ಅಂಕಣ

ಗಾಂಧೀಜಿ ಈಗ ಬದುಕಿದ್ದರೆ ರಾಷ್ಟ್ರ ”ಬಾಬಾ ‘ ಆಗುತ್ತಿದ್ದರೇ ?

ಗಾಂಧೀಜಿಯವರಷ್ಟು ಸಂಕೀರ್ಣ ವ್ಯಕ್ತಿತ್ವದ ಭಾರತದ ಮತ್ತೊಬ್ಬ ರಾಜಕಾರಣಿ ಮತ್ತೆ ಹುಟ್ಟಿಲ್ಲ .ಬೊಗೆದಷ್ಟು ಆಳ .  ಬಿಡಿಸಿದಷ್ಟು ಜಟಿಲ. ಅರಿತಷ್ಟು  ಸಂಕೀರ್ಣ . ಇಂತಹ ಒಬ್ಬ ವ್ಯಕ್ತಿ ಭೂಮಿಯ ಮೇಲೆ ಬದುಕಿದ್ದ ಎಂದು ನಂಬಲು ಇಂದಿನ ಪೀಳಿಗೆಗೆ ಕಷ್ಟ . ಅದೇ ಕಾರಣದಿಂದ ೧೯೮೨ ರಲ್ಲಿ ಬಿಡುಗಡೆಯಾದ ಗಾಂಧಿ ಚಿತ್ರವನ್ನು ನೋಡಿದ ಬಹಳಷ್ಟು ವಿದೇಶಿಗರು ಇದು ಒಂದು ಕಾಲ್ಪನಿಕ ಕಥೆಯೇ  ಅಥವಾ ನೈಜಘಟನೆ ಆಧಾರಿತ ಚಿತ್ರವೇ ಎಂದು ನಿರ್ದೇಶಕರನ್ನು ಕೇಳಿದ್ದರಂತೆ . ವಿದೇಶಿಗರಿಗೆ   ಅಷ್ಟೇ ಅಲ್ಲ ಭಾರತೀಯರಿಗೆ ಕೂಡ ಗಾಂಧಿಜಿ ಅರ್ಥ ಮಾಡಿಕೊಳ್ಳುವುದು ಕಷ್ಟ .

ಭಾರತದ ಇತರ ಮೇರು ನಾಯಕರಿಗಿಂತ , ಗಾಂಧೀಜಿ ಭಿನ್ನವಾಗಿ ನಿಲ್ಲುವುದು ತಮ್ಮನ್ನು ತಾವು ಎಲ್ಲರ ವಿಮರ್ಶೆಗೆ ಒಡ್ಡಿ ಕೊಂಡಿದ್ದು . ಉದಾಹಣೆಗೆ ನೀವು ಅಂಬೇಡ್ಕರ್ ರವರ ಬಗ್ಗೆ ಮುಕ್ತವಾಗಿ ಬರೆಯಲು ಆಗುವುದಿಲ್ಲ . ನೆಹರು  ಅವರ ಬಗ್ಗೆಯೂ ಬರೆಯುವ ವಾತಾವರಣ ತೀರಾ ಇತ್ತೀಚಿನವರೆಗೂ ನಿರ್ಮಾಣವಾಗಿರಲಿಲ್ಲ . ಆದರೆ ಗಾಂಧೀಜಿಯವರ ವಿಷಯದಲ್ಲಿ ಹಾಗಲ್ಲ . ಅವರ ಅಭಿಮಾನಿಗಳು ನಿಮ್ಮ ಮೇಲೆ ದಾಳಿ ನಡೆಸುವುದಿಲ್ಲ . ಅಷ್ಟರ ಮಟ್ಟಿಗೆ ಗಾಂಧಿ ಇನ್ನೂ ತಮ್ಮ ತತ್ವಗಳ ಮೂಲಕ ಜೀವಂತ .

