ಪ್ರಚಲಿತ

ಬಡವರ ವಿರೋಧಿಯೇ ಪ್ರಧಾನಿ ಮೋದಿ?

[dropcap]ದೆ[/dropcap]ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ವಿಜಯ ಬಡವರಿಗೆ ಸಿಕ್ಕ ಗೆಲುವು. ಇದು ಪ್ರಧಾನಿ ಮೋದಿಯ ವಿರುದ್ಧ ಶ್ರೀಸಾಮಾನ್ಯನಿಗಿರುವ ಸಿಟ್ಟಿನ ಪ್ರತೀಕ. ಪ್ರಧಾನಿಯಗುವ ತನಕ ‘ಚಾಯ್‍ವಾಲ’ ಎಂದು ತನ್ನ ಬಡ ಬದುಕಿನ ಹಿನ್ನಲೆಯನ್ನೇ ಎತ್ತಿತೋರಿಸಿದ್ದ ಮೋದಿ, ಅಧಿಕಾರಕ್ಕೆ ಬಂದ ನಂತರ ಬಡವರನ್ನು ಮರತೇ ಬಿಟ್ಟರು. ದುಬಾರಿ ಕೋಟು, ಬೂಟು ಹಾಕಿಕೊಂಡು  ವಿದೇಶಗಳಿಗೆ ಹಾರುತ್ತಾ ಮಜಾ ಮಾಡಿದರು. ಶ್ರೀಮಂತ ಉದ್ಯಮಿಗಳ ಸುತ್ತ ಸತ್ತುತ್ತಾ ಅವರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡಿದರು. ಸಿರಿವಂತರಿಗೆ ಬೇಕಾದ ಯೋಜನೆಗಳನ್ನಷ್ಟೇ ಜಾರಿಗೊಳಿಸಿದರು. ಹಾಗಾಗಿ ದೆಹಲಿಯ ಬಡ ಜನರು ಮೋದಿಯವರಿಗೆ ಸರಿಯಾಗಿಯೇ ಬುದ್ಧಿ ಕಲಿಸಿದ್ದಾರೆ.

ಹೀಗೊಂದು ವಿಶ್ಲೇಷಣೆಯನ್ನು ಹೆಚ್ಚಿನ ರಾಜಕೀಯ ಪಂಡಿತರು ದೆಹಲಿ ಚುನಾವಣೆಯ ನಂತರ ಮಾಡುತ್ತಲೇ ಇದ್ದಾರೆ. ಮಾತ್ರವಲ್ಲ, ಬಿಜೆಪಿಯ ಗೋಂವಿದಾಚಾರ್ಯ ಅಂಥವರೂ ಇದಕ್ಕೆ ದನಿಗೂಡಿಸಿದ್ದಾರೆ. ಇಂದಿನ ರಾಜಕೀಯ ಸ್ಥಿತಿಯಲ್ಲಿ ಆಮ್ ಆದ್ಮಿ ಪಕ್ಷ ಸಮಾಜದ ಎಲ್ಲ ವರ್ಗಗಳಲ್ಲಿ, ಅದರಲ್ಲೂ ಮುಖ್ಯವಾಗಿ ಬಡವರಲ್ಲಿ ಹೊಸ ಭರವಸೆ ಮೂಡಿಸಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಹಾಗೆಂದ ಮಾತ್ರಕ್ಕೆ ಈ ಒಂದು ಸೋಲಿನಿಂದ ಮೋದಿಯ ಆಡಳಿತಕ್ಕೆ ಬಡ ವಿರೋಧಿ ಹಣೆ ಪಟ್ಟಿ ಕಟ್ಟವುದಕ್ಕೆ ಸಾಧ್ಯವೇ?  ಮೋದಿ ನಿಜಕ್ಕೂ ಬಡ ಜನರವಿರೋಧಿಯೇ? ಕಳೆದ ಎಂಟು ತಿಂಗಳಿನಲ್ಲಿ ಮೋದಿ ಜಾರಿಗೊಳಿಸಿದ ಯೋಜನೆಗಳೆಲ್ಲ ನಿಜಕ್ಕೂ ಶ್ರೀಮಂತರ ಪರವಾಗಿದೆಯೇ?

ಈ ಪ್ರಶ್ನೆಯ ಸತ್ಯಾಸತ್ಯತೆ ತಿಳಿಯಬೇಕಾದರೆ ಮೋದಿಯವರ ಪ್ರಮುಖ ಯೋಜನೆಗಳ ಉದ್ದೇಶ, ಮತ್ತು ಅದು ಮುಂದಿನ ದಿನಗಳಲ್ಲಿ ನಮ್ಮ ಜನರ ಬದುಕಿನ ಮೇಲೆ ಉಂಟುಮಾಡಬಹುದಾದ ಪರಿಣಾಮಗಳ ಬಗ್ಗೆ ಸೂಕ್ಮವಾಗಿ ವಿಮರ್ಶಿಸಬೇಕು. ಮೋದಿ ಅಧಿಕಾರಕ್ಕೆ ಬಂದನಂತರ ಜಾರಿಗೆ ತಂದ ಪ್ರಮುಖ ಮೂರು ಯೋಜನೆಗಳಾದ ಜನ್‍ಧನ್‍ಯೋಜನಾ, ಸ್ವಚ್ಛ ಭಾರತ್ ಹಾಗೂ ಮೇಕ್‍ಇನ್‍ಇಂಡಿಯಾ ಯೋಜನೆಗಳ ಒಳಹೊರಗನ್ನು ಸರಿಯಾಗಿ ಅರ್ಥಮಾಡಿಕೊಳ್ಳಬೇಕು.

