Featured ಅಂಕಣ

ತಾರತಮ್ಯಪೂರಿತ ತತ್ವ ಆದರ್ಶಗಳಿಂದಲೇ ಬಲಿಯಾದರೆ ಬಾಪು?

ರಘುಪತಿ ರಾಘವ ರಾಜಾರಾಂ

ಪತೀತ ಪಾವನ ಸೀತಾರಾಂ

ಈಶ್ವರ್ `ಅಲ್ಲಾ’ ತೇರೇ ನಾಮ್

ಸಬ್ ಕೋ ಸನ್ಮತಿ ದೇ ಭಗ್‍ವಾನ್

ಈ ಹಾಡು ಗಾಂಧಿರವರಿಗೆ ಪ್ರಿಯವಾದುದಾಗಿತ್ತು.ಆದರೆ 3,4ನೇ ವಾಕ್ಯ ಗಮನಿಸಿ ನೋಡಿ. ಭಗವಾನ್ ಎಂದರೆ ಗಾಂಧಿ ಅವರಿಗೆ ಈಶ್ವರ ಹಾಗೆ ಅಲ್ಲಾ ಇಬ್ಬರೂ ಆಗಿದ್ದರೇ ಎಂಬ ಅನುಮಾನ ಮೂಡುವುದು.ಆದರೆ ಇವತ್ತು ಮುಸ್ಲಿಮರು ಭಾರತದಲ್ಲಿ ಸುಭದ್ರತೆ, ಸುಖದಿಂದ ಇದ್ದಾರೆಂದರೆ ಅದಕ್ಕೆ ನೆಹೆರು ಗಾಂಧಿ ಅವರ ಹಿತಾಸಕ್ತಿಗಳು ಮುಖ್ಯ ಪಾತ್ರ ವಹಿಸಿತ್ತು ಮಾತ್ರವಲ್ಲ ಹಿಂದೂಗಳ ಸಹಿಷ್ಣುತೆಯೂ ಪ್ರಮುಖ ಅಂಶ. ಇಬ್ಬರೂ ನಾಯಕರು ಮಾಡಿದ ಪ್ರಯತ್ನದಿಂದ `ಅಲ್ಪ ಸಂಖ್ಯಾತರ ಹಕ್ಕುಗಳ ಬಗ್ಗೆ ನಿರ್ಣಯವೊಂದನ್ನು ಅಂಗೀಕರಿಸಿತು’. ಅಷ್ಟೇ ಅಲ್ಲ, ಅಂದಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ `ಭಾರತ ಅನೇಕ ಧರ್ಮಗಳ, ಜನಾಂಗಗಳನ್ನೇ ಇವತ್ತಿಗೂ ಹಾಗೆ ಉಳಿದಿದೆ ಎಂಬುದು ಆ ಪಕ್ಷದ ನಂಬಿಕೆಯಾಗಿತ್ತು.ಅಲ್ಲಿನ ಪರಿಸ್ಥಿತಿ ಏನೇ ಇರಲಿ, ಭಾರತ ಪ್ರಜಾಸತ್ತಾತ್ಮಕ, ಜಾತ್ಯಾತೀತ ರಾಷ್ಟ್ರವಾಗಿರುತ್ತದೆ.ಇಲ್ಲಿನ ಪ್ರಜೆಗಳು ಯಾವುದೇ ಧರ್ಮಕ್ಕೆ ಸೇರಿದವರಾಗಿರಲಿ ಸಮಾನ ಹಕ್ಕುಗಳುಳ್ಳವರಾಗಿರುತ್ತಾರೆ. ತನ್ನ ಸಂಪೂರ್ಣ ಸಾಮರ್ಥ ,ಬಲದಿಂದ ಅಲ್ಪಸಂಖ್ಯಾತರನ್ನು ರಕ್ಷಿಸುವುದಾಗಿ ಅವರ ಪೌರತ್ವದ ಹಕ್ಕುಗಳನ್ನು ಆಕ್ರಮಣದಿಂದ ರಕ್ಷಿಸುವುದಾಗಿ ಮುಸ್ಲಿಮರಿಗೆ ಅಭಯದ ಆಶ್ವಾಸನೆ ನೀಡಿಬಿಟ್ಟರು.

ಆದರೆ ಮುಸ್ಲಿಮರಿಗೆ ಆರ್.ಎಸ್.ಎಸ್ ಅಂದೇ ಸ್ಪಷ್ಟ ಸಂದೇಶವನ್ನು ನೀಡಿತ್ತು.ಅಂದಿನ ಸಂಘ ಚಾಲಕರಾಗಿದ್ದ ಎಂ.ಎನ್ ಗೋಳ್ವಾಲ್ಕರ್ ಅವರು ಹೀಗೆ ಕಡ್ಡಿ ಮುರಿದಂತೆ ಸ್ಪಷ್ಟವಾಗಿ ನುಡಿದಿದ್ದರು.  “ಹಿಂದುಸ್ತಾನದ ಹಿಂದೂಯೇತರ ಜನರು ಹಿಂದೂ ಸಂಸ್ಕತಿ ಹಾಗು ಭಾಷೆಯನ್ನು ಅಂಗೀಕರಿಸಬೇಕು.ಹಿಂದೂ ಧರ್ಮವನ್ನು ಗೌರವಿಸಬೇಕು ಹಾಗು ಪೂಜ್ಯ ಭಾವದಿಂದ ಕಾಣಬೇಕು.ಹಿಂದೂ ಧರ್ಮದ ಬಗ್ಗೆ ಪೂಜ್ಯ ಭಾವನೆ ಹೊಂದಿರಬೇಕು. ಹಿಂದೂ ಜನಾಂಗ ಹಾಗು ಸಂಸ್ಕತಿಯನ್ನು ಹೊರತಾಗಿ ಬೇರಾವುದನ್ನು ವೈಭವಿಸಬಾರದು.ಒಂದೇ ಮಾತಿನಲ್ಲಿ ಹೇಳುವುದಾದರೆ ತಾವು ವಿದೇಶಿಯರು ಎಂಬುದನ್ನು ಮರೆತು ಬಿಡಬೇಕು” ಎಂದಿದ್ದರು. ಅದೆಲ್ಲಾ ವಿಚಾರಗಳನ್ನು ಇಂದು ಮುಸ್ಲಿಮರು ಇಂದು ಭಾರತದಲ್ಲಿ ನಿಜಕ್ಕೂ ಪಾಲಿಸುತ್ತಿದ್ದಾರೆಯೇ?

ಹಿಂದೂ ಮುಸ್ಲಿಂ ಸೌಹಾರ್ದತೆಯ ರಾಯಭಾರಿ ಎಂದೇ ಕರೆಯಲ್ಪಡುತ್ತಿದ್ದ ಎಂ.ಎ ಜಿನ್ನಾ ಅವರಿಗೆ ಕೊನೆಗೆ ಒಂದು ದಿನ ತಿಳಿದು ಬಿಟ್ಟಿತು ಈ ಎರಡು ಧರ್ಮದವರು ಒಗ್ಗಟ್ಟಾಗಲು ಕಷ್ಟಸಾಧ್ಯವೆಂಬುದನ್ನು. ಒಟ್ಟಾಗದಿರಲು ಕಾರಣ ನೂರಾರಿದ್ದವು. ಒಟ್ಟಾಗಲು ಇದ್ದ ಕಾರಣ ಭಾರತವೊಂದೇ, ಅದನ್ನೇ ಕೊನೆಗೆ ಒಡೆಯಲು ಬೇಡಿಕೆ ಇಟ್ಟರು ಜಿನ್ನಾ. 1940ರಲ್ಲಿ ಜಿನ್ನಾ ಮುಸ್ಲಿಂ ಲೀಗ್‍ನ ಅಧ್ಯಕ್ಷೀಯ ಭಾಷಣದಲ್ಲಿ ಹೀಗೆ ದಿಟ್ಟವಾಗಿ ತಮ್ಮ ಅಭಿಪ್ರಾಯವನ್ನು ನುಡಿದಿದ್ದರು.

