ಅಂಕಣ

೦೩೯. ಉಡುಕರದ ಕ್ಷೀಣಕಾಂತಿಯ ಕುರುಹು..

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೦೩೯

 

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |

ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||

ಒಸೆದೇತಕವನೀಯನೆಮಗೊಂದು ನಿಜ ಕುರುಹ |

ನಿಶೆಯೊಳುಡುಕರದವೋಲು ? – ಮಂಕುತಿಮ್ಮ || ೩೯ ||

 

ಎಂತಹ ಸೊಗಸಾದ ಚಮತ್ಕಾರಿಕ ಪದ ಪ್ರಯೋಗವಿದು, ನೋಡಿ ! ಪುಸಿಯ ಪುಸಿಗೈದು – ಅರ್ಥಾತ್ ಸುಳ್ಳನ್ನೆ ಸುಳ್ಳು ಮಾಡಿ. ಸುಳ್ಳು ಸುಳ್ಳಾಗುವುದು ಎಂದರೆ ನಿಜದ ಅಥವ ಸತ್ಯದ ಅನಾವರಣವಾಗುವುದು ಎಂದು ತಾನೆ ಅರ್ಥ ? ಸುಳ್ಳೆ ಸುಳ್ಳಾಗಿ ಹೋದರೆ ಅದು ನಿಜವನ್ನು ಮಾತ್ರ ಉಳಿಸಿಕೊಂಡ ಹಾಗೆ.

 

ಪುಸಿಯ ನೀಂ ಪುಸಿಗೈದು ದಿಟವ ಕಾಣ್ಬವೊಲೆಸಗೆ |

 

ಹಿಂದಿನ ಪದ್ಯಗಳಲ್ಲೊಮ್ಮೆ ಈ ಪರಬ್ರಹ್ಮದ ಅಸ್ತಿತ್ವ ಮಿಥ್ಯೆಯ ಹಿಂದೆ ಅಡಗಿದೆಯೆಂಬ ಪ್ರಸ್ತಾಪವಾಗಿತ್ತು. ಆ ಮಿಥ್ಯೆಯನ್ನೆ ಸುಳ್ಳು ಮಾಡಿಬಿಟ್ಟರೆ ಅಥವಾ ಹಾಗೆ ಮಾಡಲು ಸಾಧ್ಯವಾಗುವುದಾದರೆ, ಆಗ ಅದರ ಹಿಂದೆಯಿರುವ ಪರಬ್ರಹ್ಮದ ನಿಜಸ್ವರೂಪ ಬಯಲಾಗಲೆ ಬೇಕಲ್ಲವೆ?

 

ಮುಸುಕ ತಳೆದಿಹನು ಪರಬೊಮ್ಮನೆನ್ನುವೊಡೆ ||

 

ಒಂದು ವೇಳೆ ಆ ಅಸಾಧ್ಯದ ಕಾರ್ಯವನ್ನು ಯಾರೊ ಸಾಧ್ಯವಾಗಿಸ ಹೊರಟರೆಂದೆ ಇಟ್ಟುಕೊಂಡರು , ಪರಬ್ರಹ್ಮನೇನು ಕಾಣಿಸಿಬಿಡುವನೇನು? ಹಾಗೆ ಸುಳ್ಳಿನ ಆವರಣ ತೆಗೆದು ಸತ್ಯದ ಅನಾವರಣ ಮಾಡಿದರೂ, ಯಾರೂ ತನ್ನನ್ನು ಕಾಣಲಾಗದಂತೆ ಮುಸುಕು ಹಾಕಿಕೊಂಡಿರುವನಂತಲ್ಲಾ ಆ ಪರಬ್ರಹ್ಮ? ಅಂದರೆ ಆ ಸುಳ್ಳನ್ನು ಸುಳ್ಳು ಮಾಡಿದರು ಅವನನ್ನು ಕಾಣಲು ಸಾಧ್ಯವಿಲ್ಲ ಎಂದಾಯ್ತಲ್ಲವೆ?

