ಕಥೆ

ಶಕುನದಾ ಬೆನ್ನೇರಿ

ಎಂದಿಗಿಂತಲೂ ಬೇಗನೇ ಎದ್ದ ಮಠದ ಸ್ವಾಮಿಗಳ ದೇಹ ನದೀತೀರಕ್ಕೆ ನಡೆದು ಮೂಗುಮುಚ್ಚಿ ನಾಲ್ಕುಬಾರಿ ಮುಳುಗಿ ದಡದಮೇಲಿನ ಬಂಡೆಯಮೇಲೆ ಒದ್ದೆಯಲ್ಲೇ ಕುಳಿತು ಮೊಣಕಾಲಿನ ಮೇಲೆ ಮೊಣಕೈ ಇಟ್ಟು, ಮುಷ್ಠಿಯನ್ನು ತುಟಿಗೆ ಒತ್ತಿ ಕುಳಿತಿತ್ತು. ತನ್ನ ಜೀವನದ ಗುಟ್ಟಿನಂತೆ ತೆಗ್ಗು-ದಿಮ್ಮಿ, ಕಸ-ಕಡ್ಡಿ ಎಲ್ಲವನ್ನೂ ನುಂಗಿ ಯಾರಿಗೂ ತೋರಿಸದೇ ಸಮಾನವಾಗಿ ಹರಿಯುವ ನೀರನ್ನು ಹಿಂಬಾಲಿಸಿದ ದೃಷ್ಟಿ, ದೂರ ತೀರದ ಅದೃಷ್ಯ ಬಿಂದುವಿನಲ್ಲಿ ಕೇಂದ್ರೀಕೃತವಾಗಿ ಮನಸ್ಸು ಮತ್ತದೇ ಕನಸು, ದಶಕಗಳ ಹಿಂದೆ ನಿದ್ದೆಗೆಡಿಸಿ ನನ್ನ ಅಸ್ತಿತ್ವವನ್ನೇ ಕಿತ್ತು ಕಾಣದಂತೆ ಕಾವುಕೊಟ್ಟು, ಮಾಗಿಸಿತ್ತು. ನನ್ನಿಂದ ಸುಳ್ಳು ನುಡಿಸಿ, ನನ್ನನ್ನೇ ಸುಳ್ಳುಮಾಡಿ, ಹುಚ್ಚನನ್ನಾಗಿ ಮಾಡಿತ್ತು. ನನ್ನದನ್ನೆಲ್ಲಾ ಹಿಂದೆಬಿಟ್ಟು, ಆಯಾಸವನ್ನೆಲ್ಲೋ ಉದುರಿಸಿಕೊಂಡು, ಯಾವುದೋ ಶಕುನದ ಮಾತು ಕೇಳಲು ನನ್ನನ್ನು ಹಿಂದೆ ತಿರುಗಿನೋಡಲೂ ಆಗದಂತೆ ಓಡಿಸಿದ್ದ ಕನಸು. ಗಾಳಿಗೆ ತೂರಿಹೋಗಿ ಇಷ್ಟು ವರ್ಷ ಯಾವ ದೈತ್ಯಮರದ ಟೊಂಗೆಗೆ ನೇತುಬಿದ್ದಿತ್ತೋ? ಇಂದು ನನ್ನ ನಿದ್ರೆಯ ವಿಳಾಸವನ್ನು ಹುಡುಕಿಬಂದು ಕಿವಿಯಲ್ಲಿ ಯಾವುದೋ ಶಕುನವನ್ನು ಗೊಣಗುತ್ತಿದೆ, ಎಂದು ರಾತ್ರಿ ಬಿದ್ದ ದುಃಸ್ವಪ್ನದ ಬಗ್ಗೆ ನೆನೆಯುತ್ತಿತ್ತು.

ಬದುಕಿನ ಗತ ಘಟನೆಗಳಲ್ಲಿ ನೆನೆದ ತಲೆಕೂದಲನ್ನು ಸೂರ್ಯನ ಎಳೆಬಿಸಿಲು ಒಣಗಿಸಿತು. ಸ್ವಾಮಿಗಳ ಈ ವಿಚಿತ್ರ ವೇಳಾಪಟ್ಟಿಯನ್ನು ಅನುಮಾನಿಸಿ ಹಿಂಬಾಲಿಸಿ ಬಂದ ಪಟ್ಟದ ಶಿಷ್ಯನ ತಾಳ್ಮೆಯ ಗಂಟು ಬಿಚ್ಚಿ ಮರದ ಹಿಂದಿನಿಂದ ಗುರುಗಳ ಮುಂದೆ ಪ್ರತ್ಯಕ್ಷವಾದ. ಗುರುಗಳು ಅವನು ಬಂದದನ್ನು ಗಮನಿಸಲಿಲ್ಲ.ಗುರುಗಳ ಪಾದ ಸ್ಪರ್ಶ ಮಾಡಿದೊಡನೆ  ಬೆಚ್ಚಿಬಿದ್ದು “ಓ ಮೋಕ್ಷಾ, ಬಂದೆಯಾ, ಏನು ಈಕಡೆ ಬಂದೆ?” ಎಂದರು.

“ಕ್ಷಮಿಸಿ ನಾನು ತಮ್ಮನ್ನು ಹಿಂಬಾಲಿಸಿದೆ, ಆದರೆ ನನಗೆ ಯಾಕೋ ತಾವು ಯಾವುದೋ ವಿಷಯವಾಗಿ ನೊಂದಿರುವಿರಿ ಎನ್ನಿಸಿತು. ತಾವು ದಯವಿಟ್ಟು…” ಎಂದು ಮೋಕ್ಷಾನಂದ ಕೇಳುತ್ತಿದ್ದಂತೆ, ಗುರುಗಳು “ಇಲ್ಲ ಇಲ್ಲ. ಅದೇನಿಲ್ಲಾ, ಸುಮ್ಮನೆ ನನಗೆ ಯಾಕೋ ನಿದ್ದೆ ಬರಲಿಲ್ಲ, ಈ ಕಡೆ ಬಂದೆ ಅಷ್ಟೇ, ಪ್ರಕೃತಿ ಎಷ್ಟು ಚೆನ್ನಾಗಿದೆಯಲ್ಲಾ?’ ಎಂದು ಮಾತು ಮರೆಸಲು ಪ್ರಯತ್ನಿಸಿದರು.

