ್ನ ರಥವನ್ನು ಏರಿ ವಿಧರ್ಭದತ್ತ ಪ್ರಯಾಣ ಬೆಳೆಸಿದ..

ಇತ್ತ ಕೃಷ್ಣನನ್ನು ಹುಡುಕಿಕೊಂಡು ಬಂದ ಬಲರಾಮನಿಗೆ ಅವನು ಎಲ್ಲೂ ಕಾಣಿಸಲಿಲ್ಲ..ಕೊನೆಗೆ ಕೃಷ್ಣನ ಅಂತಪುರಕ್ಕೆ ಹೋದಾಗ ಅಲ್ಲಿ ಪಲ್ಲಂಗದ ಮೇಲೆ ಇರಿಸಿದ್ದ ಓಲೆಯೊಂದು ಕಾಣಿಸಿತು..ಅದನ್ನು ತೆಗೆದು ಓದಿದವನ ಕಣ್ಣುಗಳು ಒಮ್ಮೆಲೇ ಕೆಂಪಾದುವು..”ಕೃಷ್ಣ ನೀನು ಒಬ್ಬನೇ ವಿಧರ್ಭದತ್ತ ಹೋದೆಯಲ್ಲ..ಇದು ಸರಿಯೇ..?! ನನಗೊಂದು ಮಾತು ತಿಳಿಸಿ ಹೋಗಲಿಲ್ಲವಲ್ಲ ನೀನು..ಯಾಕೆ ನಿನಗೆ ಈ ಅಣ್ಣನ ಪರಾಕ್ರಮದ ಮೇಲೆ ನಂಬಿಕೆಯಿಲ್ಲವೇ..?!” “ಇಲ್ಲ..ನಿನಗೇನು ಆಗಲು ನಾನು ಬಿಡುವುದಿಲ್ಲ..!! ” ಎಂದು ತನ್ನಲ್ಲೇ ಸ್ವಗತವೆಂಬಂತೆ ನುಡಿದವನು ಕೂಡಲೇ ಮಂತ್ರಿ,ಸೇನಾಧಿಪತಿಗಳನ್ನು ಕರೆಸಿದ..ಅವರೊಡನೆ ಚರ್ಚಿಸಿ ತಾನೂ ದೊಡ್ಡ ಸೈನ್ಯದೊಂದಿಗೆ ವಿಧರ್ಭದತ್ತ ಹೊರಟ.

                                       *****************************************

ಆಗ ಬೆಳಗಿನ ಸಮಯ..ಆಗಸದಲ್ಲಿ ಸೂರ್ಯದೇವನ ಆಗಮನ ಇಳೆಗೆ ಚೈತನ್ಯ ನೀಡಿತ್ತು..ಕಿವಿಗೆ ಇಂಪಾಗಿ ಕೇಳಿಸುವ ಪಕ್ಷಿಗಳ ಕಲರವದ ಜೊತೆಗೆ ಮನಸ್ಸಿಗೆ ಮುದ ನೀಡುವ ಹಿತವಾಗಿ ಬೀಸುವ ತಂಗಾಳಿ..!! ಜೊತೆಗೆ ಜೋರಾಗಿ ಕೇಳಿಸುತ್ತಿರುವ ಪಾರ್ವತೀ ದೇವಿ ದೇಗುಲದ ಗಂಟಾ ನಾದ..!! ಎಲ್ಲವೂ ಮನಸ್ಸಿಗೆ ಸಮಾಧಾನ,ನೆಮ್ಮದಿ ಉಂಟು ಮಾಡುತ್ತಿದೆ..!! ದೇವಾಲಯದ ಗರ್ಭಗುಡಿಯಲ್ಲಿ, ಮೈ ತುಂಬ ಒಡವೆ,ಹೂಗಳಿಂದ ಅಲಂಕಾರಗೊಂಡಿದ್ದ ಪಾರ್ವತೀದೇವಿಯ ವಿಗ್ರಹ..!! ವಿವಿಧ ಕೈಗಳಲ್ಲಿ ಶಂಖ,ಚಕ್ರ,ಗಧೆ,ಖಡ್ಗ,ಬಿಲ್ಲುಬಾಣ ಮತ್ತು ಕಮಲದ ಹೂ ಹಿಡಿದುಕೊಂಡಿದ್ದರೆ ಇನ್ನೊಂದು ಕೈ ಆಶೀರ್ವಾದ ನೀಡುತ್ತಿದೆ..