ಪ್ರಚಲಿತ

ತಮ್ಮವರಲ್ಲದವರೆಲ್ಲಾ ಕಾಫಿರರೆಂದು ತಿಳಿಯುವವರಿಗೆ ಕಾರ್ಟೂನು ಖಾರವಾಗದಿದ್ದೀತೇ?

ಮೊನ್ನೆಮೊನ್ನೆ ಬೆಂಗಳೂರಿನ ಚರ್ಚ್ ಸ್ಟ್ರೀಟ್’ನಲ್ಲಿ ನಡೆದ ಬಾಂಬುಸ್ಫೋಟ ಎಂದಿನಂತೆ ಜನತೆಗೆ ಮರೆತುಹೋಗಿದೆ. ಸರಕಾರಕ್ಕೂ ಬೇಕಾಗಿರುವುದು ಅದೇ. ತನಿಖಾದಳ ತನ್ನ ಪಾಡಿಗೆ ತಾನು ಕೆಲಸ ಮಾಡುತ್ತಿದೆ. ಒಂದಷ್ಟು ಜನರನ್ನು ಬಂಧಿಸಿದೆ. ಒಂದೊಂದೇ ಬೆಚ್ಚಿ ಬೀಳಿಸುವ ಸುದ್ದಿಗಳು ಹೊರಬೀಳುತ್ತಿವೆ. ಬಂಧಿತರಾದವರೆಲ್ಲಾ ಭಟ್ಕಳ ಮೂಲದವರೇ. ದೇಶದಲ್ಲಿ ಎಲ್ಲೇ ಸ್ಫೋಟವಾಗಲಿ ಅದು ಕೊನೆಗೆ ಬಂದು ನಿಲ್ಲುವುದು ಭಟ್ಕಳದಲ್ಲೇ. ಅಷ್ಟರಮಟ್ಟಿಗೆ ಖ್ಯಾತಿ ಪಡೆದಿದೆ ಭಾರತದ ಪಶ್ಚಿಮ ಕರಾವಳಿಯ ಈ ಭಾಗ!

ಭಟ್ಕಳಕ್ಕೂ ಭಯೋತ್ಪಾದನೆಗೂ ನಂಟು ಇಂದು ನಿನ್ನೆಯದಲ್ಲ. 1991ರಲ್ಲಿ ಭಟ್ಕಳದಲ್ಲಿ ಕೋಮುಗಲಭೆ ನಡೆದಿತ್ತು. ಈ ಕೋಮುಗಲಭೆಗೆ ಕಾರಣ ಹುಡುಕುತ್ತಾ ಹೋದಾಗ ಸಿಕ್ಕಿದ್ದು ಆಘಾತಕಾರಿ ಅಂಶ. ಐ ಎಸ್ ಐ ಶಸ್ತ್ರಾಸ್ತ್ರ ಹಾಗೂ ಆರ್ ಡಿ ಎಕ್ಸ್ ಗಳನ್ನು ಭಟ್ಕಳದ ಕರಾವಳಿಗೆ ರವಾನಿಸಿತ್ತು. ಭಟ್ಕಳದ ಪೇಟೆಯೊಳಗೆ ಗಲಭೆ ಸೃಷ್ಟಿಸಿ ಪೊಲೀಸ್ ಹಾಗೂ ಸೇನೆಯ ಗಮನವನ್ನು ಅತ್ತ ಸೆಳೆದು ಶಸ್ತ್ರಾಸ್ತ್ರಗಳನ್ನು ಕರಾವಳಿ ತೀರದಿಂದ ಸುರಕ್ಷಿತವಾಗಿ ಭಟ್ಕಳದಲ್ಲಿರುವ ತಮ್ಮ ತಾಣಗಳಿಗೆ ಸಾಗಿಸಿದ್ದರು ಭಯೋತ್ಪಾದಕರು. ಇದರ ಸೂತ್ರಧಾರಿ ಬೇರ್ಯಾರಲ್ಲ; ಭೂಗತ ಜಗತ್ತು, ಬಾಲಿವುಡ್ಡನ್ನು ಆಳುತ್ತಿರುವ, ಭದ್ರತಾ ಪಡೆಗಳು ಇನ್ನೇನು ಹಿಡಿಯಬೇಕು ಅನ್ನುವಾಗ ರಾಜಕಾರಣಿಗಳ ಮತಬ್ಯಾಂಕ್ ರಾಜಕಾರಣದಿಂದಾಗಿ ತಪ್ಪಿಸಿಕೊಂಡ, ಈಗ ನರೇಂದ್ರ ಮೋದಿಗೆ ಬೆದರಿ ಪಾಕಿಸ್ತಾನದಲ್ಲಿ ಪ್ರತಿನಿತ್ಯ ತನ್ನ ನಿವಾಸವನ್ನು ಬದಲಾಯಿಸುತ್ತ ಅಂಡಲೆಯುತ್ತಿರುವ ಅದೇ ದಾವೂದ್ ಇಬ್ರಾಹಿಮ್!