“ಸ್ವಾಮೀಜಿ ನಾನು ನಿಮ್ಮೊಡನೆ ಸುಮಾರು ಹನ್ನೆರಡು ವರ್ಷ ಕಳೆದಿದ್ದೇನೆ. ನಿಮ್ಮನ್ನು ಅರ್ಥಮಾಡಿಕೊಂಡಿಲ್ಲದಿದ್ದರೂ, ನಿಮ್ಮ ಭಾವನೆಗಳು ನನ್ನನ್ನು ಸ್ಪರ್ಶಿಸುತ್ತವೆ. ಮಠದ ವಾತಾವರಣ ತಾವು ಬಂದಮೇಲೆ ಎಷ್ಟೋ ಸುಧಾರಿಸಿದೆ. ಆದರೆ ನನ್ನ ಮನಸ್ಸು ಮೊದಲದಿನ ತಾವು ನನ್ನನ್ನು ಮಠಕ್ಕೆ ತಂದಾಗ ಹೇಗಿತ್ತೋ ನಿಮ್ಮ ಆಶೀರ್ವಾದದಿಂದ ಹಾಗೆಯೇ ಇದೆ,ನಾನು ಬದಲಾಗಿಲ್ಲ.”

“ನೀನು ಮಾತ್ರ ಬದಲಾಗುವುದಿಲ್ಲ ಎನ್ನುತ್ತೀಯಾ, ಆದರೆ ನೋಡೋಣ ಸಮಯ ಎಲ್ಲವನ್ನೂ ಬದಲಾಯಿಸುತ್ತದೆ. ನೀನು ಎಷ್ಟು ದಿನ ಹೀಗೆ ಇರ್ತೀಯಾ? ನೋಡೋಣ.”

“ತಾವು ಸಮಯಕ್ಕಿಂತ ಮುಂಚೆಯೇ ಮುಂದೆ ನಡೆಯುವುದನ್ನು ಹೇಳುತ್ತೀರಿ. ನನಗೆ ಒಂದು ಸಣ್ಣ ಗುರುತು ನೀಡಿದರೆ ಸಾಕು ನಾನು ನನ್ನ ನಡತೆ ತಿದ್ದಿಕೊಳ್ಳುತ್ತೇನೆ. ಆದರೆ…”

“ಏನು ಆದರೆ”,

“ನಾನು ನಿಮ್ಮನ್ನು ಬಹಳ ಸಲ ಕೇಳಿದ್ದೇನೆ, ತಮ್ಮ ಜೀವನದ ಬಗ್ಗೆ ಹೇಳಿರಿ ಎಂದು ಮತ್ತು ನಿಮಗೆ ಮುಂದೆ ನಡೆಯುವ ಸಂಗತಿಗಳು ಹೇಗೆ ತಿಳಿಯುತ್ತವೆ ಎಂದು ಕೇಳಿದಾಗಲೆಲ್ಲಾ ಸಮಯ ಬರಲಿ ಎಂದು ಹೇಳಿದ್ದಿರಿ. ಇಂದೇ ಆ ದಿನವೆಂದು ನನಗೆ ಅನ್ನಿಸುತ್ತದೆ, ಮಠದಿಂದ ದೂರವಿದ್ದೇವೆ ದಯವಿಟ್ಟು ಹೇಳಿ.”

ಶಿಷ್ಯನ ಪ್ರಾರ್ಥನೆಯನ್ನು ಕೇಳಿ ಮುಗುಳ್ನಕ್ಕ ಗುರು

“ಬಹುಶಃ ಕನಸು ಇದನ್ನೆ ಸೂಚಿಸಿತ್ತೇನೋ? ನನಗೆ ವಯಸ್ಸಿನ ಜೊತೆಗೆ ಬುದ್ಧಿಯೂ ಕ್ಷೀಣಿಸಿದಂತಿದೆ

ನನ್ನ ಜೀವನ. ಈ ದಿಕ್ಕಿಲ್ಲದವನ ಜೀವನ ತಿಳಿಯಬೇಕೇ.”

“ನಾನು ಎಷ್ಟೋ ಸ್ವಾಮಿಗಳನ್ನು ನೋಡಿದ್ದೇನೆ. ಮಠ, ಧರ್ಮ, ಸ೦ಪ್ರದಾಯ ಎಂದೇ ಸಮಯ ಕಳೆದರೆ ತಾವು ಸಮಾಜಮುಖಿಯಾಗಿ ಪ್ರಗತಿಪರ ಕಾರ್ಯಗಳನ್ನು ಮಾಡಿರುವಿರಿ. ಧರ್ಮ-ಜಾತಿಯನ್ನೇ ಎದುರಿಸಿ ಎಷ್ಟೋ ಸಮಾಜಸೇವೆ ಮಾಡಿದ್ದೀರಿ ಅದಕ್ಕೆ ಉದಾಹರಣೆ ನಾನೆ. ಯಾವ ಜಾತಿಯೋ ತಿಳಿಯದು ಅನಾಥ ಮಗುವಾದ ನನ್ನನ್ನು ತಂದು ಈ ಮಠದಲ್ಲಿ ಆಶ್ರಯಕೊಟ್ಟು ಬೆಳೆಸಿದ್ದೀರಿ. ಆದ್ದರಿಂದ ನನ್ನಮೇಲೆ ತಮ್ಮ ಪ್ರಭಾವ ಗಾಢವಾಗಿದೆ. ದಯವಿಟ್ಟು ಹೇಳಿ, ಇಲ್ಲ ಎನ್ನಬೇಡಿ.”

“ನನ್ನ ಇಡೀ ಜೀವನ ಒಂದು ಕನಸಿನಿಂದ ದಿಕ್ಕುತಪ್ಪಿ ಸೂತ್ರಕಳೆದುಕೊಂಡು ಸುತ್ತಾಡಿ, ಸುಸ್ತಾಗಿ ಕೊನೆಗೆ ಎಲ್ಲಿಹೋಗುವುದು ತಿಳಿಯದಾದಾಗ ಆ ಕನಸೇ ಇಲ್ಲಿಗೆ ತಂದು ನನ್ನನ್ನು ಮಠಾಧೀಶನನ್ನಾಗಿ ಮಾಡಿತು.”