ಹಸನ್ಮುಖಿ ಮುಖ ಭಾವದ ದೇವೀ ವಿಗ್ರಹ ಬೆಳಗಿಸಿದ ದೀಪಗಳ ಬೆಳಕಲ್ಲಿ ಸಾಕ್ಷಾಕ್ ಪಾರ್ವತಿಯೇ ಪ್ರತ್ಯಕ್ಷಳಾದಳೇನೋ ಎಂಬಂತೆ ಕಾಣಿಸುತ್ತಿದೆ..!! ವಿಗ್ರಹದ ಮೂಗಲ್ಲಿನ ಮೂಗುತ್ತಿ ಪಳ ಪಳನೆ ದೀಪದ ಬೆಳಕಲ್ಲಿ ಹೊಳೆಯುತ್ತಿದೆ..!! ಅಲ್ಲಿ ಬಂದಿರುವ ಭಕ್ತರೆಲ್ಲರೂ ಭಕ್ತಿಯಂದ ತಾಯಿಗೆ ನಮಿಸುತ್ತಿದ್ದಾರೆ..ಆಗ ತಾನೆ ದೇವಾಲಯದೊಳಗೆ ಕಾಲಿಟ್ಟ ರುಕ್ಮಿಣಿ ಅಮ್ಮನೆದುರು ನಿಂತು ಭಕ್ತಿಯಿಂದ ಕೈ ಮುಗಿದಳು..ಧರಿಸಿರುವ ಬೆಲೆ ಬಾಳುವ ಸೀರೆ,ಕೊರಳಲ್ಲಿ ಎದ್ದು ಕಾಣಿಸುತ್ತಿದ್ದ ಚಿನ್ನದ ಸರಗಳು,ಕೈಗಳಲ್ಲಿನ ಬಳೆಗಳು,ಕಿವಿಗಳಲ್ಲಿನ ಚಿನ್ನದ ಓಲೆಗಳು,ಮೂಗಿನಲ್ಲಿ ಕಾಣಿಸುತ್ತಿರುವ ಮೂಗುತ್ತಿ ಎಲ್ಲವೂ ಅವಳ ಚೆಲುವನ್ನೂ ಇನ್ನೂ ಹೆಚ್ಚುವಂತೆ ಮಾಡಿದೆ..!! ಅಮ್ಮಾ..ನನ್ನ ಪ್ರಾಣೇಶ್ವರ ಬೇಗನೆ ಬರುವಂತೆ ಮಾಡು..ನನ್ನ ಪ್ರೀತಿಗೆ ಜಯ ಸಿಗುವಂತೆ ಮಾಡು..ಕಣ್ಣುಗಳನ್ನು ಮುಚ್ಚಿ ಭಕ್ತಿಯಿಂದ ಪ್ರಾರ್ಥಿಸಿದಳು ರುಕ್ಮಿಣಿ..!! ಅದಾಗಲೇ ಶಿಶುಪಾಲ,ಜರಾಸಂಧರು ಅರಮನೆಗೆ ಆಗಮಿಸಿದ್ದು ವಿವಾಹ ತಯಾರಿ ಜೋರಾಗಿ ನಡೆಯುತ್ತಿತ್ತು..ಅದೇ ಕಾರ್ಯದಲ್ಲಿ ಕನ್ಯಾ ಗೌರಿ ಪೂಜೆ ಮಾಡಲು ರುಕ್ಮಿಣಿ ದೇವಾಲಯಕ್ಕೆ ಬಂದಿದ್ದಳು..ಭೀಷ್ಮಕ ಮತ್ತು ಸುಧಾಮತಿಗೆ ರುಕ್ಮಿಣಿ ಕೃಷ್ಣನನ್ನು ವರಿಸುವುದರ ಬಗ್ಗೆ ವಿರೋಧವಿಲ್ಲದಿದ್ದುದರಿಂದ  ಖುಷಿಯಿಂದಲೇ ಮಗಳಿಗೆ ಆಶೀರ್ವಾದ ಮಾಡಿ ಕಳುಹಿಸಿದ್ದರು..ಈಗ ಸಮಯ ಸರಿಯುತ್ತಿತ್ತು..ಮಾಧವನ ಸುಳಿವಿಲ್ಲ..!!

