ಅಂಕಣ

ಭೋರ್ಗರೆವ ಸಮುದ್ರದಂತಿದ್ದ ಈ ಸಂತನ ಬಗ್ಗೆ ನಮಗೆಷ್ಟು ಗೊತ್ತು!?

ಅದು ಕೋಲ್ಕತ್ತಾದ ಬೇಲೂರು ಆಶ್ರಮ. ಅದೊಂದು ಮಧ್ಯರಾತ್ರಿ ಅಲ್ಲಿ ಮಲಗಿದ್ದ ತರುಣ ಸನ್ಯಾಸಿಯೋರ್ವ ದುತ್ತೆಂದು ಎದ್ದು ಹೊರಗೋಡಿ ಬರುತ್ತಾನೆ. ವೇದನೆಗೆ ಮನದಲ್ಲೇ ಚಡಪಡಿಸುತ್ತಾ ಅತ್ತಿಂದಿತ್ತಾ ಇತ್ತಿಂದತ್ತಾ ಅಲೆದಾಡುತ್ತಿರುತ್ತಾನೆ. ಇದನ್ನುಕಂಡ ಸಹವರ್ತಿಯೋರ್ವ ನಿದ್ದೆಯಿಂದ ಎದ್ದು ಆ ತರುಣ ಸನ್ಯಾಸಿಯ ಬಳಿಗೆ ಬಂದು ಅದೇನಾಯಿತು? ಹುಷಾರಿಲ್ಲವೇ? ನಿದ್ದೆ ಬಂದಿಲ್ಲವೇ ಎಂದು ಕೇಳಲು… ‘ಇಲ್ಲಾ, ದೂರದ ಆಗ್ನೇಯದ ಕಡೆ ನೂರಾರು ಮಂದಿ ನರಳುವ ಧ್ವನಿ ಕೇಳುತ್ತಿದೆ, ಸಾವುಬದುಕಿನ ನಡುವೆ ಹೋರಾಡುತ್ತಿರುವ ಚಿತ್ರಣ ಕಾಣುತ್ತಿದೆ ಅದೇಗೆ ನಿದ್ದೆ ಮಾಡಲಿ’ಎಂದುತ್ತರಿಸುತ್ತಾನೆ!  ತರುಣ ಸನ್ಯಾಸಿಯ ಉತ್ತರಕ್ಕೆ ಗಲಿಬಿಲಿಗೊಂಡ ಸಹವರ್ತಿ ಅದೇನೋ ಕನಸು ಕಂಡಿರಬೇಕೆಂದು ಅರ್ಥೈಸಿ ಸುಮ್ಮನೆ ಒಳಗೋಗಿ ಮಲಗಿಬಿಟ್ಟರೆಮರುದಿನ ಸುದ್ದಿಯಾಗುತ್ತದೆ. ಹಿಂದಿನ ರಾತ್ರಿ ಅದೆಲ್ಲೋ ದೂರದ ಫಿಜಿ ದೇಶದಲ್ಲಿ ಭೂಕಂಪನವಾಗಿದೆ, ನೂರಾರು ಮಂದಿ ಸಾವನ್ನಪ್ಪಿ, ಹಲವಾರು ಮಂದಿ ಮನೆಮಠಗಳನ್ನು ಕಳೆದುಕೊಂಡಿದ್ದಾರೆ ಎಂದು!

ಆಶ್ಚರ್ಯವಲ್ಲವೇ?

ಇದು ಕತೆಯೆಂದೆನ್ನಿಸಬಹುದು. ಆದರೆ ಕತೆಯಂತಿರುವ ಈ ಪವಾಡ ನಿಜವಾಗಿಯೂ ನಡೆದಿರುವಂತಹುದೇ. ಅಂದ ಹಾಗೆ ಸಾವಿರಾರು ಮೈಲಿಗಳ ದೂರದಲ್ಲಿ ನಡೆದ ಆ ದುರ್ಘಟನೆಯನ್ನು ತನ್ನ ದಿವ್ಯ ದೃಷ್ಟಿಯಿಂದಲೇ ಗ್ರಹಿಸಿಕೊಂಡಿದ್ದ ಆ ಅದ್ಭುತ ತರುಣಸನ್ಯಾಸಿ ಯಾರು ಗೊತ್ತೆ? ಅದು ಬೇರಾರು ಅಲ್ಲ… ಹಿಂದೂ ಧರ್ಮದ ಬೋರ್ಗರೆವ ಸಮುದ್ರದಂತಿದ್ದ ಸ್ವಾಮೀ ವಿವೇಕಾನಂದ!

