ಅಂಕಣ

ಯಾರು ಮಹಾತ್ಮ?- ೧೨

ಹಿಂದಿನ ಭಾಗ:

ಯಾರು-ಮಹಾತ್ಮ-೧೧

          ಇಡೀ ದೇಶ ಮೋಪ್ಲಾ ಅತ್ಯಾಚಾರಕ್ಕೆ ಆತಂಕಗೊಂಡಿದ್ದರೆ, ಗಾಂಧಿ ಅದಾವುವೂ ತನಗೆ ತಿಳಿಯದೆಂದರು. ಆಗ್ರಹಿಸಿ ಪ್ರಶ್ನಿಸಿದಾಗ ” ಮೋಪ್ಲಾಗಳು ತಮ್ಮ ಧಾರ್ಮಿಕ ಆದೇಶದಂತೆ ವರ್ತಿಸಿದ್ದಾರೆ. ಹಿಂದೂಗಳು ಹಿಂದೆ ಮಾಡಿದ ಪಾಪವೇ ಈ ಘಟನೆಗಳಿಗೆ ಕಾರಣವಿರಬಹುದು” ಎಂದು ಅತ್ಯಾಚಾರಿಗಳನ್ನೇ ಸಮರ್ಥಿಸಿದರು.  ಅಲ್ಲದೆ ತಮ್ಮ “ಯಂಗ್ ಇಂಡಿಯಾ”ದಲ್ಲಿ “ವ್ಯಾಪಕ ಮತಾಂತರ ನಡೆದಿಲ್ಲ. ಕೇವಲ ಒಂದೇ ಒಂದು ಪ್ರಕರಣ ನಡೆದಿದೆ.” ಎಂದು ಬರೆದರು. “ಇಂಥಾ ಬಾಲಿಶ ಹೇಳಿಕೆಗಳನ್ನು ಕೊಡಬೇಡಿ” ಎಂದು ಗಾಂಧಿಗೆ ಹೇಳಿದ ತಪ್ಪಿಗೆ ಕೆ.ಪಿ. ಕೇಶವ ಮೆನನರ(ಕಲ್ಲಿ ಕೋಟೆಯ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ) ಮನೆಯ ಮೇಲೇ ಕಾಂಗ್ರೆಸ್ಸಿಗರು ಕಲ್ಲು ತೂರಿದರು. ಕಾಂಗ್ರೆಸ್ ತನಗೂ ಮೋಪ್ಲಾ ಗಲಭೆಗೂ ಸಂಬಂಧವಿಲ್ಲವೆಂದೂ, ಉತ್ಪ್ರೇಕ್ಷಿತ ವರದಿಗಳಿಂದ ವಿಚಲಿತರಾಗಿ ಮೋಪ್ಲಾಗಳು ಹಿಂಸಾಚಾರಕ್ಕಿಳಿದರೆಂದೂ ನಿರ್ಣಯ ಮಾಡಿತು. ಮದರಾಸ್ ಸರಕಾರದ ಅಧಿಕೃತ ದಾಖಲೆಯಲ್ಲಿ ಹಲವು ಸಾವಿರ ಮತಾಂತರ ಪ್ರಕರಣಗಳ ಅಧಿಕೃತ ವರದಿಗಳು ಇದ್ದಾಗ್ಯೂ ಗಾಂಧಿ ಈವರೆಗೆ ಅಂತಹ ಕೇವಲ ೩ ಪ್ರಕರಣಗಳು ನಡೆದಿವೆ ಎಂದರು (1922 ಜನವರಿ). ಕಾಂಗ್ರೆಸ್ ಮಗುಮ್ಮಾಗಿ ಬೆಂಬಲಿಸಿತು.

              ಸರ್ವೆಂಟ್ಸ್ ಆಫ್ ಸೊಸೈಟಿಯ ವರದಿಯಂತೆ ಮೋಪ್ಲಾಗಳಿಂದ 1000 ಹಿಂದೂಗಳ ಕಗ್ಗೊಲೆ, 20,000 ಬಲವಂತದ ಮತಾಂತರಗಳು, ಹಲವು ಸಾವಿರ ಮಹಿಳೆಯರ ಅತ್ಯಾಚಾರ, ಜನರಿಂದ 3 ಕೋಟಿಗೂ ಮಿಕ್ಕಿದ ಹಣದ ಲೂಟಿ ಆಗಿತ್ತು. ಎಡಬಿಡಂಗಿ ಕಮ್ಯೂನಿಷ್ಟರು “ಮೋಪ್ಲಾಗಳು 1100 ದೇವಾಲಯಗಳ ಪೈಕಿ 100 ದೇವಾಲಯಗಳನ್ನು ಮಾತ್ರ ಧ್ವಂಸ ಮಾಡಿದರು. 500 ಮಂದಿ ಮಾತ್ರ ಕೊಲೆಯಾದರು. 2500 ಮಂದಿ ಮಾತ್ರ ಮತಾಂತರಗೊಂಡರು” ಎಂಬ ತನ್ನ ಎಂದಿನ ಹಿಂದೂ ವಿರೋಧಿ ಮನಸ್ಥಿತಿಯ ವರದಿಗಳನ್ನೇ ತಯಾರು ಮಾಡಿದರು. ಈ ದಂಗೆಗಳನ್ನು ತಹಬಂದಿಗೆ ತರಲು ಪೊಲೀಸ್ ಪಡೆಗಳಿಗೆ ಸಾಧ್ಯವಾಗದೇ ಸೈನಿಕ ತುಕಡಿಗಳನ್ನೇ ಕರೆಸಿಕೊಳ್ಳಲಾಯಿತು. ಈ ಹಂತದಲ್ಲಿ ಗೆರಿಲ್ಲಾ ಯುದ್ಧ ತಂತ್ರಕ್ಕೆ ಶರಣು ಹೋದ ಮೋಪ್ಲಾಗಳನ್ನು ನಿಯಂತ್ರಿಸಲು ಒಂದು ವಿಶೇಷ ಅನುಭವಿ ಪಡೆಯನ್ನೇ ತರಬೇತುಗೊಳಿಸಿ ನೇಮಿಸಲಾಯಿತು. ಹೀಗೆ ಏಳೆಂಟು ತಿಂಗಳುಗಳ ಪರ್ಯಂತ ಮೋಪ್ಲಾಗಳೊಂದಿಗೆ ಕಾದಾಡಿದ ಈ ಪಡೆ ದಂಗೆಯನ್ನು ನಿಯಂತ್ರಿಸಿತು.

            ಮೋಪ್ಲಾ ಬಂಡಾಯದ ಕುರಿತು ಆನಿಬೆಸೆಂಟ್, ಅಂಬೇಡ್ಕರ್, ಶಂಕರನ್ ನಾಯರ್ ಮುಂತಾದವರ ಭಾಷಣಗಳೂ, ಆರ್ಯಸಮಾಜ, ವೈಎಂಸಿಎ, ಸರ್ವೆಂಟ್ಸ್ ಆಫ್ ಇಂಡಿಯಾದ ವರದಿಗಳನ್ನು ಓದಿದರೆ ಎಂತಹವನಿಗಾದರೂ ರಕ್ತ ಕುದಿಯಲೇಬೇಕು. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಜಿ. ಕೆ ದೇವಧರ್, ಆರ್ಯ ಸಮಾಜದ ಋಷಿರಾಂ, ವೈಎಂಸಿಯ ಕೆಟಿ ಪಾಲ್ & ಎಚ್ ಎ ಪಾಪ್ಲೇ ಮೊದಲಾದವರು ಏರ್ಪಡಿಸಿದ ಸಂತ್ರಸ್ಥ ಸಹಾಯ ಶಿಬಿರಗಳಲ್ಲಿ 26,000ಕ್ಕೂ ಹೆಚ್ಚು ಮಂದಿ ಆಶ್ರಯ ಪಡೆದರು. ಜಾಮೋರಿನ್ ದೊರೆಯ ಮನಕಾವು, ಕೊಟ್ಟಕ್ಕಲ್ ಅರಮನೆಗಳು, ಕೃಷ್ಣವರ್ಮ ರಾಜನ ಅರಮನೆಗಳಲ್ಲಿ ಸಾವಿರಾರು ಮಂದಿ ಆಸರೆ ಪಡೆದರು. ದಂಗೆ ನಡೆಯಲಿಲ್ಲವೆಂದಾದರೆ ಇಷ್ಟೊಂದು ಮಂದಿ ತಮ್ಮ ಮನೆಮಠ ತೊರೆದು ಹಲವು ತಿಂಗಳುಗಳ ಪರ್ಯಂತ  ಆಶ್ರಯ ಪಡೆದದ್ದು ಯಾಕೆ ಉಚಿತ ಊಟ ಸಿಗುತ್ತದೆಂದೇ? ನೀಲಂಬೂರು ರಾಣಿ ಅತ್ಯಾಚಾರಕ್ಕೊಳಗಾದ 2 ಸಾವಿರ ಮಹಿಳೆಯರ ಪರವಾಗಿ ವೈಸ್ ರಾಯ್ ರೆಡಿಂಗನ ಪತ್ನಿಗೆ ಬರೆದ ಮನವಿ ಪತ್ರ ಕರುಣಾಜನಕವಾಗಿದೆ.

