ಪ್ರಚಲಿತ

¨ಭಯೋತ್ಪಾದನೆಗೆ ಧರ್ಮ ಇಲ್ಲ. ಹಾಗಾದರೆ ಭಯೋತ್ಪಾದಕರ ಧರ್ಮ ಯಾವುದು!?

ಇದು ಯಾರನ್ನು ನಂಬಿಸುವ ಪ್ರಯತ್ನವೋ ಗೊತ್ತಿಲ್ಲ. ಆದರೆ ಪ್ರತೀ ಬಾರಿ ಭಯೋತ್ಪಾದಕರ ಅಟ್ಟಹಾಸ ನಡೆದಾಗ, ಒಂದಷ್ಟು ಅಮಾಯಕರನ್ನು ನಿರ್ಧಯವಾಗಿ ಕೊಂದು ಬಿಸಾಕಿದಾಗ  ‘ಭಯೋತ್ಪದಾಕರಿಗೆ ಧರ್ಮವಿಲ್ಲ. ಅವರನ್ನು ಮುಸಲ್ಮಾನೆರೆಂದು ಕರೆಯಬೇಡಿ’ ಎಂಬ ತಿಪ್ಪೆ ಸಾರುವ ಕೆಲಸ ನಡೆಯುತ್ತಲೇ ಬರುತ್ತಿದೆ! ಸದ್ಯದ ಮಟ್ಟಿಗಂತೂ ಇದನ್ನು ಯಾರೂ ನಂಬುವ ಸ್ಥಿತಿಯಲ್ಲಿಲ್ಲ! ಇದೊಂಥರಾ ಇಲ್ಲಿರುವ ಉಳಿದ ಮುಸಲ್ಮಾನರನ್ನು ಪಜೀತಿಯಿಂದ ತಪ್ಪಿಸುವ ಒಂದು ಪ್ರಯತ್ನವಷ್ಟೇ ಎಂಬ ಸತ್ಯ ಎಲ್ಲರಿಗೂ ಗೊತ್ತಿರುವಂತಹುದು.  ಮೊನ್ನೆ ಮೊನ್ನೆಯಷ್ಟೇ ಬಾಂಗ್ಲಾದಲ್ಲಿ 20ಮಂದಿ ಮುಸಲ್ಮಾನೇತರರನ್ನು ‘ಕುರಾನ್ ಹೇಳಿರಿ, ಇಲ್ಲ ಸಾಯಿರಿ’ ಎಂಬ ಸಾವು-ಬದುಕಿನ ಆಫರ್ ನೀಡುತ್ತಾ ಅಮಾನುಷವಾಗಿ ಕತ್ತು ಹಿಸುಕಿ ಕೊಂದಾಗಲೂ ನಮ್ಮ ದೇಶದಲ್ಲಿ ಇದೇ ಹಳಸಲು ರಾಗವನ್ನು ಹಾಡಿ ಇಲ್ಲಿರೋ ಮುಸಲ್ಮಾನರನ್ನು ಸಮಧಾನ ಪಡಿಸಲಾಗಿತ್ತು. ಭಯೋತ್ಪಾದನೆಗೆ ಧರ್ಮದ ಲೇಪನ ಸಲ್ಲದು ಎಂಬುದು ಹಳೇ ವಿಚಾರವೇ. ಭಯೋತ್ಪಾದಕನ ಹೆಸರು ಇಸ್ಲಾಮಿಕ್‍ದ್ದೇ (ಅರಬಿಕ್ ಮೂಲದ್ದು) ಇರಬಹುದು, ಆತ ಹುಟ್ಟಿದ್ದೂ ಮುಸಲ್ಮಾನ ದಂಪತಿಗಳಿಗೇ ಆಗಿರಬಹುದು, ಆತನ ಉದ್ದೇಶ ಕೂಡ ‘ಇಸ್ಲಾಂ’ ರಾಷ್ಟ್ರ ಸ್ಥಾಪನೆದ್ದೇ ಆಗಿರಬಹುದು, ಇನ್ನು ಆತ ನಂಬುವ ಭಗವಂತನ ಹೆಸರು ಕೂಡ ‘ಅಲ್ಲಾ’ ಎಂದೇ ಇರಬಹುದು, ಎಲ್ಲಕ್ಕಿಂತ ಹೆಚ್ಚಾಗಿ ತಾನು ಕುರಾನ್ ಆದೇಶಗಳನ್ನಷ್ಟೇ ಪಾಲಿಸುತ್ತಿದ್ದೇನೆ ಎಂದು ಸ್ವತಃ ಭಯೋತ್ಪಾದಕನೇ ಎದೆ ತಟ್ಟಿ ಹೇಳುತ್ತಲೂ ಇರಬಹುದು ಆದರೂ ಆತನನ್ನು ಮುಸಲ್ಮಾನರೆನ್ನಬೇಡಿ ಎಂಬ ತರ್ಕವನ್ನು ಒಪ್ಪಕಾಗದಿದ್ದರೂ ಒಪ್ಪಲೇಬೇಕೆನ್ನುವುದು ನಮ್ಮಲ್ಲಿ ಬೆಳೆದಿರುವ ತರ್ಕ!!