 ಹೌದು, ಸ್ವಾಮಿ ವಿವೇಕಾನಂದರೆಂದರೆ ನಮಗೆ ನೆನಪಾಗುವುದು ಬರೇ ಚಿಕಾಗೋ ಕಾನ್ಫೆರೆನ್ಸ್! ಸ್ವಾಮೀ ವಿವೇಕಾನಂದರೆಂದರೆ ನಮ್ಮ ಅರಿವಿಗೆ ಬರುವುದು ಅದೇ ಅವರ ‘ಸಹೋದರ ಸಹೋದರಿಯರೇ’ಎಂಬ ಭಾಷಣದ ಪ್ರಾರಂಭಿಕ ಸಾಲುಗಳು! ಇದುನಮಗೆ ವಿವೇಕಾನಂದರನ್ನು ಶಾಲಾ ಪಠ್ಯ ಪರಿಚಯಿಸಿದ ಫಲ! ಆದರೆ ಪರಮಹಂಸರೆಂಬ ದೇವಮಾನವನ ಗರಡಿಯಲ್ಲಿ ಪಳಗಿದ ಸ್ವಾಮೀ ವಿವೇಕಾನಂದ ಎನ್ನುವ ಸಂತನೋರ್ವ ಕೇವಲ ಇಷ್ಟು ಮಾತ್ರವೇ ಅಲ್ಲದೆ ಅದರಾಚೆಗೂ ಬೆಳೆದು ನಿಂತಿದ್ದ,ಆತನನೋರ್ವ ಯೋಗಿಯಾಗಿದ್ದ ಎಂಬದುನ್ನು ಕೂಡ ನಾವು ಅರಿಯಲೇಬೇಕಿದೆ.

ಹಿಂದೂ ಧರ್ಮದ ಶ್ರೇಯವನ್ನು ಬಯಸಿ ಅದರೆ ಉನ್ನತ್ತೀಕರಣಕ್ಕೆ ಕಾರಣರಾದವರು ಯಾರೆಂಬ ಪ್ರಶ್ನೆಯಿದ್ದರೆ ಬಹುಷಃ ಅದಕ್ಕೆ ಹಲವಾರು ಸಂತರುಗಳ, ಋಷಿಮುನಿಗಳ ಹೆಸರು ದೊರೆಯಬಹುದು. ಆದರೆ ಸನಾತನ ಧರ್ಮದ ಕೀರ್ತಿ ಪತಾಕೆಯನ್ನುಪಶ್ಮಿಮದ ಕಡಲಾಚೆಗೂ ಪಸರಿಸಿದ ವ್ಯಕ್ತಿ ಯಾರು ಎಂದು ಕೇಳಿದರೆ ಬಹುಷಃ ಅದಕ್ಕೆ ಇರುವ ಉತ್ತರವೊಂದೇ ಅದು ಸ್ವಾಮೀ ವಿವೇಕಾನಂದ ಎಂದು! ಸಮುದ್ರ ಪಯಾಣವನ್ನೇ ನಿಷೇಧ ಮಾಡಿದ್ದ ಹಿಂದೂ ಧರ್ಮದ ಆ ಕಾಲಘಟ್ಟದಲ್ಲೂ ಧರ್ಮದ ಕಂಪನ್ನುಇಡೀ ವಿಶ್ವಕ್ಕೆ ಹಬ್ಬಿಸಬೇಕು, ಆ ಮೂಲಕ ಭಾರತದ ಕೀರ್ತಿ ಪತಾಕೆಯನ್ನು ಹಾರಿಸಬೇಕು ಎಂಬ ಏಕೈಕ ದೃಷ್ಟಿಯಿಂದ ಹಡಗನ್ನು ಏರಿ ಪಶ್ಮಿಮ ರಾಷ್ಟ್ರಗಳಿಗೆ ತೆರಳಿ ಎಳೆಎಳೆಯಾಗಿ ಹಿಂದೂ ಧರ್ಮದ ನೈಜ ಸಾರಂಶವನ್ನು ಬಿಡಿಸಿಟ್ಟ ವಿವೇಕಾನಂದರಎದೆಗಾರಿಕೆಯಿದೆಯಲ್ಲ ಅದನ್ನು ಈ ಭಾರತ ಎಂದಿಗೂ ಮರೆಯಬಾರದು. ಕೇವಲ ಭಾರತೀಯತೆಗಾಗಿಯೇ ಬದುಕಿದ ಇವರ ಜೀವನ ಒಂದು ಅದ್ಭುತವೇ ಸರಿ. ಮರಣವಂತೂ ಇನ್ನೂ ಪವಾಡವೇ!

