ಅಂಕಣ

‘ಸಂಜೆಗಡಲು’

        ….ಮಳಲ ಮೇಲೆ ಪ್ರೀತಿ,ಸಾವು ಮತ್ತು ನೆಳಲು…!

          ಮುಸ್ಸಂಜೆಯ ಸಮಯ..ಬಾನ ತುಂಬೆಲ್ಲಾ ರಂಗುರಂಗಿನ ರಂಗವಲ್ಲಿ. ಒಂದೊಂದು ರೂಪದ ಒಂದೊಂದು ಚಿತ್ರಗಳೋ ಎಂಬಂತೆ ಮೋಡಗಳ ಹಾವಳಿ..ವಿವಿಧ ಬಣ್ಣಗಳ ಸಂಗಮದಿ ಸೃಷ್ಟಿ ರಚಿಸಿದ ಚಿತ್ರವೇ ಅದೆಂಥ ಮನೋಹರ. ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ಬಣ್ಣಬಣ್ಣಗಳಲ್ಲೂ ಅದಾವ ಚಂಚಲತೆ?ಸೃಷ್ಟಿಯ ಕುಂಚದ ಹೊರಳಾಟಕ್ಕೆ ಕಾಗದವಾಗುತ್ತಿರುವ ಆ ಬಾನಿಗೋ ಅದಾವ ಪರವಶತೆ?ಆದರೂ ಬಿಡಲೊಲ್ಲದಲ್ಲ ಇದರ ಬಗೆಗಿನ ಮೋಹಕತೆ!ಹಕ್ಕಿಗಳೆಲ್ಲಾ ಬಳಗವ ಕರೆದು ಮಾಡುತಿವೆ ಚಿಲಿಪಿಲಿಯ ಕಲರವವ.. ಗೂಡು ಸೇರುವ ಮುನ್ನ ತನ್ನವರನ್ನೆಲ್ಲಾ ಒಮ್ಮೆ ನೋಡುವ ತವಕವೇ?ಅಥವಾ ಸೋತ ಮನಸುಗಳಿಗೆ ನಾಳೆಯಿದೆ ಮತ್ತೆ ಸಾಧಿಸಲಿಕ್ಕೆ ಎಂಬ ಸಾಂತ್ವನದ ಸಂಗತಿಯೇ? ಕಡಲ ತೀರದ ತುಂಬೆಲ್ಲಾ ಹರಡಿಕೊಂಡಿರುವ ಮಳಲು..ಅಲ್ಲಲ್ಲಿ ಬಿದ್ದಿರುವ ಶಂಖ ಚಿಪ್ಪುಗಳು..ಹಾಗೇ ಮಲಗಿರುವ ನಕ್ಷತ್ರ ಮೀನುಗಳು..ಮಂದಮಂದವಾಗಿ ಬೀಸುವ ಆ ಗಾಳಿಗೋ ಅದಾವ ತನ್ಮಯತೆ?!ಗಾಳಿಯ ಶೀತಲ ಸುಖಸ್ಪರ್ಶಕೆ ಅವಳ ಮುಂಗುರುಳಿಗೂ ಹಾರಿಹೋಗುವ ಬಯಕೆ..ಮತ್ತೆ ಮತ್ತೆ ಅದೆಂಥ ಮಾದಕತೆ ಆ ಗಾಳಿಯ ಹಂಬಲಕೆ!!…

          ಆಕೆ ಕುಳಿತಿದ್ದಾಳೆ ಕಡಲ ತೀರದಲ್ಲಿನ ಆ ಕಲ್ಲುಬಂಡೆಯ ಮೇಲೆ.. ಆ ಕಲ್ಲೋ ಎಂದೋ ತನ್ನ ಬಣ್ಣ ಕಳೆದುಕೊಂಡಿದೆ.. ಆ ಕಡಲ ಅಲೆಗಳ ಸ್ಪರ್ಶಕ್ಕಾಗಿ ಅಲ್ಲೇ ಕುಳಿತಿದೆ. ಒಮ್ಮೊಮ್ಮೆ ಬಂದು ಬಡಿವ ಅಲೆಗಳಿಗೂ, ಹಾಗೇ ಬಂದು ಸೋಕಿಹೋಗುವ ಅಲೆಗಳಿಗೂ ಎಷ್ಟೊಂದು ಅಂತರ!.. ಎಂತಹ ಭಿನ್ನತೆ..ಅಲೆಗಳ ಒಂದು ಕ್ಷಣದ ಸ್ಪರ್ಶಕ್ಕಾಗಿ ಆ ಬಂಡೆ ಎಷ್ಟೋ ವರ್ಷಗಳಿಂದ ಅಲ್ಲೇ ತಪಸ್ಸನ್ನಾಚರಿಸುತ್ತಿರುವಂತೆ ತೋರುತ್ತಿದೆ.ಕಲ್ಲನ್ನು ಪುಡಿಗಟ್ಟಲೋ ಎಂಬಂತೆ ನುಗ್ಗಿಬರುವ ಅಲೆಗಳಿಗೂ, ತೋಯ್ದು ತೋಯ್ದು ಶೀತವಾಗಿಸಲೋ ಎಂಬಂತೆ ಸುರಿವ ಮಳೆಯ ಒಲವಿಂದಲೂ ತಲ್ಲಣದ ತವಕ..