ಭಾರತದೊಳಗಿನ ಸಮಸ್ಯೆ ಅಂತರ್ ಧರ್ಮೀಯವಾದುದಲ್ಲ. ಆದರೆ ಸ್ಪಷ್ಟವಾಗಿ ಅಂತರರಾಷ್ಟ್ರೀಯ ಗುಣಲಕ್ಷಣವುಳ್ಳದ್ದು ಹಾಗು ಇದನ್ನು ಹಾಗೆಯೇ ಪರಿಗಣಿಸಬೇಕು. ಏಕೀಕೃತ ಭಾರತ ರಾಷ್ಟ್ರದ ತಪ್ಪು ಕಲ್ಪನೆ ಮಿತಿಮೀರಿದ್ದು ನಮ್ಮ ಬಹುತೇಕ ಕಷ್ಟಗಳಿಗೆ ಕಾರಣವಾಗಿದೆ, ಸಕಾಲದಲ್ಲಿ ನಮ್ಮ ಕಾರ್ಯಕ್ರಮವನ್ನು, ಕ್ರಿಯೆಗಳನ್ನು, ನಾವು ಪರಿಷ್ಕರಿಸದೇ ಹೋದಲ್ಲಿ ಭಾರತವನ್ನು ವಿನಾಶದ ಹಾದಿಗೆ ಒಯ್ಯಲಿದೆ. ಹಿಂದೂಗಳು ಹಾಗೂ ಮುಸ್ಲಿಮರು ಎರಡು ವಿಭಿನ್ನ ಧರ್ಮಗಳ ಸಿದ್ಧಾಂತಗಳಿಗೆ, ಸಾಮಾಜಿಕ ಪದ್ಧತಿಗಳಿಗೆ, ಸಂಪ್ರದಾಯಗಳಿಗೆ ಮತ್ತು ಸಾಹಿತ್ಯಕ್ಕೆ ಸೇರಿದವರು. ಅದರಿಂದ ಸಹವಿವಾಹ, ಸಹಭೋಜನ ಸಾಧ್ಯವಿಲ್ಲ. ವಾಸ್ತವವಾಗಿ ಎರಡು ಭಿನ್ನ ನಾಗರೀಕತೆಗೆ ಸೇರಿದವರು. ಜೀವನ ಮತ್ತು ಜೀವನದ ಬಗೆಗಿನ ಅವರ ದರ್ಶನಗಳು ವಿಭಿನ್ನ’.ಈ ಅವರ ವಾಕ್ಯಗಳು ಸುಮ್ಮನೆ ಬಂದಿರಲಿಲ್ಲ. ಅಲ್ಲಿ ಮುಸ್ಲಿಂ-ಹಿಂದೂಗಳ ನಡುವಣ ಸೌಹಾರ್ದತೆಯನ್ನು ತರಲು ನಡೆಸಿದ ಅವಿರತ ಪ್ರಯತ್ನಗಳ ವೈಫಲ್ಯದ ಕಹಿ ಇತ್ತು.