ನಿಮಗೂ ನೆನಪಿರಬಹುದು. ಅಂದು ಚಿಕಾಗೋದಲ್ಲಿ ನಡೆದ ಧಾರ್ಮಿಕ ಸಮ್ಮೇಳನದಲ್ಲಿ ಹತ್ತು ಹಲವಾರು ಪ್ರಖರ ಪಂಡಿತರು ಬಂದಿದ್ದರು. ಎತ್ತರದ ವೇದಿಕೆಯ ಒಂದು ಬದಿಯಲ್ಲಿ ಬೇರೆ ಬೇರೆ ಧರ್ಮದ ಗ್ರಂಥಗಳನ್ನ ಕೂಡ ಒಂದರ ಮೇಲೊಂದರಂತೆಜೋಡಿಸಿದ್ದರು. ಆದರೆ ಸನಾತನ ಧರ್ಮವೆಂದರೆ ಬರೇ ಮೌಢ್ಯದ ಕತೆಯೆಂದರಿತಿದ್ದ ಅಮೇರಿಕನ್ನರು ಸಹಜವಾಗಿಯೇ ಪವಿತ್ರ ಭಗವದ್ಗೀತೆಗೆ ಯಾವುದೇ ಸ್ಥಾನಮಾನ ನೀಡದೆ ಅದನ್ನು ಪುಸ್ತಕಗಳ ರಾಶಿಯ ತಲಭಾಗದಲ್ಲಿ ಇಟ್ಟಿದ್ದರು! ಎಲ್ಲ ಗಣ್ಯರಭಾಷಣದ ಬಳಿಕ ವೇದಿಕೆ ಏರಿದ ವಿವೇಕಾನಂದರು ಮಾಡಿದ್ದೇನು ಗೊತ್ತೆ? ಪುಸ್ತಕದ ಜೋಡಣೆಯ ಅಡಿಯಲ್ಲಿ ಬಿದ್ದುಕೊಂಡಿದ್ದ ಪವಿತ್ರ ಭಗವದ್ಗೀತೆಯ ಗ್ರಂಥವನ್ನು ಏಕಾಏಕಿ ಹಿಡಿದೆಳೆದದ್ದು! ನೋಡು ನೋಡುತ್ತಿದ್ದಂತೆ ಪುಸ್ತಕಗಳ ರಾಶಿ ವೇದಿಕೆ ಮೇಲೆಲ್ಲಾಚೆಲ್ಲಾಪಿಲ್ಲಿಯಾಗಿ ಬಿದ್ದೋಯಿತು! ಅನಾಗರಿಕ ದೇಶದ ವ್ಯಕ್ತಿಯೋರ್ವನಿಂದ ಅನುಚಿತ ವರ್ತನೆ ಎಂದು ಸಭೀಕರು ಅಂದುಕೊಂಡರೆ, ಅಲ್ಲಿಂದಲೇ ಮಾತಿಗೆ ನಿಂತ ವಿವೇಕಾನಂದರು ‘ನೋಡಿ ಸನಾತನ ಧರ್ಮದ ಶ್ರೇಷ್ಠತೆಯೇ ಇದು. ಸನಾತನ ಧರ್ಮವುಎಲ್ಲಾ ಧರ್ಮಗಳಿಗೂ ಆಧಾರ ಸ್ತಂಭದಂತಿದೆ. ಇದೀಗ ನೀವೇ ನೋಡಿದಂತೆ ಯಾವಾಗ ಸನಾತನ ಧರ್ಮವು ಅಲುಗಾಡುತ್ತದೋ ಅಂದೇ ಮಿಕ್ಕೆಲ್ಲಾ ಧರ್ಮಗಳು, ಧರ್ಮಗ್ರಂಥಗಳು ತರಗೆಲೆಗಳ ಹಾಗೆ ಉದುರಿ ಹೋಗಲಿದೆ’ ಎಂದು ಮಾರ್ಮಿಕವಾಗಿನುಡಿದು ಸಭೆಯನ್ನು ಮತ್ತಷ್ಟು ತಬ್ಬಿಬ್ಬುಗೊಳಿಸಿದರು! ಅಂದು ಭಾಷಣದುದ್ದಕ್ಕೂ ಅವರು ಎತ್ತಿಹಿಡಿದದ್ದು ಸನಾತನ ಧರ್ಮ ಅದೇಗೆ ಭಿನ್ನ ಅದೇಗೆ ‘ಸನಾತನ’ವೆಂಬ ಶ್ರೇಷ್ಟ ವಿಚಾರಗಳನ್ನು. ಇವರ ವಾಕ್ಝರಿಗೆ ಜನ ಅದೆಷ್ಟು ಮನಸೋತಿದ್ದರೆಂದರೆ ನಡೆದಅಷ್ಟೂ ದಿನಗಳ ಕಾರ್ಯಕ್ರಮದಲ್ಲಿ ಜನ ಕೇವಲ ಸ್ವಾಮೀ ವಿವೇಕಾನಂದರ ಮಾತು ಕೇಳಲೆಂದೇ ಬರುವ ಹಾಗಾಗಿತ್ತು! ಭಾರತದ ಪಕೀರನೋರ್ವನ ಸುದ್ದಿ ಅಮೇರಿಕಾದ ಪತ್ರಿಕೆಗಳ ಮುಖಪುಟಗಳಲ್ಲ್ಲೂ ರಾರಾಜಿಸುವಂತಾಗಿತ್ತು! ಒಟ್ಟಿನಲ್ಲಿಸರ್ವಶ್ರೇಷ್ಟವಾದ ಧರ್ಮವೊಂದು ಭಾರತದಲ್ಲಿ ಸುಪ್ತವಾಗಿದೆ ಎಂಬುದು ಪಶ್ಮಿಮದ ನಾಡಿಗಳಲ್ಲೂ ಮಿಡಿಯುವಂತಾದದ್ದು ಅಂದಿನ ವಿಶೇಷ. ವಿವೇಕಾನಂದರು ಬೀರಿದ ಪ್ರಭಾವ ಅದೆಷ್ಟಿತ್ತೆಂದರೆ ಅಮೇರಿಕಾದ ‘ದ ನ್ಯೂಯಾರ್ಕ್ ಹೆರಾಲ್ಡ್’ ಎಂಬ ಸುಪ್ರಸಿದ್ಧದಿನ ಪತ್ರಿಕೆಯು ಕೂಡ‘ವಿವೇಕಾನಂದರ ಮಾತುಗಳನ್ನು ಕೇಳಿದರೆ ಭಾರತದಂತಹ ಬೌದ್ಧಿಕ ಶ್ರೀಮಂತಿಕೆಯ ನಾಡಿಗೆ ಕ್ರ್ಯೆಸ್ತ ಮಿಷನರಿಗಳನ್ನು ಕಳುಹಿಸುತ್ತಿರುವ ನಾವೇ ಮೂರ್ಖರುಗಳು’ ಎಂದು ಬರೆದು ಗೌರವವನ್ನರ್ಪಿಸಿತ್ತು!