ಬಹಳಷ್ಟು ವೈಯಕ್ತಿಕ ವಿಷಯಗಳನ್ನು ಗಾಂಧೀಜಿಯವರೇ ಬರೆದಿರುವುದರಿಂದ ಅವರ ಜೀವನ ತೆರೆದ ಪುಸ್ತಕ ಎಂದು ಕೊಂಡಿದ್ದರೆ ಅದು ನಮ್ಮ ಅಜ್ಞಾನ . ಅವರ ಬ್ರಹ್ಮಚರ್ಯದ  ಮೇಲಿನ ಪ್ರಯೋಗಗಳೆಲ್ಲ ಆಫ್ ದಿ ರೆಕಾರ್ಡ್ .

ಬ್ರಹ್ಮಚರ್ಯದಲ್ಲಿ ಬಹಳಷ್ಟು ಶಕ್ತಿ ಇದೆ ಎಂಬುದರಲ್ಲಿ ಗಾಂಧೀಜಿಯವರಿಗೆ ಬಲವಾದ ನಂಬಿಕೆಯಿತ್ತು .  ಲೈಂಗಿಕ ಕ್ರಿಯೆಗಳು ದೇಹ ಮತ್ತು ಮನಸ್ಸಿನ ಶಕ್ತಿಯನ್ನು ಕುಗ್ಗಿಸುತ್ತದೆ ಎಂಬುದು ಗಾಂಧೀಜಿಯವರ ಕಲ್ಪಿತ ಸಿದ್ಧಾಂತ (ಹೈಪೊಥೆಸಿಸ್). ಅದರ ಮೇಲೆ ಅವರು ಜೀವನ ಪರ್ಯಂತ ಪ್ರಯೋಗವನ್ನು ನಡೆಸುತ್ತಲೇ ಬಂದರು . ತಮ್ಮ ಹದಿಮೂರನೇ ವಯಸ್ಸಿಗೆ, ಹದಿನಾಲ್ಕು ವಯಸ್ಸಿನ ಕಸ್ತೂರಿ ಭಾರನ್ನು  ಮದುವೆಯಾದ ಗಾಂಧೀಜಿಯ ಲೈಂಗಿಕ ಬದುಕು ಎಲ್ಲರಂತೆಯೇ ಇತ್ತು . ತಮ್ಮ ತಂದೆಯರು ಮರಣ ಹೊಂದಿದ ದಿನ ತಮ್ಮ ಪತ್ನಿಯ ಜೋತೆ ಲೈಂಗಿಕ ಸಂಪರ್ಕ ಸಾಧಿಸಿದ್ದು , ಅವರಿಗೆ ತಪ್ಪಾಗಿ ತೋರಿತ್ತು. ಆ ವಿಷಯಕ್ಕೆ ತಮ್ಮನ್ನು ತಾವು ಕ್ಷಮಿಸಿಕೊಳ್ಳಲು ಗಾಂಧಿಯವರು ಸಿದ್ದರಿರಲಿಲ್ಲ . ತಮಗೆ ನಾಲ್ಕು ಮಕ್ಕಳು ಆದ ನಂತರ , ತಮ್ಮ ೩೮ ನೇ ವಯಸ್ಸಿನಲ್ಲಿ ಲೈಂಗಿಕ ಜೀವನಕ್ಕೆ ಅಂತ್ಯ ಹಾಡಿ , ಸಂಸಾರಿಯಾಗಿ ಇದ್ದುಕೊಂಡೇ ಬ್ರಹ್ಮಚರ್ಯ ಪಾಲಿಸಲು ಪ್ರತಿಜ್ಞೆ ಮಾಡುತ್ತಾರೆ.