ಆದರೂ ಕ್ಷಣಕ್ಷಣಕ್ಕೂ ಏನೋ ಒಂಥರಾ ಸಿಹಿಯ ಪುಳಕ.. ಅದಕ್ಕೇ ಅಲ್ಲವೇ ಆ ಬಂಡೆಯಿನ್ನೂ ಹಾಗೇ ಸ್ಥಿರವಾಗಿರುವುದು.. ಯಾವ ಕನಸುಗಳಿಲ್ಲದ ಆ ಬಂಡೆಗಾದರೂ ಹೇಗೆ ಬಂತು ಆ ತರದ ಮನಸು? ಎಲ್ಲ ಆ ರೀತಿಯ ಪ್ರೀತಿಯ ಒಂದು ಸ್ಪರ್ಶಕ್ಕಾಗಿಯೇ ಅಲ್ಲವೇ ಎನಿಸುತ್ತದೆ..ಇಂತಹ ಬಂಡೆಯ ಮೇಲೆ ಕುಳಿತಿದ್ದಾಳೆ ಆಕೆ ಬಹಳ ಹೊತ್ತಿನಿಂದ.. ಈಗ ಗಾಳಿ ಒಮ್ಮೆ ಮಂದ್ರವಾಗಿ,ಇನ್ನೊಮ್ಮೆ ಪ್ರಬಲವಾಗಿ ಬೀಸುತ್ತಿದೆ..ಸಾಂದ್ರವಾಗಿರುವ ಅವಳ ಮುಂಗುರುಳೂ ನವೋತ್ಸಾಹದಿಂದ ಬಳುಕಾಡುತ್ತಿದೆ.ಆದರೆ ಅವಳಲ್ಲಿ ಮಾತ್ರ ಬತ್ತದ ನೀರವತೆ!..ಮೌನ ಮಲ್ಲಿಗೆಯೋ ಎಂಬಂತೆ ಕುಳಿತಿದ್ದಾಳೆ ಸ್ನಿಗ್ಧ ಸೌಂದರ್ಯವತಿ ನಿರಾಭರಣ ಸುಂದರಿಯಾಗಿ!.. ಮೊಗದ ಮೇಲೆ ಅಲ್ಲಲ್ಲಿ ಬಿದ್ದಿರುವ ರಸದ ನೆಳಲು…ಮಂಕುದಿಬ್ಬಗಳಾದಂತಿಹ ಕಣ್ಣುಗಳು..ಆ ದಿಬ್ಬಗಳ ಬೇಲಿಯೋ ಎಂಬಂತೆ ಚೆಂದದ ಹುಬ್ಬುಗಳು.. ಬಣ್ಣದ ಜಗತ್ತಿನಲ್ಲಿ ಕಪ್ಪು ಬಿಳಿ ಬಣ್ಣಗಳೇ ಅವಳ ಸಂಗಾತಿಗಳಾಗಿವೆ;ಕಪ್ಪು ಮನಕ್ಕೆ,ಬಿಳಿ ದೇಹಕ್ಕೆ…! ಮುದ್ದು ಮನಸಿನ ತುಂಬೆಲ್ಲಾ ಛಿದ್ರವಾಗಿ ಹರಿದ,ಹರಡಿದ ಕನವರಿಕೆಗಳು..ಕತ್ತಲೆಯಲ್ಲಿ ನರಳಿದಂತೆ ಅವಳಿಗೆ ಅನಿಸುತ್ತಿದೆ.ಸಾಯಂಕಾಲದ ಸಮಯವಲ್ಲವೇ?ಸಮುದ್ರತೀರದಲ್ಲಿ ಮಳಲ ಮೇಲೆ ಹೆಜ್ಜೆ ಮೂಡಿಸುವ ಪಾದಗಳೇನು ಕಡಿಮೆ ಇರಲಿಲ್ಲ.!ಅದಾವುದರ ಮೇಲೆಯೂ ಈಗ ಅವಳ ಗಮನವಿಲ್ಲ.ಸಮುದ್ರದಲೆಗಳು ಶಾಂತವಾಗಿ ಹೊಯ್ದಾಡುತ್ತಿವೆ.ನೋಡುತ್ತಿದ್ದಾಳೆ,ಸಮುದ್ರದಲೆಗಳನ್ನೇ ನೆಟ್ಟ ದೃಷ್ಟಿಯಿಂದ… ಅರೇ!ಎಷ್ಟು ಹೊತ್ತು?ಅವಳ ಕಣ್ಣ ರೆಪ್ಪೆಗಳೇಕೆ ಮುಚ್ಚುತ್ತಲೇ ಇಲ್ಲ? ಇದ್ದಕ್ಕಿದ್ದಂತೆ ಸಾಗರದಲೆಗಳು ಭಯಾನಕವಾಗತೊಡಗಿದವು… ಸಮುದ್ರದಲ್ಲಿರುವ ನೌಕೆಗಳೆಲ್ಲಾ ಓಲಾಡತೊಡಗಿದವು.ಸಾಗರದಲ್ಲಿ ಈಜಾಡುತ್ತಿದ್ದ ಮಂದಿ ಭೀತಿಯಿಂದ ತೀರಕ್ಕೆ ಓಡಿಬರತೊಡಗಿದರು.ಇವರನ್ನು ನೋಡಿ ಈಕೆ ಗಹಗಹಿಸಿ ನಗುತ್ತಿದ್ದಾಳೆ.. ದೊಡ್ಡದಾಗಿ,ಹ್ಹಹ್ಹಹ್ಹಾ.. ಹ್ಹೊಹ್ಹೋ.. ಹ್ಹೆಹ್ಹೆಹ್ಹೇ!!! ಎಂದು… ಅವಳ ಹತ್ತಿರದಲ್ಲೇ ಇಬ್ಬರು ಪುಟ್ಟ ಮಕ್ಕಳು ಇದ್ಯಾವುದರ ಪರಿವೆಯಿಲ್ಲದೇ ಮರಳಿನಲ್ಲಿ ಗೊಂಬೆಗಳನ್ನು ಮಾಡುತ್ತಾ ಮದುವೆಯ ಆಟವಾಡುತ್ತಿದ್ದಾರೆ. ಆ ಇಬ್ಬರು ಪುಟ್ಟ ಮಕ್ಕಳು ಅಲ್ಲೇ ಒಬ್ಬರನ್ನೊಬ್ಬರು ಮುದ್ದಿಸುತ್ತಿದ್ದಾರೆ.