ಪ್ರಚಲಿತ

ಇದಕ್ಕೆಯೇ ಹೇಳುವುದು ೫೬ ಇಂಚಿನ ಗಟ್ಟಿ ಗುಂಡಿಗೆ ಇರಬೇಕೆಂದು…

Fotor_143419283146223

ಇತಿಹಾಸವನ್ನೊಮ್ಮೆ ಕೆದಕೋಣ. ನಾವು ಭಾರತೀಯರು ಯಾರ ಮೇಲೂ ದಂಡೆತ್ತಿ ಹೋದವರಲ್ಲ. ಹಾಗಂತ ಶತ್ರುಗಳ ಮುಂದೆ ಮಂಡಿಯೂರಿದವರೂ ಅಲ್ಲ. ಬಹಳ ಹಿಂದೆ ಚೀನಾಕ್ಕೆ ಹೋಗಿ ನಮ್ಮ ಭದ್ರತಾ ರಹಸ್ಯವನ್ನು ಬಿಟ್ಟು ಕೊಟ್ಟವರೂ ನಾವೇ, ಕಾಶ್ಮೀರವನ್ನು ಆಕ್ರಮಿಸಿದ ಪಾಕಿಸ್ತಾನವನ್ನು ಹೆಡೆಮುರಿಕಟ್ಟಿ ನಾಯಿಮರಿಗಳ ಹಾಗೆ ಕುಂಯ್ಗುಟ್ಟಿಸಿ ಬಡಿದೋಡಿಸಿದ್ದೂ ನಾವೇ. ನಮ್ಮ ತಂಟೆಗೆ ಬಂದರೆ ವಿರೋಧಿಗಳನ್ನು ಬಗ್ಗುಬಡಿಯುವವರೆಗೂ ಬಿಡುವ ಜಾಯಮಾನ ನಮ್ಮದಲ್ಲ. ಅದು ನಮ್ಮ ಶಕ್ತಿ ಹಾಗೂ ವಿಶೇಷತೆ. !!

ಹೌದು… ಮತ್ತೊಮ್ಮೆ ಇಡೀ ದೇಶವೇ ಹೆಮ್ಮೆ ಪಡುವ ಕೆಲಸವನ್ನು ನಮ್ಮ ಸೈನಿಕರು ಮಾಡಿದ್ದಾರೆ. ಕೆಲವೇ ದಿನಗಳ ಹಿಂದೆ ಮಣಿಪುರದಲ್ಲಿ ನಮ್ಮ ೧೮ ವೀರ ಸೈನಿಕರ ಪ್ರಾಣವನ್ನು ತೆಗೆದ ಉಗ್ರರ ಪಡೆ ಮಾಯನ್ಮಾರ್ ನಲ್ಲಿರುವ ಖಚಿತ ಮಾಹಿತಿ ನಮ್ಮ ಸೈನಿಕರಿಗೆ ಬಂದಿತ್ತು. ಮೊದಲೇ ತಮ್ಮ ಸಹೋದ್ಯೋಗಿಗಳನ್ನು ಕಳೆದುಕೊಂಡು ರಕ್ತ ಕುದಿಯುತ್ತಿತ್ತು ನೋಡಿ ನಮ್ಮ ಸೈನಿಕ ಸಹೋದರರಿಗೆ. !! ಪಾಕಿಸ್ತಾನಕ್ಕೆ ನುಗ್ಗಿ ಅಮೇರಿಕಾ ಸೇನೆ ಒಸಾಮಾ ಬಿನ್ ಲಾಡೆನ್ ನನ್ನು ಹೊಸಕಿ ಹಾಕಿದಂತೆಯೇ ಭಾರತೀಯ ಸೈನಿಕರು ಮ್ಯಾನ್ಮಾರ್ ಗಡಿಯೊಳಗೆ ನುಗ್ಗಿ ಅಲ್ಲಿ ಅಡಗಿ ಕೂತಿದ್ದ ನಾಗಾ ಉಗ್ರರನ್ನು ಸದೆಬಡಿದಿದ್ದಾರೆ. ದುರುಳರನ್ನು ಬಲಿ ಪಡೆದು ತಮ್ಮ ಒಂದು ಕೂದಲೂ ಅಲುಗಾಡದಂತೇ ವಾಪಸಾಗಿ ಬಂದು ಭಾರತೀಯರ ಸ್ವಾಭಿಮಾನವನ್ನು ವಿಶ್ವಕ್ಕೇ ತೋರಿಸಿಕೊಟ್ಟಿದ್ದಾರೆ ನಮ್ಮ ಸೈನಿಕರು.

