Featured ಅಂಕಣ

ವಿಶ್ವಯುದ್ಧದ ಶತಮಾನ ಹೊಸ್ತಿಲಲ್ಲಿ ಭಾರತೀಯರ ಪರಾಕ್ರಮದ ಹಿನ್ನೋಟ; ಸಂಸ್ಮರಣೆಯ ಮುನ್ನೋಟ.

-“ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.”

ಕೇಸರಿ ಬಣ್ಣ ಎಂದರೆ ತ್ಯಾಗ, ಬಲಿದಾನದ ಸಂಕೇತ. ಕೇಸರಿ ಗೊಂಡೆಹೂವು (ಮಾರಿಗೋಲ್ಡ್) ಸುಲಭ ಲಭ್ಯತೆ, ಸುಗಂಧ, ಔಷಧೀಯ ಗುಣಗಳಿಗೆ ಹೆಸರುವಾಸಿ. ಇನ್ನು ಮುಂದೆ ಕೇಸರಿ ಗೊಂಡೆಹೂವನ್ನು ಕಂಡ ಕೂಡಲೇ ನಮಗೆಲ್ಲ ಮೊದಲ ವಿಶ್ವಯುದ್ಧದಲ್ಲಿ ‘ನ್ಯಾಯ’ದ ಪರವಾಗಿ ನಿಂತು ಸೇವೆಗೈದ ದಶಲಕ್ಷಕ್ಕೂ ಅಧಿಕ ಭಾರತೀಯ ಸೇನಾನಿಗಳ ನೆನಪಿನ ಗುರುತಾಗಲಿದೆ. ಭಾರತೀಯ ಸೈನಿಕರ ತ್ಯಾಗ, ಬಲಿದಾನಗಳ ಸಂಕೇತವಾಗಲಿದೆ. ಜಗತ್ತಿನಾದ್ಯಂತ ಈ ಹೂವನ್ನು ಅವರ ಸ್ಮರಣೆಯ ಸಾಂಕೇತಿಕ ಪ್ರತಿಮೆಯಾಗಿ, ಗೌರವಸೂಚಕ ಪ್ರಜ್ಞೆಯಾಗಿ ಘೋಷಿಸಲಾಗಿದೆ. ಇದು ಭಾರತ ಸರಕಾರದ ‘ನೆನಪಿಸಿಕೊಳ್ಳಿ(ರಿಮೆಂಬರೆನ್ಸ್)’ ಯೋಜನೆಯ ಭಾಗ. ಬ್ರಿಟನ್‍ನಲ್ಲಿ ಪೊಪಿ ಹೂವನ್ನು ಯುದ್ಧದಲ್ಲಿ ಭಾಗವಹಿಸಿದವರ ಸ್ಮರಣೆಯ ಸಂಕೇತವೆಂದು ಘೋಷಿಸಿದರೆ ಭಾರತದಲ್ಲಿ ಕೇಸರಿ ಗೊಂಡೆ ಹೂ. ಭಾರತ ಹಾಗೂ ಬ್ರಿಟನ್ ಎರಡೂ ದೇಶಗಳು ಇತಿಹಾಸದ ಘನತೆಯನ್ನು ನಾಚಿಸುವಂತೆ ಇಷ್ಟು ವರ್ಷಗಳ ಕಾಲ ಈ ಮಹಾಯುದ್ಧದಲ್ಲಿ ಭಾರತೀಯರ ಕೊಡುಗೆಯನ್ನು ಮುಖ್ಯವಾಹಿನಿಯಲ್ಲಿ ವಿಶ್ವದ ಮುಂದಿಡುವ, ಸ್ಮರಿಸುವ ನ್ಯಾಯಯುತ ಕೆಲಸವನ್ನು ಮಾಡಿಲ್ಲ. ವಿಶ್ವಮಟ್ಟದ ಅಧಿಕಾರ ಸರಿದೂಗಿಸುವ ರಾಜಕಾರಣದಿಂದ ಭಾರತೀಯ ಸೇನಾನಿಗಳ ಕೊಡುಗೆಯನ್ನು ಮರೆಮಾಚುವ ಪ್ರಯತ್ನವನ್ನು ಮಾಡಿಕೊಂಡು ಬಂದಿವೆ. ಅದನ್ನೀಗ ನೆನಪಿಸುವ ಕಾಲ ಬಂದಿದೆ. “ನೆನಪಿಸಿಕೊಳ್ಳಿ” ಎಂಬುದು ಸ್ವದೇಶ ಹಾಗೂ ವಿದೇಶಗಳಲ್ಲಿಯೂ ಭಾರತೀಯರ ವೀರ ಯಶೋಗಾಥೆಯನ್ನು ಪುನರುಚ್ಛರಿಸುವ ಪ್ರಯತ್ನ.

‘ರಾಷ್ಟ್ರೀಯತೆ’ 19ನೇ ಶತಮಾನವನ್ನು ಆಳಿದ ಬಹುದೊಡ್ಡ ಶಕ್ತಿ. ಯುರೋಪ್‍ನ ಬಹುತೇಕ ಕಡೆಗಳಲ್ಲಿ ರಾಜ ಪ್ರಭುತ್ವದ ಆಡಳಿತ ಪತನವಾಗಿ ಹೊಸ ಆಧುನಿಕ ರಾಜ್ಯಗಳ ರಚನೆಯ ಹಂಬಲ, ಹೊಸ ಸಾಮ್ರಾಜ್ಯಗಳ ಕಟ್ಟುವಿಕೆ, ವಿಸ್ತರಣೆ, ಜಗತ್ತನ್ನು ಆಳಬೇಕೆಂಬ ಮಹತ್ವಾಕಾಂಕ್ಷೆ ಹಾಗೂ ಅದಕ್ಕಾಗಿ ನಡೆದ ಪರಸ್ಪರ ಆಂತರಿಕ ಕಚ್ಚಾಟಗಳ ಫಲವಾಗಿ ಹೊರಹಿಮ್ಮಿದ್ದು ಎರಡು ಭಯಾನಕ ವಿಶ್ವ ಯುದ್ಧಗಳು. ಹಿಂದಿನ ಎಲ್ಲಾ ಯುದ್ಧಗಳನ್ನು ಸಮಗ್ರೀಕರಿಸಿ ಕೊನೆಗೊಳಿಸುವ ಹಾಗೂ ಮುಂದಿನ ಮಹಾಯುದ್ಧಕ್ಕೆ ಮುನ್ನಡಿ ಬರೆಯುವ ಕೆಲಸ ಮಾಡಿದ್ದು ಮೊದಲ ಮಹಾಯುದ್ಧ(1914-1918).

