ಅಂಕಣ

ಕಾಡಿನ ನಂಟು – ವ್ಯಕ್ತಿ ಚಿತ್ರ

ಅದು ಕಣಿಯಾರು ಮಲೆ , ಒಂದು ಕಾಲದಲ್ಲಿ ಸಸ್ಯಜನ್ಯ, ಪ್ರಾಣಿಗಳಿಂದ ತುಂಬಿದ್ದ ಸಮೃದ್ಧ ಅರಣ್ಯ  , ಮೂಜುವಿನ ಕೂಗು , ಗೂಬೆಯ ಹಾಡು , ಪೊಟ್ಟ ಹಕ್ಕಿಯ ಕರ್ಕಶ ಧ್ವನಿ ಸಾಮಾನ್ಯವಾಗಿರುತಿತ್ತು. ಇಂದು ಸಹ ಒಂದಷ್ಟು ಇವುಗಳ ಸಂಖ್ಯೆಯಲ್ಲಿ ಅವರೋಹಣವಾಗಿದ್ರೂ ನೈಜತೆಯನ್ನು ಉಳಿಸಿಕೊಂಡು ಬಂದಿದೆ. ಕಾಡಿನ ತಪ್ಪಲಿನಲ್ಲಿರುವ ಅರಣ್ಯ ಇಲಾಖೆಯ ಗುಪ್ಪೆಯ ವರೆಗೆ ಒತ್ತುವರಿ ಮಾಡಿ ಮನೆ ಕಟ್ಟಿಸಿಕೊಂಡು ಜೀವನ ಸಾಗಿಸುವ ಕಷ್ಟ ಜೀವಿಗಳು , ಅವರೊಬ್ಬ  ಈ ಮುದರ , ತನ್ನ ಎರಡು ಕೋಣೆಯ ಪುಟ್ಟ ಮುಳಿ ಹುಲ್ಲಿನ ಮನೆಗೆ ಮಳೆಗಾಲದ ಮೊದಲೂಮ್ಮೆ ಅಡಕೆ ಹಾಲೆಯ ತುಂಡುಗಳನಿಟ್ಟು ಮಾಡಿನ ಸಂದಿನ ಸೆರೆಯಿಂದ ಸೂರ್ಯನ ಬೆಳಕು ಬರುವುದನ್ನು ತಡೆಯುತ್ತಾನೆ , ಗಾಳಿಗೆ ಅಲ್ಲಾಡುವ ಸೋಗೆಯನ್ನು ನಿಲ್ಲಿಸಲು  ತೆಂಗಿನ ಮಡಲೋ , ಬಿದಿರಿನ ತೊಳುಗಳನಿಟ್ಟು ಸಿಂಗಾರ ಮಾಡುತ್ತಾನೆ. ಆರು ಜನರಿರುವ ಮನೆಯಲ್ಲಿ ಯಜಮಾನನಾಗಿಯೇ ಇದ್ದು ದುಡಿಯದೇ ಜೀವನ ಸಾಗಿಸುತಿದ್ದ. ಬೇಸಗೆಯಲ್ಲಿ ಜೇನು ಹಿಡಿದು ತಂದು ಹತ್ತಿರದ ಭಟ್ರ ಅಂಗಡಿ ಮಧು ಮಲ್ಟಿಪಲ್ಸ್ಗೆ ಪೆಟ್ಟಿಗೆ ಜೇನೆಂದು ಮಾರಿ ದುಡ್ಡು ಮಾಡುತಿದ್ದ . ಬೇಡವಾದ ಪುರಿಯೆದಿ , ಮಂಜೊಲ್ ಎದಿಗಳೆಂದು ವಿಂಗಡಿಸಿ ಅದೆಷ್ಟೋ ಬಾರಿ ನನ್ನ ಬಾಯನ್ನು ಸಿಹಿ ಮಾಡಿದ್ದ . ಅಪರೂಪಕ್ಕೆಂಬಂತೆ ಜೇನಿನ ಅತಿಯಾದ ಪ್ರೀತಿಯಿಂದ ಆತನನ್ನು ಖಾರವಾಗಿ ಕುಟುಕಿ ಹನುಮಂತನಾದದ್ದು ಇದೆ . ಯಾವ ಕಲ್ಲಿನ ಸೆರೆಯಲ್ಲಿ ಯಾವ ಜೇನಿದೆ ಎಂದು ಆತನಿಗೆ ತಿಳಿಯುತ್ತಿತ್ತು , ತುಡುವೆ , ಕೋಲ್ಚಿಯಾ , ಕುಡುಪೋಲ್ ,  ಮೊಜಂಟಿ , ಅತೀ ಎತ್ತರದಲ್ಲಿ ಗೂಡು ಕಟ್ಟುವ ಪೆರಿಯ ಹೀಗೆ ಹಲವು ….. ಯಾವಾಗಲು ಏಕಾಂಗಿಯಾಗಿ ಅಲೆಯುವ ಆತನಿಗೆ ಅನೇಕ ಬಾರಿ ಸಾಥ್ ನೀಡುತಿದದ್ದು ನಮ್ಮ ಮನೆಯ ರಾಜು , ಮೆಲ್ಲನೆ ಆತನಿಂದ ಮುಂದೆ ಮುಂದೆ ಹೋಗಿ ಬಾಲ ಅಲ್ಲಾಡಿಸುತ್ತಾ , ಭೂ ವಿಜ್ಞಾನಿಯಂತೆ ಮೂಸಿ ಕಲ್ಲಿನ ಸೆರೆಯಲ್ಲಿರುವ ಜೇನನ್ನು ಸಂಶೋಧಿಸುತಿತ್ತು , ಎತ್ತರದ ಕುಂಬು ಕುತ್ತಿಯ ಮೇಲೆ ಕಾಡುಕೋಳಿಯ ಮೊಟ್ಟೆಯನ್ನು ಗೊತ್ತು ಮಾಡಿಸುತಿತ್ತು.  ಮತ್ತೆ ಋತುಮಾನ ಅನುಸಾರ ವಾಗಿ ಬೆಳೆಯುವ ಕಾಡುತ್ಪತಿಗಳಾದ ಸೀಗೆ , ಉಂಡೆ ಪುಲಿ , ಕಾಟ್ ಪುಲಿ, ಲೆಂಕಿರಿ ಕೊಕ್ಕೆ , ಬೆದ್ರ್ ಕೇರ್ಪು ಗಳನ್ನೂ ತಂದು ಸೇಸಪ್ಪಣ್ಣನ ಅಂಗಡಿಗೋ, ಮೂಸೆ ಬ್ಯಾರಿಗೋ  ಮಾರುತಿದ್ದ .
ಮುದರ ಹೋದಲೆಲ್ಲ ಗೈರ್ ವೈರ್ ನ ಉರುಳು ಇಟ್ಟು ಬರುವುದು ಅಭ್ಯಾಸ , ಅಪರೂಪಕ್ಕೆಂಬಂತೆ  ಕೇಂಕನ್ , ಮುಳ್ಳು ಹಂದಿ, ಕಾಡು ಹಂದಿ, ಬೆರೂ ಹೀಗೆ ಹಲವು ಕಾಡು ಪ್ರಾಣಿ – ಪಕ್ಷಿಗಳು ಸಿಕ್ಕಿ ಅಡುಗೆ ಮನೆ ಸೇರುತಿದ್ದವು . ಮಳೆಯೆಂದರೆ ಅವನಿಗೇನೋ ಪ್ರೀತಿ ಜಡಿ ಮಳೆಯಿರಲಿ , ಪಿರಿ ಪಿರಿ ಮಳೆಯಿರಲಿ ಹಳೆಯ ಕೊರಂಬು , ಕೈ ಕಡೆ ಇಲ್ಲದ ಕೊಡೆ ಆತನನ್ನು ಸೇರುತ್ತಿತ್ತು ತೋಡುತ್ಪತಿಗಳಾದ ತೆಂಗಿನ ಕಾಯಿ , ನೀರಿನ ಸುಳಿಗೆ ಅಲ್ಲೇ ನಿಂತ ಅಡಿಕೆ , ಅಂಬಟೆ ಆತನ ಹಳೆಯ ಸಂಗೀಸು ಚೀಲದಲ್ಲಿ ಕುಣಿಯುತಿರುತಿತ್ತು. ಮತ್ತೆ ನರ್ತೆ , ಸಾರಿನ ಡೆಂಜಿ , ಗದ್ದೆಯ ಆಮೆಗಳೆಲ್ಲ ಅಡುಗೆಯ ನೆಸಲೆಯೊಳಗೆ ವ್ಯಾಯಾಮ ಮಾಡುತಿರುತ್ತಿದ್ದವು . ಪಿರಿಪಿರಿ ಮಳೆಯ ಜೊತೆ ಬರುವ ಗುಡುಗಿಗೆ ಅರಳುವ ಭಟ್ರ ಮಾಂಸವಾದ ಅಣಬೆಗಳು ಆತನನ್ನೇ ಹುಡುಕಿಕೊಂಡು ಬಂದಂತೆ ಆತನ ಸುತ್ತ ಮುತ್ತಲೇ ಅರಳುತಿದ್ದವು ನಾಯಿಂಬ್ರೆ , ಮುಟ್ಟಾಲಂಬು , ಸುಳಿರು . ಪರಲ್ಲು , ಕಲ್ಲಣಬೆ, ಮರಣಬೆ ಹೀಗೆ … ಅಪರೂಪಕ್ಕೆಂಬಂತೆ ಅಪ್ಪ ಅಣಬೆಯ ಪರಿಮಳ ಸಿಕ್ಕಿ ಹುಡುಕುವುದನ್ನು ನೋಡಿದರೆ , ಅಣಬೆಗಳನ್ನು ಹುಡುಕಬಾರದು ಕೆಲವೊಮ್ಮೆ ವಿಷ ಹಾವುಗಳು ಅಣಬೆಯನ್ನು ನೆಕ್ಕಿ ಬಂದು ಬಾಯಿ ದೊಡ್ಡ ಮಾಡಿ ಪರಿಮಳ ಬಿಡುತ್ತವೆ ಎಂದು ಎಚ್ಚರಿಸುತಿದ್ದ .

ಹಿಂಗಾರು ಶುರುವಾಗುತ್ತಾ , ದೀಪಾವಳಿ ಹತ್ತಿರವಾದಂತೆ, ಷಷ್ಟಿಯ ಸಮಯಕ್ಕೆ  ದುಂಬಿಗಳು ತಲೆಯ ಎತ್ತರದಲ್ಲಿ ಹಾರುತಿದ್ದಂತೆ , ಹಾವುಗಳು ಹರಿದಾಡುವುದು ಜಾಸ್ತಿ … ನಮ್ಮ ಮನೆಯಂಗಳದಲ್ಲಿ ಹಾವುಗಳನ್ನು ಕಂಡರೆ ಆತನನ್ನೇ ಕರೆಯುತಿದ್ದೆವು , ಅದೇನೋ ಪವಾಡವೋ ಗೊತ್ತಿಲ್ಲ , ಆತನನ್ನು ಕಂಡ ಕೂಡಲೇ ಮೃಗ ಕೂಡಿಬರದೇ ಸರಸರನೇ ತಮ್ಮ ಹಾದಿ ಹಿಡಿಯುತಿದದ್ದು ಮಾತ್ರ ಸತ್ಯ. ಆತ ವಿವರಿಸುತ್ತಾ ಆ ಹಾವು ಇಷ್ಟು ವಿಷ , ಇದರಲ್ಲಿ ಹಲವು ಬಣ್ಣ ಇರುತ್ತದೆ , ಅದು ಹಾಗೆ ನೆತ್ತೆರ್ ಮುಂಗುಲಿ , ಕಟ್ಟ ಮಲಕರಿ , ಮರಮರಿ , ಪಗೆಲೇ , ತೌಡುಗುಲೆ  ಹೀಗೆ ಹಲವು ಬಗೆಯವೂ ಎಂದು … ಉಡ , ಪೊಲಿಂಕೆಗಳು