ಮೊದಲಿಗೆ ಜನಧನ್‍ಯೋಜನಾ. ಮೋದಿಯವರ ಮಹತ್ವಾಕ್ಷೆಯ ಈ ಯೋಜನೆ ಮೋಲ್ನೋಟಕ್ಕೆ ಬ್ಯಾಂಕ್‍ನಲ್ಲಿ ಖಾತೆ ಆರಂಭಿಸುವ ಸರಳ ಯೋಜನೆಯಾಗಿ ಕಾಣಬಹುದು. ಆದರೆ ಇದು ಒಂದು ವೇಳೆ ಸರಿಯಾಗಿ ಅನುಷ್ಠಾನವಾದದ್ದೇ ಆದಲ್ಲಿ ಮುಂದಿನ 25 ವರ್ಷಗಳಲ್ಲಿ ಭಾರತದ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ. ಜನ್‍ಧನ್ ಯೋಜನೆಯ ಹಿಂದೆ ಎರಡು ಉದ್ದೇಶವಿದೆ. ಒಂದು ಸದ್ಯದ ಲಾಭ. ಇನ್ನೊಂದು ದೀರ್ಘಕಾಲದ ದೂರದೃಷ್ಟಿ. ಜನ್‍ಧನ್‍ಯೋಜನೆಯ ಪ್ರಕಾರ ದೇಶದ ಸಾಮಾನ್ಯ ನಾಗರಿಕನಿಗೂ ಬ್ಯಾಂಕ್ ಖಾತೆ ಒದಗಿಸಲಾಗುತ್ತಿದೆ. ಹಾಗೂ ಜತೆಗೆ ಡಿಬಿಟ್ ಕಾರ್ಡ್ ಕೂಡ ನೀಡಲಾಗುತ್ತಿದೆ. ಸದ್ಯಕ್ಕೆ ಈ ಖಾತೆ ಹೊಂದಿರುವ ಜನರಿಗೆ ಮೂವತ್ತು ಸಾವಿರದಷ್ಟು ಜೀವ ವಿಮೆಯನ್ನೂ ನೀಡಲಾಗುತ್ತದೆ. ಜೀವವಿಮೆಯ ಕುರಿತು ಇನ್ನೂ ಹೆಚ್ಚಿನ ಅರಿವಿಲ್ಲದ ಭಾರತದಲ್ಲಿ ಜನ್‍ಧನ್ ಖಾತೆ ದಾರರೆಲ್ಲ ಈ ಸೌಲಭ್ಯವನ್ನು ಪಡೆದರೆಂದರೆ ಅದೊಂದು ದೊಡ್ಡ ಸಾಧನೆಯೇ. ಜತೆಗೆ ಜನ್‍ಧನ್ ಖಾತೆ ಆರಂಭಿಸಿದ ಆರು ತಿಂಗಳ ನಂತರ ಐದು ಸಾವಿರ ರೂಪಾಯಿಗಳನ್ನು ಓವರ್ ಡ್ರಾಫ್ಟ್ ಮೂಲಕ ಪಡೆಯುವ ವ್ಯವಸ್ಥೆಯನ್ನೂ ನೀಡಲಾಗಿದೆ. ತುರ್ತುಪರಿಸ್ಥಿತಿಯಲ್ಲಿ ಹಣವಿಲ್ಲದೆ ತತ್ತರಿಸುವ ಬಡ ಜನರಿಗೆ ಈ ಜನ್‍ಧನ್ ಮೂಲಕ ಸಿಗುವ ಈ ಐದು ಸಾವಿರ ಸಂಜೀವಿನಿಯಾಗದೇ? ಸಣ್ಣ ಮೊತ್ತಕ್ಕೂ ಉಳ್ಳವರೆದುರು ಅಂಗಲಾಚುವುದಕ್ಕಿಂತ ಶ್ರೀಸಾಮಾನ್ಯನೊಬ್ಬ ಬ್ಯಾಂಕಿನಲ್ಲಿ ಅಧಿಕಾರಯುತವಾಗಿ ಹಣ ಕೇಳುವ ಸ್ಥಿತಿ ತಲುಪಿದನೆಂದರೆ ಇದು ಬಡವರ ಸಬಲೀಕರಣವಲ್ಲವೇ? ಅಷ್ಟೇ ಅಲ್ಲ. ಜನ್‍ಧನ್ ಯೋಜನೆಯ ಖಾತೆದಾರರಿಗೆ ಸರಕಾರ ತನ್ನ ಸೌಲಭ್ಯಗಳನ್ನು ನೇರವಾಗಿ ತಲುಪಿಸುವುದಕ್ಕೂ ಅನುಕೂಲವಾಗಲಿದೆ. ಕಾಶ್ಮೀರ ಪ್ರವಾಹದ ಸಂದರ್ಭ ನೆನಪಿಸಿಕೊಳ್ಳಿ. ಪ್ರವಾಹ ಪೀಡಿತರಿಗೆ ಕೇಂದ್ರ ಸರ್ಕಾರ ನೇರವಾಗಿ ಪರಿಹಾರ ನೀಡಿದ್ದು ಈ ಖಾತೆಗಳ ಮುಖಾಂತರವೇ. ಬಡವರಿಗೆ ಸಲ್ಲಬೇಕಾದ 52 ಸಾವಿರಕೋಟಿಗಳಷ್ಟು ಸಬ್ಸಿಡಿ ಹಣ ಸರ್ಕಾರಿ ತಿಂಮಿಂಗಿಲಗಳ ಕೈ ತಪ್ಪಿಸಿ, ಯಾವುದೇ ಸೋರಿಕೆಯಿಲ್ಲದೆ ತಲುಪುವಂತಾದರೆ ಯಾರಿಗೆ ಉಪಯೋಗ? ಶ್ರೀಸಾಮಾನ್ಯನಿಗೇ ತಾನೆ? ಜನ್‍ಧನ್ ಯಶಸ್ವಿಯಾದರೆ ಭೃಷ್ಟಾಚಾರ ನಿಯಂತ್ರಿಸುವಲ್ಲಿ ಪ್ರಮುಖ ಸಾಧನವಾದೀತು. ಮಾತ್ರವಲ್ಲ, ದೇಶದ ಖಜಾನೆಯಲ್ಲಿ ಹಣ ಬರಿದಾಗಿರುವ ಈ ಸಂದರ್ಭದಲ್ಲಿ ಜನ ಧನ್‍ಯೋಜನೆಯ ಖಾತೆ ಆರಂಭಿಸುವಾಗ ಜನ ಠೇವಣಿ ಇಟ್ಟಿರುವ ಮೊತ್ತವೂ ಸರ್ಕಾರಕ್ಕೆ ಲಾಭ.