“ಒಂದು ಕನಸೇ? ಒಂದು ಕನಸು ನಿಮ್ಮನ್ನು ಹೀಗೆಲ್ಲಾ ಆಡಿಸಿತೇ?”

“ಅದು ಬರೀ ಕನಸಲ್ಲ, ಒಂದು ಶಕುನ ಆದರೆ ಶುಭವೋ, ಅಶುಭವೋ ತಿಳಿಯದು. ಈ ಕನಸಿನ ಶಕುನವನ್ನು ನಂಬಿ ನನ್ನ ಜೀವನದ ಸುಖಗಳನ್ನು ಕಳೆದುಕೊಂಡೆ, ನನ್ನ ಹೆಸರು, ನೋಟ, ದಾಟಿ ಎಲ್ಲವನ್ನೂ ಈ ಕನಸೇ ಬದಲಾಯಿಸಿತು.”

“ನನಗೆ ತಿಳಿಯುತ್ತಿಲ್ಲಾ ಸ್ವಾಮಿಗಳೇ. ತಮ್ಮ ಈವರೆಗಿನ ಜೀವನವನ್ನು ಬಿಡಿಬಿಡಿಯಾಗಿ ಹೇಳಿ ದಯವಿಟ್ಟು ತಮ್ಮ ಬಾಲ್ಯದಿಂದ ಹೇಳಿ ಇದೊಂದೆ ನನ್ನ ಪ್ರಾರ್ಥನೆ ದಯವಿಟ್ಟು ಇಂದು ಇಲ್ಲ ಎನ್ನಬೇಡಿ” ಎಂದು ಕೇಳಿಕೊಂಡ.

ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿದ ನನಗೆ ಬಾಲ್ಯದಿಂದಲೇ ಜ್ಞಾನದ ಜೊತೆಗೆ ಆಚರಣೆಗಳೂ ನನ್ನಲ್ಲಿ ಬೆಳೆದವು. ನನ್ನ ತಾತ ಶಕುನಗಳನ್ನು ಅತಿಯಾಗಿ ನಂಬುತ್ತಿದ್ದ. ಎಳೆವಯಸ್ಸಿನಲ್ಲಿ ತಾತನು ಹೇಳುತ್ತಿದ್ದ ಶಕುನದ ಕಥೆಗಳು ನನಗೆ ಕುತೂಹಲಕಾರಿಯಾಗಿದ್ದವು. ಪ್ರತಿ ಶಕುನದ ಅರ್ಥವನ್ನು ಬಿಡಿಸಿ ಹೇಳುತ್ತಿದ್ದ ತಾತನ ಮಾತುಗಳನ್ನು ಧಾರಣಮಾಡಿಕೊಳ್ಳುವ ಶಕ್ತಿ ಆಗ ನನ್ನ ಮೆದುಳಿಗೆ ಇರಲಿಲ್ಲ. ಬಾಲ್ಯವೆಲ್ಲಾ ಇಂತಹ ಕಥೆಗಳಲ್ಲಿಯೇ ಕಳೆಯಿತು. ಶಾಲೆಯಲ್ಲಿ ಇಂತಹವುಗಳನ್ನು ಹೇಳಿದರೆ ಸ್ನೇಹಿತರು, ಗುರುಗಳು ನಕ್ಕು ಅವಮಾನಿಸುತ್ತಿದ್ದರು. ನಾನೂ ಬರಬರುತ್ತ ಅವುಗಳಿಂದ ದೂರುಳಿದೆ. ನನ್ನ ಎಂ.ಎ ಪದವಿಯೂ ಮುಗಿಸಿದೆ. ಪಿ.ಹೆಚ್.ಡಿ ಪದವಿ ಮಾಡುತ್ತಿರುವಾಗ, ಸಂಶೋಧನೆಯ ಬಗ್ಗೆ ಪೀಠಿಕೆ ಮತ್ತು ಸಂಶೋಧನೆ ಮಾಡಬಯಸುವ ವಿಷಯದ ಮಾದರಿ ತಯಾರಿಸಿ ಒಪ್ಪಿಗೆ ಪಡೆಯಲು ಸುಮಾರು ಒಂದು ತಿಂಗಳು ಕಾಲಾವಕಾಶವಿತ್ತು. ಆ ದಿನ ಯಾವ ವಿಷಯ ತೆಗೆದುಕೊಳ್ಳಲಿ ಎಂದು ಗೊಂದಲಗೊಂಡು ಯೋಚಿಸುತ್ತಾ ರಾತ್ರಿ ಅರೆಹೊಟ್ಟೆಯಲ್ಲಿ ಮಲಗಿದ್ದೆ ಅಂದೇ ಈ ಕನಸು ನನ್ನನ್ನು ಮೊದಲು ಭೇಟಿಮಾಡಿದ್ದು.

