ಅಂಕಣ

ಬೇವು ನುಂಗಿ, ಬೆಲ್ಲ ಸವಿದು ನವಸಂವತ್ಸರವ ಸ್ವಾಗತಿಸೋ ಯುಗಾದಿ

 ಋತುಗಳ ರಾಜ ವಸಂತ ಕಾಲಿಟ್ಟನೆಂದರೆ ಎಲ್ಲೆಲ್ಲೂ ಜೀವಕಳೆಯ ಸಂಭ್ರಮ ಪಲ್ಲವಿಸುತ್ತದೆ. ಹಳೆಬೇರಿನ ಆಧಾರದ ಮೇಲೆ ಹೊಸ ಚಿಗುರು ಬಿರಿಯುವ ಈ ಕಾಲ ಪ್ರಕೃತಿಯ ನಿರಂತರ ಚಲನಶೀಲತೆಯ ಮಹಾನ್ ದ್ಯೋತಕವೂ ಹೌದು ಮತ್ತು ಮಾನವನ ಬದುಕಿನ ಏರಿಳಿತಗಳನ್ನು ಪ್ರತಿಬಿಂಬಿಸುವ ಅರ್ಥಪೂರ್ಣ ರೂಪಕವೂ ಹೌದು. ಹೊಸ ಟಿಸಿಲಿನ ಲವಲವಿಕೆ ಹಾಗೂ ತಾಜಾತನಗಳಂತಹ ಪ್ರಕೃತಿದತ್ತ ಪ್ರಭಾವಳಿಯೊಂದಿಗೆ ಸಂಭ್ರಮದಿಂದ ಆಚರಿಸಲ್ಪಡುವ ಮಹಾಪರ್ವವೇ ಯುಗಾದಿ. ಮಾನವ ಮತ್ತು ಪ್ರಕೃತಿಯ ಸಹಸಂಬಂಧವನ್ನು ಪೋಷಿಸುವ ಮಹತ್ವದ ಹಬ್ಬವಿದು. ವೃಕ್ಷಸಂಕುಲಗಳ ಹಸಿರ ನವ ಕುಡಿಗಳಂತೆಯೇ ಹೊಸ ವರ್ಷ, ಋತು, ಮಾಸ, ಪಕ್ಷಗಳೆಲ್ಲದರ ಆರಂಭವೂ ಈ ಹಬ್ಬದ ಮೂಲಕವೇ ಎಂಬಲ್ಲಿಗೆ ಇದು ಮುಂಬರುವ ಪೂರ್ಣ ಸಂವತ್ಸರವೊಂದಕ್ಕೆ ಪೀಠಿಕೆಯಿದ್ದಂತೆ.

 

ಹಬ್ಬಗಳ ಸಾಮ್ರಾಟ ಎಂದೇ ಪರಿಗಣಿಸಲ್ಪಡುವ ಯುಗಾದಿಯು ಶಾಸ್ತ್ರ, ಸಂಪ್ರದಾಯ ಮತ್ತು ಜನರ ನಂಬಿಕೆ, ವಾಡಿಕೆಗಳ ದೃಷ್ಟಿಯಿಂದಲೂ ಬಹು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಚಾಂದ್ರಮಾನ ಯುಗಾದಿ ಮತ್ತು ಸೌರಮಾನ ಯುಗಾದಿ ಇದರ ಎರಡು ವಿಧಗಳು. ಪ್ರತಿ ಸಂವತ್ಸರ ಮತ್ತು ಚೈತ್ರ ಮಾಸದ ಪ್ರಪಥಮ ಹಬ್ಬ ಯುಗಾದಿ. ಚಾಂದ್ರಮಾನ ಯುಗಾದಿಯು ಚೈತ್ರ ಮಾಸದ, ಶುಕ್ಲ ಪಕ್ಷದ, ಪಾಡ್ಯದ ತಿಥಿಯಂದು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸುವ ಹಬ್ಬ. ಇಲ್ಲಿ ಚಂದ್ರನ ಚಲನೆಯನ್ನಾಧರಿಸಿ ಮಾಸ, ಪಕ್ಷಗಳ ಲೆಕ್ಕಾಚಾರ ನಡೆಯುತ್ತದೆ.  ಸೌರಮಾನ ಯುಗಾದಿಯು ಸೂರ್ಯನ ಚಲನೆಯನ್ನಾಧರಿಸಿದ್ದು ಮೇಷ ರಾಶಿಯ ಮೊದಲ ದಿನದಂದು ಆಚರಿಸಲಾಗುತ್ತದೆ. ನಾವು ಬಳಸುವ ಇಂಗ್ಲೀಷ್ ಕ್ಯಾಲೆಂಡರ್’ಗೆ ಅನುಗುಣವಾಗಿ ಹೇಳುವುದಾದರೆ ಚಾಂದ್ರಮಾನ ಯುಗಾದಿಯು ಸಾಮಾನ್ಯವಾಗಿ ಮಾರ್ಚ್ 14ರಿಂದ ಏಪ್ರಿಲ್ 13ರ ನಡುವಿನ ಅವಧಿಯಲ್ಲಿ ಬರುತ್ತದೆ.