ದಾವೂದ್ ಇಬ್ರಾಹಿಂ ಸೌದಿ ಅರೇಬಿಯಾದಿಂದ, ಐ ಎಸ್ ಐ ಸಹಾಯದಿಂದ ಹಡಗುಗಳ ಮೂಲಕ ಶಸ್ತ್ರಾಸ್ತ್ರ ಹಾಗೂ ಆರ್​ಡಿಎಕ್ಸ್​ಗಳನ್ನು ರವಾನಿಸಿದ್ದ. ಈ ಶಸ್ತ್ರಾಸ್ತ್ರಗಳು ಗೋವಾ ಬಂದರಿಗೆ ಬಂದು ತಲುಪಿದ್ದವು. ಅಲ್ಲಿಂದ ಸ್ಪೀಡ್ ಬೋಟ್​ಗಳ ಮೂಲಕ ಸಮುದ್ರ ಮಾರ್ಗವಾಗಿ ಭಟ್ಕಳಕ್ಕೆ ಇವುಗಳನ್ನು ರವಾನಿಸಲಾಯಿತು. ಭಟ್ಕಳದ ಸಮುದ್ರ ತೀರದಲ್ಲಿರುವ ನೈಸರ್ಗಿಕ ಬಂದರು ನಡುಗಡ್ಡೆಯಿಂದ ಮೀನುಗಾರಿಕಾ ದೋಣಿಗಳ ಮೂಲಕ ನಗರಕ್ಕೆ ತರಲಾಯಿತು. ಅಲ್ಲಿಂದ ಆಂಬುಲೆನ್ಸ್​ಗಳ ಮೂಲಕ ಈ ಶಸ್ತ್ರಾಸ್ತ್ರಗಳನ್ನು ಭಾರತದ ವಿವಿಧೆಡೆ ರವಾನಿಸಲಾಗಿತ್ತು. ಈ ಆಂಬುಲೆನ್ಸುಗಳು ಯಾವ ಆಸ್ಪತ್ರೆಯದ್ದು? ಭಟ್ಕಳದಲ್ಲಿದ್ದ ಮೊಹಮದ್ ಮೋತಿಶಾ ಇಸ್ಮಾಯಿಲ್ ಕೋಲಾ ಎಂಬಾತನನ್ನು ಬಳಸಿಕೊಂಡು ದಾವೂದ್ ಭಟ್ಕಳದಲ್ಲಿ ಭೂಮಿ ಖರೀದಿಸಿದ್ದ. ಅಲ್ಲಿ ಅಸ್ಪತ್ರೆಯನ್ನು ಸ್ಥಾಪಿಸಲಾಯಿತು. ಈ ಆಸ್ಪತ್ರೆಗೆ ಆಂಬುಲೆನ್ಸ್​ಗಳನ್ನು ಕೂಡ ಖರೀದಿಸಿದ್ದರು. ಶಸ್ತ್ರಾಸ್ತ್ರ, ಆರ್ ಡಿ ಎಕ್ಸ್ ಗಳನ್ನು ಭಾರತದ ಬೇರೆ ಬೇರೆ ಕಡೆ ಸಾಗಿಸಲು ಬಳಸಿಕೊಂಡದ್ದು ಇವೇ ಆಂಬುಲೆನ್ಸುಗಳನ್ನು. ಮೋತಿಶಾಗೆ ಸಹಾಯ ಮಾಡಿದವರು ರಿಯಾಜ್, ಇಕ್ಬಾಲ್ ಹಾಗೂ ಯಾಸೀನ್ ಭಟ್ಕಳ್! ಇದಾಗಿ ಎರಡು ವರ್ಷಗಳ ತರುವಾಯ ಮುಂಬೈಯಲ್ಲಿ ಸರಣಿ ಬಾಂಬು ಸ್ಫೋಟ ನಡೆದಿತ್ತು. ಈ ಸ್ಫೋಟಕ್ಕೆ ಬಳಕೆಯಾದದ್ದು ಭಟ್ಕಳದಲ್ಲಿ ಬಂದಿಳಿದ ಆರ್ಡಿಎಕ್ಸೇ! ಮುಂದೆ ಭಾರತದಾದ್ಯಂತ ಆದ ಸ್ಪೋಟಗಳೆಲ್ಲದರ ವಿಚಾರಣೆ ಅಂತಿಮವಾಗಿ ಬಂದು ನಿಲ್ಲುವುದು ಭಟ್ಕಳಕ್ಕೆ. ಒಂದೋ ಅಲ್ಲಿಂದ ಸ್ಫೋಟಕ-ಸಾಮಗ್ರಿಗಳು ಪೂರೈಕೆಯಾಗಿವೆ ಇಲ್ಲಾ ಬಂಧಿತನ ಮೂಲ ಅದೇ ಆಗಿರುತ್ತದೆ. 1991ರ ಕೋಮುಗಲಭೆ ಬಗ್ಗೆ ನ್ಯಾಯಮೂರ್ತಿ ಜಗನ್ನಾಥ ಶೆಟ್ಟಿ ಆಯೋಗ ಕೂಲಂಕೂಶ ತನಿಖೆ ಮಾಡಿ ತನ್ನ 2000 ಪುಟಗಳ ವರದಿಯನ್ನು 1997ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು. ಅದರಲ್ಲಿ ಕೋಮುಗಲಭೆಗೆ ಕಾರಣಗಳ ಜೊತೆಗೆ ಭಟ್ಕಳದಲ್ಲಿ ಬೇರೂರಿರುವ ಭಯೋತ್ಪಾದನೆಯನ್ನು ಮೂಲೋತ್ಪಾಟನೆ ಮಾಡಲು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ವಿವರವಾಗಿ ನಮೂದಿಸಿತ್ತು. ಆದರೆ ಈ ವರದಿ ಇಂದಿಗೂ ವಿಧಾನಮಂಡಲದಲ್ಲಿ ಸಲ್ಲಿಕೆಯಾಗದೆ ಧೂಳು ತಿನ್ನುತ್ತಾ ಕೂತಿದೆ. ಕಾರಣ ಮತ್ತದೇ ಮತಬ್ಯಾಂಕ್ ರಾಜಕಾರಣ!