ಆಸ್ಟ್ರೋ-ಹಂಗೇರಿಯನ್ ಉತ್ತರಾಧಿಕಾರಿ, ಆರ್ಚ್‍ಡ್ಯುಕ್ ಫ್ರಾನ್ಜ್ ಫರ್ಡಿನಾಂಡ್‍ನನ್ನು ಸರ್ಬಿಯದವರು ಹತ್ಯೆಗೆಯ್ದದ್ದು ಪ್ರಮುಖ ಕಾರಣ. ಅದಾಗಲೇ ಹೊಂದಾಣಿಕೆಯಲ್ಲಿದ್ದ ಯುರೋಪಿನ ಫ್ರಾನ್ಸ್, ಬ್ರಿಟನ್, ರಷ್ಯಾ (ಟ್ರಿಪಲ್ ಎಂಟಿಟಿ) ಒಂದು ಕಡೆ ಜರ್ಮನಿ, ಆಸ್ಟ್ರಿಯ-ಹಂಗೇರಿ, ಇಟಲಿ (ಟ್ರಿಪಲ್ ಅಲಯನ್ಸ್) ಮತ್ತೊಂದು ಕಡೆ ತ್ರಿವಳಿ ಮೈತ್ರಿಕೂಟಗಳ ರಚನೆ ಹಾಗೂ ಕ್ರಿಯೆಗೆ ಪ್ರತಿಕ್ರಿಯೆಯಾಗಿ ಸರ್ಬಿಯಾ ಮೇಲೆ 28 ಜುಲೈ 1914ರಂದು ಆಸ್ಟ್ರಿಯ-ಹಂಗೇರಿ ನಡೆಸಿದ ದಾಳಿಯಿಂದ ಪ್ರಾರಂಭವಾದ ಈ ಮಹಾಯುದ್ಧದಲ್ಲಿ ಹತ್ತು ದಶಲಕ್ಷ ಜನರ ಮಾರಣ ಹೋಮಕ್ಕೆ ಕಾರಣವಾಯಿತು. 20 ದಶಲಕ್ಷಕ್ಕೂ ಅಧಿಕ ಜನಸಾಮಾನ್ಯರು ಗಾಯಗೊಂಡವರು. ಲೆಕ್ಕಕ್ಕೆ ಸಿಗದ ಹಾನಿ, ಸಾವುನೋವುಗಳೆಷ್ಟೋ. 11 ನವೆಂಬರ್ 1918ರಂದು ಅಂದರೆ ಸರಿಯಾಗಿ ನೂರು ವರ್ಷಗಳ ಹಿಂದೆ ಜರ್ಮನಿಯ ಶರಣಾಗತಿಯೊಂದಿಗೆ ಮೊದಲ ಮಹಾಯುದ್ಧ ಕೊನೆಗೊಂಡಿತು. ಈ ಯುದ್ಧದ ಹಿಂದೆ ಇದ್ದದ್ದು ಯುರೋಪಿನ ಕೆಲವೇ ದೇಶಗಳ ವೈಯ್ಯಕ್ತಿಕ ಹಿತಾಸಕ್ತಿ ಮತ್ತು ವಿಶ್ವವನ್ನು ಆಳಬೇಕೆಂಬ ವಿಸ್ತಾರವಾದಿ ಹಂಬಲ. ಒಂದು ಮತ್ತೊಂದಕ್ಕೆ ಕಾರಣವಾಗುವಂತೆ ಸಹಜವಾಗಿ ಮೊದಲ ವಿಶ್ವಯುದ್ಧ ನಂತರದ ರಾಜಕಾರಣ ಹಾಗೂ ಮೊದಲ ಯುದ್ಧದ ಪ್ರತಿಕ್ರಿಯೆಯಾಗಿ ಹೊಮ್ಮಿದ್ದು ಎರಡನೇ ಮಹಾಯುದ್ಧ. ಅಲ್ಲಿಂದ ಮುಂದೆ ಶೀತಲ ಸಮರ, ನಂತರ ಆರ್ಥಿಕ ಸಮರ ಹಾಗೂ ಪ್ರಸ್ತುತ ನಡೆಯುತ್ತಿರುವ ಜಾಗತಿಕ ವಿಶ್ವದಲ್ಲಿ ತಮ್ಮ ಸ್ವತಂತ್ರ ಅಸ್ಮಿತೆ ಉಳಿಸಿಕೊಳ್ಳುವ ಸಮರ.

ಮೊದಲ ವಿಶ್ವಯುದ್ಧದಲ್ಲಿ ಬ್ರಿಟನ್ ಮಿತ್ರಕೂಟ ಗೆದ್ದಿತು. ಭಾರತಕ್ಕೇನು ಸಿಕ್ಕಿತು?