ಮನೆಯ ಗೋಡೆಯಲ್ಲಿ ಹರಿದಾಡಿದರೆ ಮನೆಗೆ ಮಾಟ ಮಾಡಿದಂತೆ , ಅರಣೆ ತಲೆ ಮುಟ್ಟಿದರೆ ಮರೆವು ಜಾಸ್ತಿ , ಹಲ್ಲಿ ನೆತ್ತಿಗೆ ಬಿದ್ದರೆ ಮರಣ ಅಂತಲೂ ವಿವರಿಸುತಿದ್ದ . ಆತನೊಂದಿಗೆ ಸಕಾರಣದಿಂದ ಕಾಡಿಗೆ ಹೋದದ್ದೇ ಆದರೆ  ಅದೆಷ್ಟೋ  ಗಿಡ ಬಳ್ಳಿಗಳ ಬಗೆಗೆ ನಮ್ಮ ಜೀವಶಾಸ್ತ್ರ ಶಿಕ್ಷಕಿಗಿಂತಲೂ  ಚೆನ್ನಾಗಿ ವಿವರಿಸುತಿದ್ದ ಅದು ಪಾದಲಪ್ಪು , ಈಶ್ವರ ಬೇರು , ಕಟ್ರೆಗಿಡ , ನೆಲನೆಲ್ಲಿ , ಬೊಲ್ಲೆಸಪ್ಪು , ಗರುಡಪಾತಾಳ , ಒಳ್ಳೆಕುಡಿ , ನೆಲಪಾದೆ , ನೀಲಿ ಸಪ್ಪು , ಪಂಚೆ ಪತ್ರೆಗಳೆಂದು ಹೇಳಿ ಅದು ಜ್ವರಕ್ಕೆ , ಇದು ಪಿತ್ತಕ್ಕೆ , ಉರಿ ಮೂತ್ರಕ್ಕೆ, ಇದು ಬಾಣಂತಿಯರಿಗೆ ಕೊಟ್ಟರೆ ಒಳ್ಳೆಯದು ಕೆಲವನ್ನು ಅರೆದು ಹಸಿ ಕುಡಿಯಬೇಕು , ಮತ್ತೆ ಕೆಲವನ್ನು ಕಷಾಯ ಮಾಡಬೇಕೆಂದು ತಿಳಿಸಿ ಹೇಳಿ ಆಯುರ್ವೇದ ವೈದ್ಯನೂ ಆಗುತಿದ್ದ . ಆತ ಹೋದದ್ದೇ ದಾರಿ , ಬಂದದ್ದೇ ಮಾರ್ಗ,  ಬಾಯಾರಿಕೆ ನೀಗಿಸಲು ಯೆಂಜಿರ್ ಬಳ್ಳಿಯ ಕಡಿದು ನೀರು ಕುಡಿಸುತಿದ್ದ ಅದು ಆರೋಗ್ಯಕ್ಕೂ ಉತ್ತಮ ಕಣ್ಣಿನ ರಕ್ಷಣೆಗೂ ದಿವ್ಯ ಔಷಧಿಯೆಂದು …. ಹೊಟ್ಟೆ ತುಂಬಿಸಲು ಕಾಟು ನೆಲ್ಲಿಕಾಯಿ, ಕಾರೆ ಕಾಯಿ , ಕೊಟ್ಟೇ ಹಣ್ಣು , ಚೂರಿಕಾಯಿ ಗಳನ್ನೂ ಕೀಳಿ ಕೊಡುತಿದ್ದ . ಮತ್ತೆ ಈ ನೀರಿನ ಗುಂಡಿಗೆ ಜಿಂಕೆ ಬರುತ್ತದೆ , ಕಾಟಿಯ ಕರುವಿನ ಹೆಜ್ಜೆ ಇದು ಇಲ್ಲೊಮ್ಮೆ ನೋಡಿ , ಇದು ಕಾಡು ಹಂದಿಯ ಹೆಜ್ಜೆ ಹೀಗೆ ಹೆಜ್ಜೆಗಳ ಪರಿಚಯವನ್ನು ಮಾಡಿಸುತಿದ್ದ .