ಹಾಗೆಂದ ಮಾತ್ರಕ್ಕೆ ಎಲ್ಲರೂ ದುಡ್ಡು ಹಾಕಿಯೇ ಖಾತೆ ಶುರು ಮಾಡಿದ್ದಾರೆ ಎಂದರ್ಥವಲ್ಲ. ಈಗ ಆರಂಭಿಸಲಾಗಿರುವ 12 ಕೋಟಿ ಖಾತೆದಾರರಲ್ಲಿ 75% ಜನರು ಠೇವಣಿ ಹೂಡಿರುವ ಮೊತ್ತ ಶೂನ್ಯ ! ಆದರೂ ಕೂಡ ಈ ಯೋಜನೆ ಮುಂದಿನ ವರ್ಷಗಳಲ್ಲಿ ನಮ್ಮ ಅರ್ಥ ವ್ಯವಸ್ಥೆಯ ದಿಕ್ಕನ್ನೇ ಬದಲಿಸಲಿದೆ. ಇದು ಭವಿಷ್ಯದಲ್ಲಿ ಭಾರತದ ಒಳಗಿರುವ ಕಪ್ಪುಹಣವನ್ನು ನಿಯಂತ್ರಿಸವಲ್ಲಿ ಮಹತ್ವದ ಪಾತ್ರವಹಿಸಲಿದೆ. ನಿಮಗೆ ಗೊತ್ತಿರಬಹುದು. ಭಾರತದ ಕಪ್ಪುಹಣ ಸ್ವಿಸ್‍ಬ್ಯಾಂಕ್‍ನಲ್ಲಿ ಮಾತ್ರ ಇರುವುದಲ್ಲ. ನಮ್ಮ ಸುತ್ತಮತ್ತ ದೈನಂದಿನ ವ್ಯವಹಾರದಲ್ಲಿ ಪ್ರತಿ ದಿನ ಕಪ್ಪು ಹಣ ಚಾಲ್ತಿಯಲ್ಲಿದೆ. ಇದನ್ನು ನಿಯಂತ್ರಿಸದೆ ನಾವು ಸ್ವಿಸ್ ಬ್ಯಾಂಕ್ ಬಗ್ಗೆ ಎಷ್ಟೇ ಬೊಬ್ಬೆ ಹೊಡೆದರೂ ಕಪ್ಪು ಹಣಕ್ಕೆ ಶಾಶ್ವತ ಪರಿಹಾರ ದೊರಕದು.ಈ ಕಪ್ಪು ಹಣ ನಿಯಂತ್ರಣಕ್ಕೆ ಮೋದಿ ಮಾಡಿರುವ ಉಪಾಯವೇ ಜನಧನ್ ಯೋಜನೆ. ಜನ್‍ಧನ್ ಮೂಲಕ ಭಾರತ ‘ಬ್ಲಾಕ್ ಮನಿ’ಯಿಂದ ‘ಪ್ಲಾಸ್ಟಿಕ್ ಮನಿ’ಯ ಕಡೆಗೆ ಒಂದು ದಿಟ್ಟ ಹೆಜ್ಜೆಯಿಟ್ಟಿದೆ. ಇದು ದೇಶದೊಳಗಿನ ಕಪ್ಪುಹಣವನ್ನು ಮಹತ್ದ ಪಾತ್ರ ವಹಿಸಲಿದೆ. ಹೇಗೆ ಅಂತೀರಾ? ಒಂದು ವೇಳೆ ಜನ್‍ಧನ್ ಮೂಲಕ ಭಾರತದ ಹೆಚ್ಚಿನ ಜನಕ್ಕೆ, ಅಂದರೆ 70% ಜನರಿಗಾದರೂ ಬ್ಯಾಂಕ್ ಖಾತೆ ಬಂತೆದಿಟ್ಟುಕೊಳ್ಳಿ, ನಂತರ ಸರ್ಕಾರ ಹತ್ತು ಸಾವಿರಕ್ಕಿಂತ ಹೆಚ್ಚಿನ ಯಾವುದೇ ವ್ಯವಹಾರವಿದ್ದರೂ ಅದು ಡೆಬಿಟ್ ಕಾರ್ಡ್ ಮೂಲಕವೇ ನಡೆಯಬೇಕು ಎಂದು ಆದೇಶಹೊರಡಿಸಬಹುದು. ನಗದು ಹಣದ ವಹಿವಾಟನ್ನು ನಿಂತ್ರಿಸಿ, ದೊಡ್ಡ ಮೊತ್ತದ ವಹಿವಾಟು ಡೆಬಿಟ್ ಕಾರ್ಡ್ (ಪ್ಲಾಸ್ಟಿಕ್ ಮನಿ) ಮೂಲಕವೇ ನಡೆಯಬೇಕೆಂದು ಹೊರಡಿಸಿದರೆ, ನಮ್ಮ ದೇಶದೊಳಗೇ ನಡೆಯುವ ಹೆಚ್ಚಿನ ಕಪ್ಪುಹಣ ದಂಧೆಯನ್ನು ತಡೆಗಟ್ಟಬಹುದು. ಅಮೇರಿಕಾ, ಇಂಗ್ಲೆಂಡ್‍ನಂತಹ ಮುಂದುವರಿದ ದೇಶಗಳಲ್ಲಿ ಜನ ತಮ್ಮ ಹೆಚ್ಚಿನ ದೈನಂದಿನ ಹಣಕಾಸು ವ್ಯವಹಾರವನ್ನು ಪ್ಲಾಸ್ಟಿಕ್ ಮನಿ ಮೂಲಕ ಮಾಡುವುದರಿಂದಲೇ ಅಲ್ಲಿ ಕಪ್ಪು ಹಣ ಕಡಿಮೆಯಿದೆ. ಈ ವ್ಯವಸ್ಥೆಯನ್ನು ಭಾರತದಲ್ಲೂ ಮಾಡಬೇಕೆಂದರೆ ಮೊದಲಿಗೆ ಎಲ್ಲರ ಬಳಿಯೂ ಖಾತೆ ಬೇಕು. ಜನ್‍ಧನ್ ಯೋಜನೆ ಆ ಕೆಲಸವನ್ನು ಮಾಡುತ್ತಿದೆ. ಮುಂದೊಂದು ದಿನ ಹತ್ತು ಸಾವಿರದ ಮೆಲ್ಪಟ್ಟ ವಹಿವಾಟುಗಳು ಡೆಬಿಟ್ ಕಾರ್ಡ್ ಮೂಲಕವೇ ನಡೆಯಬೇಕು ಎಂಬಂಥ ಕಾನೂನು ತಂದರೆ ಬಿಳಿ ಹಣದ ಹರಿವು ಹೆಚ್ಚಾಗಿ ನಮ್ಮ ಅರ್ಥ ವ್ಯವಸ್ಥೆ ಗಟ್ಟಿಗೊಂಡೀತು. ಬಡವರಿಗೆ ಇದರಿಂದ ಎಳ್ಳಷ್ಟೂ ಸಮಸ್ಯೆಯಿಲ್ಲ. ತೊಂದರೆಯಾಗುವುದು ಕದ್ದು ಕಪ್ಪು ಹಣದ ವ್ಯವಹಾರ ನಡೆಸುವ ಉದ್ಯಮಿಗಳಿಗೆ ಮಾತ್ರ. ಈ ಯೋಜನೆಯ ಉದ್ದೇಶವನ್ನು ಸರಿಯಾಗಿ ಅರ್ಥಮಾಡಿಕೊಳ್ಳದೆ, ಜನಧನ್ ಬಡವರನ್ನು ವಂಚಿಸಿ ದುಡ್ಡು ಸಂಗ್ರಹಿಸಲು ಮೋದಿ ಮಾಡಿದ ಚಾಣಾಕ್ಷತನ. ಅಲ್ಪ ಅವಧಿಯಲ್ಲಿ ಸರಕಾರದ ಬೊಕ್ಕಸತುಂಬಲು ಮಾಡಿದ ಉಪಾಯ. ಈಗ ಜನ್‍ಧನ್‍ಯೋಜನೆಯಲ್ಲಿ ತೆರೆಯಲಾಗಿರುವ ಶೂನ್ಯಮೊತ್ತದ ಖಾತೆಗಳನ್ನು ನಿರ್ವಹಿಸಹೊರಟರೆ ನಮ್ಮ ಬ್ಯಾಂಕುಗಳು ದಿವಾಳಿಯೆದ್ದು ಹೋದಾವು ಎಂಬರ್ಥದಲ್ಲಿ ಮಾತನಾಡಿದರೆ ಅದು ನಮ್ಮ ಬೌದ್ಧಿಕ ಶೂನ್ಯತೆಯನ್ನು ತೋರಿಸೀತು, ಅಷ್ಟೆ.

