ಕವಿತೆ

ಸಾಂತ್ವನ

ಆ ದಿನ

ನನಗೆ ಅಳು ಒಂದೇ ಸಮನಾಗಿ ಬರುತ್ತಿತ್ತು|

ತಡೆಯಲಾರದ ಅಳು, ಬಿಕ್ಕು, ತೊಟ್ಟುತೊಟ್ಟಾಗಿ ಹರಿಯುವ ಕಣ್ಣೀರು

ಹೊರಬರುವ ಕಣ್ಣೀರ ಸೆರಗ ತುದಿಯಿಂದ ಒರೆಸಲಾಗದ ಅಸಹಾಯಕ ನಾನು||

 

ಹೋಗಿ ಅಮ್ಮನ ತಬ್ಬಿದೆ; ಅಚ್ಚರಿಗೊಂಡು ಕೈಹಿಡಿದಳು

ಕೆಲವೇ ಕ್ಷಣ, ನೀನೊಬ್ಬ ಹುಚ್ಚಿ, ಪಕ್ಕಕ್ಕೆ ಸರಿಸಿದಳು|

ಅಪ್ಪನ ಹಿಡಿದೆ, ಏನಾಯ್ತು ಮಗಳೇ? ಕೇಳಿದ

ಕೆಲವೇ ಗಳಿಗೆ, ಅವನ ಕೈ ನನ್ನನ್ನು ದೂರ ಸರಿಸಿತ್ತು||

 

ತಡೆಯಲಾರದ ಕಣ್ಣೀರು ಹೊರಬರುತ್ತಲೇ ಇತ್ತು

ಪತಿಯ ಬಳಿ ಹೋಗಿ ತಬ್ಬಿದೆ ನನ್ನ ಕಣ್ಣು ಆತನನ್ನು ಬೇಡಿತ್ತು|

ಕಣ್ಣೀರ ಒರೆಸು, ಪತಿ ತಬ್ಬಿಬ್ಬಾದ, ಗಟ್ಟಿಯಾಗಿ ತಬ್ಬಿದ, ಸಮಾಧಾನಿಸಿದ

ಕಣ್ಣೀರು ಇನ್ನೂ ಹರಿಯುತ್ತಲೇ ಇತ್ತು, ಆತನ ಕೈ ನನ್ನ ದೂರ ಸರಿಸಿತ್ತು||

 

ಹರಿವ ಕಣ್ಣೀರ ತಡೆಯಲಾರದಾದೆ, ಮಕ್ಕಳ ಬಳಿ ಹೋದೆ ಬಾಚಿ ತಬ್ಬಿದರು

ತಲೆನೇವರಿಸಿದರು, ಕೆಲವೇ ಗಳಿಗೆ ಕೈ ನನ್ನ ಬಿಟ್ಟಿತ್ತು|

ಕಣ್ಣೀರು ಹೊರಬರುತ್ತಲೇ ಇತ್ತು, ಸೆರಗಚುಂಗು ಒರೆಸುತ್ತಲೇ ಇತ್ತು

ಕಾಲು ಕರೆದೊಯ್ದಿತ್ತು ಬಾಲ್ಯಸಖ ಬೆಟ್ಟದಾಚೆ ಅಂಚಿನ ಮರದ ಬಳಿಗೆ

 

ಹೋಗಿ ತಬ್ಬಿದೆ, ಒರೆಸು ನನ್ನ ಕಣ್ಣೀರ

ಕೇಳಿದೆ, ತಬ್ಬಿದೆ, ಇನ್ನಷ್ಟು ಮತ್ತಷ್ಟು ಬಿಗಿಬಿಗಿಯಾಗಿ|

ಕಣ್ಣೀರು ಹರಿಯುತ್ತಲೇ ಇತ್ತು, ಸಮಯ ಕಳೆಯುತ್ತಿತ್ತು

ಮರ ನನ್ನ ದೂರ ಸರಿಸಲೇ ಇಲ್ಲ||

 

ತಾಸುತಾಸು ತಬ್ಬಿದ ಮರಕ್ಕೆ ನಾನು ಬೇಸರವಾಗಲಿಲ್ಲ

ಹರಿವ ಕಣ್ಣೀರು ಮರದ ಕಾಂಡ ತೋಯಿಸಿತು|

ಒದ್ದೆಯಾದ ಕಾಂಡ, ಹಸಿಯಾದ ಹಸಿರೆಲೆ ಕಣ್ಣೀರ ನುಂಗಿದ ತಾಯಿಬೇರು

ಮರ ನನ್ನ ದೂಡಲಿಲ್ಲ, ಕೈ ಸರಿಸಲಿಲ್ಲ||

 

ಕಣ್ಣೀರು ಇಂಗಿತ್ತು, ಸುಖದ ನೆಮ್ಮದಿ ಮೆದುಳ ತುಂಬ

ತಲೆ ಕೊಟ್ಟ ಬೇರು ತಾಯಮಡಿಲಂತೆ, ಬಿಸುಪ ನೀಡುವ ತಂಗಾಳಿ|

ನಿದ್ದೆ ಝೋಂಪಿನ ಜೋಗುಳ, ಎಲ್ಲ ದೂರಾಗಿ ಹಗುರಾದ ಭಾವ

ಎಲೆಮರೆಯ ಕಾಂಡ ಬೇರುಗಳು ನಸುನಗುತ್ತ ತಂಗಾಳಿ ಬೀಸಿ ಬೀಳ್ಕೊಟ್ಟವು||

Facebook ಕಾಮೆಂಟ್ಸ್

ಲೇಖಕರ ಕುರಿತು

Saroja Prabhakar

‘ಉತ್ಥಾನ ‘ಪತ್ರಿಕೆಯ ಕಾರ್ಯಕರ್ತೆ. ಓದು, ಬರವಣಿಗೆ, ಸಂಗೀತ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!