ವಿವೇಕಾನಂದರೊಬ್ಬರು ಅದ್ಭುತ ವ್ಯಕ್ತಿ ಎಂಬುದು ನಿಸ್ಸಂಶಯ. ಸಣ್ಣ ಬಾಲಕನಾಗಿದ್ದಾಗಲೇ ಆಧ್ಯಾತ್ಮದ ಕಡೆಗೆ ಎಳೆಸಿಕೊಂಡಿದ್ದ ಇವರು ಜೀವನದುದ್ದಕ್ಕೂ ಹುಡುಕಾಡಿದ್ದು ಸತ್ಯದ ದಾರಿಯನ್ನು. ನೀಡಿದ್ದು ನಿಸ್ವಾರ್ಥ ಸೇವೆಯನ್ನು.‘ದೇವರನ್ನುಕಂಡಿದ್ದೀರಾ’ಎಂಬ ತನ್ನ ಬಾಲ್ಯದ ಪ್ರಶ್ನೆಗೆ ತೃಪ್ತಿದಾಯಕ ಉತ್ತರ ನೀಡಿದ ಶ್ರೀ ಪರಮಹಂಸರನ್ನು ಜೀವನ ಮಾರ್ಗದ ಪರಮ ಗುರುವಾಗಿ ಸ್ವೀಕರಿಸಿಕೊಂಡ ಇವರು ಆ ಬಳಿಕ ಇಟ್ಟ ಹೆಜ್ಜೆಗಳೆಲ್ಲಾ ಒಂದೊಂದು ಮೈಲಿಗಲ್ಲುಗಳೇ. ಇವರ ಬೌದ್ಧಿಕ ತಾಕತ್ತುಅದೆಷ್ಟಿತ್ತು, ಇವರ ಸನಾತನ ಪ್ರೇಮ ಅದೆಷ್ಟಿತ್ತು ಎಂಬುದನ್ನು ಅರಿಯಬೇಕಾದರೆ ಇವರ ಒಂದೆರಡು ಭಾಷಣಗಳನ್ನೋ ಇಲ್ಲವೇ ವೈಚಾರಿಕ ಲೇಖನಗಳನ್ನು ಓದಲೇ ಬೇಕು. ಬ್ರಹ್ಮಚರ್ಯವನ್ನು ಪರಿಶುದ್ಧ ಮನಸಿನಿಂದ ಯಾರು ಒಪ್ಪಿ ಅನುಸರಿಸುತ್ತಾರೊಅದರಿಂದ ಪರಿಪಕ್ವ ಮನಸ್ಸು ಹಾಗೂ ಪ್ರಬಲ ಜ್ಞಾಪಕ ಶಕ್ತಿ ಕಂಡಿತಾ ಹೊಂದಬಹುದು ಎಂಬುದು ಇವರು ಸಾರಿದ ಮತ್ತೊಂದು ನಿಗೂಢ ಸತ್ಯ.

ಒಮ್ಮೆ ‘ಬ್ರಿಟನಿಕಾ ಎನ್‍ಸೈಕ್ಲೋಪೀಡಿಯಾದ’ ಹತ್ತು ಸಂಪುಟಗಳನ್ನು ಬೇಲೂರು ಆಶ್ರಮಕ್ಕೆ ತರಲಾಗಿತ್ತು. ಮತ್ತೊಂದರೆಡು ದಿನ ಬಿಟ್ಟು ಹನ್ನೊಂದನೇ ಸಂಪುಟವನ್ನು ಕೂಡ ತರಿಸಿಕೊಂಡರು! ಇದನ್ನು ಕಂಡ ಆಶ್ರಮದ ಸನ್ಯಾಸಿಗಳು ಇಷ್ಟೊಂದು ಗಾತ್ರದಈ ಸಂಪುಟಗಳನ್ನು ಓದಿ ಮುಗಿಸಲು ಒಂದು ಜೀವನ ಸಾಕಾದೀತೇ ಎಂದು ಉದ್ಗರಿಸಿದಾಗ ವಿವೇಕಾನಂದರು ಅದ್ಯಾಕೆ ಹಾಗೆ ಹೇಳುತ್ತೀರಾ…? ನಾನು ಅದಾಗಲೇ ಹತ್ತು ಸಂಪುಟಗಳನ್ನು ಓದಿ ಮುಗಿಸಿದ್ದೇನೆ. ಇದೀಗ ಹನ್ನೊಂದನೇ ಸಂಪುಟಕ್ಕೆಕೈಯಿಟ್ಟಿದ್ದೇನೆ ಎನ್ನುತ್ತಾರೆ! ನಂಬದ ಅವರು ಅನುಯಾಯಿಗಳು