ಈ ಮುದರ ನಮ್ಮ ದೈವದ ಸೇವಕನಾಗಿದುದ್ದರಿಂದ ;ಜೀವನದಲೋಮ್ಮಯೂ ಆತನ ಪಾದ ಚಪ್ಪಲ್ಲಿ ಸವೆಸಿಲ್ಲ , ತಲೆ ಮುಟ್ಟಾಲೆಯನ್ನು ಮುಟ್ಟಿಲ್ಲ . ಆತ ಹೇಳುತಿದ್ದ ಕಥೆಗಳೆಲ್ಲ ವಿಶೇಷ ಆಸಕ್ತಿ ಹುಟ್ಟಿಸುವಂತಹುಗಳು , ಭತ್ತದಿಂದ ವೈನು ತೆಗೆಯುವುದು , ರಮ್ಮು ಕುಡಿದಾಗ ಶೀತ ಕಡಿಮೆಯಾಗುವುದು ,  ಒಣಗಿದ ಗೇರು ಮರ ಕಡಿದಾಗ ಮೀಸೆ ಸುಂದರ ಗಾರ್ಡ್ ರ ಜಬರ್ದಸ್ತ್ ಗೆ ಬೋಂಡ ಕೊಟ್ಟು ಸಮಾಧಾನ ಮಾಡಿದ್ದೂ , ನಾಗರಹಾವು ತನ್ನ ಬಾಯಲ್ಲಿರುವ ಮಾಣಿಕ್ಯವನ್ನು ಬದಿಯಲಿಟ್ಟು ನೀರು ಕುಡಿಯುವುದು ,  ರಾತ್ರಿ ಹೊತ್ತು ರಿಕ್ಷಾ ಟೆಂಪೋ ದಲ್ಲಿ ಬಂದ ಮೀನು ತರುವಾಗ ಹಿಂದಿನಿಂದ ಏನೋ ಎಳೆದಂತೆ ಆದದ್ದು , ಬಿಳಿ ಕುಲೆ ಕಂಡದ್ದು , ಬ್ರಹ್ಮ ರಕ್ಕಸ ಪಾಚಿಯದದ್ದು , ಒಂಟಿ ಕಾಟಿಯನ್ನು ಓಡಿಸಿದ್ದು ಹೀಗೆ ಸಾಲು ಸಾಲು ಅಂತೆ ಕಂತೆಗಳೇ ನಮ್ಮ ಬುದ್ಧಿಗೆ ಆಹಾರವಾಗುತಿದ್ದವು . ಈ ವರ್ಷದ ಮುಂಗಾರಿನ ಜಿಟಿ ಜಿಟಿ ಮಳೆಗೆ ನೆನೆಯ ಬೇಕಾದ ಈತ ಅದಕ್ಕೆ ಮೊದಲೇ ಕಳೆದು ಹೋಗಿದ್ದಾನೆ . ಪರಿಸರ ರಕ್ಷಕನಾಗಿ , ಶಿಕ್ಷಕನಾಗಿ ಮುದರ ಆಗಾಗ ಕಾಡುತಿರುತ್ತಾನೆ .

Facebook ಕಾಮೆಂಟ್ಸ್

ಲೇಖಕರ ಕುರಿತು

Bharatesha Alasandemajalu

ನಾನೊಬ್ಬ ಹೆಮ್ಮೆಯ ಹ್ಯಾಮ್ - VU3NNV ಕರೆ ಸಂಕೇತ , ರೇಡಿಯೋ ಕೇಳೋದು , ಊರೂರು ಸುತ್ತೋದು , ಬೆಟ್ಟ ಹತ್ತುವುದು , ಚಿತ್ರ ಸೆರೆಹಿಡಿಯುವುದು, ಪುಟಾಣಿ ಮಕ್ಕಳೊಂದಿಗೆ ಆಡೋದು, ಪ್ರಾಯದವರೊಂದಿಗೆ ಹರಟೋದು, ಮತ್ತೆ ತಲೆ ತಿನ್ನೋದು ಇವೆಲ್ಲ ಅಂದ್ರೆ ತುಂಬಾ ಇಷ್ಟ... ಕುಡ್ಲದ ಪುತ್ತೂರಿನವ , ನನ್ನ ತುಳುನಾಡು, ನನ್ನ ಕನ್ನಡ , ನನ್ನ ಭಾರತವನ್ನು ಒಂದಿಚು ಬಿಟ್ಟು ಕೊಡುವವನಲ್ಲ, ನಾಡು , ನುಡಿ , ದೇಶದ ಬಗೆಗೆ ಗರ್ವ , ಅಹಂಕಾರ , ಸ್ವಾರ್ಥಿ ನಾನು . ಯಾಕೋ ಓದಿದ ತಪ್ಪಿಗೆ ದೂರದ ಮಸ್ಕಟ್ ನಲ್ಲಿ ಯಾಂತ್ರಿಕ ತಂತ್ರಜ್ಞನಾಗಿ ನೌಕರಿ.... ಒಟ್ಟಾರೆ ಪಿರಿಪಿರಿ ಜನ !!

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!