            ಮೇಜಿನ ಮೇಲೆ ಇಟ್ಟಿಗೆ ಗಾತ್ರದ ದೊಡ್ಡ ಪುಸ್ತಕ, ಅಕ್ಷರಗಳನ್ನು ನೋಡಿ ಅವು ನನ್ನದೇ ಬರಹ ಎಂದು ಖಾತ್ರಿಯಾಯಿತು, ಇದ್ದಕ್ಕಿದ್ದಂತೆ ಜೋರಾಗಿ ಗಾಳಿ ಬೀಸಿತು.  ಪುಸ್ತಕದಿಂದ ಒಂದೊಂದೇ ಹಾಳೆ ಗಾಳಿಗೆ ಪಳಪಳ ಸದ್ದು ಮಾಡುತ್ತಾ ಹಾರತೊಡಗಿದವು. ಗಾಳಿ ಜೋರಾದಷ್ಟು ಹಾಳೆಗಳು ಪುಸ್ತಕದಿಂದ ನೆಗೆದು ಹಾರಾಡುತ್ತಿವೆ. ಹಿಡಿಯಲು ಹೋಗಲು ಆಗುತ್ತಿಲ್ಲ. ಕುರ್ಚಿಯಿಂದ ಮೇಲೇಳಲಾಗುತ್ತಿಲ್ಲ. ಹಾರಿ ಹೋಗಿ ಬಾಗಿಲಿಗೆ ಬಡಿದು ಜೋರಾಗಿ ಮಾಡಿದ ಶಬ್ದದಿಂದ ಎಚ್ಚರಗೊಂಡೆ ಅಮ್ಮ-ಅತ್ತಿಗೆಯರ ಅಳುವ ಕೂಗು ರೆಪ್ಪೆಯನ್ನು ಬೇಗನೇ ತೆಗೆಯುವಂತೆ ಮಾಡಿತು. ಕೋಣೆ ಬಾಗಿಲನ್ನು ತೆರೆದ ಅಣ್ಣ ತನ್ನ ದುಃಖ ತುಂಬಿದ ಧ್ವನಿಯಲ್ಲಿ ತಾತ ಹೋಗ್ಬಿಟ್ರು ಅಂದ. ನಿನ್ನೆ ಕಾಗೆಮಟ್ಟು ನೋಡಿ ಅಮ್ಮ ಹಬ್ಬಿಸಿದ ಸುಳ್ಳು ಸುದ್ದಿ ಇಂದು ನಿಜವಾಯ್ತು. ಅಕ್ಕನ ಪರಿವಾರ ಅಳುತ್ತಾ ಬಂದು ನಕ್ಕು ಮತ್ತೆ ಅಳುತ್ತಾ ಹೋಗುವಂತೆ ಮಾಡಿತು. ನನ್ನನ್ನು ಬಹಳ ಮುದ್ದಿನಿಂದ ಸಾಕಿದ ತಾತನ ಅಂತ್ಯಕ್ರಿಯೆಯ ನಂತರ ಅವರಿಲ್ಲದ ಆ ಕೋಣೆಯನ್ನೇ ನನ್ನ ಓದುವ ಕೋಣೆಯಾಗಿ ಮಾಡಿಕೊಂಡೆ.

ಕೋಣೆಯಲ್ಲಿ ಏನೋ ಹುಡುಕುವಾಗ ನನ್ನ ಕನಸಿನಲ್ಲಿ ಬಂದ ಪುಸ್ತಕವನ್ನೇ ಹೋಲುವ ಪುಸ್ತಕ ಸಿಕ್ತು. ಬರೀ ಶಕುನಗಳೇ ತುಂಬಿದ್ದ ತಾತನ ಪುಸ್ತಕ, ಅಲ್ಲಲ್ಲಿ ಅರೆಪೂರ್ಣಗೊಂಡ ಚಿತ್ರಗಳು, ಏನೂ ಅರ್ಥವಾಗದ ರೀತಿ ಗೀಚಿದ್ದ ಗೆರೆಗಳು, ಬಹುಷಃ ಮಾನಸಿಕ ರೋಗಿಯ ವಿಕೃತ ಮನಸ್ಸಿನಿಂದ ಏನೋ ಬಿಡಿಸಲು ಹೋಗಿ ಗೀಚಿ ಹಾಳುಮಾಡಿದ ಚಿತ್ರಗಳಂತೆ ಕಂಡವು.  ಒಲ್ಲದ ಮನಸ್ಸಿನಿಂದ ಓದಲು ಪ್ರಾರಂಭಿಸಿದೆ. ಪಿ.ಹೆಚ್.ಡಿ ಮಾಡುವುದಾದರೆ ಭಾರತೀಯ ಸಂಪ್ರದಾಯದಲ್ಲಿನ ಶಕುನಗಳ ಒಂದು ಅಧ್ಯಯನ ಈ ವಿಷಯವಾಗಿ ಅಧ್ಯಯನ ಮಾಡುವಂತೆ ಯಾವುದೋ ಶಕ್ತಿ ಒತ್ತಾಯ ಮಾಡಿಸಿದಂತಾಯ್ತು. ವಿಶ್ವವಿದ್ಯಾಲಯದ ಮುಖ್ಯಸ್ಥರು ಮರುಮಾತಿಲ್ಲದೇ ಒಪ್ಪಿದರು. ಅಧ್ಯಯನಕ್ಕೆ ಬೇಕಿದ್ದ ಎಲ್ಲಾ ಮಾಹಿತಿಗಳು ತಾತನ ಪುಸ್ತಕದಲ್ಲಿದ್ದವು. ಡಾ|| ಪದವಿ ಪಡೆದು ಬೀಗುತ್ತಾ ಬಂದು ಪ್ರಮಾಣ ಪತ್ರವನ್ನು ತಾತನ ಫೋಟೋಮುಂದಿಟ್ಟು, ಸಂತೋಷದಿಂದ ತುಂಬಿದ ಹೊಟ್ಟೆಯಲ್ಲಿ ಸಿಹಿ ಪೇಡಕ್ಕೆ ವಿಶೇಷ ಕೋಟಾ ಕೊಟ್ಟು ತಳ್ಳಿದೆ. ಅಂದು ರಾತ್ರಿ ಆ ಕನಸು ಎರಡನೇ ಬಾರಿ ನಿದ್ರೆಯನ್ನು ಹೊಕ್ಕು ತನ್ನದೇ ಅಡುಗೆ ಮಾಡತೊಡಗಿತು.

