ಅಂಕಣ

ಸಹಜತೆಯ ಬಚ್ಚಿಡುವ ಬ್ರಹ್ಮಸೃಷ್ಟಿಯ ಸಂಚೇ ? !

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೧

ಬಚ್ಚಿಟ್ಟುಕೊಂಡಿಹುದೆ ಸತ್ಯ ಮಿಥ್ಯೆಯ ಹಿಂದೆ ? |

ನಚ್ಚುವುದೆ ಮರೆಯೊಳಿಹುದನೆ ಸತ್ಯವೆಂದು ? ||

ಅಚ್ಚರಿಯ ತಂತ್ರವಿದು ; ಬ್ರಹ್ಮ ಸೃಷ್ಟಿಗಳೇಕೊ |

ಮುಚ್ಚಿಹವು ಸಾಜತೆಯ – ಮಂಕುತಿಮ್ಮ || ೩೧ ||

ಈ ಪದ್ಯದ ಹಿನ್ನಲೆಯಾಗಿ ಹಿಂದಿನ ಪದ್ಯವನ್ನು (ಮೂವತ್ತನೆಯದು) ನೋಡಿದರೆ, ಇದೊಂದು ರೀತಿ ಅದರ ಮುಂದುವರೆದ ಭಾಗವೆನ್ನಬಹುದು. ಅಲ್ಲಿ ಕಣ್ಣೆದುರಿಗಿರುವ ವಾಸ್ತವವನ್ನೆ ನಂಬಬಾರದು ಎಂದರೆ ಮತ್ತೇನನ್ನು ನಂಬುವುದೊ ? ಎಂದು ದಬಾಯಿಸಿದ ಮಂಕುತಿಮ್ಮ, ಇಲ್ಲ ಸ್ವಲ್ಪ ತಗ್ಗಿದ ಭಾವದಲ್ಲಿ ಆ ಕಣ್ಣಿಗೆ ಕಾಣಿಸದ್ದರ ಹಿಂದೆಯು ನಿಜಕ್ಕೂ ಏನಾದರೂ ಇರಬಹುದೇ ? ಎಂದು ಆಲೋಚಿಸುತ್ತಾನೆ – ತೆರೆದ, ಬಿಚ್ಚು ಮನದ ಮತ್ತೊಂದು ಭಾವವನ್ನು ಪ್ರಕಟವಾಗಿ ತೋರಿಸುತ್ತ.

‘ಒಂದು ವೇಳೆ ಆ ಸತ್ಯವೆನ್ನುವುದು ನಿಜಕ್ಕೂ ಸುಳ್ಳು (ಮಿಥ್ಯೆ) ಎಂಬ ಮುಖವಾಡ, ಪರದೆಯ ಹಿಂದೆ ಅಡಗಿಕೊಂಡಿರಬಹುದೆ? ಯಾವುದೊ ಪುರುಷಾರ್ಥ, ಘನೋದ್ದೇಶದಿಂದ ಮುಸುಕುಧಾರಿ ವೇಷ ಹಾಕಿಕೊಂಡು ಬೇಕೆಂತಲೆ ಕಾಣಿಸಿಕೊಳ್ಳದೆ ಅಡಗಿ ಕೂತಿದೆಯೆ? ಆ ಮರಯಲ್ಲಡಗಿ ಕೂತದ್ದನೆ ನಾವು ಸತ್ಯವೆಂದು ನಂಬಬೇಕೆ (ನಚ್ಚುವುದೆ) ?’ – ಹೀಗೆಲ್ಲಾ ಗೊಂದಲದಲ್ಲಿ , ದ್ವಂದ್ವದಲ್ಲಿ ಮುಳುಗುತ್ತದೆ ಕವಿಯ ಮನಸು. ಕಾಣದ್ದನು ನಂಬೆನೆನ್ನುವ ವಾಸ್ತವವಾದಿಯ ನಿರಾಕರಣೆ ನಾಸ್ತಿಕತೆಯ ಅಂಶಕ್ಕೆ ಇಂಬು ಕೊಡುವಂತಿದ್ದರೆ, ಇಲ್ಲಿ ಕಾಣಿಸಿಕೊಳ್ಳುವ ಅನುಮಾನ ‘ನಮಗೆ ಮೀರಿದ್ದದೇನೊ ಸತ್ಯ ಇದ್ದರೂ ಇರಬಹುದೇ ?’ ಎನ್ನುವ ಆಸ್ತಿಕತೆಯತ್ತ ಓಲುವ ಇಂಗಿತವನ್ನೀಯುತ್ತದೆ.