   ಅದೇ ಸಮಯದಲ್ಲಿ ಶ್ರೀಕೃಷ್ಣ ಇದ್ದ ರಥ ಪಾರ್ವತೀ ದೇವಿಯ ದೇವಾಲಯದ ಕಡೆಗೆ ವೇಗವಾಗಿ ಸಾಗುತ್ತಿತ್ತು..ಆಗಲೇ “ಕೃಷ್ಣ..” ದೊಡ್ಡದಾಗಿ ಧ್ವನಿಯೊಂದು ಕೇಳಿಸಿ ತಿರುಗಿ ನೋಡಿದವನಿಗೆ ಬಲರಾಮ ಬರುತ್ತಿರುವುದು ಕಾಣಿಸಿತು..ಅವನನ್ನು ಹೊತ್ತ ರಥ ವೇಗವಾಗಿ ಬರುತ್ತಿದೆ..ಹಿಂದೆ ದೊಡ್ಡದಾದ ಸೈನ್ಯ ಬೇರೆ..!! “ಅಣ್ಣ ನೀನು..ಅದೂ ಸೈನ್ಯದೊಡನೆ..?!” ಕೃಷ್ಣನಿಗೆ ಅಚ್ಚರಿಯಾಗಿತ್ತು..

ರಥ ಹತ್ತಿರ ಬಂದಾಗ ಕೃಷ್ಣನಿಗೆ ಬಲರಾಮ ಹೇಳಿದ..”ಕೃಷ್ಣ..ನೀನು ಒಬ್ಬನೇ ಬರುವ ಅವಶ್ಯಕತೆ ಏನಿತ್ತು..?! ಯಾಕೆ ನಿನಗೆ ನನ್ನ ಪರಾಕ್ರಮದ ಮೇಲೆ ಅನುಮಾನವೇ..?!” ಅಗ್ರಜನ ಕೋಪದ ಮಾತಿಗೆ ಕೃಷ್ಣ ನಗುತ್ತಾ ಸಮಾಧಾನವಾಗಿ ಉತ್ತರಿಸಿದ..”ಇದೇನು ಹೀಗೆ ಮಾತನಾಡುತ್ತಿರುವೆ ಅಣ್ಣ..ನಿನ್ನ ಸಾಮಥ್ರ್ಯದ ಬಗ್ಗೆ ನಾನು ಅನುಮಾನ ಪಡುವುದೇ..?!” “ಮತ್ತೆ ನೀನು ನನಗೂ ತಿಳಿಸದೆ ಯಾಕೆ ಒಬ್ಬನೇ ಬಂದೆ..” “ಹೇಳಬಹುದಿತ್ತು..ಆದರೆ ಸಮಯ ಕೂಡ ತುಂಬಾನೇ ಕಡಿಮೆ ಇದೆ..ಅಲ್ಲದೆ ರುಕ್ಮಿಣಿಯನ್ನು ಕರೆದುಕೊಂಡು ಬರುವ ಸಣ್ಣ ಕಾರ್ಯಕ್ಕೆ ಮಹಾ ಪರಾಕ್ರಮಿಯಾದ ನೀನು ಬರುವುದು ಎಷ್ಟು ಸರಿ..?!” ಎಂದು ಅಣ್ಣನನ್ನು ಹೊಗಳಿದ..ಮೊದಲೇ ಹೊಗಳಿಕೆಗೆ ಉಬ್ಬಿ ಹೋಗುವ ಬಲರಾಮನು ಇಲ್ಲೂ ಕೂಡ ಕೃಷ್ಣನ ಹೊಗಳಿಕೆಯಿಂದ ಸಂತಸಗೊಂಡ..”ಹೌದು ಹೌದು..ನೀನು ಹೇಳಿದ್ದು ಸರಿಯಾಗಿದೆ ಕೃಷ್ಣ..ಆದರೂ ನನಗೆ ಒಂದು ಮಾತು ಹೇಳಿ ಬರಬಹುದಿತ್ತು..ಹುಂ..ಪರವಾಗಿಲ್ಲ..” ಎಂದ ಬಲರಾಮ..”ಅಣ್ಣ ಸಮಯ ತುಂಬಾನೇ ಕಡಿಮೆಯಿದೆ..ನಾನು ಹೋಗಬಹುದೇ..?!” ಕೇಳಿದ ಕೃಷ್ಣ.. “ಹೌದು..ಹೌದು..ಸಮಯ ತುಂಬಾನೇ ಕಡಿಮೆಯಿದೆ..ನೀನು ಹೋಗು..ನಿನ್ನ ಹಿಂದೆ ನಾನೂ ಸೈನ್ಯ ಬರುತ್ತೇವೆ..” ಎಂದು ಒಪ್ಪಿದ ಬಲರಾಮ..ಕೃಷ್ಣನ ಆಜ್ಞೆಯಂತೆ ಸಾರಥಿ ರಥವನ್ನು ವೇಗವಾಗಿ ಮುನ್ನಡೆಸಿದ..ಬಲರಾಮನಿದ್ದ ರಥ ಮತ್ತು ಅವನ ಇಡೀ ಸೈನ್ಯ ಕೃಷ್ಣನ ರಥವನ್ನು ಹಿಂಬಾಲಿಸಿದುವು.