ಆದರೆ ವಿಶ್ವಾಮಿತ್ರನನ್ನೇ ಕಾಡಿದ ಕಾಮ, ಗಾಂಧೀಜಿಯವರನ್ನ ಸುಮ್ಮನೆ  ಬಿಡಲಿಲ್ಲ. ಗಾಂಧೀಜಿಯವರು ಕೂಡ ಸುಮ್ಮನೆ ಸೋಲೊಪ್ಪಿಕೊಳ್ಳುವ ಜಾಯಮಾನದವರು ಅಲ್ಲ . ಕ್ರಮೇಣ ಕಾಮದ  ಮೇಲೆ ಹಿಡಿತ ಸಾಧಿಸಿದ ಗಾಂಧಿಯವರು , ಅಷ್ಟಕ್ಕೇ ಸುಮ್ಮನಾಗಲಿಲ್ಲ . ತಮಗೆ ಕಾಮದ ಮೇಲಿನ ಹಿಡಿತವನ್ನು ಪರೀಕ್ಷಿಸಲು ಹಲವಾರು ಪ್ರಚೋದಕಗಳನ್ನೂ ಪ್ರಯೋಗಿಸಲು ನಿರ್ಧರಿಸಿದರು . ಅವುಗಳಲ್ಲಿ ಒಂದು  ಆಶ್ರಮದ ಹುಡುಗಿಯರ ಜೊತೆ ಒಟ್ಟಿಗೆ ಮಲಗುವುದು ಮತ್ತು ಸ್ನಾನ ಮಾಡುವುದು . ಕಸ್ತೂರಿ ಭಾರವರು ಬದುಕಿದ್ದಾಗಲೇ , ಸುಶೀಲ್ ನಾಯರ್ ಎಂಬ ಆಶ್ರಮವಾಸಿ ಗಾಂಧೀಜಿಯವರ ಜೊತೆ ಮಲಗುವುದು ಮತ್ತು ಸ್ನಾನ ಮಾಡುವುದು ನಡೆದಿತ್ತು . ಆಶ್ರಮವಾಸಿಗಳು ಕೂಡ ಓಟ್ಟಿಗೆ ಮಲಗುವುದು ಮತ್ತು ಸ್ನಾನ ಮಾಡುವುದಕ್ಕೆ ಅವಕಾಶವಿತ್ತು . ಆದರೆ ಲೈಂಗಿಕ ಕ್ರಿಯೆ ಮತ್ತು ಅಶ್ಲೀಲ ಚರ್ಚೆಗೆ ಅವಕಾಶ ವಿರಲಿಲ್ಲ .

ಕಸ್ತೂರಿ ಭಾರವರು ತೀರಿಕೊಂಡ ಮೇಲೆ ಗಾಂಧೀಜಿಯವರು ತಮ್ಮ ಪ್ರಯೋಗಗಳನ್ನು ಹಲವಾರು ಆಶ್ರಮವಾಸಿ ಮಹಿಳೆಯ ಮೇಲೆ ಮಾಡಿದರು . ಗಾಂಧೀಜಿಯವರನ್ನು ಪ್ರಚೋದಿಸಲು , ಮಹಿಳೆಯರು ಶೃಂಗಾರದಿಂದ ಬಟ್ಟೆ ಕಳಚುವುದು ಮಾಡುತ್ತಿದ್ದರು . ನಗ್ನವಾಗಿ ಗಾಂಧಿಯವರೊಂದಿಗೆ ಮಲಗುತ್ತಿದ್ದರು . ಆದರೆ ಲೈಂಗಿಕ ಕ್ರಿಯೆ ಮಾಡುವಂತಿರಲಿಲ್ಲ . ೧೮ ವರ್ಷದ ಮನು ಎಂಬ ಸೋದರ ಸಂಬಂಧದಲ್ಲಿ ಮೊಮ್ಮಗಳು ಕೂಡ ಗಾಂಧಿಯವರ ಪ್ರಯೋಗಕ್ಕೆ ಒಪ್ಪಿ , ೭೭ ವಯಸ್ಸಿನ ಗಾಂಧಿಯವರ ಜೊತೆ ನಗ್ನವಾಗಿ ಮಲಗಿದ್ದು ಇದೆ . ರಕ್ತ ಸಂಬಂಧದಲ್ಲಿ , ಮೊಮ್ಮಕಳಿಗೆ ಸಮಾನರಾದ ಮನು ಮತ್ತು ಅಭಾ ಹುಡುಗಿಯರ ಜೊತೆ ತಮ್ಮ ಕೊನೆಯ ದಿನದವರೆಗೂ ಗಾಂಧೀಜಿಯವರು ಒಟ್ಟಿಗೆ ರಾತ್ರಿ ಮಲಗುತ್ತಿದ್ದರು . ದಿನದಲ್ಲಿ ನಡೆದಾಡುವಾಗ ಹೆಗಲಿಗೆ ಇವರ ಸಹಾಯ ಪಡೆದು ಕೊಳ್ಳುತ್ತಿದ್ದರು . ಈ ವಿಷಯದಲ್ಲಿ ಆಸಕ್ತಿ ಇದ್ದವರು Ghandhi: Naked ambition ಪುಸ್ತಕವನ್ನು ಓದಿ ತಿಳಿದುಕೊಳ್ಳಬಹುದು .