ಎರಡು ಮೂರು ದೇಶಗಳ ಹಿತಾಸಕ್ತಿಯ ಆಡುಂಬೋಲವಾದರೂ ವಿಶ್ವದ ಬಹುತೇಕ ಸ್ವತಂತ್ರ ಹಾಗೂ ಅಧೀನ ದೇಶಗಳು ಈ ಯುದ್ಧಗಳಲ್ಲಿ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಪಾಲ್ಗೊಂಡ ಕಾರಣ ಇವನ್ನು ವಿಶ್ವಯುದ್ಧಗಳು ಎಂದು ಕರೆಯಲಾಗಿದೆ. ಗಾತ್ರ, ಪ್ರಮಾಣ, ಪ್ರದೇಶ ಹಾಗೂ ವಿಸ್ತಾರದಿಂದ ಹಿಂದೆಂದೂ ನಡೆಯದ ಮಹಾಯುದ್ಧಗಳೇ ಆಗಿವೆ. ಮೊದಲ ವಿಶ್ವಯುದ್ಧದಲ್ಲಿ ಬ್ರಿಟಿಷ್ ವಸಾಹತುವಾಗಿದ್ದ ಭಾರತ ಎಂಬ ಏಕೈಕ ಕಾರಣಕ್ಕೆ ಭಾರತದ ಸೇನೆ, ಇಲ್ಲಿನ ಕಾರ್ಖಾನೆಗಳು ಹಾಗೂ ಜನಸಾಮಾನ್ಯರೂ ಈ ಯುದ್ಧಗಳಲ್ಲಿ ತಮ್ಮ ನೆತ್ತರು ಸುರಿಸಿದ್ದಾರೆ. ಯಾರದ್ದೋ ಸ್ವಾರ್ಥಕ್ಕೆ, ಬೇರೆ ದಾರಿಯಿಲ್ಲದೆ ತಮ್ಮ ಪರಾಕ್ರಮವನ್ನು ಮೆರೆದು, ಇಂದಿಗೂ ಇತಿಹಾಸದ ಪುಟಗಳಲ್ಲಿ ಅಚ್ಚಳಿಯದೆ ಉಳಿದು ಯುದ್ಧದ ಗೆಲುವಿಗೆ ಪ್ರಮುಖ ಕಾರಣರಾಗಿದ್ದಾರೆ. ಫ್ರಾನ್ಸ್‍ನಿಂದ ಮೆಸಪಟೋಮಿಯಾ ವರೆಗೆ 50 ದೇಶಗಳಲ್ಲಿ 13ಲಕ್ಷಕ್ಕೂ ಅಧಿಕ ಭಾರತೀಯರು ಯಾರಿಗೂ ಸರಿಸಾಟಿಯಿಲ್ಲದೆ ಹೋರಾಡಿದರು. ತಮ್ಮದಲ್ಲದ ಪರಿಸರದಲ್ಲಿಯೂ ನಿಸ್ವಾರ್ಥದಿಂದ ಪರಾಕ್ರಮ ಮೆರೆದದ್ದು ಹೆಮ್ಮೆಯೋ, ಮೂರ್ಖತನವೋ ಗೊತ್ತಿಲ್ಲ. ಆದರೆ ಅವರಿಗೆ ಬೇರೆ ದಾರಿಯೂ ಕಂಡಿರಲಿಲ್ಲ. ಸ್ವತಂತ್ರ ಭಾರತದ ಅಡಿಯಲ್ಲಿ ಹೋರಾಡದಿದ್ದರೂ ಆ ಎಲ್ಲಾ ಸೇನಾನಿಗಳು ನಮ್ಮವರೆ. ಮೊದಲ ಮಹಾಯುದ್ಧ ಕೊನೆಗೊಂಡ ಆರ್ಮಿಸ್ಟಿಸ್ ದಿನಕ್ಕೆ ನವೆಂಬರ್ 11, 2018ರಂದು ಸರಿಯಾಗಿ ನೂರು ವರ್ಷಗಳು. ಅಂದರೆ ಭಾರತೀಯರ ಬಲಿದಾನಕ್ಕೂ ಶತಮಾನದ ಶೋಕ. ಮರೆತಿರುವ ಇತಿಹಾಸವನ್ನು ನೆನಪಿಸುವ ಅವಕಾಶ.

ಬ್ರಿಟನ್ ಯುದ್ಧದ ನೆಪದಲ್ಲಿ ಭಾರತೀಯ ಸೈನಿಕರನ್ನಷ್ಟೇ ಅಲ್ಲದೆ, ಭಾರತೀಯ ಕೈಗಾರಿಕೆ, ಆಹಾರ, ಹತ್ತಿ, ಸೆಣಬು ಮೊದಲಾದ ಕಚ್ಚಾ ವಸ್ತುಗಳನ್ನೂ ಕಡಿಮೆ ಬೆಲೆಗೆ ರಫ್ತುಮಾಡಿಕೊಂಡು ಚೆನ್ನಾಗಿಯೇ ದುಡಿಸಿಕೊಂಡಿತು. ಚೆನ್ನಾಗಿ ಲೂಟಿ(ಡ್ರೈನ್ ಥಿಯರಿ) ಹೊಡೆದರಷ್ಟೇ ಸಾಕೆ? ವಸಾಹತು ಶಕ್ತ ಎಂದ ಮೇಲೆ ಯುದ್ಧದ ಕಾರಣದಿಂದ ವಸಾಹತು ಪ್ರದೇಶಗಳಲ್ಲಿ ಯುದ್ಧದ ಕಾರಣ ನೀಡಿ ಎಲ್ಲ ವಸ್ತುಗಳ ಬೆಲೆ ಏರಿಸಲಾಯಿತು. ಅಂದರೆ ಯುದ್ಧ ಪ್ರೇರಿತ ಹಣದುಬ್ಬರದ ಬಿಸಿ ಪ್ರತಿಯೊಬ್ಬ ಭಾರತೀಯರಿಗೆ ತಾಗಿತು. ಯುದ್ಧದಲ್ಲಿ ಸಹಕರಿಸಿದ ದೇಶಗಳಿಗೆ ಸ್ವಾತಂತ್ರ್ಯ ದೊರಕುವುದು ವಾಡಿಕೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತಕ್ಕೆ ಸ್ವಾತಂತ್ರ ಒದಗುವುದು ದೂರದ ಮಾತು ಕನಿಷ್ಟ ದೇಶದ ಆಡಳಿತದಲ್ಲಿ “ಭಾರತೀಕರಣ”ವನ್ನು ಮಾಡುವ ಮನಸ್ಸಾದರೂ ಮಾಡಬೇಕಿತ್ತು. ಆದರೆ ಆಡಳಿತ ಮತ್ತು ದಿನಿತ್ಯದ ಸರಕಾರದ ಕೆಲಸಗಳಲ್ಲಿಯೂ ಬ್ರಿಟಿಷ್ ಅಧಿಪತ್ಯವನ್ನೇ ಗಟ್ಟಿಗೊಳಿಸಲಾಯಿತು. ಅತ್ತ ಶತ್ರು ದೇಶ ಜರ್ಮನಿಯಿಂದಲೂ ಯುದ್ಧೋತ್ತರ ಹಾನಿಯ ಗಳಿಕೆ, ಇತ್ತ ಭಾರತದಿಂದಲೂ ಯುದ್ಧ ಹಾನಿಯ ಹೆಸರಿನಲ್ಲಿ ಸಂಪನ್ಮೂಲಗಳ ಲೂಟಿ. ಸೊರಗಿದ್ದು, ಸೋತಿದ್ದು ಭಾರತ, ಬೆಳೆದದ್ದು ಮಾತ್ರ ಬ್ರಿಟನ್ ಮತ್ತು ಬ್ರಿಟನ್ ಜನತೆ!