            ಜೋರಾಗಿ ಬೀಸುವ ಗಾಳಿಗೆ ಪಕ್ಷಿಯಂತೆ ಹಾರುವ ಹಾಳೆಗಳು, ಕಣ್ಣಿಗೆ ಸ್ಪಷ್ಟವಾಗಿ ಕಾಣುವ ನನ್ನ ಕೈಬರಹ. ಹಿಡಿದು ಸಂಗ್ರಹಿಸಲು ಆಗುತ್ತಿಲ್ಲ. ಹಿಡಿದರೆ ಸಿಗುತ್ತಿಲ್ಲ. ಕಿಟಕಿಯಿಂದ ತೂರಿ ಅಣ್ಣನ ಮಕ್ಕಳ ಉಸುಕಿನ ಮನೆಯಮೇಲೆ ಬಿದ್ದ ಹಾಳೆ ಮಡಚಿ ರಾಕೆಟ್ ಆಗಿ ಮತ್ತೆ ಕಿಟಕಿಯನ್ನು ತೂರಿಬಂದು ನನ್ನ ತೋಳನ್ನು ಚುಚ್ಚುತ್ತಿದ್ದಂತೆ ಎಚ್ಚರವಾಯ್ತು. ಹಾಳೆಯ ಜೊತೆಗೆ ಹಾರಿಹೊಗಿದ್ದ ನಿದ್ರೆಯನ್ನು ಕಾಯುತ್ತಾ ಯಾವುದೋ ಪುರವಣಿ ಓದುತ್ತಿದ್ದಾಗ ಶುಭ ಶಕುನ ಎನ್ನುವಂತೆ ಇಂಡಿಯನ್ ನ್ಯಾಶಿನಲ್ ಕಮಿಟಿ ಆಫ್ ರಿಸರ್ಚನ ಜಾಹಿರಾತು. ಅಂಗೀಕೃತ ವಿಶ್ವವಿದ್ಯಾಲಯದಿಂದ ಪಡೆದ ಪಿ.ಹೆಚ್.ಡಿ ಪದವಿಯನ್ನು ಮಂಡಿಸುವ ಅವಕಾಶ ಕಲ್ಪಿಸಿತು. ಒಂದುವೇಳೆ ಅಧ್ಯಯಕ್ಕೆ ಶಾಸ್ತ್ರವಾಗುವ ಅರ್ಹತೆ ಇದ್ದಲ್ಲಿ ಭಾರತದ ಪ್ರಸಿದ್ಧ ವಿಶ್ವವಿದ್ಯಾಲಯದಲ್ಲಿ ಆ ವಿಷಯವಾಗಿ ಪದವಿಯನ್ನು ತೆರೆಯುವ ಯೋಜನೆ ಮತ್ತು ಅರ್ಹ ಅಧ್ಯಯನಗಳಿಗೆ ಉತ್ತಮ ಸಂಭಾವನೆ ಕೊಡುವುದಾಗಿ ಘೋಷಿಸಿತ್ತು.

ಕಮಿಟಿಯ ಈ ವೇದಿಕೆಯಲ್ಲಿ ಭಾಗವಹಿಸಲು ದೆಹಲಿ ಪ್ರಯಾಣಕ್ಕೆ ಸಜ್ಜಾದೆ. ಅಲ್ಲಿ ವೈಜ್ಞಾನಿಕ ಮತ್ತು ಉಚ್ಛಮಟ್ಟದ ಸಿದ್ದಾಂತಗಳ ಜೊತೆಗೆ ಹಗುರವಾದ ವಿಷಯಗಳೂ ಮಂಡನೆಯಾದವು. ನನ್ನ ವಿಷಯದ ಮಂಡನೆನಂತರ ದಲ್ಲಾಲಿಯೊಬ್ಬ ಬಂದು ಸಂಭಾವನೆಗೆ ಅರ್ಹತೆ ಪಡೆಯಲು ಇದ್ದ ಹಣದಿಂದ ತೆರೆದುಕೊಳ್ಳುವ ಹಿಂಬಾಗಿಲ ಬಗ್ಗೆ ವಿವರಿಸಿದ. ನಾನು ಅದನ್ನು ಸುಮ್ಮನೆ ಬಿಡದೆ ತಗಾದೆ ತೆಗೆದು ಮುಖ್ಯಸ್ಥರ ಗಮನಕ್ಕೆ ತಂದೆ. ಯಾವುದೋ ದೊಡ್ಡ ಅನಾಹುತವಾದಂತೆ ನಟಿಸಿ ಅವನಿಗೆ ತಕ್ಕ ಶಾಸ್ತಿಮಾಡುವುದಾಗಿ ಹೇಳಿ ಸಮಾಧಾನಮಾಡಿ ಕಳುಹಿಸಿದರು. ನನ್ನ ಘನಕಾರ್ಯದ ಫಲ ಕೊನೆಯ ದಿನದ ಚರ್ಚೆಯಲ್ಲಿ ಸಿಕ್ಕಿತು. ನಿನ್ನ ಈ ಮೂಢನಂಬಿಕೆಯ ಪುಸ್ತಕಕ್ಕೆ ಡಾ||  ಪದವಿ ನೀಡಿದ ವಿಶ್ವವಿದ್ಯಾಲಯದ್ದೇ ತಪ್ಪು, ಇಂತಹ ವಿಷಯಗಳಿಗೆ ಹೇಗೆ ಡಾ|| ಕೊಟ್ರು ಎಂದು ಅವಮಾನಿಸಿ ಕಳಿಸಿದರು. ಈ ವೇದಿಕೆಯಿಂದ ನಾನೇನೂ ಬಯಸಿದ್ದಿಲ್ಲ, ಆದರೂ ಅವಮಾನಗೊಂಡ ಮನಸ್ಸು ಬೇಸರದಲ್ಲಿ ನೆಂದು ನಡಗುತ್ತಿತ್ತು. ಇನ್ನೂ ಎರಡ್ಮೂರು ದಿನ ಇದ್ದು ದೆಹಲಿ ಸುತ್ತಿ ಊರಿಗೆ ಹೋದರಾಯ್ತು ಅಂದುಕೊಂಡಿದ್ದೆ. ಬೇಸರ ಮನಸ್ಸಿನ ಉತ್ಸಾಹವನ್ನು ಕರಗಿಸಿದ್ದರಿಂದ ಊರಿಗೆ ಪ್ರಯಾಣ ಬೆಳೆಸಿದೆ.