ಬ್ರಹ್ಮಚರ್ಯ ಅಪರಿಮಿತ ಶಕ್ತಿಯ ಮೂಲ ಎಂಬುದು ಹಿಂದುಗಳಿಗೆ ಹೊಸದೇನಲ್ಲ .  ಪಾರಂಪರಿಕ ಬ್ರಹ್ಮಚರ್ಯ ಪಾಲಿಸುವರು ಮತ್ತು ಸನ್ಯಾಸಿಗಳು ಪ್ರಚೋದನೆಗಳಿಂದ ದೂರವೇ ಉಳಿಯುತ್ತಾರೆ . ತಮ್ಮ ತಪಸ್ಸಿಗೆ ಅಡ್ಡಬರಬಹುದು ಎಂಬ ಅಂಜಿಕೆಯಿಂದ , ಹಿಂದೂ ಸನ್ಯಾಸಿಗಳು ಮಹಿಳೆಯನ್ನು ಹತ್ತಿರ  ಬಿಟ್ಟುಕೊಳ್ಳುವುದಿಲ್ಲ . ಇನ್ನು ಕೆಲವರು ಮುಖ ನೋಡುವುದು ಇಲ್ಲ . ರಾಮಾಯಣದಲ್ಲಿ ಲಕ್ಷ್ಮಣನು ಸೀತೆಯ ಕಾಲುಗಳನ್ನು ನೋಡಿ ಗುರುತಿಸುತ್ತಿದ್ದ , ಅವನಿಗೆ ಸೀತೆಯ ಮುಖಪರಿಚಯವಿರಲಿಲ್ಲ ಎಂದು ಓದಿದ ನೆನಪು . ಆಹಾರದಲ್ಲೂ ಸನ್ಯಾಸಿಗಳು ಸಾತ್ವಿಕ ಆಹಾರವನ್ನೇ ಸೇವಿಸುತ್ತಾರೆ . ಪ್ರಚೋದಕ ಎಂಬ ಕಾರಣದಿಂದ ಈರುಳ್ಳಿ , ಬೆಳ್ಳುಳಿ , ನುಗ್ಗೆಕಾಯಿಯಂತ ಆಹಾರಗಳು ಕೆಲವರಿಗೆ ನಿಷಿದ್ಧ . ಇನ್ನು ಅತಿರೇಕ ಇಂತಹ ನಂಬಿಕೆ ಇರುವ ಭಾರತದಲ್ಲಿ , ಗಾಂಧೀಜಿಯವರ ಪ್ರಯೋಗಗಳು ವಿಚಿತ್ರ ಎನಿಸುತ್ತವೆ .ಆದರೆ ಗಾಂಧೀಜಿಯವರ ದ್ರಷ್ಟಿಯಲ್ಲಿ , ಬ್ರಹ್ಮಚರ್ಯ ಮೂಲಕ ದೇವರನ್ನು ತಲುಪಲು ಅವರೇ ಕಂಡುಕೊಂಡ ಹೊಸಮಾರ್ಗ. ಯಾರು ಆತ್ಮ ಶುದ್ಧಿಯಿಂದ , ಸುಂದರ ನಗ್ನ ದೇಹದಿಂದಲೂ ಪ್ರಚೋದನೆ ಒಳಗಾಗದೆ , ಬ್ರಹ್ಮಚರ್ಯ ಆಚರಿಸುತ್ತಾರೋ , ಅವರು ದೇವರು ಹತ್ತಿರ ಹೋಗುವ ಹಾದಿಯಲ್ಲಿ ಹೆಚ್ಚು ಸಾಗುತ್ತಾರೆ ಎಂಬುದು ಗಾಂಧಿಯವರ ನಂಬಿಕೆ .