  ರುಕ್ಮಿಣಿ ಕಾಯುತ್ತಿದ್ದಾಳೆ..!! ಅವಳ ಮನಸ್ಸಲ್ಲಿ ಗೊಂದಲ..ಏನೋ ತಳಮಳ ಉಂಟಾಗುತ್ತಿದೆ..ಹೀಗೆ ಯಾರಿಗೂ ತಿಳಿಯದೆ ಕದ್ದು ಮುಚ್ಚಿ ಮೆಚ್ಚಿದವನ ಜೊತೆ ಹೋಗುವುದು ಸರಿಯಿದೆಯೇ..?! ಸಮಾಜ ಒಪ್ಪುತ್ತದೆಯೇ..?! ತಂದೆ,ತಾಯಿ ಮತ್ತು ಅಣ್ಣ ಎಲ್ಲರ ಗೌರವ,ಮಯರ್ಾದೆಯನ್ನು ಹಾಳು ಮಾಡುತ್ತಿದ್ದೇನೆಯೇ..?! ಒಮ್ಮೆ ಮನಸ್ಸು ಈ ತರಹ ಯೋಚಿಸಿದರೆ ಮತ್ತೊಮ್ಮೆ, ತಾನು ಮಾಡಿದ್ದು ಸರಿಯಾಗಿದೆ..ಅಣ್ಣ ನನ್ನ ಇಷ್ಟಕ್ಕೆ ವಿರುದ್ಧವಾಗಿ ನಡೆದುಕೊಂಡರೆ ಇನ್ನೇನು ಮಾಡಲಿ..?! ತಂದೆ ತಾಯಿಗೂ ಏನೂ ಮಾಡಲಾಗಲಿಲ್ಲ..!! ಇನ್ನು ಈ ರೀತಿ ಕದ್ದು ಮುಚ್ಚಿ ಓಡಿ ಹೋಗುವುದನ್ನು ಬಿಟ್ಟರೆ ಬೇರೆ ಯಾವ ದಾರಿಯಿದೆ..?! ಅಲ್ಲದೆ ನಾನು ಕೃಷ್ಣನನ್ನು ಮನಸಾರೇ ಪತಿಯೆಂದು ಸ್ವೀಕರಿಸಿಯಾದ ಮೇಲೆ ಅವನ ಜೊತೆ ಹೋಗುವುದರಲ್ಲಿ ತಪ್ಪೇನಿದೆ..?! ರುಕ್ಮಿಣಿಯ ಮನಸ್ಸು ಹೀಗೂ ಆಲೋಚಿಸಿತ್ತು..”ಯುವರಾಣಿ..ಅಲ್ಲಿ ನೋಡಿ ರಥವೊಂದು ಇತ್ತ ಬರುತ್ತಿದೆ..!!” ಎಂದು ಸೇವಕಿಯ ಧ್ವನಿಗೆ ರುಕ್ಮಿಣಿ ಕಾತರದಿಂದ ನೋಡಿದಳು..ವೇಗವಾಗಿ ರಥವೊಂದು ಬಂದು ದೇವಾಲಯದ ಮುಂಭಾದತ್ತ ಬಂದಿತು..ಅದರಲ್ಲಿ ನಿಂತುಕೊಂಡಿದ್ದವನನ್ನು ನೋಡಿ ಅವಳ ಮನಸ್ಸು ಹುಚ್ಚೆದ್ದು ಕುಣಿಯಿತು..ಅವನೇ..ನನ್ನ ಹೃದಯೇಶ್ವರ..?!  ಹಸನ್ಮುಖಿ ಮುಖ ಭಾವದ ಶ್ಯಾಮಲ ವರ್ಣದ ಚೆಲುವ..!! ತಾನು ಮನಸ್ಸಲ್ಲೇ ಕಲ್ಪಸಿ ಬಿಡಿಸಿದ ಚಿತ್ರದಲ್ಲಿರುವವನಂತೆ ಇರುವನಲ್ಲಾ..ಅವಳಿಗೆ ಅಚ್ಚರಿ..!! ಇತ್ತ ಕೃಷ್ಣನಿಗೂ ಅದೇ ಅನುಭವ..!! ಅವಳನ್ನು ನೇರವಾಗಿ ನೋಡದಿದ್ದರೂ ಉಳಿದವರು ಹೇಳಿದ್ದನ್ನು ಕೇಳಿ ಮನಸ್ಸಲ್ಲೇ ಕಲ್ಪಸಿಕೊಂಡ ಅದೇ ರೂಪ..!! ದುಂಡಗಿನ ಮುಖದ,ಆಕರ್ಷಕ ನಯನಗಳ ಸುಂದರಿಯತ್ತ ಬೆರಗಾಗಿ ನೋಡಿದ ಕೃಷ್ಣ..ರುಕ್ಮಿಣಿಯೂ ಅವನತ್ತ ಒಲವಿನ ನೋಟ ಬೀರಿದಳು..ಒಂದು ಕ್ಷಣ ಇಬ್ಬರ ಕಂಗಳು ಬೆರೆತವು..ಕೂಡಲೇ ಎಚ್ಚೆತ್ತ ಕೃಷ್ಣ ರುಕ್ಮಿಣಿಯತ್ತ ಕೈ ಚಾಚಿದ..ಅವಳು ತನ್ನ ಹಾಲು ಬಿಳುಪಿನ ಮೃದುವಾದ ಕೈಯನ್ನು ಅವನ ಕೈಯೊಳಗೆ ಇರಿಸಿದಳು..ಕೃಷ್ಣ ಅವಳನ್ನು ಮೇಲಕ್ಕೆ ಎಳೆದು ರಥದಲ್ಲಿ ನಿಲ್ಲಿಸಿದ..ನಂತರ ಇಬ್ಬರು ಅಲ್ಲಿಯೇ ಭಕ್ತಿಯಿಂದ ದೇವಿಗೆ ನಮಿಸಿದರು..ಮರು ಕ್ಷಣ ಕೃಷ್ಣನ ಆಜ್ಞೆಯಂತೆ ಸಾರಥಿ ರಥವನ್ನು ಬಂದ ದಾರಿಯಲ್ಲೇ ಓಡಿಸಿದ..ಆದರೆ ಅದು ತಡವಾಗಿತ್ತು..ಈ ದೃಶ್ಯವನ್ನು ಆಗ ತಾನೇ ದೇವಾಲಯದತ್ತ ಬಂದ ರುಕ್ಮ ನೋಡಿಯೇ ಬಿಟ್ಟ..!! ಸಿಟ್ಟಿನಿಂದ ಕಣ್ಣುಗಳು ಕೆಂಪಗಾದುವು..”ರುಕ್ಮಿಣಿ..” ಎಂದು ಜೋರಾಗಿ ಅಬ್ಬರಿಸಿದ..ತಡ  ಮಾಡದೆ ಕೃಷ್ಣನ ರಥವನ್ನು ತನ್ನ ರಥದಲ್ಲಿ ಹಿಂಬಾಲಿಸಿದ..ಈ ವಿಷಯ ಶಿಶುಪಾಲ,ಜರಾಸಂಧರಿಗೆ ತಿಳಿದು ಅವರು ರುಕ್ಮನ ನೆರವಿಗೆ ಧಾವಿಸಿದರು..ಆದರೆ ಅವರನ್ನು ಅರ್ಧದಲ್ಲೇ ಬಲರಾಮ ತಡೆದ..ಅಲ್ಲಿ ಭಯಂಕರ ಕಾಳಗ ನಡೆಯತೊಡಗಿತ್ತು..