ನಿಸ್ವಾರ್ಥವಾಗಿ ಬ್ರಿಟನ್ ಪರವಾಗಿ ನಿಂತು ಹೋರಾಡುತ್ತಿದ್ದರೂ ಬ್ರಿಟನ್ ಹಾಗೂ ಮಿತ್ರಕೂಟಗಳು ಪ್ರತೀ ಬಾರಿ, ಪ್ರತೀ ಕ್ಷಣವೂ ಭಾರತೀಯರ ನಿಷ್ಠೆಯನ್ನು ಸಂಶಯಿಸುತ್ತಿದ್ದವು, ಸೇನಾನಿಗಳಿಗೆ ಸಿಗುತ್ತಿದ್ದ ಸೇವೆಗಳಲ್ಲಿ ದ್ವಿತಿಯ ದರ್ಜೆ ಸ್ಥಾನವನ್ನು ನೀಡಲಾಗುತ್ತಿತ್ತು ಎಂಬಿತ್ಯಾದಿ ಸಂಗತಿಗಳನ್ನು ಇತ್ತಿಚೆಗೆ ಪ್ರಕಟವಾದ “ದಿ ಇಂಡಿಯನ್ ಎಂಪೈರ್ ಎಟ್ ವಾರ್: ಫ್ರಂ ಜಿಹಾದ್ ಟು ವಿಕ್ಟರಿ, ದಿ ಅನ್‍ಟೋಲ್ಡ್ ಸ್ಟೋರಿ ಆಫ್ ದಿ ಇಂಡಿಯನ್ ಆರ್ಮಿ ಇನ್ ದಿ ವಸ್ಟ್ ವರ್ಡ್ ವಾರ್” ಪುಸ್ತಕದಲ್ಲಿ ಬ್ರಿಟಿಷ್ ಇತಿಹಾಸಕಾರ ಜಾರ್ಜ್ ಮೊರ್ಟಾನ್-ಜಾಕ್ ದಾಖಲಿಸಿದ್ದಾರೆ. ಕನಿಷ್ಟ ಮೊದಲ ಯುದ್ಧದಲ್ಲಿನ ಭಾರತೀಯರ ಕೊಡುಗೆಗೆ ಕೃತಜ್ಞತೆ ಸಲ್ಲಿಸುವ ಕೆಲಸವಾಗಲಿ, ಪ್ರತಿಯಾಗಿ ಭಾರತಕ್ಕೆ ಸ್ವಾತಂತ್ರ್ಯವನ್ನೊದಗಿಸುವ ಪ್ರಕ್ರಿಯೆಗೂ ಚಾಲನೆ ನೀಡದಷ್ಟು ಪರಮ ಸ್ವಾರ್ಥಿಯಾಯಿತು. ಜರ್ಮನಿಯ ಸಾಮ್ರಾಜ್ಯಶಾಹಿ ಧೋರಣೆಯನ್ನು ಪ್ರತಿಭಟಿಸುವ ಕಾರಣ ನೀಡುತ್ತಲೇ, ತನ್ನ ಸಾಮ್ರಾಜ್ಯಶಾಹಿ, ವಸಾಹತುಶಾಹಿ ಅನೈತಿಕ ಅಧಿಕಾರದ ರಾಜ್ಯಭಾರವನ್ನು ಮುಂದುವರೆಸಿತು.