ಆದರೆ ಇಲ್ಲಿ ನಿಜಕ್ಕು ಅನಾವರಣವಾಗುವುದು, ಆಸ್ತಿಕ-ನಾಸ್ತಿಕ ಭಾವಗಳೆರಡನ್ನು ಮೀರಿದ ಸತ್ಯಾನ್ವೇಷಣೆಯ, ಜಾಗೃತ ಪ್ರಜ್ಞೆಯ ಜಿಜ್ಞಾಸೆ. ಒಟ್ಟಿನಲ್ಲಿ ಈ ಗೊಂದಲಕ್ಕೊಂದು ನೇರ ಸರಳ ಪರಿಹಾರ ಕಾಣಿಸದೆಂದು ಅರಿವಾದ ಕವಿ ಹೃದಯ ಅದನ್ನು ಬದಿಗಿತ್ತು, ಆ ರೀತಿಯ ಸೃಷ್ಟಿಯನ್ನು ರೂಪಿಸಿದ, ರಚಿಸಿದ ಸೃಷ್ಟಿಕರ್ತನ ತಂತ್ರದ ಚಾಕಚಕ್ಯತೆಯತ್ತ ಹೊರಳಿಬಿಡುತ್ತದೆ – ಕೊನೆಯೆರಡು ಸಾಲುಗಳಲ್ಲಿ. ಯಾಕೆ ಸ್ವತಃ ತಾನೇ ಸೃಜಿಸಿದ ನಿಸರ್ಗ, ಪ್ರಕೃತಿಸಹಜ ನಿಯಮಗಳನ್ನು (ಸಾಜತೆ) ಈ ಬ್ರಹ್ಮಸೃಷ್ಟಿ ಪರಿಪಾಲಿಸುವುದಿಲ್ಲ? ಯಾಕೆ ತನಗೆ ಮಾತ್ರ ತನದೇ ಆದ ಬೇರೇನೊ ತಂತ್ರ, ನಿಯಮವನ್ನು ಹಾಕಿಕೊಂಡಂತೆ ಕಾಣಿಸುತ್ತಿದೆ ? ಸಹಜದಲ್ಲೆ ತಮ್ಮನ್ನು ಅನಾವರಣಗೊಳಿಸಿಕೊಳ್ಳುವ ಬದಲು, ಅಗೋಚರ ಬ್ರಹ್ಮಾಂಡದಿಂದ ಹಿಡಿದು ದೃಗ್ಗೋಚರ ಅಸ್ತಿತ್ವದವರೆಗೆ ಈ ಬ್ರಹ್ಮಸೃಷ್ಟಿಗಳೇಕೆ ಹೊರಗೆ ನಿಚ್ಚಳವಾಗಿ ಕಾಣಿಸಿಕೊಳ್ಳದೆ, ಗೋಚರವಾಗದ ಸುಳ್ಳಿನ ಮರೆಯಲ್ಲಡಗಿರುವ ಸತ್ಯದಂತೆ ಪ್ರವರ್ತಿಸುತ್ತವೆ? ಏನೀ ತಂತ್ರದ ಹಿನ್ನಲೆ, ಗುಟ್ಟು? ಅಂತಿಮದಲ್ಲಿ ಅದೇನೇ ಇದ್ದರೂ, ಈ ಬ್ರಹ್ಮಸೃಷ್ಟಿಯ ಪ್ರಕ್ರಿಯೆಯು ನಾವು ಕಾಣುವ ಸಾಮಾನ್ಯ ಭೌತಿಕ ನಿಯಮಕ್ಕೆ ಅಪವಾದದಂತೆ ಇರುವುದು ಮಾತ್ರ ನಿಜ ಎಂದು ಒಪ್ಪಿಕೊಳ್ಳುತ್ತ, ತನ್ನ ಬ್ರಹ್ಮ ಸೃಷ್ಟಿಯ ಕುರಿತಾದ ವಿಸ್ಮಿತಭಾವವನ್ನು ಪ್ರಕಟಪಡಿಸುತ್ತಾನೆ ಮಂಕುತಿಮ್ಮ.