*****************************************

ಶ್ರೀಕೃಷ್ಣ,ರುಕ್ಮಿಣಿಯನ್ನು ಹೊತ್ತ ರಥ ವೇಗವಾಗಿ ಸಾಗುತ್ತಿದೆ..!! ರುಕ್ಮಿಣಿ ಭಯದಿಂದ ಪದೇ ಪದೇ ಹಿಂದೆ ತಿರುಗಿ ನೋಡುತ್ತಿದ್ದಾಳೆ..!! ಕೃಷ್ಣ ಏನೂ ನಡೆದೇ ಇಲ್ಲವೆಂಬಂತೆ ಶಾಂತಚಿತ್ತನಾಗಿ ಮುಗುಳ್ನಗುತ್ತಾ ಕುಳಿತಿದ್ದ.. “ಸ್ವಾಮೀ..ನನ್ನ ಸಹೋದರ ರುಕ್ಮ ಹಿಂಬಾಲಿಸಿ ಬರುತ್ತಿದ್ದಾನೆ..ಈಗೇನು ಮಾಡುವುದು..?!” ಗಾಬರಿಯಿಂದ ಪ್ರಶ್ನಿಸಿದಳು.. “ಪ್ರಿಯೇ..ಅದಕ್ಕೆ ಯಾಕೆ ಇಷ್ಟೊಂದು ಗಾಬರಿ ಪಡುವ ಅಗತ್ಯವಿದೆ..ಅವನು ಬರಲಿ ಬಿಡು..!!” ಎಂದು ಸಮಾಧಾನಚಿತ್ತನಾಗಿಯೇ ಕೃಷ್ಣ ಉತ್ತರಿಸಿದ..ಅವಳು ಅಚ್ಚರಿಯಿಂದ ಕೃಷ್ಣನ ಕಡೆಗೆ ನೋಡಿದಳು..ಅದಾಗಲೇ ರುಕ್ಮನ ರಥ ಕೃಷ್ಣ ರುಕ್ಮಿಣಿಯರಿದ್ದ ರಥದ ಸಮೀಪ ಬಂದಿತ್ತು..”ನಿಲ್ಲಿಸು” ಎಂದು ರುಕ್ಮ ಗಟ್ಟಿಯಾಗಿ ಕೂಗಿದ..ಆಗ ಕೃಷ್ಣ ಸಾರಥಿಗೆ ರಥವನ್ನು ನಿಲ್ಲಿಸಲು ಹೇಳಿದ..ಅಶ್ವಗಳ ಲಗಾಮುಗಳನ್ನು ಹಿಡಿದೆಳೆದು ಸಾರಥಿ ರಥವನ್ನು ನಿಲ್ಲಿಸಿದ..ಅದೇ ಸಮಯಕ್ಕೆ ರುಕ್ಮನ ರಥವೂ ನಿಂತಿತು..

“ದುಷ್ಟ..ಏನು ನೀನು ನನ್ನ ಸಹೋದರಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗುತ್ತಿದ್ದಿಯಾ..?! ನಿನ್ನ ಸಾವು ಸಮೀಪದಲ್ಲೇ ಇದೆ ಎಂಬುದನ್ನು ಮರೆತೆಯಾ ಹೇಗೆ..?!” ರುಕ್ಮ ಘರ್ಜಿಸಿದ..ಅದಕ್ಕೆ ಉತ್ತರವಾಗಿ ಕೃಷ್ಣ ನಗುತ್ತಾ ಉತ್ತರಿಸಿದ..”ನಿನ್ನ ಸಹೋದರಿಯನ್ನು ಬಲಾತ್ಕಾರವಾಗಿ ಎಳೆದುಕೊಂಡು ಹೋಗುತ್ತಿದ್ದೇನೆಯೆಂದು ನಿನಗೆ ಹೇಳಿದವರಾರು..?! ಇವಳು ನನ್ನ ಪತ್ನಿ..ನಮಗೆ ಈಗಾಗಲೇ ವಿವಾಹವಾಗಿದೆ..” ರುಕ್ಮ ಬೆಚ್ಚಿಬಿದ್ದ..”ಏನು ವಿವಾಹವೇ..?! ಸಾಧ್ಯವಿಲ್ಲ..ಆದರೂ ಅದು ಶಾಸ್ತ್ರೋಕ್ತವಲ್ಲ..ದುಷ್ಟ..ನೀನು ಅವಳನ್ನು ಅಪಹರಿಸಿ ಕರೆದುಕೊಂಡು ಬಂದಿದ್ದೀಯಾ.?!”