ಈ ಬಾರಿಯ ಯುಗಾದಿಯು 30ನೇ ಸಂವತ್ಸರವಾದ ದುರ್ಮುಖಿಯಿಂದ 31ನೇಯದಾದ ‘ಹೇಮಲಂಬಿ’ಗೆ ಪಲ್ಲಟದ ಕಾಲ. ನೂತನ ಸಂವತ್ಸರವೊಂದರ ಆರಂಭ. ಅಲ್ಲದೇ, ‘ಪ್ರಭವದಿಂದ’ ಆರಂಭವಾಗಿ ‘ಅಕ್ಷಯ/ಕ್ಷಯ’ಕ್ಕೆ ಮುಕ್ತಾಯವಾಗುವ ಒಟ್ಟು ಅರವತ್ತು ಸಂವತ್ಸರಗಳ ಒಂದು ಪೂರ್ಣ ಆವೃತ್ತಿಯಲ್ಲಿ 30 ಸಂವತ್ಸರಗಳು ಕಳೆದು 31ನೆಯ ಸಂವತ್ಸರ ಅಂದರೆ ಆ ಆವೃತ್ತಿಯ ದ್ವಿತಿಯಾರ್ಧದ ಅಧಿಕೃತ ಶುಭಾರಂಭ. ಭಾರತೀಯರಿಗೆ ಯುಗಾದಿಯೇ ನವ ವರುಷದ ಆರಂಭ ಎನ್ನುವುದು ಈ ನೆಲೆಗಟ್ಟಿನಲ್ಲಿಯೇ ಹೊರತು ಯಾವುದೇ ಆಧಾರರಹಿತ ವಾದಸರಣಿಯಿಂದಲ್ಲ. ಕೇವಲ ವೈದಿಕ ಸಂಪ್ರದಾಯವಷ್ಟೇ ಅಲ್ಲದೆ ಇರಾನಿಗರೂ ಕೂಡಾ ತಮ್ಮ ವರ್ಷದ ಆರಂಭವನ್ನು ಈ ದಿನದಿಂದಲೇ ಮಾಡುತ್ತಾರೆ. ಅವರು ಅದನ್ನು ನೌರೋಜ್ ಎಂದು ಕರೆಯುತ್ತಾರೆ. ಯುಗಾದಿಗೆ ಪ್ರಾದೇಶಿಕವಾಗಿ ಬೇರೆ ಬೇರೆ ನಾಮಾಂಕಿತಗಳಿವೆ.ಕರ್ನಾಟಕ, ಆಂಧ್ರಪ್ರದೇಶ ಹಾಗೂ ಗೋವಾಗಳಲ್ಲಿ ಯುಗಾದಿಯೆಂದರೆ, ಮಹಾರಾಷ್ಟ್ರದಲ್ಲಿ ಗುಡಿಪಾಡ್ವ, ಗೋವಾದ ಹಿಂದೂ ಕೊಂಕಣಿಗರು ‘ಸಂವತ್ಸರ ಪಾಡ್ವೊ, ಸಿಂಧಿಗಳು ‘ಚೀತಿ ಚಾಂದ್’, ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿ ‘ವರ್ಷ ಸಂವತ್’ ಎಂಬ ಹೆಸರುಗಳಿಂದ ಆಚರಿಸಲಾಗುತ್ತದೆ. ಸೌರಮಾನ ಯುಗಾದಿಯನ್ನು ಬಿಸು, ವಿಷು, ಪಿರಪ್ಪು, ಬೈಸಾಕಿ, ಪುಥಾಂದು ಎಂಬಿತ್ಯಾದಿ ಹೆಸರುಗಳಿಂದ ಕರೆಯುತ್ತಾರೆ.