ಪರೀಕ್ಷಿಸುವ ಸಲುವಾಗಿ ಹತ್ತು ಸಂಪುಟಗಳ ಒಂದೊಂದು ಪುಸ್ತಕಳಿಂದ ಬಲು ಕ್ಲಿಷ್ಟಕರವಾಗಿರುವ ವಿಚಾರವನ್ನೇ ಎತ್ತಿ ಪ್ರಶ್ನಿಸಲು ವಿವೇಕಾನಂದರು ಸಲೀಸಾಗಿಯೇ ಉತ್ತರಿಸಿದರಲ್ಲದೆ ಅದುಯಾವ ಪುಸ್ತಕದ ಎಷ್ಟನೇ ಪುಟದಲ್ಲಿದೆ ಎಂಬುದನ್ನೂ ಹೇಳಿ ಆಶ್ಚ್ಯರ್ಯಗೊಳಿಸಿದರು! ಇನ್ನೊಂದು ಬಾರಿ ವಿವೇಕಾನಂದರು ಮೇರಠ್‍ನಲ್ಲಿ ತನ್ನ ಜತೆಗಾರ ಹಾಗೂ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರಾದ ಸ್ವಾಮಿ ಅಖಂಡಾನಂದರಲ್ಲಿ ಹತ್ತಿರದಗ್ರಂಥಾಲಯದಿಂದ ಸರ್ ಜಾನ್ ಲಬೋಕ್ ಬರೆದಿರುವ ಗ್ರಂಥಗಳನ್ನು ತರುವಂತೆ ಹೇಳುತ್ತಾರೆ. ಸ್ವಾಮಿ ಅಖಂಡಾನಂದರು ಪ್ರತೀ ದಿನವೂ ಸರ್‍ಜಾನ್ ಲಬೋಕ್‍ರ ಒಂದೊಂದು ಪುಸ್ತಕಗಳನ್ನು ತಂದೊಪ್ಪಿಸುತ್ತಾರೆ. ದಿನವೊಂದಕ್ಕೆ ಒಂದು ದೊಡ್ಡಪುಸ್ತಕವನ್ನು ಓದಿ ಮುಗಿಸಿ ವಾಪಾಸು ನೀಡುತ್ತಿದ್ದುದನ್ನು ಗಮನಿಸಿದ ಆ ಗ್ರಂಥಾಲಯದ ಮುಖ್ಯಸ್ಥನೊಬ್ಬ ಪುಸ್ತಕವನ್ನೇಕೆ ಶೋಕಿಗೆ ಕೊಂಡೋಗುತ್ತಿದ್ದೀರಾ ಎಂದು ವ್ಯಂಗ್ಯವಾಗಿ ಕೇಳಲು, ಸ್ವತಃ ವಿವೇಕಾನಂದರೆ ಗ್ರಂಥಾಲಯಕ್ಕೆ ತೆರಳಿ ಆ ಮುಖ್ಯಸ್ಥನಲ್ಲಿ‘ನಾನು ಒಂದೇ ಬಾರಿಗೆ ಒಂದು ಪುಸ್ತಕವನ್ನ ಓದಿ ಅರ್ಥೈಸಬಲ್ಲೆ. ನಿಮಗೆ ಆ ಬಗ್ಗೆ ಸಂಶಯವಿದ್ದರೆ ನಾನು ಕೊಂಡೊಯ್ಯೊದ ಅದ್ಯಾವುದೇ ಪುಸ್ತಕದ ಅದ್ಯಾವುದೇ ಪುಟದ ಪ್ರಶ್ನೆಯನ್ನು ಬೇಕಾದರೂ ಕೇಳಿ ನೋಡಿ ಎನ್ನುತ್ತಾರೆ. ತಬ್ಬಿಬ್ಬಾದ ಮುಖ್ಯಸ್ಥ ಹಾಗೇಮಾಡಲು ವಿವೇಕಾನಂದರಿಂದ ಕೇವಲ ಉತ್ತರ ಮಾತ್ರವೇ ಅಲ್ಲದೆ ಅದಕ್ಕೆ ಬೇಕಾದ ಟಿಪ್ಪಣಿ,ವಿವರಣೆಗಳೆಲ್ಲಾ ದೊರೆಯುತ್ತದೆ!! ಒಬ್ಬ ಸಾಮಾನ್ಯ ಮನುಷ್ಯನಿಂದ ಇದೆಲ್ಲಾ ಸಾಧ್ಯವೇ ಖಂಡಿತಾ ಇದಕ್ಕೆ ದೈವೀಕತೆ ಬೇಕು ಇದು ನಿಮ್ಮಿಂದ ಹೇಗೆ ಸಾಧ್ಯಎಂದು ಕೇಳಲು, ನಾನು ಪುಸ್ತಕವನ್ನು ಶಬ್ದ ಶಬ್ದಗಳಿಂದ ಓದಲಾರೆ ಬದಲಾಗಿ ವಾಕ್ಯಗಳಿಂದ ಓದುತ್ತೇನೆ, ಕೆಲವೊಮದು ಬಾರಿ ಪ್ಯಾರ ಪ್ಯಾರಗಳಿಂದಲೇ ಓದುತ್ತೇನೆ ಎಂದುತ್ತರಿಸುತ್ತಾರೆ! ಶುದ್ಧ ಬ್ರಹ್ಮಚರ್ಯವೇ ಇದರ ಹಿಂದಿರುವ ರಹಸ್ಯ ಎನ್ನುತ್ತಾರವರು.

ಇನ್ನು ಇವರ ಮರಣದ ವಿಚಾರ ಮತ್ತಷ್ಟು ನಿಗೂಢವಾಗಿರುವಂತಹುದು. ಸರಿಸಮಾರು 1896ರಲ್ಲಿ ತನ್ನ ಸಹವರ್ತಿ ಸನ್ಯಾಸಿ ಸ್ವಾಮಿ ಅಭೇದಾನಂದರೊಡನೆ ಮಾತನಾಡುತ್ತಾ ನನ್ನ ಆತ್ಮ ನಿರಂತರ ಬೆಳೆಯುತ್ತಿದೆ ಆದ್ದರಿಂದ ಯಾವುದೇ ಕಾರಣಕ್ಕೂ40ವರ್ಷದ ಆಚೆಗೆ ನನ್ನೀ ಆತ್ಮ  ದೇಹಧಾರಿಯಾಗಿರದು ಎಂದೆನ್ನುತ್ತಾರೆ. ಅದೇ ರೀತಿ ಮುಂದೆ 1902ರ ಜುಲೈ 4ರಂದು ಸಂಜೆ ಏಳು ಗಂಟೆಗೆ ತನ್ನ ಜತೆಗಾರನನ್ನು ಕರೆದು ನಾನು ಕರೆಯುವವರೆಗೆ ಯಾರೂ ಕೂಡ ನನ್ನ ಕೊಠಡಿಗೆ ಬರಬಾರದುಎಂದ್ಹೇಳಿ ಕೊಠಡಿಗೆ ತೆರಳಿ ಸರಿ ಸುಮಾರು ಒಂದು ಗಂಟೆಗಳ ಕಾಲ ಧ್ಯಾನದ ಮೂಲಕ ದಿವ್ಯ ಸಮಾಧಿಗೆ ಹೋಗುತ್ತಾರೆ. ಬಳಿಕ ತನ್ನ ಸಹವರ್ತಿ ಸನ್ಯಾಸಿಗಳನ್ನು ಕರೆದು ಕೊಠಡಿಯ ಎಲ್ಲಾ ದ್ವಾರಗಳನ್ನು ತೆರೆಯುವಂತೆ ಹೇಳಿ ಅಲ್ಲೇ ಹಾಸಿಗೆ ಮೇಲೆಮಲಗಿ ಮತ್ತೆ ತಮ್ಮ ಕಣ್ಣುಗಳನ್ನು ಭ್ರೂಮಧ್ಯೆಗೆ ಎಳೆದು ಕೊಂಡು ಸಮಾಧೀ ಸ್ಥಿತಿಗೆ ತೆರಳುತ್ತಾರೆ. ದಿವ್ಯ ಚೇತನದಂತೆ ಕಂಡು ಬರುತ್ತಿದ್ದ ಸ್ವಾಮಿಯ ಮಂದಸ್ಮಿತ ಮುಖದಲ್ಲಿ ಆ ಬಳಿಕ ಮೂಗಿನ ಹೊಳ್ಳೆಗಳಿಂದ  ಹಾಗೂ ಕಣ್ಣುಗಳಿಂದ ರಕ್ತ ಜಿನುಗಲುಪ್ರಾರಂಭವಾಗುತ್ತದೆ! ಹೆದರಿದ ಸನ್ಯಾಸಿಗಳು ವಿವೇಕಾನಂದರನ್ನು ಕರೆದರೆ  ಅವರು ಅದಾಗಲೇ ಪಂಚಭೂತಗಳಲ್ಲಿ ಅಂತರ್ಗತವಾಗಿರುತ್ತಾರೆ!