ಯಾವ ಕಲ್ಮಶವಿಲ್ಲದ ಆ ಪ್ರತಿ ಪ್ರೀತಿಯ ಮುತ್ತಿನಲ್ಲಿ ಎಂತಹ ಅಮೃತತ್ವವಿದೆಯೇನೋ ಎಂದನಿಸುತ್ತಿತ್ತು.ಇಷ್ಟು ಹೊತ್ತು ನಗುತ್ತಿದ್ದಳು ಈಕೆ. ಆದರೆ,ಈ ಇಬ್ಬರು ಮಕ್ಕಳನ್ನು ನೋಡಿದೊಡನೆ,ನಿಧಾನವಾಗಿ ಅವಳ ನಗು ವಿಕಾರವಾಗತೊಡಗಿತ್ತು..ನಗುತ್ತಾ ನಗುತ್ತಾ ನರಳುವಿಕೆಯಂತೆ,ಈಗ ಆ ನಗುವೇ ಅಳುವಾಗತೊಡಗಿತ್ತು. ಒಮ್ಮೆಲೇ ಜೋರಾಗಿ ಬಿಕ್ಕಳಿಸತೊಡಗಿದಳು. ಕೂಗತೊಡಗಿದಳು..ಆಚೆ ಈಚೆ ನೋಡಿದಳು.. ಯಾರಿಗೂ ಅವಳ ಮೇಲೆ ಗಮನವಿರಲಿಲ್ಲ.ಸಣ್ಣದಾಗಿ ಅಳತೊಡಗಿದಳು. ಒಮ್ಮೆಲೇ ಬೆಚ್ಚಿಬಿದ್ದಳು. ತನ್ನ ನೆರಳನ್ನೇ ನೋಡುತ್ತಿದ್ದಾಳೆ.. ಮುಖದಲ್ಲಿ ಒಂಥರದ ಭಯ ಆವರಿಸತೊಡಗಿತ್ತು… ಕಣ್ಣುಗಳಲ್ಲಿ ಒಂದೇ ಸಮನೆ ನೀರು ಸುರಿಯುತ್ತಿದೆ.. ಹಾಗೇ ನೋಡುತ್ತಿದ್ದಾಳೆ ತನ್ನ ನೆರಳನ್ನೇ!ಮತ್ತೆ ಮತ್ತೆ ಬೆಚ್ಚಿಬೀಳುತ್ತಿದ್ದಾಳೆ. ನೆರಳು! ನನ್ನದೇ ನೆರಳು!!ಎಲ್ಲಿತ್ತು ಇಷ್ಟು ಹೊತ್ತು? ನನ್ನ ಜೊತೆಯೇ ಇತ್ತೇ ಅಥವಾ ವಿಹರಿಸಲು ಎಲ್ಲಿಯೋ ಹೋಗಿತ್ತೇ?ಅಥವಾ ನಾನೇ ಗಮನಿಸಿಯೂ ಗಮನಿಸಿರಲಿಲ್ಲವೇ? ನನ್ನ ಪ್ರತಿಬಿಂಬವೇ ಇದು?ಹೀಗೇ ಹೀಗೇ ಅವಳ ಮನದಲ್ಲಿ ಹತ್ತಾರು ಪ್ರಶ್ನೆಗಳು ಹುಟ್ಟಿಕೊಳ್ಳತೊಡಗಿದವು.. ಅವಳ ಅಳು ಈಗ ಒಂದು ಕ್ಷಣ ನಿಂತಿತ್ತು.ಅವಳೆಲ್ಲ ಗಮನ ಈಗ ಅವಳ ನೆರಳಿನ ಮೇಲೆಯೇ ಕೇಂದ್ರೀಕೃತವಾಗಿದೆ!ನನ್ನದೆನ್ನುವ ಈ ನೆರಳು ನನ್ನ ಸ್ವಂತದ್ದೇ?ಅನುಕ್ಷಣವೂ ನನ್ನನ್ನೇ ಹಿಂಬಾಲಿಸಿ ಬರುತ್ತಿದೆಯೇ?ಇದೆಂತು ಸಾಧ್ಯ;ಬಿಟ್ಟಿರದ ಅನುಬಂಧವಿರಲೆಂತು ಸಾಧ್ಯ?ಇದು ಕಪ್ಪನೆಯ ದಿಬ್ಬವಲ್ಲ,ಮಬ್ಬು ಮಬ್ಬು ದೀಪವೂ ಅಲ್ಲ!!ಒಂಚೂರು ಸದ್ದಾಗದಂತೆ ಪ್ರತಿಕ್ಷಣವೂ ನನ್ನೊಡನಿರಲೆಂತು ಸಾಧ್ಯ?ಇದರ ಮೌನವೇ ಸಾವಿರ ಮಾತಾಗುತ್ತಿದೆಯೇ?ಇದರ ಮೌನವೇ ಸಾವಿನ ಮಾತಾಗುತ್ತಿದೆಯೇ?ಅರ್ಥವಾಗುತ್ತಿಲ್ಲ ನನಗೆ..! ತಣ್ಣನೆಯ ಮೌನ.. ಅಲ್ಲ ಅಲ್ಲ!ಉಸಿರನ್ನೇ ಹಿಸುಕಿದಂತಿನಿಸುವ ಭಯಂಕರ ಮೌನ..! ಧಗಧಗಿಸುತ್ತಿರುವ ಮೌನ.. ಇರಲಾರದೇ?.. ಇರಬಾರದೇ?.. ಮನಸು ನುಡಿಸುವ ಮೌನ ತರಂಗದಿ ಅಪಶೃತಿಯ ತರಂಗ ಮೇಳೈಸಿದೆಯೇ?.. ಅಪಶೃತಿ??!!.. ಹ್ಹಹ್ಹಾ.. ಅಪಶೃತಿಯೇ?ಹಾಗಾದರೆ ಶೃತಿಯೆಂದರೇನು?