ಕಥೆ

ಕನಸು ನನಸಾದಾಗ….?!

ಸುಮಾರು ೩೫ ವರ್ಷಗಳ  ಹಿಂದಿನ ಮಾತು. ರೋಹಿತ್ ನ ಬಾಲ್ಯದ ದಿನಗಳವು. ಆ ದಿನಗಳಲ್ಲಿಯೇ ರೋಹಿತ್ ಗೆ ಬಾಹ್ಯಾಕಾಶ , ಆಕಾಶಕಾಯಗಳು, ಉಪಗ್ರಹಗಳು ಇವುಗಳ ಬಗ್ಗೆ ಅತ್ಯಂತ ಆಸಕ್ತಿ.  ಕರೆಂಟಿಲ್ಲದ ಆ ಕತ್ತಲ ರಾತ್ರಿಯಲ್ಲಿ ಆಕಾಶವನ್ನು ವೀಕ್ಷಿಸುವುದು ಒಂದು ಹವ್ಯಾಸವಾಗಿತ್ತು. ಸಪ್ತಋಷಿ ಮಂಡಲ, ಧ್ರುವ ನಕ್ಷತ್ರ,  ನಕ್ಷತ್ರ ಪುಂಜಗಳು, ಶುಕ್ರ, ಮಂಗಳ, ಗುರು ಗ್ರಹಗಳನ್ನು ಬಾಲ್ಯದಲ್ಲಿಯೇ ಗುರುತಿಸಿಕೊಂಡು ಅವುಗಳ ಚಲನವಲನಗಳನ್ನು ವೀಕ್ಷಿಸುತ್ತಿದ್ದ.  ಪುತ್ತೂರಿನಲ್ಲಿ ನಡೆದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಒಬ್ಬ ಖಗೋಳ ವೀಕ್ಷಕನಿಂದ ರಾತ್ರಿ “ಆಕಾಶ ವೀಕ್ಷಣೆ” ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೇಲಂತೂ ಆಸಕ್ತಿ ಇನ್ನೂ  ಹೆಚ್ಚಾಯಿತು. ಹೈಸ್ಕೂಲಿನಲ್ಲಿರುವಾಗ ಕಾಣಿಸಿದ ಧೂಮಕೇತು ಅವನ ಕುತೂಹಲವನ್ನು ಇನ್ನೂ  ಕೆರಳಿಸಿತ್ತು.