ಬ್ರಿಟಿಷರ ಇಂಧನಕ್ಕೆ ಸಂಪನ್ಮೂಲವಾಗಿದ್ದ ಪರ್ಶಿಯನ್ ಗಲ್ಫ್‍ನಲ್ಲಿ ಹಿಡಿತದಲ್ಲಿದ್ದ ತೈಲ ಬಾವಿಗಳನ್ನು ರಕ್ಷಿಸುವುದಕ್ಕೆ ಮತ್ತು ಜರ್ಮನ್ ಸಾಮ್ರಾಜ್ಯದ ಸೇನೆಯೊಂದಿಗೆ ಹೋರಾಡುವುದಕ್ಕೆ ಬ್ರಿಟಿಷ್ ಭಾರತೀಯ ಸೇನೆಯ ಸೇನಾನಿಗಳನ್ನು ಮೆಡಿಟರೇನಿಯನ್, ಮಧ್ಯಪ್ರಾಚ್ಯ ಮತ್ತು ಆಫ್ರಿಕಾ ಖಂಡದ ಉತ್ತರ ಭಾಗಗಳಲ್ಲಿ ಜರ್ಮನಿ ಹಾಗೂ ಒಟ್ಟೋಮನ್ ಸಾಮ್ರಾಜ್ಯಗಳ ವಿರುದ್ಧ ಹೋರಾಡುವುದಕ್ಕೆ ಬಳಸಿಕೊಳ್ಳಲಾಗುತ್ತದೆ. ಈಗಲೂ ಬ್ರಿಟನ್ ತನ್ನ ನಿಲುವನ್ನು ಬದಲಾಯಿಸಿಲ್ಲ. ಈ ವಾರವಷ್ಟೇ ಬ್ರಿಟನ್ ತನ್ನ ಸೇನಾ ನೇಮಕಾತಿ ನಿಯಮದಲ್ಲಿ ಬದಲಾವಣೆ ಮಾಡಿದೆ. ಆ ಪ್ರಕಾರ ಭಾರತ ಸೇರಿದಂತೆ ಯಾವುದೇ ಕಾಮನ್‍ವೆಲ್ತ್ ದೇಶಗಳ ಪ್ರಜೆಗಳು ಬ್ರಿಟಿಷ್ ಸೇನೆಯನ್ನು ಸೇರಬಹುದಾಗಿದೆ. ಇಲ್ಲಿ ಎರಡು ಮುಖ್ಯ ಸಂಗತಿಗಳನ್ನು ಗಮನಿಸಬೇಕು. ಬ್ರಿಟನ್‍ಗೆ ಯುದ್ಧಭೀತಿ ಇಲ್ಲವೆಂದಲ್ಲ. ಅಥವಾ ಬ್ರಿಟನ್‍ನಲ್ಲಿ ದೇಶಭಕ್ತರು, ಉದ್ಯೋಗ ವಂಚಿತರು, ಸೇನೆಯನ್ನು ಸೇರಬಯಸುವವರಿಲ್ಲ ಎನ್ನುವುದೂ ಅಲ್ಲ. ವಿದೇಶಗಳಲ್ಲಿ ನ್ಯಾಟೋ ಮೊದಲಾದ ಮಿಲಿಟರಿ ಕಾರ್ಯಾಚರಣೆಗಳಲ್ಲಿ (ಉದಾಹರಣೆಗೆ: ಅಫ್ಘಾನಿಸ್ತಾನದಲ್ಲಿ ಕಳೆದ ದಶಕದಿಂದ ನಡೆಯುತ್ತಿರುವ ಕಾರ್ಯಾಚರಣೆ) ಬ್ರಿಟಿಷ್ ಪ್ರಜೆಗಳನ್ನು ಕಳುಹಿಸುವುದಕ್ಕಿಂತ ಸುಲಭವಾಗಿ ಸೇನೆಯನ್ನು ಸೇರಿರುವ ಕಾಮನ್‍ವೆಲ್ತ್ ದೇಶಗಳ ಪ್ರತಿನಿಧಿಗಳನ್ನೇ ಆರಿಸಿಕಳಿಸುವುದು ಇದರ ಹಿಂದಿನ ತರತಮದಿಂದ ಕೂಡಿದ ಆಶಯದಂತೆ ತೋರುತ್ತಿದೆ. ವಿಶ್ವಯುದ್ಧಗಳ ಸಂದರ್ಭದಲ್ಲಿಯೂ ಬ್ರಿಟನ್ ವಸಾಹತು ಕೇಂದ್ರಗಳ ಮೂಲಕ ಇದನ್ನೇ ಮಾಡಿತ್ತು. ಈಗ ಕಾಮನ್‍ವೆಲ್ತ್ ಹೆಸರಿನಲ್ಲಿ ಅದನ್ನೇ ಮುಂದುವರೆಸುವಂತೆ ಕಾಣುತ್ತಿದೆ. ಇಲ್ಲದಿದ್ದರೆ ಒಂದು ಕಾಲದ ಸೂರ್ಯಮುಳುಗದ ಸಾಮ್ರಾಜ್ಯ, ಬ್ರಿಟನ್‍ನಂತಹ ಸ್ವತಂತ್ರ, ಸ್ವಾಯತ್ತ ದೇಶದ ಸೇನೆಗೆ ಬೇರೆ ದೇಶಗಳಿಂದ ಜನರನ್ನು ಸೇರಿಸಿಕೊಳ್ಳುವ ಅನಿವಾರ್ಯತೆ ಎದುರಾಗಿರುವುದು ವಿಪರ್ಯಾಸ.

ಮೊದಲ ವಿಶ್ವಯುದ್ಧ ಎಂದ ತಕ್ಷಣ ಅಪಾರ ಸಂಖ್ಯೆಯ ಸಾವು-ನೋವು, ಸರ್ವನಾಶದ ಛಾಯೆ, ಮುರಿದುಬಿದ್ದ ದೇಶಗಳ ಅರ್ಥವ್ಯವಸ್ಥೆ, ಅಭಿವೃದ್ಧಿ- ಅಸ್ಥವ್ಯಸ್ಥಗೊಂಡ ಜನಜೀವನ ಮೊದಲಾದ ಚಿತ್ರಣಗಳು ಇತಿಹಾಸದಿಂದ ಕಣ್ಣಿಗೆ ಕಟ್ಟುತ್ತವೆ. ಅದೇ ಮಹಾಯುದ್ಧದಲ್ಲಿ ಒಂದು ದಶಲಕ್ಷಕ್ಕೂ ಅಧಿಕ ಭಾರತೀಯ ಸೈನಿಕರು ಪಾಲ್ಗೊಂಡಿದ್ದು, ಅದರಲ್ಲಿ 62,000 ಸೇನಾನಿಗಳು ವೀರಮರಣ ಹೊಂದಿದ್ದಾರೆ. 67,000ಕ್ಕೂ ಅಧಿಕ ಜನ ಗಾಯಾಳುಗಳಾಗಿದ್ದಾರೆ. ಲೆಕ್ಕಕ್ಕೆ ಸಿಗದವರು ಅದೆಷ್ಟೋ. ಫ್ರಾನ್ಸ್, ಬ್ರಿಟನ್ ಹಾಗೂ ನ್ಯೂಜಿಲ್ಯಾಂಡ್ ದೇಶದ ಸೈನಿಕರ ಜೊತೆಯಲ್ಲಿ ನಿಂತು ಯಾರಿಗೂ ಕಡಿಮೆಯಿಲ್ಲದಂತೆ ವಿದೇಶಿ ನೆಲದಲ್ಲಿ ತಮ್ಮ ಪರಾಕ್ರಮವನ್ನು ಮೆರೆದ ಕೀರ್ತಿ ಭಾರತೀಯರದ್ದು. ಯುಪ್ರೈಸ್‍ನ ಮೊದಲ ಯುದ್ಧದಲ್ಲಿಯೇ ಭಾರತದ ದರ್ವಾನ್‍ಸಿಂಗ್ ನೇಗಿ, ಖುದಾದದ್ ಖಾನ್, ವಿಕ್ಟೋರಿಯಾ ಕ್ರಾಸ್ ಪಡೆದ ಮೊದಲ ಭಾರತೀಯರು ಎಂಬ ಖ್ಯಾತಿಗೂ ಪಾತ್ರರಾದರು. ಇಷ್ಟೇ ಅಲ್ಲದೆ ಯುದ್ಧಕ್ಕೆ ಬೇಕಾದ ಸಮವಸ್ತ್ರ, ಸೆಣಬಿನ ಚೀಲಗಳು ಮೊದಲಾದವನ್ನೂ ಉತ್ಪಾದಿಸಿ ತಮ್ಮ ಬೇಕುಗಳನ್ನು ಉಚಿತವೆಂಬಂತೆ ಪೂರೈಸಿಕೊಳ್ಳಲಾಯಿತು. ಯಾವುದೇ ದೇಶದ ಇತಿಹಾಸ ಹಾಗೂ ವರ್ತಮಾನಗಳಿಗೆ ಇದು ಸಣ್ಣ ಸಂಗತಿಯಲ್ಲ.

