ಕವಿತೆ

ಮತ್ತೆ ಕಾದಳು ಶಬರಿ…

ಪುಟ್ಟ ಗುಡಿಸಲ ಪರಿಧಿಯೊಳಗೆ
ನಿತ್ಯ ಮೌನದ ಗಾನದೊಳಗೆ
ತನ್ನ ಅರಿವಿನ ದಿಟ್ಟಿಯೊಳಗೆ
ಮತ್ತೆ ಕಾದಳು ಶಬರಿ..

ಘಂಟೆ ತಮಟೆಯ ನಾದವಿರದೆ
ಯಾವ ಧರ್ಮದ ಬೋಧವಿರದೆ
ಗುಡಿಯ ಹೊಸಿಲ ದಾಟಿ ಬರದೆ
ಮತ್ತೆ ಕಾದಳು ಶಬರಿ…

ಎಲ್ಲ ಬೆಡಗಿನ ಸೋಗ ತೊರೆದು
ಜಗದ ಸೊಗಡನು ಬರೆದಳು..
ಮನದಿ ಆರದ ಹಣತೆ ಬೆಳಗಿ
ಮತ್ತೆ ಕಾದಳು ಶಬರಿ..

ರಾಮನೆನುವ ರೂಪ ನೆನೆದು
ದಿನವು ಒಲವಲಿ ಹೆಜ್ಜೆ ಕಾದು
ತರಗೆಲೆಯ ತನನದಲಿ ಬೆರೆತು
ಮತ್ತೆ ಕಾದಳು ಶಬರಿ..

ಈ ಕ್ಷಣವು ಆತ ಬರದಿರಲು
ತೆರೆದಿಹಳು ನಾಳೆಗಳ ಬಾಗಿಲು
ಭರವಸೆಗೆ ಬಣ್ಣ ಹಚ್ಚಿರಲು
ಬೆರೆತು ಕಾದಳು ಶಬರಿ..

ಬರುವನೋ ಜೋಗಿಯಾಗಿ ಅವನು
ತಾಯಿಯಾಗಲೇ ಕೊಡಲು ನೆರಳು
ಎಂದು ಕಾದಳು ಶಬರಿ..

ತುಂಬು ಪ್ರೀತಿಯ ತಂಪಲಿ
ವಿರಮಿಸಲಿ ಆತನೆನುತ
ಎದೆಯ ಹಾಸಿಗೆ ಒಪ್ಪಗೊಳಿಸಿ
ಮತ್ತೆ ಕಾದಳು ಶಬರಿ..
ಬರುವನಕ ಕಾದಳು ಶಬರಿ…
ಒಂದು ಸ್ಪರ್ಶಕೆ ಧನ್ಯಳಾದಳು ಶಬರಿ…

~‘ಶ್ರೀ’
ತಲಗೇರಿ

Facebook ಕಾಮೆಂಟ್ಸ್

ಲೇಖಕರ ಕುರಿತು

ಶ್ರೀ ತಲಗೇರಿ

ಸದ್ಯಕ್ಕೆ ಬೆಂಗಳೂರಿನಲ್ಲಿ ವಾಸ,ಆಗಾಗ ಲೇಖನಿ,ಕುಂಚಗಳ ಸಹವಾಸ..ಬದುಕಿನ ಬಣ್ಣಗಳಲ್ಲಿ ಪ್ರೀತಿಯ ಚಿತ್ರ ಬಿಡಿಸಿ ಖುಷಿಪಡುತ್ತ,ಶಬ್ದಗಳಿಗೆ ಜೀವ ಕೊಡುವ ಪ್ರಯತ್ನದಲ್ಲಿ ಪುಟ್ಟ ಪುಟ್ಟ ಹೆಜ್ಜೆ ಇಡುತ್ತಿರುವ ಕನಸು ಕಂಗಳ ಹುಡುಗ...

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!