ಎರಡನೆಯದು ಸ್ವಚ್ಛಭಾರತ್. ಮಾಧ್ಯಮಗಳಲ್ಲಿ ಬಹಳಷ್ಟು ಪ್ರಚಾರವನ್ನು ಪಡೆದುಕೊಂಡ ಸ್ವಚ್ಛಭಾರತ್ ಅಭಿಯಾನ, ಮೋಲ್ನೋಟಕ್ಕೆ ನಮ್ಮ ಪರಿಸರವನ್ನು ಶುಚಿಯಾಗಿಡುವ ಜಾಗೃತಿ ಕಾರ್ಯಕ್ರಮದಂತೇ ಕಂಡರೂ, ಇದರಲ್ಲಿ ನಮ್ಮ ಗ್ರಹಿಕೆಗೆ ನಿಲುಕದ ಅರ್ಥ ವ್ಯವಸ್ಥೆಯ ಪ್ರಗತಿಯ ಗುಟ್ಟೂ ಅಡಗಿದೆ. ಬಡವರ ಜೀವನ ಮಟ್ಟ ಸುಧಾರಣೆಯೂ ಉದ್ದೇಶವೂ ಹುದುಗಿದೆ. ಸ್ವಚ್ಛಭಾರತ್ ರಸ್ತೆ ಬದಿಯಲ್ಲಿ  ಪೊರಕೆ ಹಿಡಿದು ಫೊಟೋ ತೆಗಿಯವ ಕಾರ್ಯಾಕ್ರಮಕ್ಕಷ್ಟೇ ಸೀಮಿತವಾಗದೆ, ಸರಿಯಾಗಿ ಅನುಷ್ಠಾನಗೊಂಡದ್ದೇ ಆದಲ್ಲಿ ಅದು ಆರೋಗ್ಯ, ದೇಶದ ಅರ್ಥ ವ್ಯವಸ್ಥೆ, ಪ್ರವಾಸೋದ್ಯಮ ಹಾಗೂ ಕೈಗಾರಿಕೆ ಕ್ಷೇತ್ರಕ್ಕೆ ವರವಾಗಿ ಪರಿಣಾಮ ಬೀರಲಿದೆ. ಭಾರತದ ಬಗ್ಗೆ ನಾವೆಷ್ಟೇ ಹೆಮ್ಮೆ ಪಟ್ಟುಕೊಂಡರೂ ನಮ್ಮ ದೇಶದ 60% ಕ್ಕೂ ಹೆಚ್ಚಿನ ಜನರಿಗೆ ಇಂದಿಗೂ ಶೌಚಾಲಯದ ಮೂಲ ಸೌಲಭ್ಯ ಇಲ್ಲ ಎಂಬ ವಾಸ್ತವವನ್ನು ಒಪ್ಪಿಕೊಳ್ಳಲೇಬೇಕು. ವಿಶ್ವ ಅರೋಗ್ಯ ಸಂಸ್ಥೆಯ ವರದಿ ಪ್ರಕಾರ ಜಗ್ತತಿನಲ್ಲಿ ಶೌಚಾಲಯ ವ್ಯವಸ್ಥೆ ಇಲ್ಲದಿರವವರ ಪೈಕಿ ಅರ್ಧಕ್ಕಿಂತಲೂ ಹೆಚ್ಚು ಜನ ಇರುವುದು ಭಾರತದಲ್ಲೇ ! ಶೌಚಾಲಯದ ಕೊರತೆಯಿಂದಲೇ ಪ್ರತಿ ವರ್ಷ 6 ಲಕ್ಷ ಭಾರತೀಯರು ಡಯಾರಿಯಾ, ಕಾಲರಾ,ಟೈಫಾಯಿಡ್‍ನಂತಹ ರೋಗಗಳಿಂದಾಗಿ ಬದುಕಿಗೇ ವಿದಾಯ ಹೇಳುತ್ತಿದ್ದಾರೆ. ಈ ನಿಟ್ಟಿನಲಲಿ ಯೋಚಿಸಿದರೆ ಮೋದಿಯವರು ಹೇಳಿದ್ದು ನೂರಕ್ಕೆ ನೂರು ನಿಜ: ‘ಭಾರತೀಯರಿಗೆ ದೇವಾಲಯಕ್ಕಿಂತಲೂ ಮೊದಲು ಬೇಕಾಗಿರುವುದು ಶೌಚಾಲಯ’. ಒಂದು ವೇಳೆ ಸರ್ಕಾರ ಸ್ವಚ್ಛ ಭಾರತ್ ಯೋಜನೆಯಡಿ ಎಲ್ಲ ಭಾರತೀಯರಿಗೆ ಶೌಚಾಲಯ ನಿರ್ಮಿಸಲು ಯಶಸ್ವಿಯಾದರೆ, ಅದು ಪ್ರತಿ ಕುಂಟುಬಕ್ಕೆ ಆರೋಗ್ಯಕ್ಕಾಗಿ ವೆಚ್ಚ ಮಾಡಬೇಕಾದ ಇಪ್ಪತ್ತಾರು ಸಾವಿರ ರೂಪಾಯಿಯನ್ನು ಉಳಿಸಲಿದೆ ಎಂಬುದು ಒಂದು ಲೆಕ್ಕಾಚಾರ. ಮಾತ್ರವಲ್ಲ, ಎಲ್ಲೆಂದರಲ್ಲಿ ಕಸಬಿಸಾಕುವ ನಮ್ಮ ಆಭ್ಯಾಸದ ಬಗ್ಗೆ ಜಾಗೃತಿಯುಂಟಾದರೆ ಭಾರತದ ಪ್ರವಾಸೋದ್ಯಮ ಅಭಿವೃದ್ಧಿಯಾಗಿ ಆರುಕಾಲು ಕೋಟಿಯಷ್ಟು ಜನರಿಗೆ ಉದ್ಯೋಗ ಸಿಗಲಿದೆ. ಭಾರತ ಆರ್ಥಿಕವಾಗಿಯೂ ಸುದೃಢವಾದೀತು. ಪುಟ್ಟ ಸಿಂಗಾಪುರವನ್ನೊಮ್ಮೆ ನೋಡಿ. 1977ರಿಂದ 1987ರ ತನಕ ಆ ದೇಶ ‘ಕೀಪ್ ಸಿಂಗಾಪುರ್ ಕ್ಲೀನ್’ ಎಂಬ ಆಂದೋಲನ ಮಾಡಿ ಶುಚಿತ್ವದ ಬಗ್ಗೆ ಜಾಗೃತಿಗೊಳಿಸಿ ತು. ಈ ಅಂದೋಲನದ ಪರಿಣಾಮ ಸಿಂಗಾಪುರಕ್ಕೆ ಜಗತ್ತಿನೆಲ್ಲೆಡೆಯಿಂದ ಬಂಡವಾಳ ಹರಿದು ಬಂತು. ಸಿಂಗಾಪುರ ಇಂದು ಏಷ್ಯಾದ ಪ್ರಮುಖ ಆರ್ಥಿಕ ನಗರವಾಗಿ ರೂಪುಗೊಂಡಿದ್ದರೆ ಅಲ್ಲಿ ನಡೆದ ಸ್ವಚ್ಛತಾ ಅಭಿಯಾನದ ಪಾತ್ರ ಅಪಾರ. ಒಂದು ಸ್ವಚ್ಛತಾ ಅಭಿಯಾನ ಏನೇನು ವಿಸ್ಮಯಗಳನ್ನು ಮಾಡಬಹುದು ಎಂಬುದಕ್ಕೆ ‘ಕೀಪ್ ಸಿಂಗಾಪುರ್ ಕ್ಲೀನ್’ ಸುಂದರ ಉದಾಹರಣೆ. ಭಾರತದಲ್ಲೂ ಅಷ್ಟೆ, ಸ್ವಚ್ಛಭಾರತ್ ಅಭಿಯಾನ ಯಶಸ್ವಿಯಾದ್ದೇ ಆದರೆ ಸಾಮಾನ್ಯ ಜನರ ಆರೋಗ್ಯದ ಗುಣಮಟ್ಟ ಹೆಚ್ಚುವ ಜತೆಗೆ, ಅರ್ಥ ವ್ಯವಸ್ಥೆಗೆ  1.65-2.2 ಲಕ್ಷ ಕೋಟಿಯಷ್ಟು ಲಾಭವಾಗಲಿದೆ ಎಂಬುದು ಒಂದು ಅಂದಾಜು.