ನೊಂದ ಮನಸ್ಸು ನಿದ್ರೆಯ ಸವಿಯನ್ನು ಮೂಸುತ್ತಿದ್ದಂತೆ ಬೇಡದ ಅಥಿತಿಯಂತೆ ಬಂದ ಕನಸು ಮುಂದುವರೆಯಿತು. ಅತ್ತಿಗೆ ತನ್ನ ಮಕ್ಕಳಿಗೆ ಮಂಡಕ್ಕಿ ಕಲಿಸಿಕೊಡಲು ಆ ಪುಸ್ತಕದ ಹಾಳೆಗಳನ್ನೇ ಹರಿದು ಪಟ್ಟಣ ಸುತ್ತುತ್ತಿದ್ದಾಳೆ, ತಿಂದವರು ಅದೇ ಪುಸ್ತಕದ ಹಾಳೆಗಳಿಂದ ಕೈ ತಿಕ್ಕಿಕೊಳ್ಳುತ್ತಿದ್ದಾರೆ, ನಾನೂ ಸಹ. ಕಷ್ಟಪಟ್ಟು ಅಧ್ಯಯನ ಮಾಡಿ ಬೇಡದ ಅವಮಾನದ ರುಚಿ ತೋರಿಸಿದ್ದ ಪುಸ್ತಕ, ಶಕುನದ ಪುಸ್ತಕದ ಸ್ಥಿತಿ ಅದಕ್ಕೇ ತಡೆಯಲಾಗಲಿಲ್ಲ. ಸಿಟ್ಟಿನಿಂದ ಹಾಳೆಯೊಂದು ನನ್ನ ಕೈ ಕಚ್ಚಿ ತೇಲಿ ದೂರ ಹೋಯಿತು ಅದನ್ನು ಹಿಂಬಾಲಿಸಿದ ನಿದ್ರೆ ಎಚ್ಚರಗೊಂಡಿತು.  ಕಣ್ಣು ಬಿಟ್ಟೊಡನೆ ವಾಸ್ತವ ಅರ್ಥವಾಗುವಷ್ಟರಲ್ಲಿ ಮನಸ್ಸಿನ ಬೇಸರವೂ ಒಂದು ಶಕುನ ಎಂಬ ಸತ್ಯ ತಿಳಿಯಿತು.ನಾನು ಪ್ರಯಾಣ ಮಾಡುತ್ತಿದ್ದ ರೈಲು ಅಪಘಾತವಾಗಿತ್ತು. ನಾನೊಂದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೆ. ಆ ಶಕುನದ ಪುಸ್ತಕ ಆ ರೀತಿ ಉಪಯೋಗವಾಗಬಾರದು ಎಂದುಕೊಂಡೆ. ಕಮಿಟಿಯಲ್ಲಿ ನನಗಾದ ಅವಮಾನ ಸೇಡಾಗಿ ಪರಿಣಮಿಸಿತ್ತು ಹೇಗಾದರೂ ಮಾಡಿ ನನ್ನ ಸೇಡನ್ನು ತೀರಿಸಿಕೊಳ್ಳಬೇಕು ಎನ್ನಿಸಿತು.

ನನ್ನ ಎದುರಿಗೆ ಬಲಮೂಲೆಯಲ್ಲಿ ಮಲಗಿದ್ದ ಪ್ರಯಾಣಿಕನ ಕಡೆಯವರು ಅವನನ್ನು ನೋಡಲು ಬಂದಾಗ, ಅವನು ಹುಚ್ಚನಂತೆ ಆಡಿದ. ಬಹುಶಃ ತಲೆಗೆ ಏಟು ಬಿದ್ದಿದ್ದರಿಂದ ಅವನು ಆ ರೀತಿ ಮಾಡುತ್ತಿರಬಹುದು ಎಂದು ವೈದ್ಯರು ಅವನ ಕುಟುಂಬದವರನ್ನು ಸಮಾಧಾನ ಮಾಡುತ್ತಿದ್ದರು. ಮರು ಕ್ಷಣವೇ ನನ್ನ ಕಿವಿಯಲ್ಲಿ ಹಾಳೆಗಳ ಶಬ್ದ ಪ್ರಾರಂಭವಾಯಿತು. ಅವಮಾನಿಸಿ ನನ್ನ ಬೆನ್ನ ಹಿಂದೆ ನಕ್ಕ ಆ ಕಮಿಟಿ ಸದಸ್ಯರ ಮುಖಚಿತ್ರಗಳು ಮನಸ್ಸಿನಲ್ಲಿ ಮೂಡುತ್ತಿದ್ದಂತೆ ಮನಸ್ಸು ವಿಕಾರವಾಯಿತು. ಸೇಡಿನ ಬೀಜ ಮೊಳೆತು ಗಿಡವಾಗಿ ಹೂಬಿಟ್ಟಿತ್ತು. ಸೇಡಿನ ಹೂವಿನ ಬಣ್ಣವಿಲ್ಲದ ದಳ ನೀನೂ ಆ ಹುಚ್ಚನಂತೆ ನಟಿಸು ಆಗ ನಿನ್ನ ಜೀವನದ ಜವಾಬ್ದಾರಿಗಳೆಲ್ಲಾ ಅಳಸಿ ನಿನ್ನ ಸಂಶೋಧನೆಗೆ ಹೆಚ್ಚು ಸಮಯ ಸಿಗುತ್ತದೆ. ನಿನ್ನ ಶ್ರಮಕ್ಕೆ ಅವಮಾನಿಸಿದವರಿಗೆ ನೀನಾರು ಎಂದು ತೋರಿಸಲು ಸಾಧ್ಯವಾಗುತ್ತದೆ. ನೀನು ನಿನ್ನ ಕುಟುಂಬದವರ ಕಣ್ಣಮುಂದಿದ್ದರೆ ಅವರಿಗೆ ಅದೇ ಸಾಕು. ಯೋಚಿಸಬೇಡ ಅಪ್ಪ, ಅಣ್ಣ ಬರುತ್ತಿದ್ದಾರೆ. ನೀನಿನ್ನು ಹುಚ್ಚ, ಅಷ್ಟೇ ನಟಿಸು. ನಾಳೆ ನಿನ್ನ ಶಕುನ ಶಾಸ್ತ್ರವಾಗಿ ನಿಂತಾಗ ಅದರ ಟೊಂಗೆಗೇ ನಿನ್ನ ಶತೃಗಳು ನೇಣು ಬಿಗಿದುಕೊಳ್ಳುತ್ತಾರೆ, ನೀನೀಗ ಹುಚ್ಚನಷ್ಟೇಹುಚ್ಚನಂತೆ ಯಾರಿಗೂ ಅನುಮಾನ ಬರದಂತೆ ನಟಿಸು ಎಂದು ಪಿಸುಗುಟ್ಟಿ, ಅಣ್ಣನ ಹಿಂದೆ ಅಡಗಿ ಮಾಯವಾಯಿತು. ಹುಚ್ಚನಂತೆ ನಟಿಸಿದೆ, ಒಂದು ತಿ೦ಗಳಲ್ಲೇ ಅತ್ತು ಸುಮ್ಮನಾಗಿ ನನ್ನ ಕೋಣೆಯಲ್ಲಿ ಬಿಟ್ಟು ತಮ್ಮ ಕೆಲಸಗಳಲ್ಲಿ ಮಗ್ನರಾದರು.