ಇದರ ಬಗ್ಗೆ ನಮ್ಮ ಇಂಟಲಿಜೆನ್ಸ್ ಏಜೆನ್ಸಿಗೆ ತಿಳಿದಿರಲಿಲ್ಲವೆ? ತಿಳಿದಿತ್ತು. ಇಂಟೆಲಿಜೆನ್ಸಿ ಅಧಿಕಾರಿ ಅಗರ್​ವಾಲ್ ಈ ಮಾಹಿತಿಯನ್ನು ರಾಜ್ಯ ಕಾರ್ಯದರ್ಶಿ ಅವರಿಗೆ ರವಾನಿಸಿದ್ದರು. ಸರಕಾರ ಎಚ್ಚೆತ್ತುಕೊಳ್ಳಲಿಲ್ಲ. ಅಗರ್ವಾಲ್ ಮತಾಂಧರಿಗೆ ಬಲಿಯಾದರು. ಸ್ಥಳೀಯರ ಸಹಕಾರವಿಲ್ಲದೆ ಈ ಚಟುವಟಿಕೆಗಳು ನಡೆಯಲು ಸಾಧ್ಯವೇ. ಈ ಚಟುವಟಿಕೆಗಳು ಆರಂಭವಾಗುವ ಮೊದಲೇ ದುಬೈಯಿಂದ ಕೆಲವು ವ್ಯಕ್ತಿಗಳು ಭಟ್ಕಳದ ಮೂಲನಿವಾಸಿಗಳಿಗೆ ಮೂರುಪಟ್ಟು ಮೌಲ್ಯಕ್ಕೆ ಅಲ್ಲಿನ ಆಯಕಟ್ಟಿನ ಜಾಗಗಳನ್ನು ಖರೀದಿಸಿದ್ದರು. ತಮಗೆ ಅನುಕೂಲಕರವಾಗುವಂತೆ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಅಲ್ಲಿನ ಮನೆಗಳು ಹೇಗಿವೆಯೆಂದರೆ ಓಣಿಯ ಮೊದಲ ಮನೆ ಹೊಕ್ಕರೆ ಓಣಿಯ ಕೊನೆಯ ಮನೆಯಿಂದ ಹೊರಬರಬಹುದು, ಅಂತಹ ನಿರ್ಮಾಣಗಳು. ಮುಂದೆ ಏಕಾಏಕಿ ಇವರ ಸಂಖ್ಯೆ ಹೆಚ್ಚುತ್ತಾ ಹೋಯಿತು. ಮಾರುಕಟ್ಟೆ, ರಿಯಲ್ ಎಸ್ಟೇಟ್ ಮುಂತಾದುವುಗಳಲ್ಲಿ ತಮ್ಮ ಪಾರುಪತ್ಯ ಸ್ಥಾಪಿಸಿಕೊಂಡ ಇವರು ಮಾದಕದ್ರವ್ಯ ಕಳ್ಳಸಾಗಣೆಯನ್ನೂ ಮಾಡತೊಡಗಿದರು. ಮಾದಕದ್ರವ್ಯಗಳ ಜೊತೆಜೊತೆಗೇ ಶಸ್ತ್ರಾಸ್ತ್ರಗಳೂ ಬರತೊಡಗಿದವು. ಇಂದು ಭಾರತದಾದ್ಯಂತ ಈ ಜಾಲ ಬೆಳೆದಿದೆ.  ಯಾವ ಕ್ಷಣದಲ್ಲಿ ಎಲ್ಲಿ ಸ್ಫೋಟವಾದೀತೆಂದು ಹೇಳುವಂತಿಲ್ಲ. ತನಿಖೆಗಳು ನಡೆಯುತ್ತವೆ. ಪೊಲೀಸರು ಬಂಧಿಸುತ್ತಾರೆ. ಅದಕ್ಕಿಂತ ಹೆಚ್ಚಿನದ್ದೇನು ಆಗುವುದೇ ಇಲ್ಲ. ಕೆಲವು ದಿನಗಳ ಬಳಿಕ ಜನ ಮರೆಯುತ್ತಾರೆನ್ನುವುದು ಸರಕಾರಕ್ಕೂ ತಿಳಿದಿದೆ. ಮತ್ತೆ ನೆನಪಾಗುವುದು ಇನ್ನೊಂದು ಸ್ಫೋಟವಾದಾಗಲೇ!

