ಕವಿತೆ

ಗಜಾನನ ಗಜ-ಮೂಷಿಕಾಸುರ ಕಥೆ

ತುಸು ಭಿನ್ನ ಹಿನ್ನಲೆಯ ಗಜಾಸುರನಿಗೆ ಸಂಬಂಧಿಸಿದ ಗೌರಿ ಗಣೇಶರ ಕಥೆ ಈ ಕೆಳಗಿದೆ. ಪೌರಾಣಿಕ ಹಿನ್ನಲೆಯಾಗಿ ಗಣೇಶ ಗಜಮುಖನಾದ ಕಥೆ ಚಿರಪರಿಚಿತವಾದರೂ, ಅವನ ಹುಟ್ಟಿಗೆ ಮತ್ತು ಗಜಾಸುರನ ಸಾವಿಗಿರುವ ಸಂಬಂಧ, ಮೂಷಿಕಾಸುರ ಗರ್ವಭಂಗದಷ್ಟು ಪ್ರಸಿದ್ದವಲ್ಲ. ಆ ಹುಟ್ಟಿನ ಹಿನ್ನಲೆಯಾದ ಮೂಷಿಕಾಸುರ ವರಗರ್ವ, ಸತ್ತು ಅಸ್ವಾಭಾವಿಕ ಮರುಹುಟ್ಟು ಪಡೆದು ಗಜಾಸುರನ ಶಿರದೊಡನೆ ಗಜಾನನ ಜನ್ಮ ತಳೆದ ಪ್ರವರ ಮತ್ತು ಅಂತಿಮವಾಗಿ ಮೂಷಿಕನ ಗರ್ವಭಂಗ – ಈ ಮೂರನ್ನು ಸಮಗ್ರ ರೂಪದಲ್ಲಿ, ಮೂರು ಕವನ ಭಾಗಗಳಾಗಿ ತರುವ ಯತ್ನ, ಈ ಕವನ ಕುಂಜ.