ಇತ್ತ ಗಾಂಧೀಜಿ `ಹಿಂದೂ ಮುಸ್ಲಿಂ ಭಾಯಿ ಭಾಯಿ’ ಎಂದು ಬಡಬಡಾಸುತ್ತಲೇ ಇದ್ದರು. ಜಿನ್ನಾ ಅವರು ಆಜ್ಞೆಯಂತೆ ನೀಡಿದ 14 ಅಂಶದ  ಬೇಡಿಕೆಗಳಿಂದ ಹಿಡಿದು ಪಾಕ್ ಅಸ್ತಿತ್ವಕ್ಕೆ ಬರುವ ವಿಚಾರದವರೆಗೂ ಕಾಂಗ್ರೆಸ್ ಮಂಡಿ ಊರಿ ಮುಸ್ಲಿಂ ಲೀಗ್‍ಗೆ ಶರಣಾದಂತಿತ್ತು. ಬ್ರಿಟೀಷರಿಂದ ಕಸಿದುಕೊಳ್ಳಬೇಕಿದ್ದ ಸ್ವಾತಂತ್ರ್ಯದ ಕುರಿತಾಗಿಯೂ ಅದೇ ದಯನೀಯ ಶರಣಾಗತವಾಗುವ ಅಹಿಂಸಾ ನಿಲುವು,`ಹಿಂಸಾ ಮಾರ್ಗದಿಂದ ಒಂದೇ ಗಳಿಸಿದ ಸ್ವಾತಂತ್ರ್ಯಕ್ಕಿಂತಲೂ ಒಂದು ಸಾವಿರ ವರ್ಷಗಳ ನಂತರವಾದರೂ ಸರಿ, ಅಹಿಂಸಾ ಮಾರ್ಗದಿಂದ ಗಳಿಸಿದ ಸ್ವಾತಂತ್ರ್ಯವು ಆಯ್ಕೆಗೆ ಅರ್ಹವಾದುದು’ ಎಂಬುದಾಗಿತ್ತು.

ಗಾಂಧಿರವರ ಅಹಿಂಸಾ ತತ್ವ ಸಿದ್ಧಾಂತಗಳನ್ನು ಹಿಂದುಗಳಿಗೆ ಮಾತ್ರವೇ ಬೋಧಿಸುವಂತಹ ವಿಚಿತ್ರ ಕಯಾಲಿ ಇತ್ತು. ಅವರೆಂದೂ ಮುಸ್ಲಿಮರಿಗೆ ಪ್ರವಚನ ನೀಡಲಿಲ್ಲ. ಅವರನ್ನು ಕುರಿತು ಒಂದು ದೂಷಣೆ ಮಾಡಲಿಲ್ಲ. ಈ ತಾರತಮ್ಯತೆಯಿಂದಾಗಿ ಗಾಂಧಿರವರ ಕುರಿತು ನೊಂದ ಹಿಂದುಗಳಿಗೆ ದ್ವೇಷ, ಅಸಹ್ಯ ಮತ್ತು ಅಪನಂಬಿಕೆ ಹುಟ್ಟಿ ರಕ್ತ ಕೊತಕೊತನೆ ಕುದಿಯಲಾರಂಭಿಸಿತ್ತು. ಅದಕ್ಕೆ ಸಾಕ್ಷಿಯೆಂಬಂತಿದೆ ಏಪ್ರೆಲ್ 9,1947ರಲ್ಲಿ ಹಿಂದೂಗಳಿಗೆ ನೀಡಿದ ಅವರ ಈ ಹಿತವಚನದ ವಾಕ್ಯಗಳು,`ನಾವು ದೂರ ತಳ್ಳಲ್ಪಡುತ್ತಿರುವ ಸಂದರ್ಭದಲ್ಲಿ ನಾವು ಉದ್ವೇಗಕ್ಕೊಳಗಾಗದೇ ಚಿಂತನೆ ಮಾಡಬೇಕು. ಮುಸ್ಲಿಮರು ಹಿಂದುಗಳನ್ನು ಸಂಹರಿಸಲು ವಿಚಾರ ಮಾಡಿದರೂ ಸಹ ಹಿಂದೂ ಜನರು ಮುಸ್ಲಿಮರ ಮೇಲೆ ಕೋಪ ತಾಳಬಾರದು. ಅವರು ನಮ್ಮೆಲ್ಲರನ್ನು ಕತ್ತಿಗೆ ಗುರಿ ಮಾಡಿದರೂ ಸಹ ನಾವು ಮರಣವನ್ನು ಧೈರ್ಯವಾಗಿ ಎದುರಿಸಬೇಕು. ಅವರು ಜಗವನ್ನೇ ಆಳಬಹುದು.ನಾವು ಜಗತ್ತಿನಲ್ಲಿ ವಾಸಿಸುತ್ತಿದ್ದೇವೆ. ಕನಿಷ್ಠ ಪಕ್ಷದಲ್ಲಿ ನಾವು ಮರಣಕ್ಕೆ ಎಂದೂ ಅಂಜಬಾರದು. ನಾಮ್ಮ ಹುಟ್ಟು ಸಾವುಗಳು ದೈವನಿಯಮಿತವಾದವು. ಅಂದ ಮೇಲೆ ಈ ವಿಷಯದಲ್ಲಿ ನಾವು ಏಕೆ ವ್ಯಥೆ ಪಡಬೇಕು? ನಾವು ಎಲ್ಲರೂ  ಮುಗುಳ್ನಗೆಯಿಂದ ಸಾವನ್ನು ಅಪ್ಪಿಕೊಂಡರೆ ಹೊಸದೊಂದು ಜೀವಲೋಕವನ್ನು ಪ್ರವೇಶಿಸುತ್ತೇವೆ. ಹೊಸ ಹಿಂದುಸ್ತಾನವೊಂದನ್ನು ನಾವು ಹುಟ್ಟು ಹಾಕುತ್ತೇವೆ.’

