Featured ಪ್ರಚಲಿತ

ಕಮ್ಯುನಿಸಂನ ಚಿಮ್ಮುಹಲಗೆಯಾಗದಿರಲಿ ಕರುನಾಡ ಕರಾವಳಿ!!

ಆತ ಹದಿಹರೆಯದ ತರುಣ. ಬಾಲ್ಯದಿಂದಲೇ ನಮಸ್ತೇ ಸದಾ ವತ್ಸಲೇಯನ್ನು ಪ್ರತಿದಿನ ಹಾಡಿ ಬೆಳೆದವ. ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ ಎಂಬ ಚಿಂತನೆಯನ್ನು ಮೈಗೂಡಿಸಿಕೊಂಡು ರಾಷ್ಟ್ರಕಾರ್ಯದಲ್ಲಿ ಚುರುಕಾಗಿ ತೊಡಗಿಸಿಕೊಂಡಿದ್ದರಿಂದಾಗಿ ಪಿಯು ಶಿಕ್ಷಣ ಮಾಡುತ್ತಿರುವಾಗಲೇ ಎರ್ನಾಕುಲಂನ ಕಣ್ಣಾಮಲೈಯ ಸಹಕಾರ್ಯವಾಹ ಜವಾಬ್ದಾರಿಯೂ ಆತನ ಹೆಗಲಿಗೇರಿತ್ತು. ಎಂದಿನಂತೆ ರಾತ್ರಿಶಾಖೆಯನ್ನು ಮುಗಿಸಿ ಸುಮಾರು ಎಂಟೂಮೂವತ್ತರ ಹೊತ್ತಿಗೆ ಮನೆಗೆ ಮರಳುತ್ತಿರುವಾಗ ಮಾರಕಾಸ್ತ್ರಗಳನ್ನು ಹಿಡಿದು ಬಂದ ತಂಡವೊಂದು ಆತನನ್ನು ನಡುಬೀದಿಯಲ್ಲಿ ಕೊಚ್ಚಿಹಾಕುತ್ತದೆ. ಈ ಮೂಲಕ ೨೪ ಡಿಸೆಂಬರ್ ೧೯೭೪ರಂದು ಸುಧೀಂದ್ರನಾಥ ಪೈ ಎಂಬ ಅಪ್ಪಟ ರಾಷ್ಟೀಯವಾದಿ ಯುವಕನ ಕಗ್ಗೊಲೆಯಾಗುತ್ತದೆ. ಯೋಧರಾಗಿ ಸೇವೆ ಸಲ್ಲಿಸಿ ಕಮ್ಯುನಿಸಂನ ಹಿಂಬಾಲಕರಾಗಿದ್ದ ಅಲಪ್ಪುಳದ ಧರ್ಮರಾಜನ್ ಅವರು ಸಂಘದ ರಾಷ್ಟೀಯವಾದಿ ವಿಚಾರಿಗಳಿಂದ ಪ್ರೇರಿತರಾಗಿ ಸಂಘದ ತೆಕ್ಕೆಗೆ ಜಾರಿ ತಮ್ಮ ಇಬ್ಬರು ಮಕ್ಕಳನ್ನೂ ರಾಷ್ಟ ಸೇವಿಕಾ ಸಮಿತಿಯ ಸದಸ್ಯರನ್ನಾಗಿ ಮಾಡಿ ಸಮಾಜಕಾರ್ಯಕ್ಕೆ ಇಡೀ ತಮ್ಮ ಕುಟುಂಬವನ್ನೇ ಅರ್ಪಿಸಿಕೊಂಡರು. ತಮ್ಮ ಕಾರ್ಯಕರ್ತರಾಗಿದ್ದವರು ಸಂಘದ ಸಂಪರ್ಕಕ್ಕೆ ಬಂದುದನ್ನು ಸಹಿಸದ ಮಾರ್ಕಿಸ್ಟ್ ಗೂಂಡಾಗಳು ೧೩ ಜೂನ್ ೧೯೮೨ ರಂದು ಅಲಪ್ಪುಳ ನಗರದ ಹೃದಯಭಾಗದಲ್ಲಿ ಧರ್ಮರಾಜನ್ ಮತ್ತು ಅವರ ಪತ್ನಿ ಯಶೋದಾ ಅವರನ್ನು ಸೈಕಲ್ ಚೈನುಗಳಿಂದ ಅತ್ಯಂತ ಬರ್ಬರವಾಗಿ ಹತ್ಯೆ ಮಾಡುತ್ತಾರೆ. ಚೆನ್ನಿತ್ತಲದ ಮಂಡಲ ಕಾರ್ಯವಾಹರಾಗಿದ್ದ ಮುರಳಿಯವರದ್ದು ಕೂಡಾ ಇದೇ ರೀತಿಯ ದಾರುಣ ಹತ್ಯೆ ಮಾರ್ಕಿಸ್ಟ್ ಗೂಂಡಾಗಳ ಕೈಯಲ್ಲಿ ನಡೆಯುತ್ತದೆ. ಸ್ವಯಂಸೇವಕನೊಬ್ಬನ ಮನೆಗೆ ಬೆದರಿಕೆ ಹಾಕಲು ಬಂದಿದ್ದ ಕಮ್ಯುನಿಸ್ಟ್ ಕಾರ್ಯಕರ್ತರೊಡನೆ ರಾಜಿ ಮಾತುಕತೆ ಮಾಡಿ ಹಿಂದಿರುಗುತ್ತಿದ್ದ ಮುರಳಿ ಮತ್ತು ಅವರ ಸ್ನೇಹಿತ ಕಲಾಧರನ್ ಅವರ ಕೊಲೆ ನಡೆದದ್ದು ೧೪ ಜೂನ್ ೧೯೮೨ರಂದು. ೯-೧೦ ವರ್ಷಗಳ ಮುಗ್ಧ ಮಕ್ಕಳ ಕಣ್ಣೆದುರೇ ಬರ್ಬರವಾಗಿ ಹತ್ಯೆಗೊಂಡ ಜಯಕೃಷ್ಣನ್ ಮಾಸ್ತರ್,SFI,DYFI ಗೂಂಡಾಗಳಿಂದ ಹಲ್ಲೆಗೊಳಗಾಗಿ ಆತ್ಮರಕ್ಷಣೆಗಾಗಿ ಪಂಪಾನದಿಗೆ ಹಾರಿ ವಿರೋಧಿಗಳೆಸೆದ ಕಲ್ಲುಗಳ ದಾಳಿಯಿಂದಾಗಿ ಮತ್ತೊಂದು ತೀರವನ್ನು ಸೇರಲಾಗದೇ ಮೃತಪಟ್ಟ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಸದಸ್ಯರಾಗಿದ್ದ ಅನು,ಸುಜಿತ್ ಮತ್ತು ಕಿಮ್ ಕರುಣಾಕರನ್, ಮೊನ್ನೆ ಮೊನ್ನೆ ಕಮ್ಯುನಿಸ್ಟರ ದಾಳಿಗೊಳಗಾಗಿ ಫೆಬ್ರವರಿ ೧೭ ರಂದು ಮೃತಪಟ್ಟ ಕೊಲ್ಲಂನ ಕಡಕ್ಕಲ್ ಪಂಚಾಯತ್ ಅಧ್ಯಕ್ಷ ರವೀಂದ್ರನಾಥ್ ಹೀಗೆ ಸುಮಾರು ಮನ್ನೂರಕ್ಕೂ ಹೆಚ್ಚು ರಾಜಕೀಯ ಹತ್ಯೆಗಳು ದೇವರ ಸ್ವಂತ ನಾಡು ಎಂದೇ ಕರೆಯಲ್ಪಡುವ ಕೇರಳದಲ್ಲಿ ನಡೆದಿವೆ.