ವಿಶ್ವಯುದ್ಧದ ಸೈನಿಕರ ಪಾಲ್ಗೊಳ್ಳುವಿಕೆ ಮತ್ತೊಂದು ಸ್ವಾತಂತ್ರ್ಯ ಸಂಗ್ರಾಮಕ್ಕೆ ನಾಂದಿಯಾಗಲಿಲ್ಲವೇಕೆ?

ನಿಮಗೆ ನೆನಪಿರಲಿ. ಅಮೆರಿಕನ್ ಸ್ವಾತಂತ್ರ್ಯ ಸಮರಕ್ಕೆ ಅಮೆರಿಕನ್ನರ ಸಾಥ್ ನೀಡಿದ್ದ ಫ್ರೆಂಚ್ ಸೇನೆ ಅಲ್ಲಿಂದ ಕಲಿತ ಪಾಠವನ್ನು ಸ್ವದೇಶಕ್ಕೆ ತಂದು ಫ್ರೆಂಚ್ ಕ್ರಾಂತಿಗೆ ನಾಂದಿಹಾಡಲಾಯಿತು. ಪ್ರಾಯಶಃ ಭಾರತೀಯ ಸೈನಿಕರಿಗೆ ಸೇನೆಯ ಮೇಲಿನ ಅತಿಯಾದ ನಿಷ್ಠೆ ಅಥವಾ 1857ರ ದಂಗೆಯ ತರುವಾಯ ಬ್ರಿಟಿಷ್ ಭಾರತೀಯ ಸೇನೆಯಲ್ಲಿ ಆದ ಮಹತ್ವದ ಬದಲಾವಣೆಗಳು.. ಇತ್ಯಾದಿ ಕಾರಣಗಳಿಂದಲೋ ಏನೋ, ಭಾರತಕ್ಕೆ ಮರಳಿದ ಸೇನಾನಿಗಳು ನೇರವಾಗಿ ಸ್ವಾತಂತ್ರ್ಯದ ಕೆಚ್ಚನ್ನು ಹೆಚ್ಚಿಸುವ ಪ್ರಯತ್ನ ಮಾಡಲಿಲ್ಲ ಅಥವಾ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಭಾರತವನ್ನು ಯುದ್ಧಕ್ಕೆ ತಯಾರು ಮಾಡುವ ಪ್ರಯತ್ನ ಮಾಡಲಿಲ್ಲ. ನಾಯಕತ್ವದ ಕೊರತೆಯೂ ಒಂದು ಪ್ರಮುಖ ಸಂಗತಿ. ಕ್ಯಾಪ್ಟನ್ ಮೋಹನ್ ಸಿಂಗ್, ನೇತಾಜಿ ಸುಭಾಷ್ ಚಂದ್ರ ಬೋಸ್‍ರಂತೆ ಆ ಕಾಲದಲ್ಲಿ ಬ್ರಿಟಿಷರನ್ನು ಯುದ್ಧದಿಂದ ಸೋಲಿಸಿ ಸ್ವಾತಂತ್ರ್ಯ ಪಡೆಯಬಹುದು ಎಂದು ಯೋಚಿಸಲು ಸಾಧ್ಯವಾಗಲಿಲ್ಲ. 1857-58ರ ಭಯ, ಗಾಂಧೀ ಕೇಂದ್ರಿತ ಕಾಂಗ್ರೆಸ್ ರಾಜಕಾರಣ ಶೈಲಿ ಇವೆಲ್ಲವೂ ಬಹುಶಃ ಅಂತರಾಷ್ಟ್ರೀಯ ವಿಚಾರಗಳಿಗೆ ತೆರೆದುಕೊಂಡಿದ್ದ ನಾಯಕರಿಗೂ ಇಂತಹದ್ದೊಂದು ಯೋಜನೆಯನ್ನು ಮುನ್ನೆಲೆಗೆ ತರುವುದಕ್ಕೂ ಅಸಾಧ್ಯವಾಗಿರಬಹುದು.

1942ರಿಂದ ಬ್ರಿಟಿಷ್ ಭಾರತೀಯ ಸೇನೆಯ ಕಮಾಂಡರ್-ಇನ್-ಛೀಫ್ ಆಗಿದ್ದ ಫೀಲ್ಡ್ ಮಾರ್ಶಲ್ ಸರ್ ಕ್ಲಾಡೆ ಔಚಿಂಲೆಕ್ ವಿಶ್ವಯುದ್ಧಗಳಲ್ಲಿ ಭಾರತೀಯರ ಪ್ರಾಮುಖ್ಯತೆಯನ್ನು ಹೀಗೆ ದಾಖಲಿಸಿದ್ದಾರೆ: “ಎರಡೂ ವಿಶ್ವಯುದ್ಧಗಳಲ್ಲಿ ಭಾರತೀಯ ಸೇನೆ ಇಲ್ಲದಿದ್ದಿದ್ದರೆ ಬ್ರಿಟಿಷರು ಎರಡು ಯುದ್ಧಗಳಲ್ಲಿ ಪಾಲ್ಗೊಂಡು ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ”. ಈ ಮಾತು ಬಹಳ ಸತ್ಯ. ಈಗೀಗ ಎರಡೂ ವಿಶ್ವಯುದ್ಧಗಳಲ್ಲಿ ಭಾರತೀಯರ ಪಾತ್ರವನ್ನು ಬಹುತೇಕ ರಾಷ್ಟ್ರಗಳು ಹಾಡಿಹೊಗಳುತ್ತಿವೆ. ಆದರೂ ಕೆನಡ, ನ್ಯುಜಿಲ್ಯಾಂಡ್ ಮೊದಲಾದ ದೇಶಗಳ ಸ್ಮರಣೆಗೆ ಹೋಲಿಸಿದರೆ ಭಾರತೀಯ ಸೇನಾನಿಗಳನ್ನು ಬೇರೆ ಅವಕಾಶವಿಲ್ಲದ, ಬ್ರಿಟಿಷ್ ಸಾಮ್ರಾಜ್ಯದ ಅಡಿಯಾಳಾದ ಜೀತದವರಂತೆ ಕಾಣುವ ಪ್ರಯತ್ನ ಮಾಡಲಾಗಿದೆ.