ಕಾಂಗ್ರೆಸ್ ಸರಕಾರವಿದ್ದಾಗ ಭಾರತ-ಪಾಕಿಸ್ತಾನ ಗಡಿಯಲ್ಲಿ ಪಾಕಿಸ್ತಾನದ ಪ್ರಾಯೋಜಕತ್ವದಲ್ಲಿ ಭಯೋತ್ಪಾದಕರು ಅದೆಷ್ಟು ಭಾರಿ ಗುಂಡಿನ ಸುರಿಮಳೆಗೈದು ಅಮಾಯಕರ ರಕ್ತ ಹೀರಿದ್ದರೋ ದೇವರೇ ಬಲ್ಲ. ಪಾಕ್ ಸೈನಿಕರು ಅದೆಷ್ಟು ಭಾರಿ ಕದನ ವಿರಾಮ ಉಲ್ಲಂಘಿಸಿ ಸೇನಾ ನೆಲೆಗಳ ಮೇಲೆ ದಾಳಿ ನಡೆಸಿದ್ದರೋ?? ಇದೆಲ್ಲಾ ಬಿಡಿ.. ಯೋಧರ ತಲೆಗಳನ್ನು ಚೆಂಡಾಡಿ ಗಡಿಯಲ್ಲಿ ತಂದಿಟ್ಟರೂ, ಭಾರತೀಯರ ರಕ್ತ ಕುದಿದಿದ್ದರೂ ಅಂದಿನ ಪ್ರಧಾನಿ ಹಾಗೂ ಗೃಹ ಮಂತ್ರಿಗಳು ಮಾತ್ರ ಮೆದು ಧ್ವನಿಯಲ್ಲಿ ಮಾತನಾಡಿ ಕೈ ತೊಳೆದುಕೊಂಡಿದ್ದರು. ಸೇನೆಗೆ ಸೇರುವುದು ದೇಶಕ್ಕಾಗಿ ಹೋರಾಡುವುದಕ್ಕಾಗಲ್ಲ, ಪ್ರಾಣ ನೀಡುವುದಕ್ಕಾಗಿ ಎಂಬ ಅಭಿಪ್ರಾಯ ಜನರಲ್ಲಿ ಮೂಡಿತ್ತು. ಗುಳ್ಳೆನರಿಗಳಂತೆ ನಮ್ಮ ಸೈನಿಕರ ಮೇಲೆರಗಿ ಅಮಾನವೀಯ ರೀತಿಯಲ್ಲಿ ಅವರ ಬಲಿಯನ್ನು ಪಡೆದ ರೀತಿಯನ್ನು ಗಮನಿಸಿದರೆ ಯಾರಿಗಾದರೂ ರೋಷ ಉಕ್ಕಿ ಬಾರದೇ ಇರಲಾರದು. ಆದರೆ ಈಗಿನ ಸರಕಾರ ಘಟನೆಯನ್ನು ಬರೇ ಮೇರು ಧ್ವನಿಯಲ್ಲಿ ಖಂಡಿಸಿ ಸುಮ್ಮನಾಗಲಿಲ್ಲ. ತಕ್ಷಣವೇ ಕಾರ್ಯವೃತ್ತರಾದ ೫೬ ಇಂಚಿನ ಗಟ್ಟಿ ಗುಂಡಿಗೆಯ ಪ್ರಧಾನಿ ಹಾಗೂ ರಕ್ಷಣಾ ಸಚಿವ ಪಾರಿಕ್ಕರ್ , ಗೃಹ ಸಚಿವ ರಾಜನಾಥ್ ಸಿಂಗ್, ರಾಷ್ಟ್ರೀಯ ಭದ್ರತಾ ಸಲಹೆಗಾರರು ಹಾಗೂ ಸೇನಾ ಮುಖ್ಯಸ್ಥ ದಲ್ಬೀರ್ ಸಿಂಗ್ ಸುಹಾಗ್  ಪ್ರತಿದಾಳಿಯ ರೂಪುರೇಷೆಗಳನ್ನು ಸಿದ್ಧಪಡಿಸಿದರು. ಸೈನಿಕರು ಭಾರತದ ವಿಜಯ ಪತಾಕೆಯನ್ನು ಹಾರಿಸಿದರು.