ಅಷ್ಟಕ್ಕೂ ಕೇರಳದಲ್ಲಿ ಈ ಪರಿಯಲ್ಲಿ ಕಮ್ಯುನಿಸ್ಟ್ ಕಾರ್ಯಕರ್ತರು ರಾಷ್ಟ್ರೀಯತಾವಾದಿಗಳನ್ನು ಹತ್ಯೆಮಾಡುತ್ತಿರುವುದು ಏಕೆ ಅಂದರೆ ರಾಷ್ಟ್ರವಾದವು ಕಮ್ಯುನಿಸ್ಟ್ ಸಿದ್ದಾಂತಗಳನ್ನು ವಿರೋಧಿಸುತ್ತದೆ ಎಂಬುದಕ್ಕಾಗಿ. ಕಮ್ಯೂನಿಸ್ಟರು ಭಾರತದಲ್ಲಿ ತಮ್ಮ ಮೊದಲ ನೆಲೆಯನ್ನು ಕಂಡುಕೊಂಡದ್ದು ಕೇರಳದಲ್ಲಿಯೇ. ಇಎಂಎಸ್ ನಂಬೂದಿರಿಪಾಡ್ ನೇತೃತ್ವದಲ್ಲಿ ಕೇರಳದ ಮೊದಲ ಸರಕಾರ ೧೯೫೭ರಲ್ಲಿ ಅಸ್ತಿತ್ವಕ್ಕೆ ಬಂತು. ಇದೇ ಸಮಯದಲ್ಲಿ ಉತ್ತರ ಕೇರಳದ ಕಣ್ಣೂರು ಭಾಗದಲ್ಲಿ ರಾಷ್ಟ್ರೀಯಸ್ವಯಂಸೇವಕಸಂಘದ ಶಾಖೆಗಳು ಬೆಳೆಯಲಾರಂಭಿಸಿದವು. ದೇಶಭಕ್ತಿಯನ್ನು ಶಾಖೆಗೆ ಕಾಲಿಟ್ಟ ಎಲ್ಲಾ ಸ್ವಯಂಸೇವಕರಲ್ಲೂ ಸಂಘ ಮೂಡಿಸುತ್ತಿದ್ದುದರಿಂದ ದೇಶಪ್ರೇಮಕ್ಕಿಂತ ಹೆಚ್ಚು ತಮ್ಮ ಸಿದ್ದಾಂತದ ಮೇಲೆ ನಿ‍ಷ್ಠೆ ತೋರಿ ಸೋವಿಯತ್ ರಷ್ಯಾ ಮತ್ತು ಚೀನಾಕ್ಕೆ ತಮ್ಮ ಬೆಂಬಲ ವ್ಯಕ್ತಪಡಿಸುತ್ತಿದ್ದ ಕಮ್ಯುನಿಸ್ಟರಲ್ಲಿ ಸಂಘದ ಮೇಲೆ ಅಸಹಿಷ್ಣುತೆ ಮೊಳಕೆಯೊಡಲಾರಂಭಿಸಿತು. ೧೯೬೪ರಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾದಿಂದ ಬೇರ್ಪಟ್ಟು CPI(M) (ಮಾರ್ಕ್ಸ್ ವಾದಿ)ರಚನೆಯಾದ ಮೇಲಂತೂ ಈ ಅಸಹಿಷ್ಣುತೆ ಇನ್ನಷ್ಟು ಹೆಚ್ಚಾಯಿತು. ಕೇರಳದ ಮೊದಲ ರಾಜಕೀಯ ಹತ್ಯೆ ನಡೆದದ್ದು ೨೮ ಎಪ್ರಿಲ್ ೧೯೬೯ರಂದು.