ಮೊನ್ನೆ ನಡೆದ ಸ್ಫೋಟಕ್ಕೆ ಸಂಬಂಧಿಸಿದಂತೆ ತಂಜೀಂ ಸಂಸ್ಥೆಯ ಮುಜಾಮಿಲ್ ಖಾಜಿಯಾ ಪೊಲೀಸರ ಮೇಲೆ ಆಪಾದನೆ ಹೊರಿಸಿದ್ದಾರೆ. ಈ ಖಾಜಿಯಾ ಒಂದು ಸಮಯದಲ್ಲಿ ದೇಶದ್ರೋಹ ಚಟುವಟಿಕೆಗೆ ಸಹಕರಿಸಿದ್ದಾನೆಂದು ನ್ಯಾಯಾಧೀಶ ಸ್ಥಾನದಿಂದ ವಜಾಗೊಂಡಾತ. ಈತನ ಸಂಸ್ಥೆಗೆ ದೇಶ ವಿದೇಶಗಳಿಂದ ಹಣ ಹರಿದುಬರುತ್ತಿದೆ. ಈತನನ್ನು ತನಿಖೆಗೆ ಒಳಪಡಿಸುವುದರ ಬದಲು ನಮ್ಮ ರಾಜ್ಯ ಸರಕಾರ ಸಂಬಾರ ಮಂಡಳಿಯ ಅಧ್ಯಕ್ಷ ಹುದ್ದೆಯ “ಭಾಗ್ಯ”ವೊದಗಿಸಿದೆ. ಪಾಕಿಸ್ತಾನ ಪರ ಹೇಳಿಕೆ ನೀಡುವ ದೇಶದ್ರೋಹಿ, ಹದಿನೈದೇ ನಿಮಿಷದಲ್ಲಿ ಹಿಂದೂಗಳನ್ನೆಲ್ಲಾ ಮುಗಿಸುತ್ತೇನೆ ಎಂದಿದ್ದ ಅಭಿನವ ಉತ್ತರಕುಮಾರ, ಹೈದ್ರಾಬಾದ್ ಮೂಲದ ರಜಾಕರ ವಂಶಸ್ಥ ಅಸಾದುಲ್ಲಾ ಓವೈಸಿಯನ್ನು ತಂಜೀಮ್ ಸಂಸ್ಥೆಯ ಶತಮಾನೋತ್ಸವದ ಸಂದರ್ಭದಲ್ಲಿ ಭಟ್ಕಳಕ್ಕೆ ಕರೆಸಿ ಸನ್ಮಾನ ಮಾಡಲಾಗಿದೆ. ಸಮಾಜ ಸೇವೆ ಸೋಗಿನಲ್ಲಿ ತಂಜೀಮ್ ಸಂಸ್ಥೆ ಹಿಂದೂಗಳ ವಿರುದ್ಧ ಕಾರ್ಯಾಚರಿಸುತ್ತಿದೆ.