ಶೃತಿ ಅಪಶೃತಿಗಳ ನಡುವಿನ ಸಂಗತಿಯನ್ನು ಅರಿಯಲೇ? ಅಥವಾ ಬದುಕಿನ ಅರ್ಥವನ್ನೇ ಕಾಣದ ನನಗೆ ಇವುಗಳ ಅರ್ಥ ಹುಡುಕುವ ವ್ಯರ್ಥ ಪ್ರಯತ್ನ ಬೇಡವೇ?.. ಇರಲಾರವೇ ಎರಡೆರಡು? ಮಂಜುಗಡ್ಡೆ ನೀರಾದಂತೆ,ನೀರೇ ಮಂಜುಗಡ್ಡೆಯಾದಂತೆಯೇ ಮತ್ತೆ?ಶೃತಿಯೇ ಅಪಶೃತಿಯಾಗಿ,ಅಪಶೃತಿಯೇ ಶೃತಿಯಾಗಿ ಬಾಳಸಂಗೀತ ಸರಿಗಮದ ರಸದ ತನನವೇ?ಇಂದು ವಿಭ್ರಮವೆನಿಸಿದ್ದು ನಾಳೆ ಸಂಭ್ರಮವಾದೀತೇ?ಮಾವಿನ ಕಾಯೊಳಗೆ ಬೀಜ ಮೊಳೆತುಬಂದಂತೆ! ಮೃದುಲ ಬೀಜವೇ ಕೊನೆಗೆ ಗಟ್ಟಿಯಾದಂತೆ!ಹಣ್ಣಾಗಿ ಮಾಗೆ ಕಾಯೇ ಸಿಹಿಯಾದಂತೆ!.. ಅಪಶೃತಿಯೊಳಗೇ ಒಲ್ಮೆಯ ಶೃತಿ ಮೂಡಿಬರಬಹುದೇ?ಮಜ್ಜಿಗೆಯೊಳಗೆ ನವನೀತ ಸ್ಫುರಿಸಿಬಂದಂತೆ!!! ಆ ಮೌನದೊಳಗೂ ಇರಬಹುದೇ ಮಾತುಮಾತಿಗೂ ಕವನ?!ಈ ಮೌನಕ್ಕೂ ಕಾರಣ ಈ ನೆಳಲೇ ಅಲ್ಲವೇ?ಪ್ರತಿಕ್ಷಣವೂ ನನ್ನೊಡನಿರುವ ಈ ನೆಳಲು ಕತ್ತಲೆಯಲ್ಲ್ಯಾಕೆ ಕಾಣುವುದಿಲ್ಲ? ಎಲ್ಲಿಹೋಗುತ್ತದೆ ಆಗ? ಏಕಾಂಗಿಯಲ್ಲ ನೀನು;ನಾನಿರುವೆನಲ್ಲಾ ನಿನ್ನೊಡನೆ ಎಂದು ಕ್ಷಣಕ್ಷಣವೂ ಹೇಳುತ್ತಾ,ತಂಪುಕತ್ತಲೆ ದೊರೆತಾಗ ನನಗೆ ಕಾಣುವುದಿಲ್ಲವೇಕೆ?ಬೆಳಕಲ್ಲಿದ್ದರೆ ಮಾತ್ರ ನೆರಳು ಗೋಚರಿಸುವುದೇ?ಬೆಳಕಲ್ಲಿ ಮಾತ್ರ ನಿನ್ನ ಜೊತೆ ಬರುತ್ತೇನೆ ಎನ್ನುತ್ತಿದೆಯೇ ಈ ನೆಳಲು?ಈ ನೆರಳಿನಂತೆಯೇ ಸಾವೇ?ಆ..ಆ..ಸಾವು! ಸಾವು..!! ಅವಳ ಮೈ ಕಂಪಿಸತೊಡಗಿತ್ತು. ಅಲ್ಲೇ ಕಲ್ಲು ಬಂಡೆಯ ಮೇಲೆ ತನ್ನ ನರಳುತ್ತಾ ಕೈಗಳನ್ನು ಹೊಸೆಯತೊಡಗಿದಳು. ಕಣ್ಣಲ್ಲಿ ಮಾತ್ರ ಈಗ ನಿಧಾನವಾಗಿ ಮತ್ತೆ ಕಣ್ಣೀರು ತುಂಬಿಕೊಳ್ಳತೊಡಗಿದೆ.ಸಾವು..ಸಾವು.. ಮುಲುಗುತ್ತಿದ್ದಾಳೆ!ನನ್ನ ಇನಿಯನ ಸಾವು.. ನನ್ನ ಭಾವದ ಗೆಳೆಯನ ಸಾವು.. ನನ್ನದೆಲ್ಲದರ ಒಡೆಯನ ಸಾವು..ನನ್ನವನ ಸಾವು.. ಹ್ಹಹ್ಹಹ್ಹಾ.. ಸತ್ತೋದಾ!.. ಆತ ಸತ್ತೋದ.. ನಾನು..ನಾನು.. ಬದುಕಿಯೇ ಇದ್ದೇನೆ;ಬದುಕಿಲ್ಲದಂತೆ.. ಬೆಳಕಿಲ್ಲದಂತೆ!!.. ತನ್ನೆದೆಯ ಮೇಲೆ ಕೈಯಿಟ್ಟುಕೊಂಡು, ಎದೆಯನ್ನು ಸವರುತ್ತಾ ಹೇಳ್ತಿದ್ದಾಳೆ.. ಮುದ್ದೂ!.. ಕೋಪಾನಾ? ಮಾತಾಡೊಲ್ವಾ?.. ಮಲ್ಕೊಂಡಿದ್ದೀಯಾ ನನ್ ಚಿನ್ನೂ?.. ಪಾಪು ಮಲಗಿದ್ದಾನೆ, ಯಾರೂ ಏಳಿಸ್ಬೇಡಿ..