ರೋಹಿತ್ ಬಾಲ್ಯವನ್ನು ಕಳೆದ ಊರು ಕುಗ್ರಾಮ ಅಲ್ಲದಿದ್ದರೂ ಪ್ರಾಥಮಿಕ ಅಗತ್ಯತೆಗಳನ್ನೂ ಹೊಂದಿರದ ಚಿಕ್ಕ ಗ್ರಾಮ. ಒಂದೆರಡು ವರ್ಷಗಳ ಹಿಂದಷ್ಟೇ ಅಲ್ಲಿ ಸರಕಾರಿ ಹೈಸ್ಕೂಲ್ ಹುಟ್ಟಿಕೊಂಡಿದೆ. ಸಾಮಾನ್ಯ ಸರಕಾರಿ ಶಾಲೆಗಳಲ್ಲಾಗುವಂತೆ ಶಾಲೆಯ ಬಹುತ್ತಮ ಅಧ್ಯಾಪಕರು ನಿರಾಸಕ್ತಿಯಿಂದ ಪಾಠ ಹೇಳಿಕೊಡುತ್ತಿದ್ದರೆ, ವಿಜ್ಞಾನ ಅಧ್ಯಾಪಕರು ಅದಕ್ಕೆ ತದ್ವಿರುಧ್ಧ. ಹೈಸ್ಕೂಲಿನ ನೆಚ್ಚಿನ ವಿಜ್ಞಾನ ಅಧ್ಯಾಪಕರು ರೋಹಿತ್ ನ ಆಸಕ್ತಿಗಳಿಗೆ ಹೆಚ್ಚಿನ ಬೆಂಬಲ ಕೊಟ್ಟು ತಮ್ಮ ಕೈಲಾದ ಸಹಾಯವನ್ನು ಮಾಡುತ್ತಿದ್ದರು. “Children’s knowledge bank” ಮತ್ತು ವಿಜ್ಞಾನಕ್ಕೆ ಸಂಬಂಧಪಟ್ಟ ಪುಸ್ತಕಗಳನ್ನು ತಂದುಕೊಟ್ಟು ರೋಹಿತ್‘ಗೆ ಅರ್ಥವಾಗದ ವಿಷಯಗಳನ್ನು ವಿವರವಾಗಿ ತಿಳಿಸುತ್ತಿದ್ದರು. ಆಸಕ್ತಿ ತೋರುತ್ತಿದ್ದ ವಿದ್ಯಾರ್ಥಿಗಳೆಂದರೆ ಮುತುವರ್ಜಿವಹಿಸಿ ಹೇಳಿಕೊಡುವುದು ಅವರ ಇಷ್ಟದ ವಿಷಯವಾಗಿತ್ತು. ಅಕ್ಕ-ಪಕ್ಕದ ಶಾಲೆಗಳಲ್ಲಾಗುವ ವಿಜ್ಞಾನ ವಸ್ತುಪ್ರದರ್ಶನಗಳಲ್ಲಿ ಅಧ್ಯಾಪಕದ ಸಹಾಯ-ಪ್ರೋತ್ಸಾಹದಿಂದ ಭಾಗವಹಿಸಿ, ಸೌರವ್ಯೂಹ, ಚಂದ್ರಗ್ರಹಣ-ಸೂರ್ಯಗ್ರಹಣಗಳ ಮಾದರಿಗಳನ್ನು ಮಾಡಿ ಪ್ರದರ್ಶಿಸಿ ಹಲವವಾರು ಬಹುಮಾನಗಳನ್ನೂ ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದ. ಶಾಲೆಯಲ್ಲಿರುವ ದೂರದರ್ಶಕದಿಂದ ಕ್ಲಾಸಿನ ಎಲ್ಲ ಮಕ್ಕಳಿಗೆ ಚಂದ್ರನನ್ನು ಮಾತ್ರ ತೋರಿಸುತ್ತಿದ್ದ ಅಧ್ಯಾಪಕರು,  ರೋಹಿತ್ ಅನ್ನು ರಾತ್ರಿಯಲ್ಲೂ ಕರೆದು ಗ್ರಹಗಳ ವೀಕ್ಷಣೆ ಮಾಡಿಸುತ್ತಿದ್ದರು.ಹೈಸ್ಕೂಲಿನ್ನಲಿರುವಾಗಲೇ ಗುರು, ಮಂಗಳ ಶುಕ್ರ ಗ್ರಹಗಳ  ಚಲನಯನ್ನು ಅಂದಾಜಿಸುತ್ತಿದ್ದ. ಹಾಗೆಯೇ ಭಾರತೀಯ ಪಂಚಾಂಗ ಮತ್ತು ಖಗೋಳ ವಿಜ್ಞಾನಗಳ ಸಂಬಂಧವನ್ನು ಹಲವರನ್ನು ಕೇಳಿ ತನ್ನ ಸ್ವಯಂ ಜ್ಞಾನಾರ್ಜನೆ ಮಾಡುತ್ತಿದ್ದ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಎಂಬಂತೆ ತನ್ನ ಕನಸನ್ನೂ  ತಂದೆ-ತಾಯಿ, ಅಧ್ಯಾಪಕರ ಅಲ್ಲದೆ ಊರಿನವರ ನಿರೀಕ್ಷೆಯನ್ನೂ  ಆಕಾಶದೆತ್ತರಕ್ಕೆ ಏರಿಸಿಟ್ಟಿದ್ದ.!