ಇನ್ನು ಮೇಕ್ ಇನ್ ಇಂಡಿಯಾ. ಜಗತ್ತಿನೆಲ್ಲೆಡೆಯ ಉದ್ಯಮಿಗಳನ್ನು ಕೈ ಬೀಸಿ ಕರೆದು ಭಾರತದ ಕೈಗಾರಿಕಾ ಕ್ಷೇತ್ರದಲ್ಲಿ ಬಂಡವಾಳ ಹೂಡುವಂತೆ ಪ್ರೋತ್ಸಾಹಿಸುತ್ತಿರುವ ಮೇಕ್ ಇನ್ ಇಂಡಿಯಾ ಯೋಜ£ ಮೂಲಕ ಮೇಲ್ನೋಟಕ್ಕೆ ಮೋದಿಯವರು ಉದ್ಯಮಿಗಳಿಗೆ ಮಣೆ ಹಾಕುವಂತೆ ಕಾಣಬಹುದು. ಮೋದಿ ವಿರೋಧಿಗಳಂತೂ ಮೇಕ್ ಇನ್ ಇಂಡಿಯಾಕ್ಕಾಗಿ ಪ್ರಧಾನಿ ಬಡವರ ಭೂಮಿಯನ್ನು ಶ್ರೀಮಂತ ಕೈಗಾರಿಕೊದ್ಯಮಗಳಿಗೆ ಮಾರಹೊಟಿದ್ದಾರೆ ಎಂಬಂತೇ ಬಿಂಬಿಸುತ್ತಿದ್ದಾರೆ. ಆದರೆ ನಿಜ ಸ್ಥಿತಿ ಬೇರೆಯದೇ ಇದೆ. ಈಗ ಭಾರತದ ಒಟ್ಟು ಆದಾಯದಲ್ಲಿ 17% ಭಾಗ ಕೃಷಿಯಿಂದ ಬರುತ್ತಿರುವುದು. 26% ಕೈಗಾರಿಕೆಗಳ ಕೊಡುಗೆ. 57%ರಷ್ಟು ಆದಾಯಕ್ಕೆ  ಸೇವಾಕ್ಷೇತ್ರವೇ ಮೂಲ. ಅಂದರೆ ವರ್ಷದಿಂದ ವರ್ಷಕ್ಕೆ ನಮ್ಮ ಅರ್ಥ ವ್ಯವಸ್ಥೆ ಎಂಬ ಒಂದು ಸ್ಥಂಭದ ಮೇಲೆ ಹೆಚ್ಚು ಆಧಾರಿತವಾಗಿದೆ. ಇದು ಬಹಳ ಅಪಾಯಕಾರಿ. ಅಮೇರಿಕಾ, ಜರ್ಮನಿ, ಫ್ರಾನ್ಸ್, ಜರ್ಮನಿ, ಜಪಾನ್ ದೇಶಗಳ ಅರ್ಥ ವ್ಯವಸ್ಥೆ ಸೇವಾ ಕ್ಷೇತ್ರವನ್ನೇ ನಂಬಿದೆ. ಈ ದೇಶಗಳ ಆದಾಯದಲ್ಲಿ ಸೇವಾಕ್ಷೇತ್ರದ ಪಾಲು 70%ಕ್ಕಿಂತಲೂ ಹೆಚ್ಚು. ಒಂದು ವೇಳೆ ಈ ಕ್ಷೇತ್ರದಲ್ಲಿ ಏನಾದರೂ ಸಮಸ್ಯೆ ಆದರೆ, ಇಡಿ ದೇಶದ ಅರ್ಥ ವ್ಯವಸ್ಥೆಯೇ ನಲುಗಿ ಹೋಗುತ್ತದೆ. ಯುರೋಪ್‍ನಲ್ಲಿ ಈಗ ಆಗುತ್ತಿರುವ ಆರ್ಥಿಕ ಕುಸಿತವೇ ಇದಕ್ಕೆ ಉದಾಹರಣೆ. ದೇಶದ ಆದಾಯ ಬೇರೆ ಬೇರೆ ಕ್ಷೇತ್ರದಿಂದ ಬಂದರೆ, ಒಂದು ಕ್ಷೇತ್ರದಲ್ಲಿ ಆದಾಯ ಊರುಪೇರಾದರೂ ಇನ್ನೊಂದು ಕ್ಷೇತ್ರಕ್ಕೆ ತಡೆಯುವ ಬಲವಿರುತ್ತದೆ. ಚೀನಾ ಜಗತ್ತಿನ ಬಲಿಷ್ಠ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮತ್ತಿರುವುದಕ್ಕೆ ಇದೇ ಕಾರಣ. ಚೀನಾದ ಒಟ್ಟು ಆದಾಯದ 47% ಸೇವಾ ಕ್ಷೇತ್ರದಿಂದ ಬಂದರೆ, 43% ಕೈಗಾರಿಕಾ ಕ್ಷೇತ್ರದ ಕೊಡುಗೆಯಿಂದ. ಹೀಗಾಗಿಯೇ ಜಗತ್ತಿನಲ್ಲಿ ಆರ್ಥಿಕ ಕುಸಿತವಾದರೂ ಚೀನಾಕ್ಕೆ ಪಕ್ಕನೆ ನಾಟುವುದಿಲ್ಲ. ಈ ಎರಡು ಕ್ಷೇತ್ರಗಳಲ್ಲಿ ಒಂದು ಆಧಾರಿಸಿಕೊಳ್ಳುತ್ತದೆ. ಭಾರತವೂ ಹಾಗಾಗಬೇಕಂದು ಪ್ರಧಾನಿ ಕನಸು. ಮೇಕ್ ಇನ್ ಇಂಡಿಯಾ ಮೂಲಕ ಹೊಸ ಕೈಗಾರಿಕೆಗಳನ್ನು ಆರಂಭಿಸಿದೆ ಭಾರತ ಸ್ವಾವಲಂಬಿಯಾಗುವ ಜತೆಗೆ ರಫ್ತನ್ನು ಹೆಚ್ಚಿಸ ಬಹುದು. ಅದಕ್ಕಿಂತಲೂ ಮುಖ್ಯವಾಗಿ ಇದು ಭಾರತದ ಅರ್ಥ ವ್ಯವಸ್ಥೆ ಸೇವಾಕ್ಷೇತ್ರದ ಮೇಲೆ ಅತಿ ಅವಲಂಬಿಸುವುದನ್ನು ತಡೆದು, ಕೈಗಾರಿಕಾ ಕ್ಷೇತ್ರಕ್ಕೂ ವಿಸ್ತರಿಸಲಿದೆ. ಮೇಕ್ ಇನ್ ಇಂಡಿಯಾ ಯಶಸ್ವಿಯಾದರೆ ಭಾರತದ ಒಟ್ಟು ಆದಾಯದಲ್ಲಿ ಕೈಗಾರಿಕಾ ಕ್ಷೇತ್ರದ ಕೊಡುಗೆ 26% ದಿಂದ 40% ಕ್ಕೆ ಏರಲಿದೆ ಎಂಬುದು ನಿರೀಕ್ಷೆ. ಇದು ಭಾರತದಲ್ಲಿ 1.2 ಕೋಟಿ ಜನರಿಗೆ ಉದ್ಯೋಗ ನೀಡಲಿದೆ. ಇಲ್ಲಿ ಸೃಷ್ಟಿಯಾಗಲಿರುವ ಉದ್ಯೋಗಕ್ಕೆ ಬೇಕಾದುದು ಅರೆ ಕೌಶಲವುಳ್ಳ ಜನ. ಅಂದರೆ ಬಡವರ್ಗದ ಮಂದಿಗೆ ಉದ್ಯೋಗ ಸೃಷ್ಟಿಗೆ ಎಂದರ್ಥ.