ಭಯೋತ್ಪಾದನೆಗೆ ಬಡತನ, ಅನಕ್ಷರತೆಯೇ ಕಾರಣ ಎಂದು ಕೆಲ ವಿಚಾರವಾದಿಗಳು ತಮ್ಮ ವಾದ ಹರಿಯಬಿಡುತ್ತಾರೆ. ಆದರೆ ಬಂಧಿತರಲ್ಲಿ ಹೆಚ್ಚಿನವರು ಇಂಜಿನಿಯರ್, ಡಾಕ್ಟರುಗಳೇ. ಭಯೋತ್ಪಾದನೆಗೆ ಮತವಿಲ್ಲ ಎನ್ನುವುದು ಬಹುತೇಕರ ವಾದ. ಆದರೆ ಭಯೋತ್ಪಾದಕರೆಲ್ಲರ ಮತ ಒಂದೇ ಎನ್ನುವುದು ಅವರಿಗೆಲ್ಲಾ ಮರೆತುಹೋಗಿರುತ್ತದೆ. ಅಲ್ಲಲ್ಲ ಮರೆಸುವಂತೆ ಈ “ಸೆಕ್ಯುಲರು ವ್ಯಾಧಿ” ಅವರನ್ನು ಪ್ರೇರೇಪಿಸುತ್ತದೆ. ಸತ್ಯ ಬೆತ್ತಲೆಯಾಗುತ್ತಲೇ ಇದೆ. ಇಸ್ಲಾಂ ಜಿಹಾದ್ ಖಡ್ಗ ಧರಿಸಿ ಮುನ್ನುಗ್ಗುತ್ತಲೇ ಇದೆ. ಯಾರೂ ಸಿಗದಿದ್ದಾಗ ತಮ್ಮತಮ್ಮಲ್ಲೇ ಜಗಳ ಶುರುಹಚ್ಚಿಕೊಳ್ಳುತ್ತಾರೆ. ಯಾಜಿದಿಗಳನ್ನು ಮನುಕುಲವೇ ಹೇಸುವಂತೆ ನಡೆಸಿಕೊಂಡ ಈ ಮತಾಂಧತೆ ವಿಶ್ವವನ್ನೇ ಸುಡುತ್ತಿದೆ. ಪ್ಯಾರಿಸಿನಲ್ಲಿ ತಮ್ಮ ವಿರುದ್ಧದ ಕಾರ್ಟೂನೇ ಅವರಿಗೆ ಖಾರವಾಯಿತು! ಚೀನಾದ ಗ್ಸಿಯಾಂಗ್ ಪ್ರಾಂತ್ಯದಲ್ಲಿ ತಮಗೆ ಪ್ರತ್ಯೇಕ ದೇಶ ಬೇಕು ಎನ್ನುವ ಕೂಗು ಬಲವಾಗುತ್ತಿದೆ. ಅಲ್ಲಿರುವುದು 60% ಟರ್ಕ್ ಮುಸ್ಲಿಮರು. ಇಪ್ಪತ್ತು ವರ್ಷದ ಹಿಂದೆ ಆರಂಭವಾದ ಈ ವಾದ ಈಗ ಉಗುರಿಸ್ತಾನ್ ನಿರ್ಮಾಣ ಮಾಡಬೇಕೆಂದು ಹಿಂಸಾತ್ಮಕ ಚಳುವಳಿಯಾಗಿ ಬದಲಾಗಿದೆ. ಅಲ್ಲಿ ಉಗ್ರ ತರಬೇತಿ ಶಿಬಿರಗಳಿವೆ. ಇಂದು ಈ ವೈರಸ್ ಟಿಬೆಟ್, ಮಂಗೋಲಿಯಾ, ತೈವಾನ್’ಗಳವರೆಗೆ ಹಬ್ಬಿದೆ. ಈ ಶತಮಾನದ ಆರಂಭದಲ್ಲಿ ಚೀನಾದ ರಾಜಕಾರಣಿಗಳು ಮಾಡಿದ ಓಲೈಕೆ ನೀತಿಯ ಫಲವಿದು. ಚೀನಾ ಗಡಿಯಲ್ಲಿರುವ ಎಲ್ಲಾ ಮುಸ್ಲಿಮ್ ರಾಷ್ಟ್ರಗಳಿಂದ ಇದಕ್ಕೆ ಬೆಂಬಲವೂ ಸಿಗುತ್ತಿದೆ. ರಷ್ಯಾದಲ್ಲಿ ಮುಸ್ಲಿಂ ಬಾಹುಳ್ಯವುಳ್ಳ ಜಾಗಗಳಲ್ಲಿ ಪ್ರತ್ಯೇಕವಾದಿಗಳ ಹಿಂಸೆ ಯಾವ ಮಟ್ಟ ತಲುಪಿದೆಯೆಂದರೆ ಸ್ವತಃ ರಷ್ಯಾದ ಅಧ್ಯಕ್ಷರೇ “ರಷ್ಯನ್ನರಾಗಿ ಬದುಕುವುದಾದರೆ ಇಲ್ಲಿರಿ, ಇಲ್ಲದಿದ್ದರೆ ದೇಶ ಬಿಟ್ಟು ತೊಲಗಿ” ಎಂದು ಗುಡುಗಿದ್ದಾರೆ.