ಯುಗಾದಿಯ ಹಿನ್ನೆಲೆಗೆ ಸಂಬಂಧಿಸಿದಂತೆ ಹಲವಾರು ಪೌರಾಣಿಕ ಪ್ರತಿಪಾದನೆಗಳು ಹಾಗೂ ಧರ್ಮಗ್ರಂಥಗಳ ಉಲ್ಲೇಖಗಳ ಆಧಾರವಿದೆ. ಅವುಗಳಲ್ಲಿ ಕೆಲವೊಂದಷ್ಟನ್ನು ಪ್ರಸ್ತಾಪಿಸುವುದಾದರೆ, ಮೊದಲನೆಯದು ಮಹಾಜಲಪ್ರಳಯದ ನಂತರ ಪ್ರಜಾಪತಿಯಾದ ಬ್ರಹ್ಮನು ಈ ದಿನ ಅಂದರೆ ಚೈತ್ರಮಾಸದ, ಶುಕ್ಲ ಪಕ್ಷದ ಮೊದಲ ದಿನದ ಸೂರ್ಯೋದಯ ಸಮಯದಲ್ಲಿ ಹೊಸದಾಗಿ ಲೋಕವನ್ನು ಸೃಷ್ಟಿಸುವ ಮಹಾನ್ ಕೈಂಕರ್ಯವನ್ನು ಆರಂಭಿಸಿ ಕಾಲಗಣನೆಗೆ ಗ್ರಹ, ನಕ್ಷತ್ರ, ಋತು ಮಾಸ, ತಿಥಿ ಇತ್ಯಾದಿಗಳನ್ನು ನಿಯೋಜಿಸಿದ ಎನ್ನುವುದು’ಬ್ರಹ್ಮ ಪುರಾಣ’ದಲ್ಲಿನ ಉಲ್ಲೇಖ. ಸ್ಥಿತಿಕರ್ತನಾದ ವಿಷ್ಣುವು ಮತ್ಸ್ಯಾವತಾರ ಎತ್ತಿದ ದಿನ, ವಾಲ್ಮೀಕಿ ಮಹರ್ಷಿಯ ರಾಮಾಯಣದ ಪ್ರಕಾರ ತ್ರೇತಾಯುಗದಲ್ಲಿ ಶ್ರೀರಾಮಚಂದ್ರ ವನವಾಸದಿಂದ ಹಿಂದಿರುಗಿದ ದಿನ, ‘ರಾವಣ ವಧೆ’ಯನ್ನು ಕೊಂಡಾಡುತ್ತಾ ಉತ್ಸವ ಮಾಡಿದ ದಿನ, ಇಂದ್ರನು ‘ವಸು’ವೆಂಬ ರಾಜನಿಗೆ ವಸ್ತ್ರ ಅಲಂಕಾರಗಳನ್ನು ದಯಪಾಲಿಸಿದ್ದು ಈ ದಿನದಂದೇ ಎನ್ನಲಾಗಿದೆ. ಚರಿತ್ರೆಯ ಪುಟಗಳಲ್ಲಿ ಅಡಕವಾಗಿರುವಂತೆ ಇದು ಶಾಲಿವಾಹನನು ವಿಕ್ರಮಾದಿತ್ಯನ ವಿರುದ್ಧ ಜಯಿಸಿ ಶಾಲಿವಾಹನ ಶಕೆಯು ಪ್ರಾರಂಭವಾದ ದಿನವೂ ಹೌದು.

ಪ್ರತಿಯೊಂದು ಹಬ್ಬದ ಆಚರಣೆಗೂ ಅದರದೇ ಆದ ನಿರ್ದಿಷ್ಟ ವಿಧಿ ವಿಧಾನಗಳಿರುತ್ತವೆ. ಆಚರಣಾ ಕ್ರಮಗಳು, ಅಗತ್ಯ ದ್ರವ್ಯಗಳು ಹಬ್ಬದಿಂದ ಹಬ್ಬಕ್ಕೆ ಭಿನ್ನವಾಗಿರುತ್ತವೆ. ಹಿಂದೂ ಧರ್ಮ ಗ್ರಂಥಗಳಲ್ಲಿ ಹೇಳಿರುವಂತೆ ಯುಗಾದಿ ಹಬ್ಬದ ಆಚರಣೆಯಲ್ಲಿ ಈ ಐದು ವಿಧಿಗಳು ಪ್ರಮುಖವಾದವುಗಳು. ಅವುಗಳೆಂದರೆ ತೈಲಾಭ್ಯಂಜನ, ದೇವತಾ ಸ್ತುತಿ, ಧರ್ಮ ಧ್ವಜಾರೋಹಣ, ನಿಂಬಕಂದಳ ಭಕ್ಷಣ(ಬೇವು- ಬೆಲ್ಲ ಸೇವನೆ) ಮತ್ತು ಪಂಚಾಂಗ ಶ್ರವಣ. ಪಂಚಾಂಗ ಶ್ರವಣವನ್ನು ಸಾಮೂಹಿಕವಾಗಿ ದೇವಸ್ಥಾನಗಳಲ್ಲಿ, ಮಂದಿರಗಳಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಜಾತಿ, ಮತ ಹಾಗೂ ಪಂಥಗಳ ಭೇದವಿಲ್ಲದೆ ಎಲ್ಲರೂ ಜೊತೆಯಾಗಿ ಪಾಲ್ಗೊಳ್ಳಬಹುದು. ಈ ಹಬ್ಬದಂದು ಗೃಹಾಲಂಕರವೂ ಪ್ರಧಾನವಾದುದು. ಮನೆಯ ಪರಿಸರವನ್ನು ಸ್ವಚ್ಛಗೊಳಿಸಿ ತಳಿರುತೋರಣಗಳಿಂದ ಸಿಂಗರಿಸಲಾಗುತ್ತದೆ. ಮಾವಿನ ಚಿಗುರೆಲೆ, ಬೇವಿನ ಸೊಪ್ಪು, ಮತ್ತು ಶುಭ ಸಂಕೇತವಾದ ಕೆಂಪು ಹೂಗಳನ್ನು ತೋರಣಕ್ಕೆ ಬಳಸುವುದು ಅವಶ್ಯ.