ಇವರು ಹೇಳಿದ ಹಾಗೆ ಹಿಂದುಗಳು ಸತ್ತು ಹೋಗಿದ್ದರೆ ಇಂದು ಹಿಂದುಗಳೇ ಇಲ್ಲದ ಹಿಂದುಸ್ತಾನವಾಗುತ್ತಿತ್ತು. ಒಂದು ಕಡೆ ರಾಮರಾಜ್ಯದ ಕನಸನ್ನು ದೃಢವಾಗಿ ಪ್ರತಿಪಾದಿಸುತ್ತಿದ್ದ ಗಾಂಧಿಯಲ್ಲಿ ಒಬ್ಬ ನಿಜವಾದ ರಾಮ ಭಕ್ತನಿದ್ದನೇ ಎಂಬ ಅನುಮಾನ ಉದ್ದೀಪನವಾಗುತ್ತಿದೆ ಈ ತರ್ಕಗಳ ಮೇಲೆ ಬೆಳಕು ಚೆಲ್ಲುವಾಗ! ಹಾಗೆ ಹಿಂದುಗಳು ಕೈ ಕಟ್ಟಿ ಕುಳಿತಿದ್ದರೆ ಇಂದು ಸನಾತನ ಧರ್ಮದ ಕುರುಹು ಕೂಡ ಇಲ್ಲವಾಗಿಸುತ್ತಿದ್ದರು ಪರಕೀಯರು.