“ಅಪಹರಣ..!!” ಎಂದ ಕೃಷ್ಣನ ಮುಖದಲ್ಲಿ ನಗು ಇನ್ನೂ ಹಾಗೆಯೇ ಇತ್ತು.. “ಹೌದು..ನಮಗಾರಿಗೂ ನಿನ್ನೊಡನೆ ರುಕ್ಮಿಣಿಯ ವಿವಾಹ ಮಾಡುವ ಉದ್ದೇಶವಿರಲಿಲ್ಲ..ಹಾಗಿದ್ದ ಮೇಲೆ ನೀನು ನಮ್ಮ ಇಚ್ಚೆಗೆ ವಿರುದ್ಧವಾಗಿ ನಡೆದುಕೊಂಡಿರುವುದು ಅಪಹರಣವಲ್ಲವೇ..?!” ರುಕ್ಮ ಹೇಳಿದ..ಸಿಟ್ಟಿನಿಂದ ಅವನ ಮೈ ನಡುಗುತ್ತಿತ್ತು..”ಇದಕ್ಕೆ ರುಕ್ಮಿಣಿಯ ಒಪ್ಪಿಗೆಯಿದೆಯೆಂದ ಮೇಲೆ ಅದು ಹೇಗೆ ಅಪಹರಣವಾಗುತ್ತದೆ..!!” ಎಂದು ರುಕ್ಮಿಣಿಯತ್ತ ನೋಡಿ ನುಡಿದ ಕೃಷ್ಣ..ಅವಳು ಗಾಬರಿಯಿಂದ ನಿಂತಿದ್ದಳು.. “ರುಕ್ಮಿಣಿ ಶಿಶುಪಾಲನನ್ನು ಮದುವೆಯಾಗಬೇಕಾದವಳು..!!” ರುಕ್ಮನ ಮಾತಿಗೆ ಕೃಷ್ಣ “ಆಗಿರಬಹುದು..ಆದರೆ ನಿನ್ನ ಸಹೋದರಿ ನನ್ನನ್ನು ಪ್ರೇಮಿಸುತ್ತಿದ್ದಾಳೆ..ಆ ಶಿಶುಪಾಲನನ್ನಲ್ಲ..!!..ಇನ್ನು ನೀನು ಬಲವಂತವಾಗಿ ಅವಳ ಪ್ರೇಮವನ್ನು ತೊಡೆದು ಹಾಕಲು ಪ್ರಯತ್ನಿಸಿದೆ..ಇದು ಎಷ್ಟು ಸರಿ..?!” “ಇಲ್ಲಿ ಅವಳ ಅಭಿಪ್ರಾಯದ ಅಗತ್ಯವಿಲ್ಲ..!! ನಾವು ಹೇಳಿದ್ದನ್ನು ಅವಳು ಕೇಳಬೇಕು..!!” ಎಂದ ರುಕ್ಮನಿಗೆ ಕೃಷ್ಣ ನುಡಿದ..”ಅದು ಹೇಗೆ ಸಾಧ್ಯ..!! ಸ್ತ್ರೀಯರೂ  ಪುರುಷರಷ್ಟೇ ಸಮಾನರು..ಅವರಿಗೂ ಅಧಿಕಾರವಿದೆ..ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ..!! ಇನ್ನು ತಾವು ಯಾರನ್ನು ವಿವಾಹವಾಗಬೇಕು ಎಂಬ ನಿರ್ಣಯವನ್ನು ತೆಗೆದುಕೊಳ್ಳುವ ಹಕ್ಕು ಕೂಡ ಸ್ತ್ರೀಯರಿಗಿದೆ ಎಂಬುದುವುದನ್ನು ಮರೆಯಬೇಡ..ಇದನ್ನು ಶಾಸ್ತ್ರದಲ್ಲೂ ಹೇಳಲಾಗಿದೆ..!!” “ಇಲ್ಲ..ರಾಜನೀತಿ ಮತ್ತು ವಿವಾಹದ ವಿಷಯವನ್ನು ನಿರ್ಣಯಿಸುವುದು ಪುರುಷರು ಮಾತ್ರ..!!” ಈ ಮಾತಿಗೆ ಮುಗುಳ್ನಗುತ್ತಾ ಹೇಳಿದ ಕೃಷ್ಣ..”ತಮ್ಮ ಜೀವನದ ಬಗೆಗಿನ ನಿರ್ಣಯ ತೆಗೆದುಕೊಳ್ಳುವ ಹಕ್ಕು ಈ ಸೃಷ್ಟಿಯಲ್ಲಿ ಎಲ್ಲರಿಗೂ ಇದೆ..ಇಲ್ಲಿ ಪ್ರಾಣಿ,ಪಕ್ಷಿ ಮನುಷ್ಯರೆಂಬ ಬೇಧಭಾವವಿಲ್ಲ..!!” ಆ ಮಾತಿಗೆ ಕೋಪಗೊಂಡ ರುಕ್ಮ,”ನೀನು ಸುಮ್ಮನೆ ವಾದ ಮಾಡುತ್ತಿರುವೆ ಕೃಷ್ಣ..!! ನಿನಗೆ ಇನ್ನೊಮ್ಮೆ ಹೇಳುತ್ತಿದ್ದೇನೆ..ರುಕ್ಮಿಣಿಯನ್ನು ಮರ್ಯಾದೆಯಾಗಿ ಬಿಟ್ಟು ಬಿಡು..ಇಲ್ಲದಿದ್ದರೆ ಮುಂದಾಗುವ ಪರಿಣಾಮಕ್ಕೆ ನಾನು ಜವಾಬ್ದಾರನಲ್ಲ..!!” ಎಚ್ಚರಿಸಿದ ರುಕ್ಮ.. “ರುಕ್ಮ ಈ ಆವೇಶ ನಿನಗೆ ಒಳ್ಳೆಯದಲ್ಲ..!!” “ಕ್ಷತ್ರಿಯನಾದ ನಿನಗೆ ಯುದ್ದ ಮಾಡಲು ಭಯವೇ ಕೃಷ್ಣ..!!” ಇಷ್ಟು ಹೊತ್ತು ತಾಳ್ಮೆಯಿಂದ ಇದ್ದ ಕೃಷ್ಣನಿಗೆ ಇನ್ನು ಸುಮ್ಮನಿರಲಾಗಲಿಲ್ಲ..”ರುಕ್ಮ..ನಿನಗೆ ಬುದ್ದಿ ಹೇಳಿ ಪ್ರಯೋಜನವಿಲ್ಲ..ಇನ್ನು ನಿನ್ನ ಸಾವು ನನ್ನ ಕೈಯಲ್ಲೇ ಎಂದು ಬರೆದರೆ ಅದನ್ನು ತಪ್ಪಿಸಲು ಸಾಧ್ಯವೇ..?!” ಎಂದು ಸಿಟ್ಟಿನಿಂದ ಹೇಳಿದ ಕೃಷ್ಣ..”ನೋಡೇ ಬಿಡೋಣ..” ಎಂದ ರುಕ್ಮ ತನ್ನ ಬೆನ್ನಿನ್ನಲ್ಲಿದ್ದ ಬತ್ತಳಿಕೆಯಿಂದ ಬಾಣವೊಂದನ್ನು ತೆಗೆದು ಬಿಲ್ಲಿಗೆ ಏರಿಸಿ ಕೃಷ್ಣನತ್ತ ಹೂಡಿದ..ಅದಕ್ಕೆ ಪ್ರತಿಯಾಗಿ ಕೃಷ್ಣ ತಾನೂ ಬಾಣವನ್ನು ಹೂಡಿ ಅದನ್ನು ತಡೆದ..

