ಅಂಕಣ

೦೪೫. ಬೆಳಕಿಲ್ಲದ ಜಗದೆ ಕತ್ತಲೆಯದೇ ರಾಜ್ಯಭಾರ..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೪೫

ಬೆಂಕಿಯುಂಡೆಯ ಬೆಳಕು ಬೆಣ್ಣೆಯುಂಡೆಯ ಬೆಳಕು |
ಮಂಕುವಿಡಿಸಲು ಸಾಕು ಮಣ್ಣುಂಡೆ ಕಣ್ಗೆ ||
ಶಂಕೆಗೆಡೆಯಿರದು ಕತ್ತಲೆಯೆ ಜಗವನು ಕವಿಯೆ |
ಬೊಂಕುದೀವಿಗೆ ತಂಟೆ – ಮಂಕುತಿಮ್ಮ || ೦೪೫ ||

ಬೆಂಕಿಯುಂಡೆಯೆಂದರೆ ಕಿಡಿಗಾರುವ ಸೂರ್ಯ; ಬೆಣ್ಣೆಯುಂಡೆಯೆಂದರೆ ಹುಣ್ಣಿಮೆ ಸುಧೆ ಚೆಲ್ಲುತ್ತ ಬೆಣ್ಣೆಮುದ್ದೆಯ ಹಾಗೆ ಕಾಣಿಸಿಕೊಳ್ಳುವ ಚಂದ್ರಮ. ಇವೆರಡರ ಈ ವಿರೋಧಾಭಾಸದ ಅಸ್ತಿತ್ವದಲ್ಲು ಸಮಾನವಾದ ಅಂಶವೆಂದರೆ ಎರಡು ಬೆಳಕು ಕೊಡುತ್ತವೆ – ಕೊಡುವ ಸಾಂದ್ರತೆ, ಪ್ರಖರತೆಗಳಲ್ಲಿ ವ್ಯತ್ಯಾಸವಿದ್ದರೂ ಸಹ.

ಇವೆರಡರ ಬೆಳಕು ಇದ್ದರೂ ಸಹ ಕೇವಲ ಮಣ್ಣಿನೊಂದು ಉಂಡೆಯನ್ನು ಮೆತ್ತಿಕೊಂಡರೂ (ಅಡ್ಡ ಹಿಡಿದರು) ಸಾಕು, ಆ ಬೆಳಕೆಲ್ಲ ಮರೆಯಾಗಿ ಮಂಕು ಅಥವ ಮಬ್ಬು ಕವಿದುಬಿಡುತ್ತದೆ ಕಣ್ಣುಗಳಿಗೆ. ಇದನ್ನೆ ಮತ್ತೊಂದು ಆಧ್ಯಾತ್ಮಿಕ ಕೋನದಲ್ಲಿ ನೋಡಿದರೆ ಬೆಳಕು ಜ್ಞಾನದ ಪ್ರತೀಕವಾಗಿರುವುದರಿಂದ ಅದನ್ನು ನೀಡುವ ಸೂರ್ಯನಾಗಲಿ, ಚಂದ್ರನಾಗಲಿ ಜ್ಞಾನಕಾರಕರಾಗುತ್ತಾರೆ, ದಾರಿ ದೀಪವಾಗುತ್ತಾರೆ. ಆದರೆ ಆ ಜ್ಞಾನವೆನ್ನುವ ಬೆಳಕು ತಂತಾನೆ ಬಂದು ಒಳ ನುಸುಳಿಬಿಡುವುದಿಲ್ಲ. ಅದನ್ನು ನೋಡಿ, ಸೋಸಿ, ಆಸ್ವಾದಿಸಿ ಒಳಬಿಟ್ಟುಕೊಳ್ಳುವ ಕಣ್ಣುಗಳು ಇರಬೇಕು. ಆದರೆ ಈ ಮಾಯೆ, ಅಜ್ಞಾನವೆಂಬ ಮಣ್ಣುಂಡೆಯ ಸುಳಿಗೆ ಸಿಕ್ಕಿ ಅದರಿಂದ ಕಣ್ಣನ್ನು ಮುಚ್ಚಿಬಿಟ್ಟರೆ ಅಷ್ಟೊಂದು ಪ್ರಖರ ಸೂರ್ಯಚಂದ್ರರ ಬೆಳಕೂ ಒಳನುಗ್ಗದ ಹಾಗೆ ಅದು ಅಡ್ಡಗೋಡೆ ಹಾಕಿ, ಬರಿಯ ಕತ್ತಲ ಜಗವನ್ನು ಮಾತ್ರ ಉಳಿಸಿಬಿಡುತ್ತದೆ – ಆ ಕಂಗಳ ಪಾಲಿಗೆ.