  1. ಮೂಷಿಕಾಸುರ ಗರ್ವ

__________________________________

ಮೂಷಿಕಾಸುರನೆಂಬ ಅಸುರ ದೊರೆ ಮದ ಮದೋನ್ಮತ್ತ

ಬ್ರಹ್ಮದೇವನ ಕುರಿತು ಘೋರ ತಪಗೈದ ದಾನವ ಸತತ

ಜಿಗುಟಿಗೆ ಪ್ರಸನ್ನಿಸಿ ಮೆಚ್ಚಿ ಕಡೆಗು ಪ್ರತ್ಯಕ್ಷನಾ ಅಂಚೆದೇರ

ಫಲಿಸಿತು ತಪನೆ ವ್ಯಾಪಾರ ವರವ ಪಡೆದ ರಾಕ್ಷಸವೀರ ||

ಬರಬಾರಾದಂತೆ ಮರಣ ಭೀತಿ ಮೂಲೋಕಗತಿ ವಿಪ್ಪತ್ತು

ಅಸಹಜ ಜನನ ಸತ್ತು ಮರು ಸೃಷ್ಟಿಯಾದರಷ್ಟೆ ಆಪತ್ತು

ವರ ಪಡೆದ ದಾನವ ಮದ ಗರ್ವ ನಡೆಸಿ ಸ್ವರ್ಗಾಕ್ರಮಣ

ಅಂಕೆಗು ಮಿತಿಮೀರಿದ ದೈತ್ಯ ದುರುಳನ ದುರಾಕ್ರಮಣ ||

ಪತ್ನಿ ಪ್ರಿಯಂವದೆ ಸುನೀತೆ, ಶಿವೆಗೆ ಪರಮ ಈಶ್ವರಿ ಭಕ್ತೆ

ಪತಿಯಟ್ಟಹಾಸವನು ಮನದೊಳೊಪ್ಪದ ಸುಶೀಲಿನಿ ಶಕ್ತೆ

ಮನವೊಲಿಸುತ ಬೇಡಿದಳು ಪತಿಯ ಬಿಟ್ಟುಬಿಡೊರಾಯ

ಹಾಳು ದೇವತೆ ಸಹವಾಸ ನಂಬೆ ತ್ರಿಮೂರ್ತಿಗಳಪಾಯ ||

ಒಪ್ಪುವನೆ ಮೂಢ ಮೂಷಿಕ ವಿಧಿ ಬರೆಸಿದ ಕಹಿ ಜಾತಕ

ಅವಿರತ ಮುಂದುವರೆಯಿತು ಸತತ ನಿರಾತಂಕ ಅಂತಕ

ತೀರದ ಗೋಳಿಗೆ ಓಡಿದ ದೇವತೆಗಳ್ಹಿಡಿದು ಬ್ರಹ್ಮನ ಕಾಲು

ಮೊರೆಯಿಟ್ಟರು ಅಜ್ಜನಲಿ ತಾತಾ, ಕಾಪಾಡು ನಮ್ಹೆಗಲು ||

ಏನ್ರಯ್ಯ ಈ ಗೋಳು, ಮೊದಲು ವರ ಕೊಡಿಸೆ ಯಾಚನೆ

ಕೊಟ್ಟಾದ ಮೇಲಾರಂಭ ದಮನ, ವರ ನಿವಾರಣೆ ಪೀಡನೆ

ಸರಿ ಬನ್ನಿ ಆಲೋಚಿಸೋಣ ಅಜನೊಡನೆ ಪರಿ ಸಂಭಾಷಣೆ

ಹುಡುಕಿಸುತ ದಾರಿ ಮೂಷಿಕನ್ಹುಟ್ಟಡಗಿಸುವ ಯೋಜನೆ ||

(ಸಶೇಷ – ೦೧)