ಕಣ್ಣೂರಿನ ವಡಿಕ್ಕಲ್ ಶಾಖೆಯ ಮುಖ್ಯಶಿಕ್ಷಕರಾಗಿದ್ದ ರಾಮಕೃಷ್ಣನ್ ಎಂಬವರು ಆ ದಿನ ಮಾರ್ಕಿಸ್ಟ್ ಗಳ ಕೈಯಲ್ಲಿ ಕೊಲೆಗೀಡಾಗಿದ್ದರು. ಈ ಕೊಲೆಯ ಮುಖ್ಯ ಆರೋಪಿಯಾದವರು ಈಗ ಕೇರಳದ ಮುಖ್ಯಮಂತ್ರಿ ಆಗಿರುವ ಪಿಣರಾಯಿ ವಿಜಯನ್. ಈ ಘಟನೆಯ ನಂತರ ಸಂಘಪರಿವಾರದೊಡನೆ ಗುರುತಿಸಿಕೊಂಡಿದ್ದ ನೂರಾರು ಕಾರ್ಯಕರ್ತರ ಕೊಲೆಗಳು ಕೇರಳದಲ್ಲಿ ನಡೆದುಹೋದವು.ಈ ಕೊಲೆಗಳಲ್ಲಿ ಹೆಚ್ಚಿನವು CPI(M) ಆಡಳಿತ ನಡೆಸುತ್ತಿದ್ದ ಕಾಲದಲ್ಲೇ ಕಮ್ಯುನಿಸ್ಟ್ ಕಾರ್ಯಕರ್ತರೇ ಮಾಡಿದರು ಎಂಬುದು ವಿಪರ್ಯಾಸ. ಕಾರ್ಮಿಕರ ದಲಿತರ ಮತ್ತು ಹಿಂದುಳಿದವರ ಕಲ್ಯಾಣ ಎಂದು ಭಾಷಣ ಬಿಗಿಯುವ ಕಮ್ಮಿಗಳು ಕೊಲೆಗೈದದ್ದು ಮಾತ್ರ ಈ ವರ್ಗಕ್ಕೆ ಸೇರಿದವರನ್ನೇ!

ಕೇರಳದ ಪಕ್ಕದ ನಮ್ಮ ಕರ್ನಾಟಕದಲ್ಲಿ ಕಮ್ಯುನಿಸಂನ ಪ್ರಭಾವ ಅಷ್ಟಕ್ಕಷ್ಟೇ. ಕಮ್ಯುನಿಸಂ ಇಲ್ಲಿ intellectuals ಎಂಬ ವರ್ಗಕ್ಕೆ ಸೀಮಿತವಾಗಿದ್ದರೂ ಕೆಲವು ಕಡೆ ಹಿಂದುಳಿದ ವರ್ಗದವರಿಗೆ ಕಾರ್ಮಿಕರಿಗೆ ಸುಳ್ಳುಭರವಸೆಗಳನ್ನು ನೀಡಿ ಅವರನ್ನು ತಮ್ಮತ್ತ ಸೆಳೆಯುವ ಪ್ರಯತ್ನವೂ ನಡೆದಿದೆ.ಈಗಿನ ಸರಕಾರದ ಅವಧಿಯಲ್ಲಂತೂ ನಮ್ಮ ಮುಖ್ಯಮಂತ್ರಿಗಳ ಸುತ್ತಮುತ್ತ ನಕ್ಸಲ್ವಾದ,ಕಮ್ಯುನಿಸಂಗೆ ಬಹಿರಂಗ ಬೆಂಬಲ ನೀಡುವ ಬುದ್ಧಿವಂತರ ಗಡಣವೇ ತುಂಬಿಬಿಟ್ಟಿದೆ. ಇವರ ಮೂಲಕ ಹಲವು ಸಂಘಟನೆಗಳ ನೇತೃತ್ವದಲ್ಲಿ ಕಮ್ಯುನಿಸಂನ್ನು ಕರ್ನಾಟಕಕ್ಕೆ ಪಸರಿಸುವ ಪ್ರಯತ್ನ ನಡೆಯುತ್ತಿದೆ. ಇದರ ಒಂದು ಭಾಗವಾಗಿ ಮಂಗಳೂರಿನಲ್ಲಿ ಇದೇ ಫೆಬ್ರವರಿ ೨೫ರಂದು ಕಮ್ಯುನಿಸ್ಟ್ ಸಿದ್ಧಾಂತಪ್ರಣೀತ ಸಂಘಟನೆಗಳು