ಮೊದಲ ವಿಶ್ವಯುದ್ಧದ ಭಾಗವಾಗಿ ಮಾರ್ಚ್ 1915ರಲ್ಲಿ ಫ್ರಾನ್ಸ್‍ನ ನಿರ್ಣಾಯಕ “ನ್ಯುವೆ ಚಾಪ್ಪೆಲ್ಲೆ” ಕದನದಲ್ಲಿ ಭಾರತೀಯ ಸೇನಾನಿಗಳು ಮುಂದೆ ನಿಂತು ಹೋರಾಡಿ ಫ್ರಾನ್ಸ್‍ಗೆ ಜಯ ಒದಗಿಸಿಕೊಟ್ಟಿದ್ದನ್ನು ಫ್ರಾನ್ಸ್ ಇಂದಿಗೂ ಮರೆಯುವಂತಿಲ್ಲ. ಅಂದಿನ ಫ್ರೆಂಚ್ ಕಮಾಂಡರ್ ಮಾರ್ಶಲ್ ಫರ್ಡಿನಾಂಡ್ ಫೋಕ್ ನೆನಪಿಸಿಕೊಳ್ಳುವಂತೆ “ಭಾರತಕ್ಕೆ ತಿಳಿಸಿ. ಭಾರತೀಯರು ನಮಗೆ ದಾರಿಯನ್ನು ತೋರಿಸಿದರು, ಅವರು ನಮ್ಮ ಕೊನೆಯ ಜಯಕ್ಕೆ ಮೊದಲ ಹೆಜ್ಜೆಗಳನ್ನು ಹಾಕಿಕೊಟ್ಟರು. ನಮ್ಮ ಕೃತ್ಯಗಳಿಗೆ ಬಲಿಯಾದ ಭಾರತೀಯ ಹುತಾತ್ಮರನ್ನು ನಾವು ಭಕ್ತಿಯಿಂದ ಕಾಣುತ್ತೇವೆ. “ನ್ಯುವೆ ಚಾಪ್ಪೆಲ್ಲೆ” ಗ್ರಾಮದಲ್ಲಿ ಇಂದಿಗೂ 4,700 ಭಾರತೀಯ ಸೇನಾನಿಗಳ ಹೆಸರಿರುವ ಸ್ಮಾರಕವಿದೆ. ಭಾರತೀಯ ಸೇನಾನಿಗಳು  ಪ್ರಾನ್ಸ್ ದೇಶ ಭಾರತೀಯ ಸೇನೆಗೆ ಗೌರವ ಸಲ್ಲಿಸಲು ತನ್ನ ನೆಲದಲ್ಲಿ ಯುದ್ಧದಲ್ಲಿ ಸೇವೆಗೈದ ವೀರ ಸೇನಾನಿಗಳ ಸ್ಮರಣೆಗಾಗಿ, “ಹೀರೋ ಮಾರ್ಚ್”ಗೂ ಅನುವು ಕೊಟ್ಟಿತ್ತು. ಹಾಗಾಗಿಯೇ ವಿಶ್ವಯುದ್ಧದ ಆ ಗೆಳೆತನವನ್ನು ಮುಂದುವರೆಸಲು 2016ರ ಗಣರಾಜ್ಯೋತ್ಸವದಲ್ಲಿ ಮೊದಲ ಬಾರಿಗೆ ವಿದೇಶಿ ಫ್ರಾನ್ಸ್ ಸೇನೆಗೆ ಪಥಸಂಚಲನದಲ್ಲಿ ಪಾಲ್ಗೊಳ್ಳಲು ಭಾರತ ಅವಕಾಶ ನೀಡಿತ್ತು.

ಉಪಸಂಹಾರ:

ಮೊದಲ ವಿಶ್ವಯುದ್ಧ (ಹಾಗೂ ಎರಡನೇ ವಿಶ್ವಯುದ್ಧ)ದ ಮೇಲೆ ಅನೇಕ ಪುಸ್ತಕಗಳು, ಸಿನಿಮಾಗಳು ಬಂದಿವೆ. ಆದರೆ ಪಶ್ಚಿಮದ ಹಿಪಾಕ್ರಸಿಗೆ ಸಾಕ್ಷಿಯೆಂಬಂತೆ, ಅಲ್ಲೆಲ್ಲಿಯೂ ಭಾರತೀಯ ಕೊಡುಗೆಯನ್ನು ಕಟ್ಟಿಕೊಡುವ, ಚಿತ್ರಿಸುವ ಪ್ರಯತ್ನವನ್ನು ಮಾಡಿಲ್ಲ. ಕಳೆದ ವರ್ಷ ಬಿಡುಗಡೆಯಾದ ನಿರೀಕ್ಷಿತ “ಡಂಕಿರ್ಕ್” ಚಿತ್ರದಲ್ಲಿ ಕೇವಲ ಬ್ರಿಟಿಷ್ ಹಾಗೂ ಫ್ರೆಂಚ್ ಸೇನಾನಗಿಗಳ ಪರಿಸ್ಥಿತಿ, ಹೋರಾಟ, ರಕ್ಷಣೆಯ ಚಿತ್ರಣವನ್ನು ನೀಡಲಾಗಿತ್ತೆ ಹೊರತು ಮೂರು ತುಕಡಿಗಳನ್ನು ಹೊಂದಿದ್ದ ಭಾರತೀಯರ ಕೊಡುಗೆಯನ್ನು ನೆನಪಿಸುವ ಒಂದೇ ಒಂದು ಸಂಗತಿಯನ್ನು ತೋರಿಸಲಾಗಿಲ್ಲ. ಇತ್ತೀನವರೆಗೆ ಪ್ರಕಟಗೊಳ್ಳುತ್ತಿರುವ ಪುಸ್ತಕಗಳಲ್ಲಿಯೂ ಭಾರತೀಯರ ಕೊಡುಗೆಗಳನ್ನು ಅಲಕ್ಷಿಸಿರುವುದನ್ನು ಕಾಣಬಹುದು.