ಗಾಂಧೀಜಿಯರ ಈ ಪ್ರಯೋಗಗಳು ಅವರ ಸುತ್ತಮುತ್ತಲಿನ ನಾಯಕರಿಗೆ ಇರುಸು ಮುರುಸು ಉಂಟು ಮಾಡಿದರೂ , ಅದು ಗಾಂಧೀಜಿಯರನ್ನು ನಾಯಕರನ್ನಾಗಿ ಒಪ್ಪಿಕೊಳ್ಳಲು ಅಡ್ಡಿಯಾಗಲಿಲ್ಲ . ಸರ್ದಾರ್ ಪಟೇಲರು ಗಾಂಧೀಜಿಯವರನ್ನು ಈ ವಿಷಯವಾಗಿ   ವೈಯಕಿವಾಗಿ ಎಚ್ಚರಿಸಿದ್ದರು .ಗಾಂಧೀಜಿಯವರಿಗೆ ತುಂಬಾ ಹತ್ತಿರವಿದ್ದ ನೆಹರುರವರಿಗೆ , ಗಾಂಧೀಜಿಯವರನ್ನು ಈ ಬಗ್ಗೆ ಪ್ರಶ್ನಿಸಲು ನೈತಿಕತೆ ಇರಲಿಲ್ಲವೋ, ಅಥವಾ ಇದನ್ನೇ ತಮ್ಮ ಅನುಕೂಲಕ್ಕೆ ಬಳಸಿಕೊಂಡರೋ ಗೊತ್ತಿಲ್ಲ. ಏಕೆಂದರೆ ಕಾಂಗ್ರೆಸ್ ವರ್ಕಿಂಗ್ ಕಮಿಟಿಯಲ್ಲಿ ಬಹುಮತ ಪಡೆದು ಪ್ರಧಾನಿಯಾಗಿ ಆಯ್ಕೆಯಾಗಿದ್ದ ಸರ್ದಾರ್ ವಲ್ಲಭ ಬಾಯಿ ಪಟೇಲ್ ರವನ್ನು , ಕಡೆಗಣಿಸಿ ಬೆರಳಣಿಕೆ ಮತವನ್ನು ಪಡೆದ ನೆಹರುರವರನ್ನು ಪ್ರಧಾನಿ ಮಾಡಬೇಕು ಎಂದು ಹಠ ತೊಟ್ಟಿದ್ದರ ಹಿಂದೆ , ಚಿದಂಬರ ರಹಸ್ಯ ಇರುವುದು ಸುಳ್ಳಲ್ಲ .  ಹೆಚ್ಚಿನ ಇತರ ನಾಯಕರಿಗೆ ಗಾಂಧೀಜಿಯವನ್ನು ಪ್ರಶ್ನಿಸುವ ಧೈರ್ಯ ಇರಲಿಲ್ಲವೊ , ಏನೋ .ಸ್ವತಂತ್ರ ಹೋರಾಟದಲ್ಲಿ ಕೆಚ್ಚು ಮೂಡಿಸಿಕೊಂಡಿದ್ದ ಜನರಿಗೂ , ಇದು ದೊಡ್ಡದಾಗಿ ಕಾಣಲಿಲ್ಲ . ಸ್ವತಂತ್ರ ಎಂಬ ದೊಡ್ಡ ಆಸೆ  ಜನರ ಮುಂದಾಗಿ ಇದ್ದಾಗ, ಅವರಿಗೆ ಯಾರು ಬೇಕಾದರೂ ಸ್ವತಂತ್ರ ಕೊಡಿಸುತ್ತಾರೆ ಎಂದರೆ ಅವರನ್ನು ಒಪ್ಪಿಕೊಳ್ಳಲು ಜನರು ಸಿದ್ಧರಿದ್ದಂತೆ ಕಾಣುತ್ತದೆ . ಗಾಂಧೀಜಿ ನಡೆಸುತ್ತಿದ್ದ  ಪತ್ರಿಕೆಯ ಇಬ್ಬರು ಸಂಪಾದಕರು ರಾಜೀನಾಮೆ ನೀಡಿದರೂ , ಸಾವಿರಾರು ಐತಿಹಾಸಿಕ ಘಟನೆ ವರದಿ ಮಾಡುತ್ತಿರುವ ಅಂದಿನ ಪತ್ರಕಾರರಿಗೂ ಇದು ಗೌಣವಾಗಿ ಕಂಡಿದ್ದು ವಿಚಿತ್ರವಾದರೂ ಸತ್ಯ . ಬ್ರಿಟಿಷರು ಕೂಡ ಇದನ್ನು ತಮ್ಮ ಅಸ್ತ್ರವಾಗಿ ಬರಸಿಕೊಳಲಿಲ್ಲ ಎಂಬುದು ಆಶ್ಚರ್ಯವಾದರೂ ಸತ್ಯ . ಬಹುಷಃ ಇದಕ್ಕೆ ಕಾರಣ ಸ್ವತಂತ್ರ ಹೋರಾಟಕ್ಕೆ ಗಾಂದೀಜಿಯವರಲ್ಲಿದ್ದ ಪ್ರಶ್ನಾತೀತ ಬದ್ಧತೆ . ಸ್ವತಂತ್ರ ಹೋರಾಟದಲ್ಲಿ ಮಾತ್ರ ಜನರು ಪಾವಿತ್ರತೆ ಬಯಸಿದ್ದು, ಅಂದಿನ ಪ್ರಜೆಗಳ ಪ್ರೌಢತೆಗೆ ಒಂದು ಸಾಕ್ಷಿ ಎನ್ನಬಹುದು . ಇದು ಕಾಲ ಮಹಾತ್ಮೆಯೋ ಅಥವಾ ಮಹಾತ್ಮ ಗಾಂಧೀಜಿ ಪವಾಡವೋ ಎಂಬುದು ಚರ್ಚೆಯ ವಿಷಯ