ಮಂಗಳೂರಿನಲ್ಲಿ ಐಕ್ಯತಾ ರ್ಯಾಲಿ ಎಂಬ ಸಮಾವೇಶವನ್ನು ಹಮ್ಮಿಕೊಂಡಿವೆ. ಈ ಕಾರ್ಯಕ್ರಮದ ಮುಖ್ಯಭಾಷಣಕಾರನಾಗಿ ಬರುತ್ತಿರುವುದು ಯಾರು ಗೊತ್ತೇ? ಕೇರಳದ ಪ್ರಥಮ ರಾಜಕೀಯ ಕೊಲೆ ಆರೋಪಿ,ತನ್ನ ವಿರೋಧೀ ಸಿದ್ಧಾಂತದವರನ್ನು ಜೀವಂತವಾಗಿ ಹೂಳಬೇಕು ಎಂದು ಕರೆಕೊಟ್ಟು ನೂರಾರು ಹಿಂದೂಸಂಘಟನೆಗಳ ಕಾರ್ಯಕರ್ತರ ಕೊಲೆಗೆ ಕಾರಣನಾದ ಪಿಣರಾಯಿ ವಿಜಯನ್!. ತನ್ನ ರಾಜ್ಯದಲ್ಲೇ ಅವ್ಯಾಹತವಾಗಿ ನಡೆಯುತ್ತಿರುವ ರಕ್ತದ ಚೆಲ್ಲಾಟ,ಪ್ರತಿನಿತ್ಯಸರಾಸರಿ ೬ ಹೆಣ್ಣುಮಕ್ಕಳ ಮೇಲೆ ಆಗುತ್ತಿರುವ ಅತ್ಯಾಚಾರಗಳು,ನಕ್ಸಲಿಸಂ,ತಾಂಡವವಾಡುತ್ತಿರುವ ನಿರುದ್ಯೋಗ ಮುಂತಾದ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ವಿಫಲನಾದ ಮುಖ್ಯಮಂತ್ರಿಯೊಬ್ಬ ಕರ್ನಾಟಕಕ್ಕೆ ಬಂದು ಐಕ್ಯತೆ,ಸಮಾನತೆ ಬಗ್ಗೆ ಭಾಷಣ ಮಾಡುವುದು ಒಂದು ಥರ ದೆವ್ವದ ಬಾಯಲ್ಲಿ ವೇದಾಂತ ಪ್ರವಚನ ಮಾಡಿಸಿದಂತಾಗಲಿಲ್ವೇ!! ಹಾಗಾಗಿ ಕಮ್ಯುನಿಸಂ ಎಂಬ ಕಾರ್ಕೋಟಕ ವಿ‍ಷ ಕರುನಾಡಿನ ಕರಾವಳಿಗೆ ಕಾಲಿಡದಂತೆ ಮಾಡಲು ಕರ್ನಾಟಕ ಇನ್ನೊಂದು ಕೇರಳವಾಗದಿರಲು ನಾಡಿನ ಪ್ರಜ್ಞಾವಂತ ಜನತೆ ಪಿಣರಾಯಿಯ ಮಂಗಳೂರಿನ ಆಗಮನವನ್ನು ವಿರೋಧಿಸಬೇಕಾಗಿದೆ.

(ಮಾಹಿತಿ ಕೃಪೆ:Aahuti : The untold stories of sacrifice in Kerala)



– ಅಜಯ್ ಶಾಸ್ತ್ರಿ ಸಿ ಜಿ

ajayshastry94@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!