ಯುಗಾದಿ ಹಬ್ಬವೆಂದರೆ ಅಲ್ಲಿ ‘ಬೇವು-ಬೆಲ್ಲ’ಕ್ಕೆ ವಿಶೇಷವಾದ ಪ್ರಾಮುಖ್ಯತೆಯಿದೆ. ಈ ಹಬ್ಬದ ಆಚರಣೆಯ ಅಂಗವಾಗಿ ಪರಸ್ಪರ ಬೇವು ಬೆಲ್ಲವನ್ನು ಹಂಚುವ ಮೂಲಕ ಅದನ್ನು ಸೇವಿಸುತ್ತಾರೆ. ಕಹಿಬೇವಿನ ಚಿಗುರು, ಅದರ ಹೂವು, ನೆನೆಸಿದ ಕಡಲೆಬೇಳೆ, ಜೀರಿಗೆ ಇಂಗು ಇತ್ಯಾದಿಗಳನ್ನು ಬೆರೆಸಿ ವಿಶೇಷ ನೈವೇದ್ಯವನ್ನೂ ತಯಾರಿಸಲಾಗುತ್ತದೆ ಮತ್ತದು ಪ್ರಜಾಪತಿಯಾದ ಬ್ರಹ್ಮ ದೇವನಿಗೆ ಅತ್ಯಂತ ಪ್ರಿಯವಾದುದು ಕೂಡಾ ಬೇವು ಬೆಲ್ಲವನ್ನು ಸೇವಿಸುವಾಗ

ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ.

ಸರ್ವಾರಿಷ್ಠ ವಿನಾಶಾಯ ನಿಂಬಕಂದಳ ಭಕ್ಷಣಂ

ಎಂಬ ಸ್ತೋತ್ರವನ್ನು ಪಠಿಸುವುದರಿಂದ ಬೇವು ಬೆಲ್ಲದ ಭಕ್ಷಣೆಯ ಹಿಂದಿನ ಉದ್ಧೇಶಗಳನ್ನು ನಾವು ಬಾಯಿಯಿಂದ ಪುನರುಚ್ಚರಿಸಿದಂತಾಗುತ್ತದೆ. ಈ ಬೇವು ಬೆಲ್ಲವನ್ನು ಜೊತೆಯಾಗಿ ಸೇವಿಸುವುದರ ಹಿಂದೆ ಆಧ್ಯಾತ್ಮಿಕ ಕಾರಣಗಳಷ್ಟೇ ಅಲ್ಲದೆ ವೈಜ್ಞಾನಿಕ ಹಾಗೂ ಸಾಮಾಜಿಕ ಕಾರಣಗಳನ್ನೂ ಗುರುತಿಸಬಹುದು. ಬೇವು ಹಲವಾರು ಔಷಧಿಯ ಗುಣಗಳನ್ನು ಹೊಂದಿದೆ. ಬೇವನ್ನು ಹಾಗೂ ಬೆಲ್ಲದ ಜೊತೆ ತಿನ್ನುವುದರಿಂದ ಬೇವಿನ ಎಲೆಯಲ್ಲಿರುವ ವಾತದ ದೋಷವು ಶಮನವಾಗುತ್ತದೆ. ಅಲ್ಲದೆ ಇದಕ್ಕೆ ಸಾಮಾಜಿಕ ಮೌಲ್ಯವೂ ಇಲ್ಲದಿಲ್ಲ. ಬೇವು ಪಾಪ, ಕಷ್ಟ ಹಾಗೂ ದುಃಖಗಳನ್ನು ಪ್ರತಿನಿಧಿಸಿದರೆ, ಬೆಲ್ಲವು ಪುಣ್ಯ ಹಾಗೂ ಸುಖವನ್ನು ಪ್ರತಿನಿಧಿಸುತ್ತದೆ. ಈ ಎರಡನ್ನೂ ಜೊತೆಯಾಗಿ ಸೇವಿಸುವುದು ಜೀವನವು ಸುಖ, ದುಃಖಗಳ ಸಮ ಮಿಶ್ರಣ ಎಂಬ ಘನತತ್ವವನ್ನು ಸೂಚಿಸುತ್ತದೆ. ಜನಪದರು ಇದನ್ನು ತಮ್ಮ ಆಡು ಮಾತುಗಳಲ್ಲಿ ಅತ್ಯಂತ ಸೊಗಸಾಗಿ ಮತ್ತು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದಾರೆ.