ನಾನು ನನ್ನ ಅಧ್ಯಯನವನ್ನು ಕೋಣೆಯ ನಾಲ್ಕು ಗೋಡೆಯ ಮಧ್ಯೆ ಪ್ರಾರಂಭಿಸಿದೆ. ಮೂರು ಹೊತ್ತು ಊಟ ಒಳ್ಳೆ ನಿದ್ರೆ ಸಂಜೆ ಮನೆಯ ಹಿಂದಿನ ಮೈದಾನದಲ್ಲಿ ಸುತ್ತಾಟ. ಯಾರಾದರೂ ನನ್ನ ಹುಚ್ಚಿನ ನಾಟಕವನ್ನು ಅನುಮಾನಿಸಿದರೆ, ಓಡಿಬಂದು ಮನೆಯಹೊರಗೆ ನಿಂತು ಏ ಬಿಲ್ಡಿಂಗ್ ಬಿಳ್ತದೆ ಎಲ್ಲರೂ ಹೊರಗಡೆ ಬರ್ರೀ ಎಂದು ಜೋರಾಗಿ ಕಿರುಚುತ್ತಿದೆ. ಅನುಮಾನಿಸಿದರವರಿಗೆ ಖಚಿತವಾಗುತ್ತಿತ್ತು ಉಳಿದವರಿಗೆ ಇವನಿಗೆ ಹುಚ್ಚು ಜಾಸ್ತಿಯಾಗಿದೆ ಅನ್ನಿಸುತ್ತಿತ್ತು. ಅದೇ ವೇಳಾಪಟ್ಟಿಯಲ್ಲಿ ನಾಲ್ಕೈದು ವರ್ಷಗಳನ್ನು ಕಳೆದೆ. ಶಕುನಗಳ ಬಗ್ಗೆ ಅಧ್ಯಯನ ನನಗೆ ತುಂಬಾ ಕುತೂಹಲಕಾರಿ ವಿಷಯಗಳನ್ನು ತೆರೆದಿಟ್ಟಿತ್ತು. ತಾತನ ಚಿತ್ರಗಳಪೈಕಿ ಅನೇಕವು ಅರ್ಥವಾಗಿದ್ದವು ಪ್ರತಿ ಶಕುನದ ಹಿಂದಿನ ರಹಸ್ಯ ತಿಳಿಯುವಷ್ಟು ಎನ್ನುವಂತಿರಲಿಲ್ಲ. ತಾತನು ಕೊನೆಯ ಅಧ್ಯಾಯದಲ್ಲಿ ಪ್ರಾಣಿಗಳು ಈ ರೀತಿಯ ಶಕುನಗಳನ್ನು ಬೇಗನೇ ಪತ್ತೆಹಚ್ಚುವುದರ ಜೊತೆಗೆ ಅಪಾಯವಿದ್ದಲ್ಲಿ ರಕ್ಷಿಸಿಕೊಳ್ಳುತ್ತವೆ. ಮುಂದೆ ಆಗುವ ಅಪಘಾತ, ಅನಾಹುತಗಳ ಬಗ್ಗೆ ಮನುಷ್ಯನಿಗಿಂತ ಪ್ರಾಣಿಗಳಿಗೇ ಮೊದಲು ತಿಳಿಯುತ್ತವೆ. ಭೂಕಂಪವಾಗುವ ಮುನ್ನ ಎಲ್ಲಾ ನಾಯಿಗಳೂ ಜೋರಾಗಿ ಬೊಗಳುತ್ತವೆ. ಹಾಗೇ ಎಲ್ಲಾ ಪ್ರಾಣಿಗಳಿಗೂ ಈ ವಿಶೇಷ ಶಕ್ತಿ ಇರುತ್ತದೆ. ಮನುಷ್ಯನಿಗೆ ಈ ಶಕ್ತಿ ಬರಬೇಕೆಂದರೆ ಬಹುಶಃ ಅವನೂ ಪ್ರಾಣಿಯಂತೆ ಎಲ್ಲಾ ಬಂಧನಗಳನ್ನು ಬಿಟ್ಟು ಸ್ವತಂತ್ರವಾಗಿ ಜೀವಿಸಿದಾಗ ಅಂದರೆ ಕಾಡಿನಲ್ಲಿ ತಾನೂ ಒಂದು ಪ್ರಾಣಿಯಂತೆ ಜೀವನ ನಡೆಸಿದಾಗ, ಅವನೂ ಒಂದು ಪ್ರಾಣಿಯಂತೆ ಪ್ರಕೃತಿಯಲ್ಲಿ ಬೆರೆತಾಗ ಪ್ರಕೃತಿಯೇ ಅವನಿಗೆ ಶಕುನಗಳನ್ನು ಪತ್ತೆಹಚ್ಚುವುದನ್ನು ಹೇಳಿಕೊಡುತ್ತದೆ ಎಂದು ಪ್ರಸ್ತಾಪಿಸಲಾಗಿತ್ತು.