 ಇಂದು ರೋಹಿತ್ ಪಾಲಿಗಷ್ಟೇ ಅಲ್ಲ, ಅವನ ತಂದೆ-ತಾಯಿಗೆ ಅಷ್ಟೇಕೆ ಇಡೀ ದೇಶಕ್ಕೇ ಅತ್ಯಂತ ಮಹತ್ವದ ದಿನ… ಭಾರತೀಯ ಬಾಹ್ಯಾಕಾಶ ಸಂಸ್ಥೆ ನಡೆಸಿದ ೧೫ ವರ್ಷಗಳ ಕಠಿಣ ಪರಿಶ್ರಮದ ಫಲವಾಗಿ ಸ್ವದೇಶೀ ನಿರ್ಮಿತ ವ್ಯೋಮ ನೌಕೆಯಲ್ಲಿ ಭಾರತೀಯನೊಬ್ಬ ಭೂಮಿಗೆ ಮೂರು ಸುತ್ತಿ ಗಿರಿಕಿ ಹೊಡೆದು ಯಶಸ್ವಿಯಾಗಿ ಭೂಮಿಗಿಳಿದ ಸಂಭ್ರಮ. ಇಸ್ರೋ ತನ್ನ ಮಹತ್ವಾಕಾಂಕ್ಷೆಯ ಯೋಜನೆ ಸಾಕಾರಗೊಳಿಸಿದೆ. ಇಡೀ ವಿಶ್ವವೇ ಭಾರತದ ಕಡೆಗೆ ತಿರುಗಿ ಭಾರತೀಯರನ್ನೂ, ಭಾರತೀಯ ಬಾಹ್ಯಾಕಾಶ ಸಂಸ್ಥೆಯ ಸಾಧನೆಯನ್ನೂ ಕುತೂಹಲದಿಂದ ನೋಡುತ್ತಿದೆ. ಮಾನವ ಸಹಿತ ಅಂತರಿಕ್ಷ ಯಾನ ಮಾಡಿದ ಕೆಲವೇ ಕೆಲವು ದೇಶಗಳ ಪಟ್ಟಿಯಲ್ಲಿ ಭಾರತವೂ ಸಹ ಸೇರಿಕೊಂಡಿತು. ಸ್ವದೇಶೀ ವ್ಯೋಮನೌಕೆಯಲ್ಲಿ ಪ್ರಪ್ರಥಮ ಭಾರಿಗೆ ಬಾಹ್ಯಾಕಾಶದಲ್ಲಿ ಸಂಚರಿಸಿ ಯಶಸ್ವಿಯಾಗಿ ಭೂಮಿಗಿಳಿದ ವ್ಯಕ್ತಿ ಬೇರೆಯರೂ ಅಲ್ಲ…ಅದು ರೋಹಿತ್.

ರೋಹಿತ್ ಗೆ ತನ್ನ ಸಂತೋಷವನ್ನು ತಡೆದುಕೊಳ್ಳಲಾಗುತ್ತಿಲ್ಲ. ೧೨೫ ಕೋಟಿ ಭಾರತೀಯರಲ್ಲಿ ಯಾರೂ ಮಾಡದ ಸಾಹಸ ಮಾಡಿ ದೇಶಕ್ಕೆ ಹೆಸರು ತಂದ ಹೆಮ್ಮೆ. ತನ್ನ ಎಷ್ಟೋ ವರ್ಷ ಹಿಂದಿನ ಕನಸನ್ನು ಸಾಕಾರಗೊಳಿಸಿದ ಎಲ್ಲಿಲ್ಲದ ಖುಷಿ!!! ಮನಸ್ಸಲ್ಲಿ ಮನೆಮಾಡಿದ ಅದೆಷ್ಟೋ ಗಂಡಾಂತರಗಳಿಂದ ಪಾರಾಗಿ ಸುರಕ್ಷಿತವಾದ ಸಮಾಧಾನ..! ಇಸ್ರೋದ  ಮೊಟ್ಟಮೊದಲಿನ ಸ್ವದೇಶಿ ನಿರ್ಮಿತ ವ್ಯೋಮನೌಕೆಯಲ್ಲಿ ಅಂತರಿಕ್ಷ ಯಾನ  ಮಾಡಿದ ಕೀರ್ತಿ!!! ಮನಸಲ್ಲೇ ನಂಬಿದ ದೇವರಿಗೊಂದು ನಮನ… ಭಾರತ-ಅಮೇರಿಕಗಳ ಮೈತ್ರಿ ಯಿಂದ ಇಸ್ರೋ – ನಾಸಾ  ನಡುವೆ ನಡೆದ ಒಪ್ಪಂದದಂತೆ ಹಾಗೂ  ವ್ಯೋಮನೌಕೆಯನ್ನು ಫ್ಲೋರಿಡಾದ ಕೆನೆಡಿ ಸ್ಪೇಸ್ ಸೆಂಟರ್ ನ ರನ್ ವೇ ಯಲ್ಲಿ ಇಳಿಸಲಾಯಿತು.  ವ್ಯೋಮನೌಕೆಯಿಂದ ಹೊರಬರುತ್ತಲೇ ಇಸ್ರೋದ  ಹಿರಿಯ ವಿಜ್ಞಾನಿಗಳ ಸ್ವಾಗತ!!! ಅಭಿನಂದನೆಗಳ  ಮಹಾಪೂರ … . ನಾಸಾದ ಹತ್ತಾರು ವಿಜ್ಞಾನಿಗಳ ಆತ್ಮೀಯ ಕೈಕುಲುಕಿನೊಂದಿಗೆ “Congratulations”.