ಅದೇ ಗಾಂಧಿ ಈಗ ಬದುಕಿದ್ದರೆ , ನಮಗೆ ಗಾಂಧಿಯವರ ಆಂತರಿಕ ಬದುಕಿನ ಬಗ್ಗೆ ಗೊತ್ತಿದರೆ ನಾವು ಅವರನ್ನು ನಾಯಕ ಎಂದು ಒಪ್ಪಿಕೊಳ್ಳುತ್ತಿದ್ದೆವೇ ? ಇಂದು ಸ್ವತಂತ್ರ ಹೋರಾಟ ನಡೆಯುತಿದ್ದರೆ , ಇಂದಿನ ಪತ್ರಿಕೆಗಳು ನಾಯಕರ ವಿಚಿತ್ರ ಲೈಂಗಿಕ ಪ್ರಯೋಗಳನ್ನು ದೊಡ್ಡದು ಮಾಡಿ, ಪ್ರಮುಖ ಹೋರಾಟಕ್ಕೆ ದಕ್ಕೆ ಮಾಡದೆ ಬಿಡುತ್ತಿದ್ದವೇ ? ಆಶ್ರಮದ  ಬಾಬಾಗಳನ್ನು ನ್ಯಾಯಾಂಗ ಜೈಲಿಗಟ್ಟುತ್ತಿರುವುದನ್ನು ನೋಡಿದರೆ, ಗಾಂಧೀಜಿಯವರ ಆಶ್ರಮದ ಕಾನೂನುಗಳನ್ನು, ನಮ್ಮ ಕೋರ್ಟು ಯಾವ ರೀತಿ ವ್ಯಾಖ್ಯಾನಿಸುತಿತ್ತು ಎಂದು ಎಂದು ಸೋಜಿಗವಾಗುತ್ತದೆ . ಒಟ್ಟಿನಲ್ಲಿ ಸ್ವತಂತ್ರ ಹೋರಾಟ ಈಗ ನಡೆದಿದ್ದರೆ , ನಮಗೆ ಸ್ವತಂತ್ರ ಖಂಡಿತ ಬರುತ್ತಿರಲಿಲ್ಲ. ಪ್ರೌಢತೆಯ ಹೋರಾಟ ನಮ್ಮಲ್ಲಿ ಮರೆಯಾಗಿರುದಂತೂ ಸತ್ಯ .