” ಈ ಪ್ರಮಾಣದ ಬರ್ಬರತೆ ಎಲ್ಲಿಯೂ ನಡೆದದ್ದಿಲ್ಲ. ನಮ್ಮ ಬಂಧುಗಳ ಶವಗಳಿಂದ ಇಲ್ಲಿಯ ಕೆರೆಗಳು, ಬಾವಿಗಳು ತುಂಬಿ ಹೋಗಿವೆ. ದುರ್ನಾತ ಹರಡಿದೆ. ನಮ್ಮ ಒಂದೇ ಒಂದು ಅಪರಾಧವೆಂದರೆ ನಮ್ಮ ಮಾತೃ ಧರ್ಮವನ್ನು ತ್ಯಜಿಸಲು ನಾವು ಒಪ್ಪದೇ ಇದ್ದುದು. ಗರ್ಭಿಣಿಯರನ್ನೂ ನಿರ್ದಯವಾಗಿ ಕೊಲ್ಲಲಾಗಿದೆ. ನಮ್ಮ ಹಸುಳೆ ಮಕ್ಕಳನ್ನು ನಮ್ಮೆದುರಿನಲ್ಲಿಯೇ ತುಂಡು ತುಂಡು ಮಾಡಿದ್ದಾರೆ. ಆ ಮಕ್ಕಳ ಅಳು ನಮ್ಮ ಕಿವಿಗಳಲ್ಲಿ ಪ್ರತಿಧ್ವನಿಸುತ್ತಿದೆ. ಹಸುಗಳನ್ನು ಕೊಂದು ಅವುಗಳ ರಕ್ತಗಳನ್ನು ದೇವಾಲಯಗಳಲ್ಲಿ ಚೆಲ್ಲಾಡಿದ್ದಾರೆ. ತಲೆ ತಪ್ಪಿಸಿಕೊಂಡು ಅರಣ್ಯವಾಸಿಗಳಾಗಿರುವ ನಮಗೆ ಮೈ ಮುಚ್ಚುವಷ್ಟು ಬಟ್ಟೆಯೂ ಇಲ್ಲವಾಗಿದೆ. ಶ್ರೀಮಂತ ಮನೆತನದ ಮಹಿಳೆಯರನ್ನು ಬಲಾತ್ಕಾರವಾಗಿ ಮೋಪ್ಲಾ ಕೂಲಿಗಳಿಗೆ ಲಗ್ನ ಮಾಡಿಸಿದ್ದಾರೆ. ನಮ್ಮ ಅಕ್ಕ, ತಂಗಿಯರು, ಗೆಳತಿಯರನೇಕರು ದಾರುಣ ಅತ್ಯಾಚಾರಗಳಿಗೆ ಬಲಿಯಾಗಿದ್ದಾರೆ. ನಾವೀಗ ರಕ್ಷಣೆಗೆ ನಿಮ್ಮ ಸರಕಾರವನ್ನು ಮೊರೆ ಹೋಗದೇ ಬೇರೆ ದಾರಿಯೇ ಇಲ್ಲ.”

               ಪೊಲೀಸರಿಗೆ ಬಲಿಯಾದ ಮೋಪ್ಲಾನೊಬ್ಬ ಸಾಯುವ ಸಂದರ್ಭದಲ್ಲಿ ಹೇಳಿದ ಮಾತು -“ನಾನು ನೆಮ್ಮದಿಯಿಂದ ಸಾಯುತ್ತಿದ್ದೇನೆ. ಹದಿನಾಲ್ಕು ಮಂದಿಯನ್ನು ನಾನು ಸಾಯಿಸಿದ್ದೇನೆ. ೫ ಮಹಿಳೆಯರನ್ನು ಅತ್ಯಾಚಾರ ಮಾಡಿ, ಹತ್ತು ಜನರ ಮತಾಂತರ ಮಾಡಿರುವ ನನಗೆ ಸತ್ತ ಮೇಲೆ ಮಾನಿನಿಯರಿಂದ ಸ್ವರ್ಗ ಸುಖ ದೊರೆಯುತ್ತದೆ”. ಮಾಧವನ್ ನಾಯರ್ ಪ್ರತ್ಯಕ್ಷ ಕಂಡು ಕಳುಹಿಸಿದ ವರದಿ–“…A pregnant woman carrying 7 months was cut through the abdomen by a rebel and she was seen lying dead on the way with the dead child projecting out….Another baby of 6 months was snatched away from the breast of mother and cut into two pieces….”