ಉಶ್!ಎನ್ನುತ್ತಿದ್ದಾಳೆ..ಉಹ್ಹೂ..ಇಲ್ಲ..ಅವನಿಲ್ಲವಿಲ್ಲಿ.. ಅವನು ಅಲ್ಲಿ ಮಲಗಿದ್ದಾನೆ. ಇಲ್ಲಿ ಅವನ ನೆನಪುಗಳು ಮಾತ್ರ ಮಲಗಿವೆ.ಅವನ ಚೆಂದದ ರೂಪ, ನೆನಪುಗಳ ತಾಪ ನನ್ನ ಹೃದಯವನ್ನಾವರಿಸಿದೆ. ಅವನು..ಅವನು..? ಎಲ್ಲಿ ಹೋದ? ಹೊರಟೇಹೋದ ನನ್ನಿನಿಯ… ಅವ ಚೆಂದದಳಿಯ.. ಸಾವೂ ಕೂಡ ಚೆಂದ ಮಕರಂದವೇ?ಆತ ನನಗೆ ಏನಾಗಿದ್ದ? ಗಂಡನೇ?.. ಗೆಳೆಯನೇ?… ನಲ್ಲನೇ?… ಮಾವನ ಮಗನೇ?.. ಎಲ್ಲವೂ.. ಎಲ್ಲವೂ ಅಲ್ಲವೇ?.. ಯಾವುದಾಗಿರಲಿಲ್ಲ ಆತ?ನಾನು ಅಳುತ್ತಿದ್ದಾಗಲೆಲ್ಲಾ ತಾಯಿಯಂತೆ ಬರಸೆಳೆದು ಬಿಗಿದಪ್ಪಿ, ಹಣೆಗೆ ಪಪ್ಪಿ ಕೊಡ್ತಿದ್ದ. ಆ ಒಂದು ಚುಂಬನಕ್ಕಾಗಿಯೇ ಅಲ್ಲವೇ ನಾನು ಪ್ರತಿ ಸಲವೂ ಸುಮ್ ಸುಮ್ನೆ ಅಳ್ತಾ ಇದ್ದಿದ್ದು..! ಸುಳ್ಳು ಸುಳ್ಳೇ ಅಳ್ತಿದ್ದೆ ಎಂದು ಗೊತ್ತಾದರೆ,ಕಳ್ಳಾ.. ಎನ್ನುತ್ತ,ಕಿವಿ ಹಿಂಡುತ್ತಿದ್ದ. ಈ ಸಲ ಕೆನ್ನೆಗೆ ಮುತ್ತು ಕೊಡ್ತಿದ್ದ.ಕಂಗಳಿಗೂ ಕೂಡಾ!ಪ್ರತಿಸಲ ಅವನ ಎದೆಯ ಮೇಲೆ ಒರಗಿದಾಗಲೂ ಅದೆಂಥ ಮೋಹಕ ಸುಖ.. ಬೆಚ್ಚನೆಯ ಆ ಸ್ಪರ್ಶಕ್ಕಾಗಿಯೇ ಅಲ್ಲವೇ ನಾನವನನ್ನು ಸದಾ ತಬ್ಬಿಕೊಂಡಿರುತ್ತಿದ್ದುದು.. ಅವನ ಕೊರಳಿಗೆ ಹೋಗಿ ಜೋತುಬೀಳುತ್ತಿದ್ದುದು..! ಅದೆಷ್ಟು ಸಲ ನನ್ನ ಮಡಿಲಲ್ಲಿ ಮಲಗಿ ಮಗುವಾಗುತ್ತಿದ್ದ! ನಾನದೆಷ್ಟು ಸಲ ಅವನೊಂದಿಗೆ ನಗುವಾಗುತ್ತಿದ್ದೆ! ಅದೆಂಥ ಪ್ರೀತಿ,ಅದೆಂಥ ವಾತ್ಸಲ್ಯ!! ಅಮ್ಮನ ಮಮತೆಯಿಲ್ಲದ ನನಗೆ ಮಾವ ತಂದೆಯಂತಿದ್ದರೆ, ಈತ ನನಗೆ ತಾಯಿಯೇ ಆಗಿಬಿಡುತ್ತಿದ್ದನಲ್ಲವೇ?ಈಗ.. ಈಗ ಏನು ಮಾಡಲಿ?… ಭಣಗುಡುವ ನನ್ನೊಡಲ ಏಕಾಂತಕ್ಕೆ ಏನು ಹೇಳಲಿ?.. ಬಾಡದಿರಿ ನೆನಪುಗಳೇ ಉಸಿರು ನಿಲ್ಲುವ ಮುನ್ನ..ಕಾಡಿಬಿಡಿ ಪ್ರತಿಕ್ಷಣವೂ ಒಲವ ಸಂಗತಿಯನ್ನ… ನೆನಪಾಗುತ್ತಾಳಲ್ಲವೇ ಮತ್ತೆ ಮತ್ತೆ ಅಮ್ಮ!?. ಇಲ್ಲ,ಹೇಗೆ ನೆನಪಾದಾಳು?ನಾನವಳನ್ನು ನೋಡಿಯೇ ಇಲ್ಲವಲ್ಲ!!