 

ಒಸೆದೇತಕವನೀಯನೆಮಗೊಂದು ನಿಜ ಕುರುಹ |

 

ಎಷ್ಟೆಲ್ಲ ತಪ, ಯೋಗ, ಹಠಸಾಧನೆಯೆಲ್ಲಾ ಮಾಡಿ ಸುಳ್ಳಿನ ಪರದೆ ಹರಿದರು, ಅದರಿಂದ ಅವನತ್ತ ಒಂದು ಹೆಜ್ಜೆ ಹತ್ತಿರಕ್ಕೆ ಹೋದಂತಾಯಿತೆ ಹೊರತು, ಅವನಿನ್ನು ಕೈಗೆ ಸಿಗಲಿಲ್ಲ. ಅಲ್ಲಿಯೂ ಕಾಣಿಸದೆ, ಸಿಗದೆ ಆಟವಾಡಿಸುತ್ತಾನವನು. ಯಾಕಿಂತಹ ಹಠವವನಿಗೆ ? ತನ್ನತ್ತ ಬರ ಮಾಡಿಕೊಳ್ಳಲು ಅವನೇಕೆ ಅಷ್ಟೊಂದು ಪರೀಕ್ಷೆ, ಯತ್ನ, ಸಾಧನೆಯಾದಿಯಾಗಿ ನೂರೆಂಟು ಯಾತನೆಯನ್ನನುಭವಿಸುವಂತೆ ಮಾಡಬೇಕು? ಸುಲಭದಲ್ಲಿ ಕೈಗೆಟುಕಬಹುದಾದ ಒಂದು ನೈಜ ಕುರುಹನ್ನಾದರೂ ಒದಗಿಸಿ ಅವನನ್ನು ಕಾಣುವ ಕೆಲಸವನ್ನು ಸುಲಭವಾಗಿಸಬಾರದೇ ?

 

ನಿಶೆಯೊಳುಡುಕರದವೋಲು ? – ಮಂಕುತಿಮ್ಮ ||

 

ಚಂದ್ರನ ಬೆಳಕಿಲ್ಲದ ಗಾಢಾಂಧಕಾರದ ನೆರಳಲ್ಲಿ ನಡೆಯುವಾಗ ನಿಚ್ಛಳ ಬೆಳಕಿರದಿದ್ದರೂ ಕೇವಲ ನಕ್ಷತ್ರವೊಂದರ ಕ್ಷೀಣ ಬೆಳಕಿದ್ದರು (ಉಡುಕರ = ನಕ್ಷತ್ರ) ಸಾಕು – ಅದರ ಅರೆಮಂಕು ಮಾರ್ಗದರ್ಶನದಲ್ಲಿ ಕನಿಷ್ಟ ಗುರಿಯೊಂದರತ್ತ ಹೆಜ್ಜೆಯನ್ನಾದರೂ ಇಡಬಹುದು, ತಡಕಾಡಿಕೊಂಡೆ. ಈ ಪರಬ್ರಹ್ಮನು ಕೂಡ ಸೂರ್ಯಚಂದ್ರರ ಪ್ರಖರ, ನಿಚ್ಛಳ ಬೆಳಕಿರದಿದ್ದರೆ ಬೇಡ, ಕನಿಷ್ಠ ಈ ತಾರೆಗಳ ರೀತಿಯ ಕ್ಷೀಣ ಬೆಳಕನ್ನಾದರು, ಯಾವುದೊ ನೇರಾನೇರ ಹೊಸೆದ ಕುರುಹೊಂದರ ರೂಪದಲ್ಲಿ ನಮಗೆ ಕೊಡಬಾರದೆ? ತನ್ನದೆ ಸೃಷ್ಟಿಯ ಕುಡಿಗಳಿಗೆ ಅಷ್ಟೂ ಮಾಡಲಾರನೆ ? ಎಂದು ಕೇಳುತ್ತಾನೆ ಮಂಕುತಿಮ್ಮ.

 