ಕೆಲವೇ ವರ್ಷಗಳಲ್ಲಿ ಸಂಪೂರ್ಣ ಇಸ್ಲಾಂಮಯವಾಗುವ ಭೀತಿಗೆ ಫ್ರಾನ್ಸ್ ಸಿಲುಕಿದೆ. ಲವ್ ಜಿಹಾದ್ ಇಂಗ್ಲೆಂಡನ್ನು ಯಾವ ಪರಿ ಹೈರಾಣನ್ನಾಗಿ ಮಾಡಿದೆಯೆಂದರೆ ಅಲ್ಲಿನ ಪ್ರತಿಷ್ಠಿತ ವಿಶ್ವವಿದ್ಯಾಲಯಗಳ ಆವರಣದಲ್ಲೇ ಹುಡುಗಿಯರನ್ನು ಬಲವಂತವಾಗಿ ಇಸ್ಲಾಮಿಗೆ ಮತಾಂತರ ಮಾಡಲಾಗುತ್ತಿದೆ. ಸ್ವೀಡನ್, ಜರ್ಮನಿಗಳೂ ಭಯೋತ್ಪಾದನೆಗೆ ಗುರಿಯಾಗಿ ನರಳುತ್ತಿವೆ. ಜರ್ಮನಿಯಲ್ಲಿ ಕಳೆದ ತಿಂಗಳ ಎಂಟರಂದು ಹತ್ತುಸಾವಿರಕ್ಕೂ ಹೆಚ್ಚು ಜನರು ಬೀದಿಬೀದಿಗಿಳಿದು ಮುಸ್ಲಿಮರನ್ನೆಲ್ಲಾ ದೇಶದಿಂದ ಒದ್ದೋಡಿಸಬೇಕೆಂದು ಪ್ರತಿಭಟನೆ ನಡೆಸಿದರು. ಅತ್ತ ಯೂರೋಪಿನ ಪ್ರತಿಯೊಂದು ದೇಶ ಭಯೋತ್ಪಾದನೆಗೆ ಬಲಿಯಾಗಿದ್ದರೆ, ಆಫ್ರಿಕಾದ ದೇಶಗಳ ಜನರ ಬಲಯುತ ದೇಹಕ್ಕೆ ಇಸ್ಲಾಮಿನ ಮೆದುಳನ್ನಿಟ್ಟು ದೇಶಕ್ಕೆ ದೇಶವೇ ಆತ್ಮಾಹುತಿ ಬಾಂಬರುಗಳಾಗಿ ಉರಿದೆದ್ದು ಹೋಗುತ್ತಿವೆ. ಎಷ್ಟೇ ಸುರಕ್ಷತೆ ವಹಿಸಿದರೂ ಅಮೇರಿಕಾ, ಕೆನಡಾಗಳನ್ನೂ ಬಿಟ್ಟಿಲ್ಲ ಈ ಮತಾಂಧರು. ಆಸ್ಟ್ರೇಲಿಯಾದಲ್ಲೂ ಬೀಡುಬಿಟ್ಟಿದ್ದಾರೆ. ಬಹುಷಃ ಭಯೋತ್ಪಾದಕರಿಲ್ಲದ ದೇಶವೆಂದರೆ ಜಪಾನ್ ಮಾತ್ರ. ಕಾರಣ ಅದು ಇಸ್ಲಾಮನ್ನೇ ಹೊರಗಿಟ್ಟಿದೆ!