ಅಮ್ಮ ಒಂಭತ್ತು ತಿಂಗಳ ಗರ್ಭಿಣಿಯಾಗಿದ್ದಾಗ ನನ್ನಪ್ಪ ತೀರಿಕೊಂಡರಂತೆ.. ಆಮೇಲೆ.. ಆಮೇಲೆ ನನ್ನನ್ನು ಹೆರುವ ಸಮಯದಲ್ಲಿ ನನ್ನಮ್ಮ ನನ್ನೊಬ್ಬಳನ್ನೇ ಬಿಟ್ಟು ಹೊರಟುಹೋದಳಂತೆ;ತಣ್ಣನೆಯ ಸಾವಿನ ಲೋಕಕ್ಕೆ! ಆದರೆ ನಾನು ಒಬ್ಬಂಟಿಯಾಗಲಿಲ್ಲ.. ನನ್ನ ಮಾವ ಅವನ ಮಗನಿಗೆ ಮತ್ತು ನನಗೆ ತಾಯಿಯಾಗಿ, ತಂದೆಯಾಗಿ, ಗುರುವಾಗಿ, ಗುರಿಯಾಗಿ ಬೆಳೆಸಿದನು. ನಾನು ಹುಟ್ಟುವುದಕ್ಕಿಂತ ನಾಲ್ಕು ತಿಂಗಳು ಮೊದಲು ಮಾವನ ಮಗ ಹುಟ್ಟಿದ್ದನಲ್ಲವೇ?ಇದು ಅದೃಷ್ಟವೋ ಅಥವಾ ದುರಾದೃಷ್ಟದ ಅತಿರೇಕವೋ ಅವನಿಗೂ ಅವನ ತಾಯಿ ಹೆರಿಗೆಯ ಸಮಯದಲ್ಲಿ ಆತನನ್ನು ತೊರೆದು ಒಬ್ಬಳೇ ಪರಲೋಕಕ್ಕೆ ಹೊರಟುಹೋದಳಂತೆ.. ಮಾವನಿಗೆ ನಾನು ಮತ್ತು ಅವನ ಮಗ ಮಾತ್ರ.. ನಾವೇ ಅವನ ಎರಡು ಕಂಗಳಾಗಿದ್ದೇವೆ.. ಮಾವ ಎಂದು ನಾನವನನ್ನು ಕರೆದೇ ಇಲ್ಲ.ಪಪ್ಪಾ ಎಂದೇ ಹೇಳುತ್ತೇನೆ ಈಗಲೂ.. ಪಪ್ಪ ಸಂಜೆಯ ಸಮಯ ತಿರುಗಾಡಲು ಹೋಗುವಾಗ,ನಾನು ಪಪ್ಪನ ಕೈಯನ್ನು,ಅವನ ಮಗ ನನ್ನ ಕೈಯನ್ನೂ ಹಿಡಿದುಕೊಳ್ಳುತ್ತಿದ್ದ.. ಒಮ್ಮೊಮ್ಮೆ ಪಪ್ಪ ನಮ್ಮಿಬ್ಬರನ್ನೂ ಅವನ ಎರಡು ಹೆಗಲುಗಳ ಮೇಲೆ ಕೂರಿಸಿಕೊಂಡು ಸಮುದ್ರತೀರದಲ್ಲಿ ಓಡುತ್ತಿದ್ದ. ನಾವು ನಗುತ್ತಿದ್ದೆವು. ಕುಳಿತಲ್ಲೇ ಹಾರಿ ಹಾರಿ,ಪಪ್ಪಾ ಓಡು ಓಡು ಅನ್ನುತ್ತಿದ್ದೆವು.ಪಪ್ಪ ನಮ್ಮನ್ನು ಖುಷಿಪಡಿಸುತ್ತಿದ್ದ. ಅವನೂ ನಮಗಿಂತ ಹೆಚ್ಚು ಖುಷಿಪಡುತ್ತಿದ್ದ. ವ್ಹಾ!ಅವೆಂಥ ಚೆಂದದ ಕ್ಷಣಗಳು.. ಮರೆತುಹೋಗುವವೇ ಮುನಿಸಿ ನಗಿಸಿಹ ಆ ದಿನಗಳು.. ಅದೇಕೋ ಕಾಣೆ ಅವನ ಮಗನಿಗೆ ನಾನೆಂದರೆ ಎಲ್ಲಿಲ್ಲದ ಪ್ರೀತಿ.. ಆತ ಎಂದೂ ನನ್ನನ್ನು ತಂಗಿ ಅಂತ ಕರೆಯಲೇ ಇಲ್ಲ. ನಾನೂ ಕೂಡಾ ಅಷ್ಟೇ;ಅವನನ್ನು ಎಂದೂ ‘ಅಣ್ಣಾ’ ಎನ್ನಲೇ ಇಲ್ಲ.. ಪಪ್ಪನೂ ಕೂಡಾ ಹೀಗೇ ಕರೀ ಅಂತ ಎಂದೂ ಹೇಳಲೇ ಇಲ್ಲ.