ಈ ಕಣ್ಣೆ ಒಂದು ರೀತಿಯ ಅರಿವಿನ ದೀಪವಾದರು, ಆ ಹೊರಗಿನ ಬೆಳಕಿಲ್ಲದೆ ಅದು ಅಸಹಾಯಕವಾಗಿಬಿಡುತ್ತದೆ. ಹೊರಗಷ್ಟೆಲ್ಲ ಸೂರ್ಯ ಚಂದ್ರರ ಬೆಳಕು (ಜ್ಞಾನ) ಅಷ್ಟೊಂದು ರಾಶಿ ವಿಶಾಲ ಸಾಗರದಂತೆ ಹರಡಿಕೊಂಡಿದ್ದರು, ಅದನ್ನು ಸುಲಭದಲ್ಲಿ ಒಳಬಿಡದ ಸಾಮಾನ್ಯ ಮಣ್ಣುಂಡೆಯಂತಹ ಅಜ್ಞಾನವೆ ಅವೆರಡಕ್ಕಿಂತಲು ಹೆಚ್ಚು ಪ್ರಬಲ ಎನ್ನುವುದಾದರೆ – ಆ ಬೆಳಕಿನ ಸ್ವರೂಪವಿದ್ದು ಪ್ರಯೋಜನವಾದರೂ ಏನು? ಅದು ಬರಿಯ ಭ್ರಮೆಯ, ಕಲ್ಪನೆಯ, ಕೆಲಸಕ್ಕೆ ಬಾರದ ದೀಪವಿದ್ದ ಹಾಗೆಯೆ ಲೆಕ್ಕವಲ್ಲವೆ ? ಅದರ ಬದಲು ಶಂಕೆಗಾಸ್ಪದವೆ ಇರದ ಹಾಗೆ ಬರಿಯ ಕತ್ತಲೆಯೆ (ಅಜ್ಞಾನವೆ) ಜಗವನ್ನು ತುಂಬಿಕೊಂಡುಬಿಟ್ಟರೆ ತಂಟೆಯೆ ಇರುವುದಿಲ್ಲವಲ್ಲಾ ? ಹೇಗೂ ಮಣ್ಣುಂಡೆಯಡಿಯ ಕಣ್ಣಿಗೆ ಏನೂ ಕಾಣದು. ಕತ್ತಲೆಯಲ್ಲೂ ಏನೂ ಕಾಣದು. ಆಗ ಅಜ್ಞಾನ, ಮಾಯೆಯಡಿ ಸಿಕ್ಕಿಕೊಂಡಿದ್ದರು ಏನೂ ಅನಿಸದು – ಎಲ್ಲು ಬೆಳಕು ಕಾಣಿಸದೆ ಇರುವುದರಿಂದ, ಮತ್ತದರ ಅಸ್ತಿತ್ವದ ಅರಿವೇ ಆಗದಿರುವುದರಿಂದ.

ಕೈಗೆ ಸಿಗದೆ, ಬರಿಯ ಮಾಯಜಿಂಕೆಯಂತೆ ಭ್ರಮೆಯನ್ಹುಟ್ಟಿಸುವ ದೀವಿಗೆ ಕಾಣುತ್ತಿದ್ದರೆ ತಾನೇ ಇಲ್ಲ ಸಲ್ಲದ ತಂಟೆ ? ಎನ್ನುತ್ತಿದ್ದಾನೆ ಮಂಕುತಿಮ್ಮ – ಇಗ್ನೊರೆನ್ಸ್ ಇಸ್ ಬ್ಲಿಸ್ ಅನ್ನುವ ಹಾಗೆ. ಎಷ್ಟೇ ಅಗಾಧ ಸ್ತರದ, ಮೇರು ಸ್ವರೂಪದ ಸತ್ಯ-ಜ್ಞಾನವೆ ಸುತ್ತೆಲ್ಲಾ ಚೆಲ್ಲಾಡಿಕೊಂಡಿದ್ದರೆ ತಾನೇ ಏನು? ಕೇವಲ ಐಹಿಕ, ಪ್ರಾಪಂಚಿಕ ಬಂಧಗಳು ಅವನ್ನೆಲ್ಲವನ್ನು ಮರೆ ಮಾಡಿ, ಅಂಧಕಾರದಲ್ಲಿರಿಸಿ ತೊಳಲಾಡಿಸುವುವು ಎಂಬುದಿಲ್ಲಿನ ಅಂತರ್ಗತ ಭಾವ.

#ಕಗ್ಗಕೊಂದು-ಹಗ್ಗ
#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!