ಈ ರೀತಿ ಹಲವಾರು ಪದ್ಯಗಳಲ್ಲಿ ಬರುವ ಸೃಷ್ಟಿಯ ಗುಟ್ಟಿನ ಕುರಿತಾದ ಹುಡುಕಾಟ, ಈ ವಸ್ತು-ವಿಷಯ ಕವಿಯನ್ನು ಸಾಕಷ್ಟು ಕಾಡಿರುವ ಸುಳಿವು ನೀಡುತ್ತದೆ. ಆ ಕಾಡುವಿಕೆಯ ಹುಡುಕಾಟದಲ್ಲಿ ಉಂಟಾದ ಸೋಲು, ಗೆಲುವು, ದಿಗ್ಭ್ರಮೆ, ವಿಷಾದ, ಖೇದ, ಉದ್ವೇಗಾದಿ ಭಾವಗಳೆಲ್ಲವೂ ನೇರ ಅಥವ ಪರೋಕ್ಷವಾದ ಪದ ಲಾಲಿತ್ಯದ ರೂಪದಲ್ಲಿ ಆವಿರ್ಭವಿಸಿ, ಅನುಭವದ ಮೂಸೆಯಲ್ಲಿ ಹೊರಳಾಡಿ ಬಂದು, ಈ ನಾಲ್ಕು ಸಾಲಿನ ಪದ್ಯಸಾರ ರೂಪಾಗಿ ಅವತರಿಸಿಕೊಂಡ ಸಮ್ಮಿಶ್ರಣ ಭಾವದ ಕುರುಹನ್ನು ಇಲ್ಲಿಯೂ ಕಾಣಬಹುದು. ಮೊದಲೆರಡು ಸಾಲು ಸುಳ್ಳಿನ ಹಿಂದೆ ಅಡಗಿಕೊಂಡ ಕಾರಣದ ಗುಟ್ಟು ಬಿಡಿಸಲಾಗದೆ ಸೋತ ಹತಾಶೆಯ ದನಿ ಸೂಸಿದರೆ, ಕೊನೆಯೆರಡು ಸಾಲಲ್ಲಿ ಸೋತೆನೆಂದು ಕೈಕಟ್ಟಿ ಕೂರದೆ ನಿಸರ್ಗ ಸಹಜವಲ್ಲದ ಈ ತಂತ್ರಗಾರಿಕೆಯನ್ನು ಬ್ರಹ್ಮಸೃಷ್ಟಿ ಯಾಕೆ ಬಳಸಿಕೊಂಡಿತೆಂದು ಅನ್ವೇಷಣೆಗೆ ಹೊರಟ ದನಿ ಕಾಣಿಸುತ್ತದೆ – ಕವಿಯ ಜೀವನೋತ್ಸಾಹ ಮತ್ತು ಸೋಲಿಗೆ ಕುಗ್ಗದೆ, ಜಗ್ಗದೆ ಮುನ್ನಡೆವ ಛಲವನ್ನು ತೋರಿಸುತ್ತ; ಆ ಪಯಣದಲ್ಲೆ ಓದುಗರಿಗೆ ಜೀವನದರ್ಶನವನ್ನೂ ಮಾಡಿಸುತ್ತ !

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!