ಅವನ ಮಗ ನನ್ನನ್ನು ‘ಜೀವಾ’ ಎಂದೇ ಕರೆಯುತ್ತಿದ್ದ. ನಾನೂ ಕೂಡಾ ಅಷ್ಟೇ.. ಮುದ್ದೂ ಅಂತಾನೇ ಆತನನ್ನು ಕರೆಯುತ್ತಿದ್ದೆ. ಬಹುಶಃ ಯಾವುದೋ ಲೋಕದಲ್ಲಿ ಯಾವುದೋ ಗಳಿಗೆಯಲ್ಲಿ ನನ್ನ ಮತ್ತು ಅವನ ಸಂಬಂಧ ನಿಶ್ಚಯಿಸಲ್ಪಟ್ಟಿತ್ತೇನೋ!ಜೊತೆಯಲ್ಲೇ ಬೆಳೆದ್ವಿ.. ನಾನು ಮತ್ತು ಅವನು ಚಿಕ್ಕವರಿದ್ದಾಗ ಒಮ್ಮೆ ಯಾವುದೋ ಸಣ್ಣ ವಿಷಯಕ್ಕೆ ಮುನಿಸಿಕೊಂಡಿದ್ವಿ… ಆತ ನನ್ನಿಂದ ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತುಕೊಂಡಿದ್ದ.ಆಗ ಪಕ್ಕದ ಮನೆಯವನು,ಸ್ವಲ್ಪ ದೊಡ್ಡವನು ಬಂದು,ನನಗೆ ಯಾಕೋ ಸುಮ್ಮನೆ ಬೈಯತೊಡಗಿದ.ನಾನು ಅಳತೊಡಗಿದೆ.ಆಗ ಈತನಿಗೆ ಅದೆಲ್ಲಿಂದ ಕೋಪ ಬಂತೋ! ಹೋಗಿ ಅವನ ಎರಡೂ ಕಾಲುಗಳನ್ನು ಎಳೆದುಬಿಟ್ಟಿದ್ದ.ಆತ ಧಡ್ಡನೆ ನೆಲಕ್ಕೆ ಬಿದ್ದುಬಿಟ್ಟಿದ್ದ. ನಾನು ಅಳುತ್ತಿದ್ದವಳು ಒಮ್ಮೆಲೇ ನಗುತ್ತಾ,ಚಪ್ಪಾಳೆ ತಟ್ಟತೊಡಗಿದೆ. ಆಗ ಆತ ಹೇಳಿದ್ದೇನು?.. ನನ್ನ ಪಾಪುವಿಗೆ ನೀನೇನಾದರೂ ಅಂದ್ರೆ ಸುಮ್ನಿದ್ಬಿಡ್ತೀನಾ?… ನನ್ನ ಚಿನ್ನು ಕಣೋ ಅವ್ನು.. ಅಂದಿದ್ನಲ್ಲವೇ!ಹ್ಹೂ… ಎಂಟು ವರ್ಷದ ಈತ ನನಗೋಸ್ಕರ ಆ ಹದಿನೆಂಟು ವರ್ಷದ ಹುಡುಗನನ್ನು ಎದುರಿಸಲು ಹೋಗಿದ್ದನಲ್ಲಾ!ಅದೆಂಥ ಉತ್ಕಟ ಪ್ರೀತಿ;ಅದೆಂಥ ಅಚಲ ಆತ್ಮವಿಶ್ವಾಸ.. ಹೀಗೇ ಇತ್ತಲ್ಲವೇ ನಮ್ಮ ಅನುಬಂಧ! ಆತ ಸಾಯುವ ಹಿಂದಿನ ದಿನ,ಚಿನ್ನೂ.. ನನ್ ಜೀವ… ಯಾಕೋ ಒಂಥರಾ ಇದ್ದೀಯಾ.. ಅಂತ ಕೇಳಿದ್ದ. ನಾನು,ಏನಾಗಿದ್ಯೋ ನಂಗೆ;ಚೆನ್ನಾಗೇ ಇದ್ದೀನಲ್ಲೋ.. ಏನೋ,ಏನಾಯ್ತೋ ನಿಂಗೆ..? ಅಂತ ಕೇಳಿದ್ದೆ. ನನಗ್ಯಾಕೋ ಅಂದೇ ತಳಮಳ ಶುರುವಾಗಿತ್ತು. ಆದರೂ ಆತನಲ್ಲಿ ಹಾಗೆ ಹೇಳಿದ್ದೆ. ಬಹುಶಃ ಆತನ ಸಾವಿನ ಮುನ್ಸೂಚನೆ ನನ್ನ ಹೃದಯಕ್ಕೆ ಅರಿವಾಗಿತ್ತೇ?ಅದು ಅವನಿಗೆ ನನ್ನೊಳಗಿನ ತುಮುಲವಾಗಿ, ನನ್ನ ಕಣ್ಣುಗಳಲ್ಲಿ ಕಂಡಿತ್ತೇ?