ಗಾಂಧಿಜೀರವರ ತಾತ್ವಿಕತೆಯಲ್ಲಿ ದ್ವಂದ್ವತೆ, ಅಸ್ಪಷ್ಟತೆ, ಅಸಂಬದ್ಧತೆ, ಚಂಚಲತೆ, ವಿರೋಧಾಭಾಸಗಳಿವೆ. ಹಾಗಾಗಿಯೇ ಅವುಗಳನ್ನು ಪಾಲಿಸಲು ಸ್ವತಃ ಕಟ್ಟಾ ಗಾಂಧೀವಾದಿಗೂ ಅಸಾಧ್ಯ. ತಮಾಷೆ ನೋಡಿ, ಪಾಕಿಸ್ತಾನ ರಚನೆಯಾಗುವುದಿದ್ದರೆ ಅದು ನನ್ನ ಹೆಣದ ಮೇಲೆಯೇ ಎಂದೆನ್ನುತ್ತಿದ್ದ ಬಾಪು, ಮುಸ್ಲಿಮರ ಧೊಂಬಿ ಹೆಚ್ಚಾಗಿ ಹೆಣಗಳು ನೆಲಕ್ಕೆ ಉರುಳುತ್ತಿದ್ದಂತೆ ದೇಶ ಹೋಳಾಗಲಿ ಎಂದು ಬಿಟ್ಟರು. ರಾಷ್ಟ್ರವೇ ಅದಿನಾಯಕ ಎಂದು ಪರಿಗಣಿಸುತ್ತಿದ್ದ ಬಾಪು ತಮ್ಮ ಗೊತ್ತು ಗುರಿಗಳ ಬಗ್ಗೆ ಇಷ್ಟು ನಿಶ್ಚಲವಾಗಿದ್ದರೆಂದರೆ ಆಘಾತ ಆಗುತ್ತದೆ. ಹಲ್ಲೆ,ಅತ್ಯಾಚಾರ, ಹಿಂಸೆಗೆ ಒಳಗಾಗಿ ಪಾಕಿಸ್ತಾನದಿಂದ ಪಾರಾಗಿ ಬಂದಿದ್ದ ನಿರಾಶ್ರಿತ ಹಿಂದೂ ಮಕ್ಕಳು, ಮಹಿಳೆಯರು, ಜನರು ಕೈ ಚಾಚಿ ಅಭಯಕ್ಕೆಂದು ಬೇಡಿದಾಗ ಪಿತಾಮಹ ಗಾಂಧಿಗೆ ಜಾಣ ಕುರುಡು.ನೆಹರು ಅಂತೂ ಈ ದೇಶದ ಪ್ರಥಮ ಪ್ರಧಾನಿಯಾಗಿ ಅವರ ಕುರಿತು ತಿರುಗಿಯೂ ನೋಡಲಿಲ್ಲ. ಪಾಕಿಸ್ತಾನ ಭಾರದಿಂದ ಪ್ರತ್ಯೇಕವಾದಾಗ ನೆರವೆಂದು ಪಾಕಿಸ್ತಾನಕ್ಕೆ 55 ಕೋಟಿ ರೂಪಾಯಿ ಕೊಡಲೇಬೇಕು ಎಂದು ಸರಕಾರವನ್ನು ಒತ್ತಾಯಿಸಿದ ಗಾಂಧಿ, ಈ ಹಿಂದೂಗಳಿಗೆಂದು ಒಂದು ಧೈರ್ಯದ ಮಾತನ್ನು ಆಡಲಿಲ್ಲ.