ಅದನ್ನು ನೋಡಿ ರುಕ್ಮನಿಗೆ ಆಘಾತವಾದರೆ ರುಕ್ಮಿಣಿಯ ಮುಖದಲ್ಲಿ ಮಂದಹಾಸ ಮೂಡಿತ್ತು..ರುಕ್ಮ ಹೂಡಿದ ಪ್ರತಿಯೊಂದು ಅಸ್ತ್ರಗಳು,ನಾಗಾಸ್ತ್ರ,ವರುಣಾಸ್ತ್ರ,ಅಗ್ನಿಯಾಸ್ತ್ರಾದಿಗಳಿಗೆ ಪ್ರತ್ಯುತ್ತರ ನೀಡಿ ಅದನ್ನು ಅರ್ಧದಲ್ಲೇ ತಡೆದು ತುಂಡರಿಸಿದ ಜಗದೇಕ ವೀರ ಶ್ರೀಕೃಷ್ಣ..!! ರುಕ್ಮ ಇದನ್ನು ನೋಡಿ ಹತಾಶನಾದ..!! ಅದೇ ಕ್ಷಣದಲ್ಲೇ ಕೃಷ್ಣ ಹೂಡಿದ ಒಂದು ಬಾಣ ರುಕ್ಮನ ಕೈಯಲ್ಲಿದ್ದ ಬಿಲ್ಲು ಬಾಣಗಳನ್ನು ಕೆಳಗೆ ಬೀಳಿಸಿದರೆ ನಂತರ ಬಂದಂತಹ ಇನ್ನೊಂದು ಬಾಣ ರಥವನ್ನು ತುಂಡರಿಸಿತು..ರುಕ್ಮ,ಸಾರಥಿಯ ಸಮೇತ ಕೆಳಗೆ ಬಿದ್ದು ಬಿಟ್ಟ..!! ರಥದಿಂದ ಮುಕ್ತವಾದ ಅಶ್ವಗಳು ಜೋರಾಗಿ ಕೆನೆಯುತ್ತಾ ಓಡಿದುವು..ಇನ್ನು ಕೃಷ್ಣ ರುಕ್ಮನನ್ನು ಕೊಲ್ಲಲು ತನ್ನ ಸುದರ್ಶನ ಚಕ್ರವನ್ನು ಹಿಡಿದುಕೊಂಡಿದ್ದನ್ನು ನೋಡಿ ರುಕ್ಮಿಣಿ ಕೃಷ್ಣನಲ್ಲಿ ದಯನೀಯವಾಗಿ ಬೇಡಿಕೊಂಡಳು..”ಬೇಡ ಸ್ವಾಮೀ..ಕೊಲ್ಲಬೇಡಿ..ಅವನು ನನ್ನ ಅಗ್ರಜ..!! ಒಬ್ಬ ಸಹೋದರಿಯ ಎದುರು ಸಹೋದರನು ವಧಿಸಲ್ಪಡುವುದನ್ನು ಅವಳು ಹೇಗೆ ನೋಡಿಯಾಳು..ನೀವೇ ಯೋಚಿಸಿ….!!” ಎಂದವಳ ನಯನಗಳು ಅದಾಗಲೇ ಕೊಳದಂತಾಗಿದ್ದುವು..”ದೇವೀ ಇವನ ದುಷ್ಟತನ ಈಗಾಗಲೇ ಮಿತಿ ಮೀರಿದೆ..ಇನ್ನು ಸುಮ್ಮನೆ ಬಿಟ್ಟರೆ ಹೇಗೆ..?!” “ಆದರೂ ಒಡ ಹುಟ್ಟಿದವನು ಎಂಬ ಪ್ರೀತಿ ಇದಕ್ಕೆ ತಡೆಯೊಡ್ಡುತ್ತಿದೆಪ್ರಭೂ..ಕಾಯಾ,ವಾಚಾ,ಮನಸಾ ನಿಮ್ಮನೇ ನಂಬಿರುವ ನನ್ನ ಈ ಒಂದು ಬಿನ್ನಹವನ್ನು ನಡೆಸಿ ಕೊಡಿ..ನನ್ನ ಸಹೋದರನನ್ನು ಬಿಟ್ಟು ಬಿಡಿ..” ಕೈ ಮುಗಿದು ಮಾಧವನಲ್ಲಿ ಬೇಡಿದಳು..ಅವನ ಮನಸ್ಸು ಕರಗಿತು..”ಸರಿ ದೇವೀ..ನಿನ್ನ ಇಚ್ಛೆಯಂತೆ ಆಗಲಿ..” ಎಂದವನು ಸುದರ್ಶನ ಚಕ್ರವನ್ನು ಹಿಂದಕ್ಕೆ ಪಡೆದ..”ರುಕ್ಮ..ಹೋಗು..ನಿನಗೆ ಜೀವದಾನ ನೀಡಿದ್ದೇನೆ..ಇನ್ನಾದರೂ ಒಳ್ಳೆಯವನಾಗಿ ಬದುಕು..ಇನ್ನು ನಿನಗೆ ಈ ಜೀವದಾನ ಲಭಿಸಿದ್ದು ನಿನ್ನ ಒಡಹುಟ್ಟಿದವಳಿಂದ..ಅವಳ ಸಹೋದರ ಪ್ರೇಮದಿಂದ ಎಂಬುವುದನ್ನು ಯಾವತ್ತೂ ಮರೆಯಬೇಡ..!!” ಎಂದು ರುಕ್ಮನಿಗೆ ಎಚ್ಚರಿಕೆ ನೀಡಿ ಬಿಟ್ಟು ಬಿಟ್ಟ..ಯುದ್ದದಲ್ಲಿ ಸೋತು ಏನೂ ಮಾಡಲಾಗದೆ ಅಸಹಾಯಕನಂತೆ ನಿಂತಿದ್ದ ರುಕ್ಮ..!! “ದೇವೀ ಹೋಗೋಣವೇ..?!” ಎಂದು ಪ್ರೀತಿಯಿಂದ ಕೇಳಿದ ಕೃಷ್ಣ..”ಹುಂ..ಸ್ವಾಮೀ..” ಎಂದ ರುಕ್ಮಿಣಿ ಅವನ ಭುಜದ ಮೇಲೆ ತಲೆಯಿಟ್ಟಳು..ಅವಳ ತಲೆಯನ್ನು ಪ್ರೀತಿಯಿಂದ ಸವರಿದವನು ಸಾರಥಿಗೆ ರಥ ಮುನ್ನಡೆಸಲು ಹೇಳಿದ..ರಥ ಮುಂದಕ್ಕೆ ಸಾಗಿತ್ತು..ಇದೆಲ್ಲವನ್ನೂ ಕುತೂಹಲದಿಂದ ಆಗಸದಲ್ಲಿ ನಿಂತುಕೊಂಡು ನೋಡುತ್ತಿದ್ದ ಇಂದ್ರಾದಿ ದೇವತೆಗಳು ಸಂತಸದಿಂದ ಹೂ ಮಳೆಗೈದರು..ಕೈಲಾಸದಿಂದ ಶಿವ-ಪಾರ್ವತಿಯರು ಸತ್ಯಲೋಕದಿಂದ ಬ್ರಹ್ಮ-ಸರಸ್ವತಿಯರು ಈ ಜನುಮದ ಜೋಡಿಗೆ ಆಶೀರ್ವದಿಸಿದರು..ಇನ್ನು ನಾರದ