ಯಾವಾಗ ಮ್ಯಾನ್ಮಾರ್ ಆಪರೇಶನ್ ಯಶಸ್ವಿಯಾಯಿತೋ ಭಾರತದಲ್ಲಿ ವಿಧ್ವಂಸಕ ಕೃತ್ಯಗಳನ್ನ ಮಾಡಿಸಿ ತನ್ನ ನೆಲದಲ್ಲಿ ಅಂತವರಿಗೆ ಆಶ್ರಯ ಕೊಡುತ್ತಿದ್ದ ಪಾಕಿಸ್ತಾನ ಒಮ್ಮೆಲೇ ಬೆಚ್ಚಿ ಬಿತ್ತು. ಎಲ್ಲಿ ತನ್ನ ಬುಡಕ್ಕೆ ಬಂದೊದಗುತ್ತೋ ಅನ್ನೋ ಭಯದಲ್ಲಿ ತನ್ನ ಸಚಿವರೊಬ್ಬರ ಮುಖಾಂತರ ಭಾರತ ಪಾಕ್ ನೆಲದಲ್ಲಿ ಈ ರೀತಿಯ ದಾಳಿಯನ್ನು ನಡೆಸಿದರೆ ಸುಮ್ಮನಿರುವುದಿಲ್ಲ ಎಂದು ಬೊಗಳಿಸುವ ಮೂಲಕ ತಾನು ಭಾರತದ ದಾಳಿಯ ಭಯದಲ್ಲಿ ಚಡ್ಡಿಯಲ್ಲಿ ಸುಸು ಮಾಡಿರುವುದನ್ನು ಪರೋಕ್ಷವಾಗಿ ಒಪ್ಪಿಗೊಂಡಿದೆ. ಎದುರುಗಡೆ ಬಂದು ಶೇಕ್ ಹ್ಯಾಂಡ್ ಮಾಡಿ ಹಿಂಬದಿಯಿಂದ ಚೂರಿ ಹಾಕುವ ಪಾಕ್ ಇಬ್ಬಗೆ ನೀತಿ ಒಡೆದು ಚೂರಾಗುವ ಕಾಲ ಬಹಳ ದೂರವೇನಿಲ್ಲ. ಇದರ ಜೊತೆಗೆ ಹಲವು ವರ್ಷಗಳಿಂದ ಭಾರತಕ್ಕೆ ಚಳ್ಳೆಹಣ್ಣು ತಿನ್ನಿಸಿ ಪಾಕಿನಲ್ಲಿ ಅಡಗಿ ಕೂತಿರುವ ಮೋಸ್ಟ್ ವಾಂಟೆಡ್ ಪಾತಕಿ, ಭೂಗತ ದೊರೆ ದಾವೂದ್ ಇಬ್ರಾಹಿಂ, ೨೬/೧೧ ಮುಂಬೈ ದಾಳಿಯ ಸೂತ್ರಧಾರಿ ರೆಹ್ಮಾನ್ ಲಖ್ವಿ ಎದೆಬಡಿತ ಹೆಚ್ಚಾಗಿದ್ದರೂ ಆಶ್ಚರ್ಯವೇನಿಲ್ಲ.!!

ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಪ್ರಧಾನಿ ಮೋದಿ ತಾವು ಕೇವಲ ವಿದೇಶ ಪ್ರವಾಸ ಮಾಡಿ ಸ್ನೇಹಹಸ್ತ ಚಾಚಲು ಮಾತ್ರ ಸಿದ್ಧರಲ್ಲ, ನಮ್ಮ ತಂಟೆಗೆ ಬಂದರೆ ಬೇರೆ ರಾಷ್ಟ್ರಕ್ಕೆ ಸೈನ್ಯವನ್ನು ಕಳುಹಿಸಿ ಶತ್ರುಗಳ ಹುಟ್ಟಡಗಿಸಲೂ ರೆಡಿ ಎಂದುದನ್ನು ಸಾಬೀತುಪಡಿಸಿದ್ದಾರೆ. ಈ ದಾಳಿಯ ಮೂಲಕ ಭಯೋತ್ಪಾದನಾ ನಿರ್ಮೂಲನೆಯಲ್ಲಿ ಮೋದಿಯವರ ರೂಪುರೇಷೆಗಳೇನು ಎಂಬ ದ್ವಂದ್ವದಲ್ಲಿದ್ದ ಪ್ರತಿಯೊಬ್ಬ ನಾಗರೀಕನಿಗೂ ಒಂದು ಸ್ಪಷ್ಟ ಸಂದೇಶ ರವಾನೆಯಾಗಿರುವುದರಲ್ಲಿ ಸಂಶಯವಿಲ್ಲ. ಕಾರ್ಗಿಲ್ ದಿಗ್ವಿಜಯದ ನಂತರ ದೊಡ್ಡ ಮಟ್ಟದಲ್ಲಿ ಸುದ್ದಿಯಾದ ಈ ದಾಳಿ ವಿಶ್ವದ ರಾಷ್ಟ್ರಗಳು ಭಾರತದ ತಂಟೆಗೆ ಬರುವ ಮುನ್ನ ಸಾವಿರ ಬಾರಿ ಯೋಚಿಸುವಂತೆ ಮಾಡಿದೆ. ಸದಾ ಕಾಲು ಕೆರೆದುಕೊಂಡು ನಮ್ಮ ತಂಟೆಗೆ ಬರುವ ಪಾಕ್ ಹಾಗೂ ಚೀನಾಕ್ಕೆ ಎಚ್ಚರಿಕೆಯನ್ನೂ ರವಾನಿಸಿದೆ ಭಾರತ. ಸ್ನೇಹಕ್ಕೂ ಸೈ, ಸಮರಕ್ಕೂ ಜೈ ಎಂಬ ಹಿರಿಮೆಯನ್ನು ತಂದುಕೊಟ್ಟ ವೀರಯೋಧರೇ ನಿಮಗಿದೋ ನಮ್ಮದೊಂದು ಸಲಾಂ. ಭಾರತದ ತಂಟೆಗೆ ಬಂದರೆ ಮಾರಿಹಬ್ಬದ ರೀತಿಯಲ್ಲಿ ವಿರೋಧಿಗಳ ಬಲಿ ಖಂಡಿತಾ ಎನ್ನುವುದನ್ನು ವಿಶ್ವಕ್ಕೇ ತೋರಿಸಿಕೊಟ್ಟಿದೆ ಮೋದಿ ಸರಕಾರ. ಅಚ್ಛೇ ದಿನ್ ಬಂದಿಲ್ಲ ಎಂದು ಬೊಬ್ಬಿರಿಯುತ್ತಿದ್ದ  ಬು(ಲ)ದ್ದಿ ಜೀವಿಗಳಿಗೆ ಒಂದೇ ಪ್ರಶ್ನೆ. ಬೇರೆ ದೇಶದಲ್ಲಿ ಅಡಗಿ ಕೂತಿದ್ದ ಉಗ್ರರ ಬೆಂಡೆತ್ತಿ ಸಂಹಾರ ಮಾಡಿದ್ದು ಅಚ್ಛೇ ದಿನಗಳ ಸಂಕೇತವಲ್ಲವೇ.?? ಇಂತಹ ಕೆಲಸ ೫೬ ಇಂಚಿನ ಗಟ್ಟಿ ಗುಂಡಿಗೆಯ ವ್ಯಕ್ತಿಯಿಂದ ಮಾತ್ರ ಸಾಧ್ಯವಲ್ಲವೇ???

Facebook ಕಾಮೆಂಟ್ಸ್

ಲೇಖಕರ ಕುರಿತು

Sudeep Bannur

Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!