ಗಾಂಧಿ ತತ್ವದಲ್ಲಿನ ದ್ವಂದ್ವತೆಗೆ ಪುರಾವೆ ಎಂಬತಿರುವ ಅವರ ಕುರಿತಾದ ಹಲವು ವಿಚಾರಗಳಿವೆ. ರಾಮನ ದೇವಾಲಯಕ್ಕೆ ಪ್ರಾರ್ಥನೆಗೆಂದು ತೆರಳುವಾಗ ಖುರಾನ್ ಅನ್ನು ಮರೆಯದೆ ಜೊತೆಗೆ ತೆಗೆದುಕೊಂಡು ಹೋಗುತ್ತಿದ್ದರು. ಆದರೆ ಅದೇ ಜಾತ್ಯಾತೀತವಾದಿ ನಾಯಕ ತನ್ನ ಮಗ ಕುಡುಕ ಹರಿಲಾಲ್ ಗಾಂಧಿ ಗುಲಾಬ್ ಎಂಬ ಮುಸ್ಲಿಂ ಹೆಣ್ಣು ಮಗಳನ್ನು ಮದುವೆಯಾಗಿ ಅವನೂ ಇಸ್ಲಾಂ ಧರ್ಮಕ್ಕೆ ಮತಾಂತರವಾದಾಗ ಅದನ್ನು ತೀವ್ರತರನಾಗಿ ವಿರೋಧಿಸಿದ್ದರು. ಹಾಗು ಅವನಿಗೆ ಛೀಮಾರಿ ಹಾಕಿದ್ದರು. ಆಗ ಎಲ್ಲಿ ಮಾಸಿತ್ತು ಜಾತ್ಯಾತೀತ ಮನೋಭಾವ? ರಾಮರಾಜ್ಯದ ಕನಸಿನಲ್ಲಿ ಒಂದು ಅಂಶವಾಗಿರುವ ಗೋಮಾಂಸದ ನಿಷೇಧವನ್ನು ಸಂವಿಧಾನದಲ್ಲಿ ಗಾಂಧಿಯನ್ ಪ್ರಿನ್ಸಿಪಾಲ್‍ನನ್ನು ಸೇರಿಸಲಾಯಿತು. ಆದರೆ ಎಂದೂ ಆ ಗೋವನ್ನು `ಅಲ್ಲಾಹು ಅಕ್ಬರ್’ ಎಂದು ಹೇಳಿ ಕಡಿದು ಸಾಯಿಸಿ ಮುಕ್ಕುವ ಮುಸ್ಲಿಮರನ್ನು ಈ ಕುರಿತು ಎಚ್ಚರಿಸಲಿಲ್ಲ.ಮದರ್ ತೆರೆಸ್ಸಾನನ್ನು ಹಿಂದುಗಳನ್ನು ಮತಾಂತರ ಮಾಡುತ್ತಿದ್ದ ಕಾರಣ ದ್ವೇಷಿಸುತ್ತಿದ್ದ ಗಾಂಧಿ ಮಗ ಇಸ್ಲಾಂಗೆ ಮತಾಂತರವಾದಾಗ ಇಚ್ಛೆ ಇದ್ದರೂ ಅದನ್ನು ತಡೆಯಲಾಗಲಿಲ್ಲ.

ಮಹಾತ್ಮ ಕೊನೆ ಕೊನೆಗಂತೂ ಬಹಳ ಭೇಧಭಾವ ಮಾಡುತ್ತಾ ಮುಸ್ಲಿಮರನ್ನು ತನ್ನ ತಲೆ ಮೇಲೆ ಹೊತ್ತುಕೊಳ್ಳತೊಡಗಿದ್ದರು. ಇದನ್ನು ಗಮನಿಸುತ್ತಿದ್ದ ತೀವ್ರಗಾಮಿ ನಾಯಕರ ಕಣ್ಣು ಕೆಂಪಾಗತೊಡಗಿತ್ತು. ಅನ್ಯಾಯಕ್ಕೆ ಒಳಗಾದ ಹಿಂದುಗಳ ಒಡಲಿನಾಳದಲ್ಲಿ ಕಿಚ್ಚು ಹಚ್ಚಿದಂತೆ ಆಗತೊಡಗಿತ್ತು. ಮಾತ್ರವಲ್ಲ ರೋಷ ಉಕ್ಕಿ ರಕ್ತ ಕುದಿಯುತ್ತಿತ್ತು. ಅದರಲ್ಲಿ ಅವನೊಬ್ಬ ಪತ್ರಕರ್ತ, ವಿದ್ಯಾವಂತನಾಗಿದ್ದ ಎಲ್ಲಕ್ಕಿಂತ ಮಿಗಿಲಾಗಿ ಪ್ರತ್ಯೇಕತೆಯಲ್ಲಿ ಆದ ಅನ್ಯಾಗಳಿಂದ ನೊಂದಿದ್ದ ತರುಣ ಬಾಪುವಿನ ಬಾಳಿನವನತಿಗೆ ಲಯ ಹಾಡು ನಿಶ್ಚಯಿಸಿಬಿಟ್ಟ, ಅವನೇ ನಾತೂರಾಮ ಗೋಡ್ಸೆ.

ಬ್ರಿಟೀಷರು ಭಾರತವನ್ನು ಬಿಟ್ಟು ಹೋದ  ಐದುವರೆ ತಿಂಗಳ ನಂತರ ಒಂದು ದಿನ ಭಾರತ-ಪಾಕಿಸ್ತಾನದ ವಿಭಜನೆಯಲ್ಲಿ ನಿರಾಶ್ರಿತರಾಗಿ ಬೀದಿಗೆ ಬಿದ್ದ ಬಡ ಬ್ರಾಹ್ಮಣ ಕುಟುಂಬಕ್ಕೆ ಸೇರಿದ ಬಿಸಿ ರಕ್ತದ ತರುಣ ನಾಥೋರಾಮ ಗೋಡ್ಸೆ, ಹಿಂದುಗಳು ಸುರಿಸುತ್ತಿದ್ದ ಅಷ್ಟೂ ಅಸಂಖ್ಯಾತ ಕಣ್ಣೀರಿನ ಬಿಂದುಗಳಿಗೆ ಉತ್ತರವೆಂಬಂತೆ ಪಿಸ್ತೂಲಿನ ಗುಂಡಿನ ಬಿಂದಿಯನ್ನು ಬಾಪುವಿನ ಹಣೆಯ ಮಧ್ಯಕ್ಕೆ ಇಟ್ಟ. ಹಾಗೆ ಗುಂಡು ಹಾರಿಸಿ ಅಲುಗಾಡದೆ ಸ್ತಂಭೀಭೂತನಾಗಿ ಪೊಲೀಸರ ಕೋಳಕ್ಕೆ ಕೈ ಚಾಚಿ ಶರಣಾದ.

ಗಾಂಧೀ ಅಹಿಂಸೆಯ ಪರಿಪಾಲನೆ ಮಾಡಿ ಎಂದು ಕರೆ ಕೊಡುತ್ತಿದ್ದರೋ, ಅದನ್ನು ಅವರ  ಅನುಚರರು ಅಕ್ಷರಶ: ಮರೆತು ನಾತೋರಾಮ ಗೋಡ್ಸರವರ ಕುಟುಂಬವನ್ನು ನಾಶ ಮಾಡಲು ತುದಿಗಾಲಲ್ಲಿ ಕುದಿಯುತ್ತಾ ನಿಂತರು. ಅತ್ತ ನ್ಯಾಯಾಲಯ ತೀರ್ಪು ನೀಡಿ ನೇಣಿನ ಕುಣಿಕೆಗೆ ನಾತೋರಾಮರ ಕತ್ತನ್ನು ದಬ್ಬಿತು. ಆದರೆ ಅವರ ಮನದಲ್ಲಿ ಧರ್ಮ ರಕ್ಷಣೆಗಾಗಿ ಪ್ರಾಣ ತೆರುತ್ತಿದ್ದೇನೆ ಎಂಬ ಹೆಮ್ಮೆ ಇತ್ತೇ ಹೊರತು ಅಳುಕು ಕಿಂಚಿತ್ತೂ ಇರಲಿಲ್ಲ.

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿನ ನಾಯಕಲ್ಲಿ ಅಚ್ಚಳಿಯದೆ ಉಳಿದಿರುವ ಗಾಂಧಿ ತಾತನ ವ್ಯಕ್ತಿತ್ವವೇ ಅರ್ಥೈಸಿಕೊಳ್ಳಲು ಕ್ಲಿಷ್ಟಕರ. ಆ ವ್ಯಕ್ತಿತ್ವದ ಧೋರಣೆಗಳ ತಿರುಳು ದ್ವಂದ್ವಮಯ….!

-ರಜತ್ ರಾಜ್ ಡಿ.ಹೆಚ್

ಎಸ್.ಡಿ.ಎಂ ಕಾಲೇಜು

ಉಜಿರೆ

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!