  1. ಗಜಾಸುರ ಗಜಾನನನ ಶಿರ

_____________________________________

ಬ್ರಹ್ಮ,ವಿಷ್ಣು ಚಿಂತನೆ ನಡೆಸೆ ವರ ಸೆರೆಯ್ಹೇಗೆ ಮುರಿವ ಬಗೆ

ಬೇಕಾದ ಗಳಿಗೆಯಲೆ ಪರಶಿವ ಲೀನ ಗಜಾಸುರ ಗರ್ಭದಲೆ

ವರಕೊಟ್ಟ ತಪ್ಪಿಗೆ ಶಿವನ ತನ್ನೊಳಗಿರಲು ಬೇಡೆ ಗಜಾಸುರ

ಮಾಡಬೇಕುಪಾಯ ಹೇಗೋ ಹೊರ ಬರಿಸೆ ಶಿವಲಿಂಗೇಶ್ವರ ||

ನಡೆದರು ಹುಡುಕುತ ಉಮೆ ಒಳದಾರಿ ಆಯೋಜಿಸಲು

ಕೋರುತ ಶಿವೆಯ ಸೃಷ್ಟಿಸೆ ಮಾನಸಪುತ್ರನ ಶಕ್ತಿಯೊಳು

ಮಂಗಳದ್ರವ್ಯ ಮೈದಾಳಿ ಜನಿಸೆ ಉಮಾಪುತ್ರ ಶಕ್ತಿಮಾನ

ತುಂಬಿ ಈಶ್ವರಿ ಜೀವ, ನುಡಿದು ಹೇಗೋ ಕರೆತನ್ನೀ ಶಿವನ ||

ಮಗನ ಕಾವಲಿಗಿಟ್ಟು ನಡೆದಳೆ ಶಿವೆ ಗೌರಿ ಸ್ನಾನದ ಮನೆಗೆ

ಹರಿ ಬ್ರಹ್ಮರು ನಡೆದರು ಶಿವನನಿಳಿಸಲು ಗಜಾಸುರನೆಡೆಗೆ

ಗಾನ,ನಾಟ್ಯ,ಸಂಗಿತದಿ ಮೆಚ್ಚಿಸೆ ಗಜಾಸುರ ವರ-ವಚನವಿತ್ತ

ಕಳಿಸ್ಹೊರಗೆ ಹರನ ತನುವಿಂದ ಎನಲು ನಗುತ ವರವನಿತ್ತ ||

ಬೇಡಿದ ಗಜಾಸುರ ಹರನ ಪೂರೈಸೆ ಹರಿಬ್ರಹ್ಮ ಕೋರಿಕೆ

ಒಪ್ಪಿದ ಸರ್ವೇಶ್ವರ ಹೊಟ್ಟೆ ಬಗೆಯುತ ಲಿಂಗದ ತೋರಿಕೆ

ಮೆಚ್ಚಿದ ಭಕ್ತಿಯ ಆಳಕೆ ಹರಸಿ ಸಾವಿನ ಮಡಿಲಲೆ ಹೆರಿಗೆ

ಒಪ್ಪುತವನಾ ಕೋರಿಕೆ ಮರಣ ನಂತರವು ಶಿವನ ಬಳಿಗೆ ||

ಮಾರಾಂತಕ ಬಿಡುಗಡೆ ಪೂರ, ಹಿಡಿಯೆ ಮನೆಕಡೆ ದ್ವಾರ

ತಡೆಯಲು ಬಾಲನ ಕಪಟ, ಮೂಗೇರಿಸಿ ಕೋಪದ ಖಾರ

ತರಿದ ಶಿವ ತಲೆಪಕ್ಕ ತ್ರಿಶೂಲದೆ ಗೋಣ್ಮುರಿದೆಸೆದ ಪೂರ

ಪಾರ್ವತಿ ಆಘಾತಕೆ ಅಳಲು ಹರ ಅಸಹಾಯಕತೆ ಶಿಖರ ||

ಹರಿ,ಬ್ರಹ್ಮರ ಆಗಮನ ಸಂತೈಸುತ ಗೌರಿಯ ಪರಿಹರಣ

ನೆನೆದರು ಗಜಾಸುರ ಮರಣ, ಸತ್ತುಳಿದ ಆನೆ ತಲೆ ಮಣ

ಹೇಗೂ ಹರ ವರವಿತ್ತ ಪ್ರಕರಣ, ಸೇರಿಸೆ ಗಜನ ಶಿವಚರಣ

ಹೊರಟಿತು ಶಿವನಾ ಆಜ್ಞೆ, ಗಜನ ತಲೆ ತರಲು ಸಂಪೂರ್ಣ ||

ಬದುಕಿದ ಬಾಲಕ ಪುತ್ರ ಹೊತ್ತು ಗಜಾಸುರ ಶಿರ ಭೂಶಿರ

ಹೆಸರಾಯಿತು ಗಜಾನನ ಸುಪುತ್ರ ದೇವಬಲವೆಲ್ಲ ಮಿತ್ರ

ಹೀಗೆ ಅಸಹಜ ಸೃಷ್ಟಿ, ಸತ್ತು ಮರುಹುಟ್ಟಿದ ಗಣ ಪ್ರಣತಿ

ವೇದಿಕೆ ಸಿದ್ದ ಭೂಪತಿ ಮೂಷಿಕನಿಗೆ ಸರಿ ಕಾಣಿಸೆ ಸದ್ಗತಿ ||

(ಸಶೇಷ – ೦೨)