ಕೈಗಾರಿಕೆಗಳು ಬಂದರೆ ಬಡವರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಇದರಿಂದ ಅವರ ಬದುಕು ಬೀದಿಗೆ ಬಂದೀತು ಎಂಬುದು ಕೆಲವರ ವಾದ. ಇದು ಪೂರ್ತಿ ನಿಜವಲ್ಲ, ಯಾಕೆಂದರೆ ಭೂಸ್ವಾಧೀನ ಕಾಯ್ದೆಯ ಅನ್ವಯ ಭೂಮಿಯನ್ನು ತೆಗೆದುಕೊಳ್ಳುವಾಗ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹಣವನ್ನು ಹಳ್ಳಿಗಳಲ್ಲಿ, ದುಪ್ಪಟ್ಟು ಹಣವನ್ನು ನಗರಗಳಲ್ಲಿ ಪರಿಹಾರವಾಗಿ ನೀಡ ಬೇಕೆಂದು ನಿಯಮವಿದೆ. ಮಾತ್ರವಲ್ಲ, ಕೈಗಾರಿಕೋದ್ಯಮ ದೀರ್ಘ ಕಾಲದಲ್ಲಿ ಬಡವರಿಗೆ, ಕೆಳ ಮಧ್ಯಮ ವರ್ಗಕ್ಕೆ ಅನೇಕ ಉದ್ಯೋಗ ಸೃಷ್ಟಿಸಲಿರುವುದೆ. 1999ರಿಂದ 2004ರ ಹೊತ್ತಿನ ಕರ್ನಾಟಕವನ್ನು ನೆನಪಿಸಿಕೊಳ್ಳಿ. [pullquote-left]ಕೈಗಾರಿಕೆಗಳು ಬಂದರೆ ಬಡವರ ಭೂಮಿಯನ್ನು ಕಿತ್ತುಕೊಳ್ಳಲಾಗುತ್ತದೆ. ಇದರಿಂದ ಅವರ ಬದುಕು ಬೀದಿಗೆ ಬಂದೀತು ಎಂಬುದು ಕೆಲವರ ವಾದ. ಇದು ಪೂರ್ತಿ ನಿಜವಲ್ಲ, ಯಾಕೆಂದರೆ ಭೂಸ್ವಾಧೀನ ಕಾಯ್ದೆಯ ಅನ್ವಯ ಭೂಮಿಯನ್ನು ತೆಗೆದುಕೊಳ್ಳುವಾಗ ಮಾರುಕಟ್ಟೆ ದರಕ್ಕಿಂತ ನಾಲ್ಕು ಪಟ್ಟು ಹಣವನ್ನು ಹಳ್ಳಿಗಳಲ್ಲಿ, ದುಪ್ಪಟ್ಟು ಹಣವನ್ನು ನಗರಗಳಲ್ಲಿ ಪರಿಹಾರವಾಗಿ ನೀಡ ಬೇಕೆಂದು ನಿಯಮವಿದೆ.[/pullquote-left] ಎಸ್.ಎಂ. ಕೃಷ್ಣ ಮುಖ್ಯಮಂತ್ತಿಯಾಗಿದ್ದಾಗ ಇದೇ ತೆರನ ಕೂಗು ಕೇಳಿ ಬಂದಿತ್ತು. ಕೃಷ್ಣ ಐಟಿ ಉದ್ಯಮಕ್ಕೇ ಮಣೆಹಾಕುತ್ತಾರೆ. ರೈತರ ಭೂಮಿ ಹಿತಾಸಕ್ತಿಯನ್ನು ಕಡೆಗಣಿಸಿ ಐಟಿ ದಿಗ್ಗಜರನ್ನು ಸಲಹುತ್ತಾರೆ ಎಂಬ ಕೂಗು ಜೋರಾಗಿತ್ತು. ಆದರೆ ಇಂದು? ಕರ್ನಾಟಕದ ಅನೇಕ ರೈತರ ಮಕ್ಕಳಿಗೆ ಐದಂಕಿಯ ಸಂಬಳ ಬರುತ್ತಿದ್ದರೆ ಕಾರಣ ಇದೇ ಐಟಿ ಉದ್ಯಮ. ಕರ್ನಾಟಕದ ರೈತರ ಬದುಕು ಬಡತನದಿಂದ ಮಧ್ಯಮ, ಉನ್ನತ ಮಧ್ಯಮ ವರ್ಗಕ್ಕೆ ಏರಿದ್ದರೆ ಅದಕ್ಕೆ ಪರೋಕ್ಷ ಕಾರಣ ಐಟಿ ಕ್ರಾಂತಿ. ಧರ್ಮಸಿಂಗ್, ಕುಮಾರಸ್ವಾಮಿ, ಯಡಿಯೂರಪ್ಪ, ಸಿದ್ಧರಾಮಯ್ಯನವರಂತಹ ಮುಖ್ಯಮಂತ್ರಿಗಳು ಬಂದು ಕರ್ನಾಟಕವನ್ನು ಅಸ್ತವ್ಯಸ್ತಗೊಳಿಸದ ಮೇಲೂ ಕೂಡ ಬೆಂಗಳೂರು ತನ್ನ ಘನತೆಯನ್ನು ಉಳಿಸಿಕೊಡಿದ್ದರೆ, ಆರ್ಥಿಕ ಶಕ್ತಿಯಾಗಿ ವಿಶ್ವದ ಗಮನ ಸೆಳೆದಿದ್ದರೆ ಅದಕ್ಕೆ ಕಾರಣ ಐಟಿ. ಎಸ್.ಎಂ ಕೃಷ್ಣ ಮಾಡಿದ ಕೈಗಾರಿಕಾ ಕ್ರಾಂತಿ. ಕೃಷ್ಣ ಬೆಂಗಳೂರಿನ ಐಟಿ ಕ್ಷೇತ್ರದಲ್ಲಿ ಮಾಡಿದ್ದನನ್ನೇ ಮೋದಿಯವರು ದೇಶ ಮಟ್ಟದಲ್ಲಿ ಕೈಗಾರಿತೋತ್ಪಾದನಾ ಕ್ಷೇತ್ರದಲ್ಲಿ ಮಾಡ ಹೊರಟಿದ್ದಾರೆ. ಹಾಗಂತ ಈಗಿರುವ ಭೂ ಸ್ವಾಧೀನ ಕಾಯಿದೆಯಿಂದ ರೈತರಿಗೆ ಏನೇನೂ ತೊಂದರೆಯಾಗದು ಅಂತ ಹೇಳಲಾಗದು. ಇದರ ಕೆಲವು  ಷರತ್ತುಗಳನ್ನು ಬದಲಿಸಲೇಬೇಕಿದೆ. ಆದರೆ ಭೂಸ್ವಾಧೀನ ಕಾಯಿದೆಯೊಂದನ್ನೇ ಇಟ್ಟುಕೊಂಡು ಮೋದಿವರನ್ನು ಬಡವರ ವಿರೋಧಿ ಅಂತ ಬಿಂಬಿಸುವುದೂ ಸರಿಯಲ್ಲ. ಯಾಕೆಂದರೆ ದೀರ್ಘಕಾಲದಲ್ಲಿ ಮೇಕ್ ಇನ್ ಇಂಡಿಯಾ ಭಾರತದ ಬಡ ಜನರ ಬದುಕಿನಲ್ಲಿ ಮಾಡುವ ನಷ್ಟಕ್ಕಿಂತ ಲಾಭವೇ ಹೆಚ್ಚು.

