ಕವಿತೆ

ಜೀವನವೃಕ್ಷ

ಸಂಸಾರ ಬೀಜದೊಳಗಿಂದ
ಮೊಳೆಯಿತೊಂದು ಜೀವನ ವೃಕ್ಷ..!

ಆಗಸದೆತ್ತರಕ್ಕೆ ಬೆಳೆಯುವ
ಹಂಬಲವಾದರೂ..
ಎಷ್ಟೊಂದು ಅಡೆತಡೆಗಳು..?

ಮೃದುತಳಿರ ಚಿವುಟಿ ಕೆಣಕಿ
ಮತ್ಸರಿಸುವ ಕೈಗಳು..
ಫಲಗಳ ಕುಟುಕಿ ನೋಯಿಸಲು
ಹವಣಿಸುವ ಹಕ್ಕಿಗಳು..
ಎಳೆಬೇರ ತಿಂದು ಕೃಶವಾಗಿಸಿ
ಬಾಧಿಸುವ ಹುಳುಗಳು..
ಉರಿಬಿಸಿಲ ಧಗೆಯಲಿ ದಹಿಸಿ
ಬಾಡುವ ಹಸಿರೆಲೆಗಳು..
ಸಾರಸತ್ವವ ಹೀರಲು
ಸುತ್ತಲೂ ಮುತ್ತಿರುವ ಕಳೆಗಳು..!

ಬದುಕಿನಹೊಲವ ಹಸನುಗೊಳಿಸಿ
ಬಾಳವೃಕ್ಷವ ಚಿಗುರಿಸುವ ತವಕದಲಿ..
ಏರಬೇಕಿದೆ ಎತ್ತರೆತ್ತರ
ಚಿವುಟುವ ಕೈಗಳಿಗೆ
ಎಟುಕದಷ್ಟೂ…ಎತ್ತರ..!
ಸಾಗಬೇಕಿದೆ ದೂರದೂರ
ಆಳಕಿಳಿಯಲಿ ಭಧ್ರಬೇರುಗಳು
ವಕ್ರದೃಷ್ಟಿಗೆ ನಿಲುಕದಷ್ಟೂ…ದೂರ..!

ಮುತ್ತಿರುವ ಕಳೆಯ ಕಿತ್ತೆಸೆದು
ಕಾಂಡಕೊಂಬೆಗಳು ಗಟ್ಟಿಗೊಳ್ಳಲಿ
ಹಬ್ಬುವ ಬಳ್ಳಿಗಳಿಗಾಸರೆಯಾಗಿ.!
ಸುಡದಿರಲಿ..ದಹಿಸಿ ಬಾಡದೆಯೇ
ಹಸಿರೆಲೆಗಳು ಪಸರಿಸಲಿ
ಬಿಸಿಲಧಗೆಯ ಸಹಿಸುವ ನೆರಳಾಗಿ.!

ಹೊಡೆತಗಳ ಮೆಟ್ಟಿ ಬೆಳೆಯಬೇಕಿದೆ
ಉಳಿಯೇಟಿಗೆ ಉದಿಸುವ ಶಿಲ್ಪದಂತೆ..
ಬವಣೆಗಳ ನಡುವೆ ಗೆಲ್ಲಬೇಕಿದೆ
ಕೆಸರಿನಲ್ಲೂ ಅರಳುವ ಕಮಲದಂತೆ..!

Facebook ಕಾಮೆಂಟ್ಸ್

ಲೇಖಕರ ಕುರಿತು

Udayabhaskar Sullia

ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!