ಬೇವೇನೋ, ಬೆಲ್ಲವೇನೋ? ಎಲ್ಲಾನೂ ಒಂದೇನೆ

ಬೇವೂ ಇರ್ಬೇಕೋ, ಬಾಳ್ನ್ಯಾಗೆ, ಯುಗಾದೀಗೆ

ಬೇವು ನುಂಗಿ ಬೆಲ್ಲ ತಿನ್ನೋ.. ಓಓ ಜಾಣ|

ಅಂದರೆ ಜೀವನದಲ್ಲಿ ಕಹಿಯನ್ನು ಹಾಗೆ ನುಂಗಿಕೊಂಡು ಬದುಕಿನ ಸಿಹಿಯನ್ನು ಮಾತ್ರ ಸವಿಯಬೇಕು ಎಂದರ್ಥ.

ಈ ಹಬ್ಬವು ಕೇವಲ ಆಧ್ಯಾತ್ಮಿಕ ಮಾತ್ರವಲ್ಲದೆ ಸಾಂಸ್ಕೃತಿಕ, ಸಾಮಾಜಿಕ ಪ್ರಾಧಾನ್ಯತೆಯ ಮಜಲನ್ನೂ ಹೊಂದಿದೆ ಎನ್ನುವುದಕ್ಕೆ ಈ ಹಬ್ಬದ ಪ್ರಯುಕ್ತ ಜನರು ತೊಡಗಿಸಿಕೊಳ್ಳುವ ಹಲವಾರು ಜಾನಪದ ಮತ್ತು ಸಾಹಸ ಕ್ರೀಡೆಗಳು, ತಯಾರಿಸುವ ವೈವಿಧ್ಯಮಯ ಖಾದ್ಯಗಳು ಮತ್ತು ಮರುದಿನ ನಡೆಯುವ ವರ್ಷತಡುಕುವಿನಂತಹ ಆಚರಣೆಗಳೇ ಸಾಕ್ಷಿ. ಹೀಗೆ ಆಚರಿಸಲ್ಪಡುವ ಈ ಹಬ್ಬವು ನವೋಲ್ಲಾಸದ ಚೈತನ್ಯವನ್ನು ಪಸರಿಸುವುದರೊಂದಿಗೆ ಮುಂಬರುವ ಸಂವತ್ಸರಕ್ಕೆ ಅನುವಾಗುವ ಮಾನಸಿಕ ಸಂಕಲ್ಪವನ್ನು ರೂಪಿಸುತ್ತದೆ. ಮನೆ ಹಾಗೂ ಮನಸ್ಸಿಗೆ ನವ ಹುರುಪಿನ ತೋರಣವನ್ನು ಕಟ್ಟುವುದರೊಂದಿಗೆ ದುರ್ಮುಖಿ ಸಂವತ್ಸರಕ್ಕೆ ವಿದಾಯ ಹೇಳಿ ಹೇಮಲಂಬಿ ಸಂವತ್ಸರವನ್ನು ಬರಮಾಡಿಕೊಳ್ಳೋಣ.

Facebook ಕಾಮೆಂಟ್ಸ್

ಲೇಖಕರ ಕುರಿತು

Sandesh H Naik

ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಹಕ್ಲಾಡಿ ಹುಟ್ಟೂರು. ಪ್ರಸ್ತುತ ಶಿಕ್ಷಕರಾಗಿ ಕಾರ್ಯನಿರ್ವಹಣೆ.  ಬರವಣಿಗೆ ಮೆಚ್ಚಿನ ಪ್ರವೃತ್ತಿಗಳಲ್ಲೊಂದು.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!