ಇಂದು ಭಾರತದಲ್ಲಿ ಯಾವುದೇ ರಾಜಕಾರಣಿ ,ನಟರು, ಸನ್ಯಾಸಿಗಳು ಅಥವಾ ದೇವಮಾನರನ್ನು ಇನ್ನಿಲ್ಲದಂತೆ ಮಾಡಲು ಒಂದು ಲೈಂಗಿಕ ಹಗರಣ ಅರೋಪ ಸಾಕು . ಅವರು ತಮ್ಮ ಕ್ಷೇತ್ರದಲ್ಲಿ ಮಾಡಿರುವ ಸಾಧನೆಗಳೆನ್ನೆಲ್ಲ ಒಂದೇ ಕ್ಷಣದಲ್ಲಿ ಮರೆತು ಬಿಡುತ್ತೇವೆ. ಆರೋಪಗಳನ್ನು , ಸಾಧನೆಯಿಂದ ಪ್ರತ್ಯೇಕಿಸಿ ನಾವು ನೋಡುವುದೇ ಇಲ್ಲ .ಒಂದು ಕಡೆ ಭಾರತೀಯರು ತಾವು ತಪ್ಪು ಮಾಡಿದ್ದೇವೆ ಎಂದು ಒಪ್ಪಿಕೊಳ್ಳುವುದಿಲ್ಲ ,ಇನ್ನೊಂದು ಕಡೆ  ಸಾರ್ವಜನಿಕರು ಕ್ಷಮಿಸುವುದು ಇಲ್ಲ .ಅಮೇರಿಕಾದ ಮಾಜಿ  ಅಧ್ಯಕ್ಷ   ಬಿಲ್ ಕ್ಲಿಂಟನ್ ನವರು ಲೈಂಗಿಕ ಹಗರಣದಲ್ಲಿ ಸಿಕ್ಕಿ ಹಾಕಿಕೊಂಡಾಗ , ಅಮೇರಿಕ ಜನತೆ ನಡೆದುಕೊಂಡ ರೀತಿ ನಿಜಕ್ಕೂ ಮೆಚ್ಚಿಕೊಳ್ಳುವಂತದ್ದು . ಕ್ಲಿಂಟನ್ನರು ತಮ್ಮ ತಪ್ಪನ್ನು ಒಪ್ಪಿಕೊಂಡ ಮೇಲೆ, ದೇಶದ ಹಿತವನ್ನು ದೃಷ್ಟಿಯನ್ನು ಇಟ್ಟುಕೊಂಡು, ಜನತೆ ಅದನ್ನು ದೊಡ್ಡದು ಮಾಡಲಿಲ್ಲ . ಅವರ ಅಧ್ಯಕ್ಷ ಪದವಿಗೆ ಯಾವುದೇ ಚುತಿ ಬರಲಿಲ್ಲ .   ಅಂತಹ ಪ್ರೌಢ ನಿರ್ಧಾರ ನಮ್ಮಲ್ಲಿ ಕಾಣ ಬರುವುದಿಲ್ಲ.

ಗಾಂಧಿಯವರು ಮರಣ ಹೊಂದಿ ಕೆಲವು ದಶಕಗಳೇ ಕಳೆದಿವೆ. ದಿನ ಕಳೆದಂತೆ ನಾವು ಬೌತಿಕವಾಗಿ ಮುಂದುವರೆದಿದ್ದೇವೆ .  ಆದರೆ ಮಾನಸಿಕವಾಗಿ ಹಿಂದೆ ಹೋಗುತ್ತಿದ್ದೇವೆ . ಒಟ್ಟಿನಲ್ಲಿ ಗಾಂಧಿಜಿಯವರಿಂದ ಮಾತ್ರವಲ್ಲ , ಸ್ವತಂತ್ರ ಪೂರ್ವ ಭಾರತೀಯರಿಂದ ಬಹಳಷ್ಟು ಪಾಠ ಕಲಿಯುವುದು ಇದೆ .

-ಡಾ ದಯಾನಂದ ಲಿಂಗೇಗೌಡ

 

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!