ಅಂದಿನಿಂದ ಇಂದಿನವರೆಗೂ; ವಿಶ್ವಸಂಸ್ಥೆಯ(1950) “ಶಾಂತಿ ಕಾಪಾಡುವಿಕೆ” ಸೇನೆಯಲ್ಲಿಯೂ ಭಾರತೀಯ ಸೇನೆ ನಿಸ್ವಾರ್ಥವಾಗಿ ಸೇವೆ ಸಲ್ಲಿಸುತ್ತಿದೆ. ಪ್ರಪಂಚದ ಯಾವುದೇ ಮೂಲೆಯಲ್ಲಿ ಅಶಾಂತಿ ನೆಲೆಸಿದರೂ ಭಾರತೀಯ ಸೇನೆಯ ಸೈನಿಕರು ವಿಶ್ವಸಂಸ್ಥೆಯ ಅಡಿಯಲ್ಲಿ ಶಾಂತಿಸ್ಥಾಪನೆಗಾಗಿ ತ್ಯಾಗ, ಬಲಿದಾನಗಳನ್ನು ಮಾಡುತ್ತಿದೆ. ಇಂತಹ ದೇಶ ತನ್ನ ಈ ಏಕೈಕ ಕೊಡುಗೆಯಿಂದಲೇ ವಿಶ್ವಸಂಸ್ಥೆಯ “ಶಾಶ್ವತ ಭದ್ರತಾ ಮಂಡಳಿ(ಪರ್ಮನೆಂಟ್ ಸೆಕ್ಯುರಿಟಿ ಕೌಂನ್ಸಿಲ್)”ನ ಸದಸ್ಯನಾಗುವುದಕ್ಕೆ ಅರ್ಹವಾಗಿದೆ. ಒಂದು ಶತಮಾನದ ಅಂತ್ಯದಲ್ಲಿ ಬ್ರಿಟನ್ ಹಾಗೂ ಮಿತ್ರಕೂಟ ದೇಶಗಳು ತಮ್ಮ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ ಭಾರತದ ಕೊಡುಗೆಯನ್ನು ಸ್ಮರಿಸುವುದಷ್ಟೇ ಅಲ್ಲ, ಭಾರತಕ್ಕೆ ವಿಶ್ವಸಂಸ್ಥೆಯಲ್ಲಿ ಶಾಶ್ವತ ಭದ್ರತಾ ಮಂಡಳಿಯ ಸ್ಥಾನವನ್ನು ಒದಗಿಸಿ ಸೂಕ್ತವಾದ ಉಪಕಾರ ಸ್ಮರಣೆಯನ್ನು ಮೆರೆಯಬೇಕಿದೆ. ಹಾಗೂ ಭಾರತಕ್ಕೆ ಸಿಗಬೇಕಾದ ಸ್ಥಾನವನ್ನು, ಗೌರವವನ್ನು ಒದಗಿಸಿಕೊಡುವ ನೈತಿಕ ಜವಾಬ್ದಾರಿಯೂ ಆ ದೇಶಗಳ ಮೇಲಿದೆ. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿಗಳು ವಿಶ್ವದ ಈ ದೇಶಗಳಿಗೆ ಈ ಸಂಗತಿಯನ್ನು ಮತ್ತೆ ಮತ್ತೆ ಮನವರಿಕೆ ಮಾಡಿಕೊಟ್ಟು, ಎಲ್ಲರನ್ನೂ ಒಂದೇ ಆಲೋಚನೆಯ ಕಾರ್ಯಗತಿಯ ಅಡಿಯಲ್ಲಿ ತರಬೇಕಾದ ಅನಿವಾರ್ಯತೆಯಿದೆ.

ನಮ್ಮ ಹುತಾತ್ಮ ಮಕ್ಕಳ ಆತ್ಮವನ್ನು ನೆನಪಿಸಿಕೊಳ್ಳಿಇದು ಸರೋಜಿನಿ ನಾಯ್ಡು ಬರೆದಿರುವಭಾರತದ ಕೊಡುಗೆ(ದಿ ಗಿಫ್ಟ್ ಆಫ್ ಇಂಡಿಯಾ)’ ಕವನದ ಸಾಲುಗಳು. ಆ ಆತ್ಮಗಳನ್ನು ನೆನಪಿಸಿಕೊಳ್ಳುವುದು ಇಂದಿನ ಅನಿವಾರ್ಯತೆ. ಕೇಂದ್ರ ಸರಕಾರದ ಇತಿಹಾಸವನ್ನು “ನೆನಪಿಸಿಕೊಳ್ಳಿ” ಯೋಜನೆಯ ಭಾಗವಾಗಿ ಇತಿಹಾಸವನ್ನು ಪುನರ್‍ದರ್ಶಿಸುವ, ವಿವೇಚಿಸುವ, ಅವುಗಳನ್ನು ನೆನೆದು ಹೊಸದಾಗಿ ಪರಾಮರ್ಶಿಸುವ ಹೊಸ ಪ್ರಕ್ರಿಯೆ ದೇಶದ ಇತಿಹಾಸ ಹಾಗೂ ಪರಂಪರೆಗೆ ಹೊಸ ಮೌಲ್ಯಾತ್ಮಕತೆ ಒದಗಿಸಿಕೊಡುವ ಪ್ರಯತ್ನವಾಗಲಿದೆ.

– ಶ್ರೇಯಾಂಕ ಎಸ್ ರಾನಡೆ.

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!