ಅಮೇರಿಕಾ ಪ್ರಸಿದ್ಧ ಲೇಖಕ ಜೇಮ್ಸ್ ಕ್ಲರ್ಕ್ ರಾಜಕಾರಣಿಗಳ ಬಗ್ಗೆ ವಿವರಿಸುವಾಗ

‘A politician thinks about next election, a statesman thinks about next generation’

ಎಂದು ಹೇಳುತ್ತಿದ್ದರು. ಈ ಮಾತು ನೂರಕ್ಕೆ ನೂರು ನಿಜ. ಚುನಾವಣೆಯನ್ನು ದೃಷ್ಟಿಲ್ಲಿಟ್ಟುಕೊಂಡು ಬಡವರಿಗೆ ಒಂದು ರೂಪಾಯಿಗೆ ಅಕ್ಕಿ ಕೊಡುವ, ಉಚಿತ ನೀರು-ವಿದ್ಯುತ್ ನೀಡುವ ಜನಪ್ರಿಯ ಯೋಜನೆಗಳನ್ನು ಮಾಡುವುದು ಸುಲಭ. ಆದರೆ ಆ ಬಡವರಿಗೆ ಜೀವನ ಪೂರ್ತಿ ತಮಗೆ ಬೇಕಾದ ಅಕ್ಕಿ,ನೀರು,ವಿದ್ಯುತ್‍ನ್ನು ತಾವೇ ಕಂಡುಕೊಳ್ಳ ಬಲ್ಲ ಬದುಕಿಕಟ್ಟು ಕೊಡುವ ದೂದೃಷ್ಟಿಯ ಯೋಜನೆ ರೂಪಿಸುವುದಿದೆಯಲ್ಲ ಅದು ಬಹುಕಷ್ಟ್ಲ. ಮೋದಿಯವರು ಎರಡನೆ ರೀತಿಯಲ್ಲಿ ಆಡಳಿತ ನಡೆಸಬಯಸುವ ನೇತಾರ. ಅವರ ಯೋಜನೆಗಳು ಹಸಿದವನಿಗೆ ಉಚಿತ ತಟ್ಟೆ ಅನ್ನ ನೀಡ ಬಯಸುವುದಿಲ್ಲ. ಅವನಿಗೆ ತನ್ನ ಅನ್ನದ ದಾರಿಯನ್ನು ತಾನೇ ಕಂಡುಕೊಳ್ಳುವ ಅವಕಾಶ ನೀಡುತ್ತವೆ. ಹಾಗಾಗಿ ಫಲಶ್ರುತಿಗಾಗಿ ಇನ್ನು ಕೆಲ ವರ್ಷಗಳಾದರೂ ಕಾಯಬೇಕು. ಅಲ್ಲವೇ?

Facebook ಕಾಮೆಂಟ್ಸ್

ಲೇಖಕರ ಕುರಿತು

Shreesha Punacha

He is from Ujire, presently lives in in muscat, Oman. He is very passionate writing about current affairs and politics.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!