ದಿನಾ ಒಂದು ಚೆಂದದ ಚೆಂಗುಲಾಬಿಯನ್ನು ತಂದುಕೊಡುತ್ತಿದ್ದವನು,ಆ ದಿನ ಮಾತ್ರ ಕೆಂಗುಲಾಬಿಯ ಜೊತೆಗೆ, ಅದ್ಭುತ ಕಲಾಕೃತಿಯಂತಿರುವ,ಪ್ಲಾಸ್ಟಿಕ್ ಗುಲಾಬಿಯನ್ನೂ ತಂದಿದ್ದ. ಪ್ಲಾಸ್ಟಿಕ್ ಗುಲಾಬಿಯನ್ನು ಕೊಟ್ಟು ಹೇಳಿದ್ದ.. ಪ್ರೀತೀ.. ಈ ರೋಜಾ ಹೂ ಬಾಡಿಹೋಗುವವರೆಗೂ ನಾನು ನಿನ್ನೊಂದಿಗೆ ಇರ್ತೀನಿ.. ನಿನ್ನ ನಗುವಾಗಿ.. ನಿನ್ನ ಮಗುವಾಗಿ.. ನಿನ್ನ ಜೀವದ ಚೆಲುವಾಗಿ.. ಹೃದಯದ ಗೆಲುವಾಗಿ.. ಎಂದೆಂದೂ ನಿನಗೇ ಅಂಟಿಕೊಂಡು ನಿನ್ನ ಬೆಚ್ಚನೆಯ ಸ್ಪರ್ಶಸುಖದಲ್ಲೇ ತೇಲುತ್ತಾ, ನಿನ್ನ ಹೃದಯದ ಪ್ರತೀ ಕೋಣೆಯ ಕಿಟಕಿ ಬಾಗಿಲುಗಳನ್ನು ಬಡಿಯುತ್ತಾ,ನಿನ್ನನ್ನು ಅಳಿಸುತ್ತಾ, ನಗಿಸುತ್ತಾ, ಅಮೂರ್ತ ಪ್ರೀತಿಯೊಂದಿಗೆ ನಿನ್ನನ್ನು ಮುದ್ದಿಸುತ್ತಾ ಇರ್ತೀನಿ.. ನಿನ್ನ ಪ್ರತೀ ಕಣದಲ್ಲೂ.. ಪ್ರತೀ ಕ್ಷಣದಲ್ಲೂ…! ಎಂದಿದ್ದನಲ್ಲವೇ?ಈಗಲೂ.. ಈ ಕ್ಷಣವೂ,ಹಾಗೆಯೇ?ನನ್ನ ಹೃದಯದ ಹೊಸ್ತಿಲಲ್ಲಿ ಕುಣಿಯುತ್ತಿದ್ದಾನಲ್ಲವೇ? ಹೊರಗೆ ಹೋಗಲೇ ಎಂದು ಹೆದರಿಸುತ್ತಿದ್ದಾನಲ್ಲವೇ?ಅವನೇ ಪದೇ ಪದೇ ಧ್ವನಿಸುತ್ತಿದ್ದಾನಲ್ಲವೇ?ಅವನ ನೆನಪುಗಳು ಎಂದಿಗೂ ಮಿಂಚಿನ ಸಂಚಲನದಂತೆ ಕ್ಷಣಿಕವಲ್ಲ.. ಅದು ಕ್ಷಣ ಕ್ಷಣವೂ ಪುಳಕ.. ಪವಿತ್ರ ಸೋನೆಮಳೆಯ ಮೈಜಳಕ.. ಎಲೆಗಳ ಮೇಲೆ ಹೊರಳಾಡೋ ಚೆಂದ ಚೆಂದ ಮಿಹಿಕಾ..ನೆನಪುಗಳೇ ಹೀಗೆ.. ಕಾಡುತ್ತಲೇ ತೃಪ್ತಿಪಡಿಸುತ್ತವೆ. ಕಾಡುತ್ತಲೇ ಮಾತಾಡದೆಯೇ ಮಾತಾಗುತ್ತವೆ. ಆದರೆ ಈತನ ನೆನಪುಗಳು ನನ್ನನ್ನು ಸುಡುತ್ತಿವೆಯಲ್ಲವೇ?ಅವನ ನೆನಪುಗಳೆಂದರೆ ಬೂದಿ ಮುಚ್ಚಿದ ಕೆಂಡವೇ? ಈತನ ಎಲ್ಲ ನೆನಪುಗಳ ಭಾರಕ್ಕೆ ಮನವೇಕೋ ಕಲಕುತ್ತಿದೆ.ಆತ ನನಗಾಗಿ ಎಲ್ಲವೂ ಆಗಿದ್ದನಲ್ಲವೇ?ಹೌದು.. ಈಗದು ಕೇವಲ ಕುರುಹುಗಳು ಮಾತ್ರವಲ್ಲವೇ? ಎಷ್ಟು ಹಂಬಲಿಸಿದ್ದೆ ಅವನ ಜೊತೆ ಬಾಳಲು?.. ಬಾಳಲಿಲ್ಲವೇ?.. ಬಾಳಿದ್ದೇನಲ್ಲವೇ?.. ಎಂದೂ ಬತ್ತಿಹೋಗದ ಬಾಲ್ಯದ ಮಧುರ ಕ್ಷಣಗಳೊಂದೇ ಸಾಕಲ್ಲವೇ ಈ ಜನುಮಕೆ.. ಮಿಡಿವ ಹೃದಯಕೆ..!

ಮುಂದುವರಿಯುವುದು…

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!