ಕವಿತೆ

ಎಪ್ಪತ್ತರ ಸ್ವಾತ೦ತ್ರ್ಯ ( ಭಾಮಿನಿ ಷಟ್ಪದಿ)

ಒಂದೆ ತಾಯಿಯ ಮಕ್ಕಳಂತಾ
ವೊಂದುಗೂಡುತ ಬಾಳಿಬದುಕುವೆ
ವಿಂದು ನಮಿಸುತೆ ಭಾರತಾಂಬೆಯ ದಿವ್ಯಚರಣಕ್ಕಂ |
ಪಿಂದೆ ಪರಕೀಯ ಬ್ರಿಟಿಷರುಗ
ಳೆಂದ ಮಿಥ್ಯದ ಮೋಡಿಮಾತಿಗೆ
ನಂದಿಪೋದರು ನಮ್ಮ ಭುವಿಯ ಸ್ವಾರ್ಥದರಸುಗಳು || ೧||
ಬೇಗಬೇಗನೆ ಮೋಸಗೊಳಿಸುತ
ಜಾಗವೆಲ್ಲವ ಸೂರೆಗೈಯುತ
ಸಾಗಿ ಬಂದರು ನಮ್ಮ ರಾಷ್ಟ್ರದ ಮೇಲೆ ಕಣ್ಣಿಡುತ |
ತೂಗಿ ನೇಲುವ ತೋಟದಲ್ಲಿನ
ಬೀಗಿ ಕೊಬ್ಬಿದ ಫಲಗಳೆಲ್ಲವ
ಸಾಗಿಸುತ ಲಾಭವನೆ ಗಳಿಸಿಹರವರ ದೇಶದಲಿ ||೨||
ಮಂದಿಗಾಗಿರೆ ಗಾಂಧಿ ನಾಯಕ
ಹೊಂದಿ ದುಡಿಯಲು ಸತ್ಯಪಥದಲಿ
ನಿಂದರಧಿಕ ಪರಾಕ್ರಮಿಗಳೀ ದೇಶರಕ್ಷಣೆಗೆ |
ಹಿಂದಿರುಗದೆಲೆ ಮುಂದೆ ನುಗ್ಗುತೆ
ಕುಂದದೆಲೆ ಹೋರುತ್ತೆ ತಾವೇ
ಬಂಧಮೋಚನೆಗೆಂದು ಬಲಿಯಾದರ್ ಮಹಾವೀರರ್ ||೩||

ತಮ್ಮ ದೇಹದೊಳಂದು ರಕ್ತವ
ಚಿಮ್ಮಿಸುತೆ ವಿಜಯಾಟ್ಟಹಾಸದಿ
ನಮ್ಮ ಭೂಮಿಯ ದಾಸ್ಯ ನೀಗೆ ಹುತಾತ್ಮರಾಗುತಲಿ |
ಅಮ್ಮ ನೊಂದಿರೆ ಪಾರತಂತ್ರದೆ
ಹೆಮ್ಮೆಕಂದನು ತೊಡೆದನಲ್ಲಿಯೆ
ಒಮ್ಮನದಿ ಜಯವನ್ನು ಸಾಧಿಸಿ ಮೆರೆದನೊಸಗೆಯನು|| ||೪||
ವೀರತನದಲಿ ಹೋರಿದಂತಹ
ಧೀರತನಯರ, ಜೀವದಾತರ,
ಭಾರತಸ್ವಾತಂತ್ರ್ಯದಿವಸದೆ ನೆನೆವೆವಾಮೆಂತೋ |
ಕೋರಿ ಶಾಂತಿಯ ಕರವ ಮುಗಿವೆವು
ದಾರಿಬೆಳಗಿಹ ಧನ್ಯಯೋಧರ
ಹಾರುತಲಿರುವ ಬಾವುಟವ ನೋಡುತ್ತೆ ತನ್ಮಯದಿ ||೫||

ಭಾಮಿನೀ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭಾಮಿನೀ ಷಟ್ಪದಿಯ ಪದ್ಯವೊಂದರಲ್ಲಿ ಆರು ಸಾಲಿಗಳಿರುತ್ತವೆ. ಮೂರನೆಯ, ಆರನೆಯ ಸಾಲುಗಳಲ್ಲಿ 7 ಮಾತ್ರೆಗಳ ಮೂರುಗಣಗಳೂ ಹಾಗು ಒಂದು ಗುರು ಇರುತ್ತವೆ. ಮಿಕ್ಕ ಸಾಲುಗಳಲ್ಲಿ 7 ಮಾತ್ರೆಗಳ ಎರಡು ಗಣಗಳಿರುತ್ತವೆ. ಮತ್ತೊಂದು ಪ್ರಮುಖ ನಿಯಮವೆಂದರೆ, 7 ಮಾತ್ರೆಗಳ ಗಣಗಳು ಕಡ್ಡಾಯವಾಗಿ3+4 ಮಾದರಿಯಲ್ಲಿರಬೇಕು. ಅಂದರೆ 3 ಮಾತ್ರೆಯ ಗಣದ ನಂತರ 4 ಮಾತ್ರೆಯ ಗಣವು ಬಂದು, ಒಟ್ಟು 7 ಮಾತ್ರೆಗಳ ಗಣವಾಗಬೇಕು.
ಪದ್ಯವು ಆದಿಪ್ರಾಸದಿಂದ ಕೂಡಿರಬೇಕು. ಪ್ರತಿ ಷಟ್ಪದಿಯಲ್ಲಿಯೂ ಎಲ್ಲ ಗೆರೆಗಳ ದ್ವಿತೀಯ ವ್ಯ೦ಜನ ಅಕ್ಷರ ಹಾಗೂ ಪ್ರಥಮ ಅಕ್ಷರದ ಸ್ವರ, ಒ೦ದೆ ಆಗಬೇಕು.
ಉದಾ: ಹದಿನೈದನೇ ಶತಮಾನದ ಕುಮಾರವ್ಯಾಸನ ಕರ್ನಾಟಭಾರತ ಕಥಾಮಂಜರಿ (ಗದುಗಿನ ಭಾರತ)

೩|೪|೩|೪
೩|೪|೩|೪
೩|೪|೩|೪|೩|೪|-
೩|೪|೩|೪
೩|೪|೩|೪
೩|೪|೩|೪|೩|೪|-

 

-Shylaja kekanaje

shylasbhaqt@gmail.com

Facebook ಕಾಮೆಂಟ್ಸ್

ಲೇಖಕರ ಕುರಿತು

Shylaja Kekanaje

ಶೈಲಜಾ ಕೇಕಣಾಜೆ ಮೂಲತಃ ದಕ್ಷಿಣ ಕನ್ನಡದ ವಿಟ್ಲದವರು. ಬಿ .ಇ. ಪದವೀಧರೆಯಾಗಿದ್ದು ಸದ್ಯ ಬೆಂಗಳೂರು ವಾಸಿ. ಲೇಖನ, ಕವನಗಳ ರಚನೆಯಲ್ಲಿ ಹವ್ಯಾಸಿ. ಅದರಲ್ಲೂ ಛಂದೋಬದ್ದ ಕವನಗಳನ್ನು ರಚಿಸುವ ತುಡಿತ. ಮಕ್ಕಳ ಪಾಕ್ಷಿಕ ಬಾಲಮಂಗಳದಲ್ಲೊಂದು ಸರಣಿ ಲೇಖನ ಯಶಸ್ವಿಯಾಗಿ ಮೂಡಿ ಬರುತ್ತಾ ಇದೆ.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!