ಒಟ್ಟಿನಲ್ಲಿ ಈ ಮೊದಲೇ ಹೇಳಿದಂತೆ ಅವರು ತನ್ನ 39ನೇ ವಯಸ್ಸಿನಲ್ಲಿ ದೇಹವನ್ನು ತನ್ನದೇ ಇಚ್ಚೆಯೆಂಬಂತೆ ತ್ಯಜಿಸಿದ್ದರು!ವೈಜ್ಞಾನಿಕ ಪರಿಭಾಷೆಯಲ್ಲಿ ಇದು ಹೃದಯಘಾತವಾಗಿದ್ದರೂ ಅದೇಗೆ ತನ್ನ ಇಚ್ಛೆಯಂತೆ ಹೃದಯಘಾತಗೊಳಿಸಿದರು ಎಂಬುದೇಇಲ್ಲಿ ಕಾಡುವ ಪ್ರಶ್ನೆ!

ಹೌದು, ಇಡೀ ಜಗತ್ತನ್ನೇ ಅರಿತಿದ್ದ ಸ್ವಾಮಿ ವಿವೇಕಾನಂದರನ್ನು ಈ ಜಗತ್ತು ಅರಿತಿರುವುದು ಅಲ್ಪವಷ್ಟೇ! ಅವರ ಗಾಂಭೀರ್ಯದ ಮಾತುಗಳು, ವೇದ-ವೇದಾಂತಗಳ ಮೇಲೆ ಅವರು ಹೊಂದಿದ್ದ ಹಿಡಿತ ಎಲ್ಲಕ್ಕಿಂತ ಹೆಚ್ಚಾಗಿ ಸನಾತನ ಧರ್ಮವುಶೇಷ್ಟವಾದದ್ದು ಎಂಬ ಅವರ ಬಲವಾದ ನಂಬುಗೆಗಳೆಲ್ಲವೂ ಇಂದು ನಮಗೆ ಮುಸುಕುಮುಸಕಾಗಿಯೇ ಗೋಚರಿಸುತ್ತಿದೆ! ಭಾರತವೆಂದರೆ ಹಾವಾಡಿಗರ ನಾಡು, ಭಿಕ್ಷುಕರ ಭೂಮಿ ಎಂದರಿತಿದ್ದ ಪಾಶ್ಚಾತ್ಯ ಜಗತ್ತಿಗೆ ಭಾರತವೆಂದರೆ ಭೌದ್ಧಿಕ ಧೀಮಂತಿಕೆಯಶ್ರೇಷ್ಠ ನಾಡು, ಜಗದ್ಗುರುವಿನ ಸ್ಥಾನದಲ್ಲಿರುವ ಪವಿತ್ರ ಭೂಮಿ ಎಂಬುದನ್ನು ಸಾರಿದವರು ಈ ನಮ್ಮ ವಿವೇಕಾನಂದರು!

ಭಾರತದ ಶ್ರೇಷ್ಟತೆಯನ್ನು ಈ ಪರಿಯಲ್ಲಿ ಜಗತ್ತಿಗೇ ಪಸರಿಸಿದ ಈ ಸಂತನ ಜನ್ಮದಿನವಿಂದು(ಜನವರಿ 12). ಅದನ್ನು ಸ್ಮರಿಸಲೋಸುಗವೇ ಈ ಒಂದು ಪ್ರಯತ್ನ.

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!