              ಅಬುಲ್ ಕಲಾಮ್ ಆಜಾದ್, ಹಕೀಂ ಅಜ್ಮಲ್ ಖಾನ್ ಮೊದಲಾದವರ ಉದ್ರೇಕಕಾರಿ ಭಾಷಣಗಳೇ ದಂಗೆಗೆ ಬೀಜಾರೋಪ ಮಾಡಿದವು ಎಂದು ಪಿ.ಸಿ. ಬಮ್’ಪರ್ಡ್ ವರದಿ ಮಾಡಿದರೆ, ಕಾಂಗ್ರೆಸ್ಸಿನ ಖಿಲಾಫತ್ ಪ್ರಚಾರವೇ ಇಡೀ ದುರಂತದ ಮೂಲವೆಂದು ರಾಲಿನ್’ಸನ್ ವರದಿ ಮಾಡಿದ್ದ. ‘ವಿಚಾರಣೆ'(!)ಗಾಗಿ ಕಾಂಗ್ರೆಸ್ ನೇಮಿಸಿದ್ದ ‘ತೈಯಬ್ಜಿ’ ಮಹಾಶಯ ಮಲಬಾರಿಗೆ ಕಾಲಿಡದೇ ಮದರಾಸಿನಲ್ಲೇ ಕುಳಿತು ತನ್ನ ವರದಿ ಬರೆದ! ಶೌಕತ್ ಆಲೀಯಂತು “ಸ್ವರಾಜ್ಯ ಆಂದೋಲನ ಹಿಂದೂ ರಾಜ್ಯಕ್ಕಾಗಿ ನಡೆದಿದೆ. ಹಾಗಾಗಿ ಮುಸಲ್ಮಾನರೆಲ್ಲಾ ಅದನ್ನು ತ್ಯಜಿಸಬೇಕು” ಎಂದು ಕರೆ ಕೊಟ್ಟ. ಇಷ್ಟೆಲ್ಲಾ ಆದರೂ ಗಾಂಧಿ ಹೇಳಿದ್ದೇನು ಗೊತ್ತೇ? ” Hindus will have to learn to die in the face of hewrest odds in order to convert musalman full into a respecting friend.” ಗಾಂಧಿಯವರ ಇನ್ನೊಂದು ಮಾನಗೆಟ್ಟ ಕಾರ್ಯವೆಂದರೆ ಮೋಪ್ಲಾಗಳಿಗಾಗಿ ಹಿಂದೂಗಳಿಂದಲೇ “ಪರಿಹಾರ ನಿಧಿ” ಸಂಗ್ರಹ ಮಾಡಿದ್ದು. ಮಾತ್ರವಲ್ಲ ಇಂಥವರು 10ರೂ. ಕಳಿಸಿದ್ದಾರೆ, ಒಂದು ರೂಪಾಯಿ ಕಳುಹಿಸಿದ್ದಾರೆ…ಎಂದು ದಾಖಲೆ ಮಾಡುತ್ತಾ ಹೋಗಿದ್ದು!