ಯಾವುದೇ ಮತವಾಗಲಿ ಬದುಕಿ-ಬದುಕಲು ಬಿಡಿ ಎನ್ನುವ ಮೂಲ ತತ್ವವನ್ನೇ ಅರಿಯದಿದ್ದಲ್ಲಿ ನಷ್ಟ ಅದಕ್ಕೇ. ಇವತ್ತು ತನ್ನದ್ದಲ್ಲದ್ದೆಲ್ಲವನ್ನೂ ಅಸಹನೆಯಿಂದ ಕಂಡು ನಾಶ ಮಾಡುತ್ತಾ ಬರುವ ಅದು ಎಲ್ಲಾ ಮುಗಿದ ಮೇಲೆ ಸುಟ್ಟುಕೊಳ್ಳುವುದು ತನ್ನನ್ನೇ. ಸಂಪೂರ್ಣ ಇಸ್ಲಾಂಮಯವಾಗಿರುವ ದೇಶಗಳಲ್ಲಿ ಈ ಸಂಗತಿ ಈಗಾಗಲೇ ಅರಿವಿಗೆ ಬರುತ್ತಿದೆ. ಇಸ್ಲಾಂ ಜಗತ್ತಿನ ನಂಬಿಕೆಯನ್ನು ಕಳೆದುಕೊಳ್ಳುತ್ತಿದೆ. ಇಸ್ಲಾಮಿಕ್ ಭಯೋತ್ಪಾದನೆ ನಿಲ್ಲಬೇಕಾದರೆ ಮುಸ್ಲಿಮರೇ ಭಯೋತ್ಪಾದಕರ ವಿರುದ್ಧ ಸೆಟೆದು ನಿಲ್ಲಬೇಕಾದ ಅಗತ್ಯತೆ ಇದೆ. ಆದರೆ ಅವರಿಂದ ಕನಿಷ್ಟ ವಿರೋಧಿಸುವ ಹೇಳಿಕೆಯೇ ಬರುತ್ತಿಲ್ಲ. ತಮ್ಮವರು ಮುಗ್ಧರು ಎನ್ನುವ ಅವರ ಭಾವನೆಯೇ(?) ಅವರಿಗೆ ಮುಳ್ಳಾಗಿದೆ. ಮದರಸಾಗಳಲ್ಲಿ ರಾಷ್ಟ್ರೀಯತೆಯ ಬಗ್ಗೆ ಶಿಕ್ಷಣ ನೀಡಬೇಕಾಗಿದೆ. ಅದಕ್ಕಿಂತಲೂ ಮುಖ್ಯವಾಗಿ ಅನ್ಯ ಮತದವನನ್ನು ಕಾಫಿರನಂತೆ ಕಾಣದೆ ಮನುಷ್ಯನನ್ನಾಗಿ ಕಾಣು ಎಂದು ಕುರಾನಿನಲ್ಲಿ ಬದಲಾಯಿಸಬೇಕಾದ ಅವಶ್ಯಕತೆ ಇದೆ!

Rajesh Rao

Facebook ಕಾಮೆಂಟ್ಸ್

ಲೇಖಕರ ಕುರಿತು

Rajesh Rao

ವೃತ್ತಿ: ವಿ ಎಲ್ ಎಸ್ ಐ ಇಂಜಿನಿಯರ್
ಪ್ರವೃತ್ತಿ: ಇತಿಹಾಸ/ಪ್ರಚಲಿತ ವಿದ್ಯಮಾನ, ಕಥೆ-ಕವನ ಬರವಣಿಗೆ

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!