ಇದೆಲ್ಲರ ಮಧ್ಯೆ ತನ್ನನ್ನು ತಾನೇ ಹೆಮ್ಮೆಯಿಂದ ಬೆನ್ನುತಟ್ಟಿಕೊಂಡ ಅನುಭವ…ಮುಂದೆ ಬಂದಂತೆ ನಾಸಾದ ಸೆಕ್ಯುರಿಟಿಯವರೊಂದಿಗೆ ಅಮೇರಿಕಾದ ಪೊಲೀಸ್ ಸಹ ಬಂದರು… ಕೈಕುಲುಲಲೆಂದು  ಕೈ  ಮುಂದೆ ಮಾಡಿದರು ಅಂದು ಕೊಂಡರೆ ಅವರು ರೋಹಿತ್ ನ ಪಾಸ್ ಪೋರ್ಟ್ ಕೇಳಿದರು. ರೋಹಿತ್ ತಾನು ಇಸ್ರೋ ದ ವಿಜ್ಞಾನಿ, ಈಗಷ್ಟೆ ಅಂತರಿಕ್ಷ ಯಾನ ಮಾಡಿಬಂದಿರುವೆ ಎಂದು ಎಷ್ಟು ಹೇಳಿದರು ಅವರು ಕೇಳಲು ತಯಾರಿಲ್ಲ.. ರೋಹಿತ್ ಗೆ ಏನು ಮಾಡುವುದೆಂದೇ ತಿಳಿಯಲಿಲ್ಲ.. ಇಸ್ರೋ ದ ಹಿರಿಯ ಅಧಿಕಾರಿಗಳೂ ಅವರನ್ನು ಸಮಜಾಯಿನಲು ವಿಫಲರಾದರು. ” I am Rohit from Indian space research organization, I don’t have passport, please believe me and please leave me, please sir, please sir” ಎಂದು ಕೂಗಿಕೊಂಡ. “ಏನ್ರೀ ಏನಾಯ್ತು…..?ಯಾರಿಗೆ ಪಾಸ್ ಪೋರ್ಟ್ ಬೇಕು…? ನಿಮ್ಮ್ಹತ್ರ ಪಾಸ್ಪೋರ್ಟ್ ಎಲ್ಲಿದೆ..?ಏನಾಯ್ತು”. ರೋಹಿತ್ ತನ್ನ ಸ್ಪೇಸ್ ಸೂಟ್ ತೆಗೆಯುತ್ತಾ ನೋಡಿದಾಗ ಗೊತ್ತಾಯಿತು ತಾನು ತೆಗೆಯುತ್ತಿರುವುದು ಹೊದ್ದುಕೊಂಡಿರುವ ಹೊದಿಕೆ, ಮಗುಲ್ಲಲ್ಲಿ ಮಲಗಿರುವುದು ಮಡದಿಯೆಂದು…. ಹೆಂಡತಿಯೆಂದಳು “ರೀ ಮಲಗಿ ಇನ್ನೂ ಮೂರು ಗಂಟೆಯಷ್ಟೆ… ನಾಳೆ ಡ್ಯೂಟಿಗೆ ಹೋಗಬೇಕಲ್ಲವೇ..?. “

Facebook ಕಾಮೆಂಟ್ಸ್

ಲೇಖಕರ ಕುರಿತು

Nagaraj Adiga

ಮೂಲತಃ ಉಡುಪಿಯವರಾದ ನಾಗರಾಜ್ ಅಡಿಗ ಕೈಗಾದಲ್ಲಿ ವೈಜ್ಞಾನಿಕ ಅಧಿಕಾರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಲೇಕಖನಗಳನ್ನು ಬರೆಯುವುದು, ಓದುವುದು, ಛಾಯಾಗ್ರಹಣ ಮತ್ತು ವಿಜ್ಞಾನ ಇವರ ಆಸಕ್ತಿ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!