ಸತ್ಯ ಶೋಧನೆಯಲ್ಲಿ ಹೊರಟಾಗ ಪರಂಪರಾಗತವಾಗಿ ಬಂದ ಅದೆಷ್ಟೋ ನಂಬಿಕೆಗಳು ಹುಸಿಯಾಗಿ ಕಾಣುತ್ತವೆ, ಹೊಸ ಜ್ಞಾನದ ದೀವಟಿಕೆಯಡಿಯಲ್ಲಿ. ಅಲ್ಲಿಯವರೆಗೂ ಅದು ಹುಸಿಯಾಗಿದ್ದರು, ಅಜ್ಞಾನದ ದೆಸೆಯಿಂದ ನೈಜವೆಂದೇ ನಂಬಿಕೊಂಡು ಬಂದಿರುತ್ತೇವೆ. ಹೊಸ ಜ್ಞಾನವೊಂದು ಅಜ್ಞಾನದ ತೆರೆ ಸರಿಸಿದಾಗ ಆ ಹುಸಿ , ನಿಜವಾಗಿಯೂ ಹುಸಿಯಾಗಿ ದಿಟದ ಅನಾವರಣವಾಗುತ್ತದೆ. ಆದರೆ ಅದೇನು ಅಂತಿಮ ಸತ್ಯವಲ್ಲ – ಆ ಹಾದಿಯಲ್ಲಿಟ್ಟಿರುವ ಒಂದು ಕಿರುಹೆಜ್ಜೆ ಅಥವಾ ಒಂದು ಕಿರು ಮೈಲಿಗಲ್ಲು. ಹೀಗಾಗಿ ಒಂದು ಸತ್ಯದ ಶೋಧ ನೂರೆಂಟು ಹೊಸ ಪ್ರಶ್ನೆ, ಸಂಶಯಗಳನ್ನು ತೆರೆದಿಡುತ್ತದೆ – ಮಿಕ್ಕುಳಿದ ಅಜ್ಞಾನದ ಹೊರೆಯನ್ನು ಮುಂದಿರಿಸುತ್ತ. ಹೀಗೆ ಸತ್ಯ ಶೋಧನೆ ಹಂತಹಂತವಾಗಿ ಸಾಗುತ್ತಲೆ ಇರುತ್ತದೆ – ಅದರ ಅಂತಿಮದ ಹುಡುಕಾಟದಲ್ಲಿ. ಎಂದಿನಂತೆ ಆ ಹುಡುಕಾಟ ಕಾಡಿನಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಒಬ್ಬಂಟಿ ಅಲೆದಾಡಲು ಬಿಟ್ಟುಬಿಟ್ಟ ಕಥೆಯೆ. ಬ್ರಹ್ಮವೆಂಬುವುದು ಅಂತಿಮಸತ್ಯವೆಂದು ನಂಬಿ ಶೋಧನೆಗೆ ಹೊರಟ ಸಾಧಕನ ಪಾಡು ಇದಕ್ಕಿಂತ ವಿಭಿನ್ನವಾಗೇನು ಇರಲಿಕ್ಕಿಲ್ಲ. ಇಂತಿರುವಾಗ ಸಾಮಾನ್ಯರ ನಿಲುಕಿಗೆ ಆ ಸತ್ಯ ಎಟುಕುವುದಾದರೂ ಎಂತು? ಸುಲಭದಲ್ಲಿ ಸಿಗದಿದ್ದರೂ ಬೇಡ – ಕನಿಷ್ಠ ಯಾವುದಾದರೊಂದು ಸುಳಿವು ನೀಡುತ್ತಾ ಆ ದಾರಿಯೆಡೆಗೆ ಒಯ್ಯಬಾರದೇ? ತೀರಾ ಸ್ಪಷ್ಟ ಸುಳಿವು ನೀಡದಿದ್ದರೂ ಸರಿ ಕನಿಷ್ಠ ನಕ್ಷತ್ರದ ಬೆಳಕಿನಂತಹ ಅಸ್ಪಷ್ಟ, ಕ್ಷೀಣ ಬೆಳಕಿನ ಸಹಾಯವನ್ನಾದರೂ ಒದಗಿಸಬಾರದಾ ? ಹೇಗಾದರೂ ಎಡವಿಕೊಂಡೋ, ತೊಡರಿಕೊಂಡೋ ಗುರಿಯತ್ತ ನಡೆಯುವ ಆಸೆಗೆ ಆಸರೆಯಾಗಬಾರದಾ ? ಎಂದು ಪ್ರಶ್ನಿಸುವ ಮಂಕುತಿಮ್ಮ ಮತ್ತೆ ತನ್ನ ಬ್ರಹ್ಮದ ಕುರಿತಾದ ಜಿಜ್ಞಾಸೆ ಬಗೆಬಗೆಯಾಗಿ ಕಾಡಿದ ಬಗೆಯ ದರ್ಶನ ಮಾಡಿಸುತ್ತಾನೆ, ಅದರ ಕಿಡಿಯನ್ನು ನಮ್ಮ ಅಂತರಂಗಕ್ಕೂ ತಗುಲಿಸಿ ಅದೇ ಸತ್ಯದ ಕುರಿತಾದ ಕುತೂಹಲ ಕೆರಳಿಸುತ್ತಾ.

 

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!