ಹರ್ಷದಿಂದಲೇ “ನಾರಾಯಣ..ನಾರಾಯಣ..” ಎಂದು ವಿಷ್ಣುನಾಮ ಜಪಿಸುತ್ತಾ ಕುಣಿಯತೊಡಗಿದ್ದ.

  ಇತ್ತ ರುಕ್ಮನ ಸೋಲಿನ ಸುದ್ದಿ ತಿಳಿದ ಜರಾಸಂಧ,ಶಿಶುಪಾಲ ತಾವೂ ಯುದ್ಧದಿಂದ ಹಿಂದೆ ಸರಿದರು..ಬಲರಾಮನು ಯುದ್ಧದಲ್ಲಿ ಗೆದ್ದ ಖುಷಿಯಿಂದಲೇ ದ್ವಾರಕೆಗೆ ಹಿಂತಿರುಗಿದ..ನಂತರ ದ್ವಾರಕೆಯಲ್ಲಿ ಕೃಷ್ಣ-ರುಕ್ಮಿಣಿಯರ ಅದ್ಧೂರಿ ವಿವಾಹ ಮಹೋತ್ಸವ ನಡೆಯಿತು..ಅದರಲ್ಲಿ ಪಾಲ್ಗೊಂಡಿದ್ದ ಸಪ್ತರ್ಷಿಗಳು,ದೇವಾನು ದೇವತೆಗಳ ಸಹಿತ ಎಲ್ಲರೂ ವಿವಾಹ ಉಡುಗೆಯಲ್ಲಿ ಮಿರ ಮಿರನೆ ಮಿಂಚುತ್ತಿದ್ದ ನವ ಜೋಡಿ ಶ್ರೀಕೃಷ್ಣ-ರುಕ್ಮಣಿಯರನ್ನು ಖುಷಿಯಿಂದಲೇ ಆಶೀರ್ವದಿಸಿದ್ದರು.

Facebook ಕಾಮೆಂಟ್ಸ್

ಲೇಖಕರ ಕುರಿತು

Vinod Krishna

ಸಾಫ್ಟ್’ವೇರ್ ಕಂಪೆನಿಯಲ್ಲಿ ಉದ್ಯೋಗದ ನಡುವಿನ ಬಿಡುವು..ಆ ಸಮಯದಿ ಬರವಣಿಗೆಯತ್ತ ಹೆಚ್ಚು ಒಲವು..
ತನ್ನದೇ ಶೈಲಿಯಲ್ಲಿ ಗೀಜಿ ರಚಿಸಲ್ಪಟ್ಟ ಕಥೆಗಳು ಹಲವು..ಅವುಗಳಲ್ಲಿ ಕಿರುಚಿತ್ರವಾದವುಗಳು ಕೆಲವು..
ಮಿಕ್ಕಂತೆ ಒಳ್ಳೆಯ ಪುಸ್ತಕಗಳನ್ನು ಓದುವುದು,ಸಿನೆಮಾ ವೀಕ್ಷಣೆ,ಹಾಡನ್ನು ಕೇಳುವುದು ಇತರ ಹವ್ಯಾಸಗಳು..
ದೇವರ ಸ್ವಂತ ನಾಡಿನ ಕಾಸರಗೋಡು ಜಿಲ್ಲೆಯ ಕುಂಟಂಗೇರಡ್ಕ ಎಂಬ ಪುಟ್ಟ ಊರು ಹುಟ್ಟೂರು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!