              ಆರ್ಯಸಮಾಜ ಹಿಂದೂಗಳಿಗೆ ರಕ್ಷಣೆ ನೀಡಿದ್ದಲ್ಲದೆ ಮತಾಂತರಿತರನ್ನು ಮರಳಿ ಮಾತೃ ಧರ್ಮಕ್ಕೆ ಕರೆತರುವ ಪ್ರಯತ್ನ ನಡೆಸಿತು. ಸರ್ವೆಂಟ್ಸ ಆಫ್ ಇಂಡಿಯಾ, ವೈಎಂಸಿಎ ಮೊದಲಾದ ತಂಡಗಳು ನಿಷ್ಪಕ್ಷಪಾತ ವರದಿ ಪ್ರಕಟಿಸಿ, ಸಂತ್ರಸ್ಥರಿಗೆ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದವು. ಮಹಾರಾಷ್ಟ್ರದ ಶ್ರೀ ಬಾಲಕೃಷ್ಣ ಮೂಂಜೆ ಜನರನ್ನು ನೇರ ಸಂದರ್ಶಿಸಿ ಮಾಹಿತಿ ಸಂಗ್ರಹಿಸಿ, ಸಹಾಯ ಹಸ್ತವನ್ನೂ ಚಾಚಿದರು. ಭಾರತೀಯ ಚರಿತ್ರಕಾರರು ಇತಿಹಾಸದ ಪುಟಗಳಿಂದ ಮೋಪ್ಲಾ ದಂಗೆಯನ್ನು ಕಿತ್ತೆಸೆದರೂ ಬ್ರಿಟಿಷರ ಸಚಿತ್ರ ವರದಿಗಳು, ಆಧಾರ ಸಹಿತ ಸತ್ಯ ಚಿತ್ರಣ ನೀಡಿದ ಅಮೃತಸರ-ಸಹರಾನ್ ಪುರದ ವ್ಯಕ್ತಿಗಳು ಬರೆದ ಕೆಲವು ಪುಸ್ತಕಗಳು ಹಾಗೂ ಸ್ವಾತಂತ್ರ್ಯ ವೀರ ಸಾವರ್ಕರ್ ಕಾದಂಬರಿ ರೂಪದಲ್ಲಿ ಬರೆದ “ಮೋಪ್ಳಾ ದಂಗೆ” ಈ ಘೋರ ದುರಂತವನ್ನು ಜಗತ್ತಿಗೇ ತೆರೆದಿಟ್ಟಿವೆ. ದಂಗೆಗಳು ಶಾಂತವಾದ ಮೇಲೆ ಪುನರ್ವಸತಿ, ಮನೆ ದುರಸ್ತಿ, ಎತ್ತು, ದನ, ನೇಗಿಲು ಖರೀದಿ ಮೊದಲಾದ ಜೀವನಾಗತ್ಯಗಳಿಗೆ ಸಾಲ ಪಡೆದವರ ಸಂಖ್ಯೆಯೇ 13,500. ಆರ್ಯ ಸಮಾಜದ ಮುಖಾಂತರ ಮಾತೃಧರ್ಮಕ್ಕೆ ಮರಳಿದವರ ಸಂಖ್ಯೆಯೇ 1776.

               ಮೋಪ್ಲಾ ಬಂಡಾಯ ಕೇವಲ ಕೇರಳಕ್ಕೆ ಸೀಮಿತವಾಗುಳಿಯಲಿಲ್ಲ. 1924ರಲ್ಲಿ ಕೊಹಟ್, 1925ರಲ್ಲಿ ದೆಹಲಿ & ನಾಗಪುರ, ಭಾಗಲ್ಪುರ, ಲಖ್ನೋ, ಲಾಹೋರ್, ಗುಲ್ಬರ್ಗಾ, 1926ರಲ್ಲಿ ಕಲ್ಕತ್ತಾ, ಉತ್ತರ ಪ್ರದೇಶ, ಮುಂಬೈ, 1927ರಲ್ಲಿ ಕಲ್ಕತ್ತಾದಿಂದ ಲಾಹೋರ್ ಮಧ್ಯದ ವಿವಿಧ ಪ್ರದೇಶಗಳಲ್ಲಿ ಹಿಂದೂಗಳ ಮೇಲೆ ಮುಸ್ಲಿಮ್ ದೌರ್ಜನ್ಯ ನಡೆಯಿತು. 1930-31ರಲ್ಲಿ ಬಂಗಾಳ, ವೆಲ್ಲೂರ್, ಜಬಲ್ಪುರ, ಷಿಕಾರ್ ಪುರ, ಮೊದಲಾದ ಕಡೆ ಜಿಹಾದ್ ನಡೆಯಿತು. 1922-27ರ 5 ವರ್ಷಗಳ ಅವಧಿಯಲ್ಲಿ ಬಂಗಾಳ ಪ್ರಾಂತವೊಂದರಲ್ಲೇ 35 ಸಾವಿರ ಮಹಿಳೆಯರ ಅಪಹರಣ, ಮಾನಭಂಗಗಳಾದವು. ಅಂದು ಕೇರಳವನ್ನು ಸುಟ್ಟ ಜಿಹಾದ್ ಇಂದಿಗೂ ನಿಂತಿಲ್ಲ. ಅದು ಈಗ ಲವ್ ಜಿಹಾದ್, ರೇಪ್ ಜಿಹಾದ್, ಕಾರ್ಪೋರೇಟ್ ಜಿಹಾದ್, ಲ್ಯಾಂಡ್ ಜಿಹಾದ್, ವೈಣಿಕ ಜಿಹಾದ್, ಬ್ಯಾಂಕ್ ಜಿಹಾದ್, ರಾಜಕೀಯ ಜಿಹಾದ್ ಮುಂತಾದ ಹಲವು ಸ್ವರೂಪಗಳೊಂದಿಗೆ ಹಿಂದೂ ಸಮಾಜವನ್ನು ಸುಡುತ್ತಾ ಬರುತ್ತಿದೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!