  1. ಮೂಷಿಕ ಗರ್ವಭಂಗ

______________________________________

ಕಥೆ ಕೇಳಿದ ಮೂಷಿಕ ಸಿಡಿದು ಉರಿದೆದ್ದ ನಖ ಶಿಖಾಂತ

ಮಾಡುವನೇನ ಬಾಲನೆನುತ ಹೂಡೇ ಬಿಟ್ಟ ಯುದ್ಧ ಸ್ವತಃ

ವೀರದಿ, ಶೌರ್ಯದಿ, ಧೈರ್ಯದಿ ಗಣ ಮೂಷಿಕ ಕಾದಿರಲು

ವರ ನಿವಾರಣೆ ಮರ್ದನ ಗಣಪ ಗೆಲ್ಮೆ ಕೈಮೇಲಾಗಿರಲು ||

ಕುಗ್ಗಿತು ಅಸುರಶಕ್ತಿ, ಗಜಾನನ ಮುರಿದ ದಂತದಾ ಯುಕ್ತಿ

ಓಡಿದ ಮೂಷಿಕ ಭಯದಿ, ಜೀವ ಬೆನ್ನಟ್ಟುವ ದಂತದ ಶಕ್ತಿ

ಕಂಡಳು ಸತಿಪ್ರಿಯಂವದೆ ಪೂಜೆಕುಳಿತ ಹೋಮಕುಂಡದೆ

ಮೊರೆಯಿಟ್ಟಳು ಈಶ್ವರಿಗೆ ತಪ್ಪಿಸಲು ಪತಿ ಮೂಷಿಕ ವಧೆ ||

ಶಂಕರಿ ಕೃಪಾಕರಿ, ಕರುಣಾಕರಿ ಆರ್ಯಸತಿ ಮೊರೆಗೆ ತಾಳಿ

ಉಪಸಂಹರಿಸಿ ದಂತ ಬಿಲದ ಮೂಷಿಕ ಬುದ್ಧಿ ಬಂತಾ ಕೇಳಿ

ಕ್ಷಮಿಸುತಾಯೆ ಜಗನ್ಮಾಯೆ ಕಲಿತಾಯ್ತು ನಾನೆ ಪಾಠಕೊನೆ

ತಪ್ಪು ಶಿಕ್ಷೆ ಉಚಿತ, ಗಜಾನನ ವಾಹನ ಜೀವನವೆಲ್ಲ ನಾನೇ ||

ಹೀಗಾಯ್ತು ಗಜಾನನ ಜನನ ಸಂಭಾಳಿಸಲಿಕ್ಕೆ ಮೂಷಿಕನ

ಗಣಪ ಮೆಟ್ಟಿದ ಅಸುರನ ಒಣ ಅಹಂಕಾರದ ಧೂರ್ತತನ

ಪಳಗಿಸಿ ಕೊನೆಯಲಿ ಅವನನೆ ವಾಹನವಾಗಿಸಿದ ನರ್ತನ

ಪ್ರಿಯಂವದೆ ಜತೆಗಿರುವಂತ ಬೇಡಿಕೆಗೂ ಒಪ್ಪಿದ ಗಜಾನನ ||

ಗಣಪ ಚೌತಿಗೆ ಸಂಭ್ರಮ ಆಚರಣೆ ಎಲ್ಲ ಪೂಜೆ ಸಲಕರಣೆ

ಗಜಾನನ ಬರುವ ಭುವಿಗೆ ಮೂಷಿಕನೊಡನೆ ಸರಿಸಂಚರಣೆ

ಕೈಕಾಯಿ ಕಡುಬ ಕಂತೆ, ಕಟ್ಟಿ ಹೊಟ್ಟೆ ಹಾವಿನ ಸುಮಲತೆ

ಹೊರಲಾರದೆ ಹೊತ್ತ ಮೂಷಿಕತೆ ಪಾಠ ನಮಗೇ ಗಣಪತೆ ||

ಶರಣೆನ್ನಿರಿ ಹಬ್ಬದದಿನ ಇರಬೇಕು ಗೌರಿ,ಗಣೇಶ ಎಲ್ಲಮನ

ಸ್ಮರಣೆಗೆ ಸಾಕು ಭಕುತಿ ಬೇಕಿಲ್ಲ ಗುಡಿ,ಗೋಪುರ,ಜನ,ಗಣ

ಮೂಷಿಕನೂ ಸಾಂಕೇತಿಕ ಒಳಾರ್ಥ ತುಂಬಾ ನಿಗೂಢ ಧನ

ಕಟ್ಟಿರಿಸಿ ಇಪ್ಪತ್ತೊಂದು ನಮನ ಪಡೆ ಗಣಪನಾಶೀರ್ವಚನ ||

 

ನಾಗೇಶ ಮೈಸೂರು

Facebook ಕಾಮೆಂಟ್ಸ್

ಲೇಖಕರ ಕುರಿತು

Nagesha MN

ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!