ಅದರಂತೆ ನಾನೂ ಸಹ ಕಾಡಿಗೆ ಹೋಗಿ ಪ್ರಾಣಿಯಂತೆ ಜೀವಿಸುವುದೆಂದು ನಿರ್ಧಾರ ಮಾಡಿದೆ. ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳನ್ನು ಜೊಡಿಸಿಕೊಂಡು ಒಂದು ದಿನ ರಾತ್ರಿ ಮನೆಯಿಂದ ಹೊರಬಂದವನು ಯಾವುದೋ ರೈಲ್ ಹತ್ತಿ ಎಲ್ಲೋ ಇಳಿದು ಯಾವುದೋ ಕಾಡಿಗೆ ಹೋದೆ. ಕಾಡಿನಲ್ಲಿ ನಾನು ಒಂದು ಪ್ರಾಣಿಯಂತೆ ಬದುಕಿದೆ. ಸುಮಾರು ಎಂಟು ವರ್ಷಗಳಿಗೂ ಹೆಚ್ಚು ಕಾಲ ಗೆಡ್ಡೆ ಗೆಣಸು, ಎಳೆ ಪ್ರಾಣಿಗಳ ಮಾಂಸ ತಿನ್ನುತ್ತಾ ಕಾಡಲ್ಲಿದ್ದೆ. ನಗ್ನವಾಗಿ ಒಂದು ಕಾಡು ಪ್ರಾಣಿಯಂತೆ ಜೀವನ ನಡೆಸಿದೆ. ಮಾತು ಮರೆತೆ, ಶಕುನ ಕಲಿತೆ, ಮುಂದೆ ಆಗಬಹುದಾದ ಎಲ್ಲಾ ಸಂಗತಿಗಳು ತಿಳಿಯತೊಡಗಿದವು. ಪ್ರಾಣಿಗಳು ಮಾನವನಿಗಿಂತ ಮುಂದುವರೆದಿವೆ ಎಂದು ತಾತನ ಬಾಯಿಂದ ಕೇಳಿದ್ದೆ ಆದರೆ ಸತ್ಯವಾಗಿ ಕಾಡಲ್ಲಿ ಪರೀಕ್ಷಿಸಿದೆ. ಕಾಡಲ್ಲಿ ಅನೇಕ ವಿಸ್ಮಯಗಳನ್ನು ನೋಡಿದೆ, ಅನುಭವಿಸಿದೆ.

ಒಮ್ಮೆ ಕಾಡಲ್ಲಿ ನಡೆದುಹೋಗುತ್ತಿರುವಾಗ, ಒಂದು ಮಂಗ ನನ್ನೆದುರುಗಿನ ಮರದ ಮೇಲೆ ಕುಳಿತು ನನ್ನನ್ನು ನೋಡುತ್ತಾ ಜೋರಾಗಿ ಕೂಗತೊಡಗಿತು. ಈ ಮಂಗನ ಜೊತೆಗೆ ಅಳಿಲುಗಳು ತಮ್ಮ ಗೂಡಿನೊಳಗಿಂದಲೇ ಕಿಚಿಪಿಚಿ ಸದ್ದು ಮಾಡುತ್ತಿದ್ದವು. ಏನಿದು ಎಂದು ಯೋಚಿಸುವಷ್ಟರಲ್ಲಿ ಯಾವುದೋ ಪ್ರಾಣಿಯ ಕೊಳೆತ ಮಾಂಸದ ವಾಸನೆ ಮೂಗನ್ನು ಮುಚ್ಚುವಂತೆ ಮಾಡಿತು. ನಾನು ಮೂಗು ಮುಚ್ಚಿಕೊಂಡು ಮುಂದೆ ನಡೆದೆ ಕೋತಿ ಅಳಿಲುಗಳ ಕಿರುಚುವ ಶಬ್ದ ಜೋರಾಗಿ ಮತ್ತೆ ಸುಮ್ಮನಾದವು. ಆ ಪ್ರಾಣಿಗಳು ನನಗೆ ಏನೋ ಹೇಳುತ್ತಿವೆ ಅಂತ ಗೊತ್ತಾದ ತಕ್ಷಣ ನಿಂತುಬಿಟ್ಟೆ. ಬಹಳ ಎಚ್ಚರದಿಂದ ಹೆಜ್ಜೆಗಳನ್ನು ನಿಧಾನವಾಗಿ ಇಟ್ಟು ಚಲಿಸತೊಡಗಿದೆ. ಕಣ್ಣ ಮುಂದೆ ಒಂದು ಭಯಾನಕ ದೃಶ್ಯ ನಿಂತಿತ್ತು. ಒಂದು ಊಬು, ಅದರ ಸುತ್ತ ಸತ್ತ ಪ್ರಾಣಿಗಳ ಅರೆಬರೆ ತಿಂದ, ಗಬ್ಬು ನಾರುವ ಮಾಂಸದಮುದ್ದೆಗಳು. ಅಲ್ಲಿಂದ ಹಿಂದಕ್ಕೆ ಬಂದು ಮರದ ಕೆಳಗೆ ಕೂತು ಯೋಚಿಸತೊಡಗಿದೆ. ಆ ಯೋಚನೆ ನನ್ನನ್ನು ವಶೀಕರಿಸಿದಂತಾಗಿ ಅಲೆದಾಡಿದೆ, ನನಗೇ ತಿಳಿಯದಂತೆ ನಾನು ಪ್ರಜ್ಞಾಹೀನನಾಗಿ ಒಂದು ಕಾಡು ಪ್ರಾಣಿಯಂತೆ ಜೀವನ ನಡೆಸಲಾರಂಭಿಸಿದೆ. ಆನೆಯ ಘೀಳು, ನರಿಯ ಔಲು, ಕತ್ತೆಯ ಕಿರುಚಾಟ, ಹೇಸರಗತ್ತೆಯ ನಗು ಎಲ್ಲವೂ ಅರಿತೆ ಅವುಗಳ ಧ್ವನಿ ಸಂಕೇತಗಳನ್ನು ಪತ್ತೆಹಚ್ಚಿ ಅಪಾಯಗಳಿಂದ ಪಾರಾಗಿ ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಂಡೆ.

ಮುಂದುವರಿಯುವುದು  …..

-ಗೌತಮ್ ಪಿ ರಾಠಿ

  gouthamrati@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!