ಇರಲಿ, ಒಪ್ಪೋಣ. ಭಯೋತ್ಪಾದಕರನ್ನು ಮುಸಲ್ಮಾನರಲ್ಲವೆಂದೇ ತಿಳಿಯೋಣ. ಆದರೆ ಇದೇ ಭಯೋತ್ಪಾದಕರನ್ನು ರಾಜಾರೋಷವಾಗಿ ಬೆಂಬಲ ಸೂಚಿಸುತ್ತಾ ಹೀರೋಗಳಾಗಿ ಮೆರೆದಾಡಿಸುವ ಒಂದಷ್ಟು ಮಂದಿ ಇದ್ದಾರಲ್ಲ ಇಲ್ಲಿ ಅವರನ್ನಾದರೂ  ಏನೆಂದು ಕರೆಯುವುದು!? ಯಾಕೆಂದರೆ ಮೊನ್ನೆ ತಾನೇ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಬುರ್ಹನ್ ವಾನಿಯನ್ನು ಕಾಶ್ಮೀರದಲ್ಲಿ ಕೊಲ್ಲಲಾಯಿತು. ಆದರೆ ಸತ್ತದ್ದು ನರಹಂತಕನಾದರೂ ಇಡೀ ಕಾಶ್ಮೀರಕ್ಕೆ ಕಾಶ್ಮೀರವೇ ಬೀದಿಗಿಳಿಯಿತು. ಅತ್ತ ಪಾಕಿಸ್ಥಾನ ಸತ್ತ ಭಯೋತ್ಪಾದಕನಿಗೆ ‘ಹುತಾತ್ಮ’ ಎಂಬ ಬಿರುದು ನೀಡಿ ಗೌರವಿಸಿತು! ಅದೆಷ್ಟೋ ಸಂಖ್ಯೆಯ ಮುಸಲ್ಮಾನರು (!?) ಸತ್ತ ಭಯೋತ್ಪಾದಕನ ಸಾವನ್ನು ಮಹಾ ಮಾನವತಾವಾದಿಯ ಸಾವೆಂಬಂತೆ ಬಿಂಬಿಸಿ ಕಣ್ಣೀರನ್ನೂ ಸುರಿಸಿ ಬಿಟ್ಟರು! ಇನು ಅವನ ಅಂತ್ಯಸಂಸ್ಕಾರಕ್ಕೆ ಕಾಶ್ಮೀರದಲ್ಲಿ ನೆರದವರ ಸಂಖ್ಯೆ 50000ಕ್ಕೂ ಅಧಿಕವಂತೆ! ಹೇಳಿ ಭಯೋತ್ಪಾದಕ ಮುಸಲ್ಮಾನನಲ್ಲವೆನ್ನುವುದಾದರೆ ಈ ‘ಮುಸಲ್ಮಾನೇತರನ’ ಸಾವನ್ನು ತಮ್ಮ ನಾಯಕನ ಸಾವೆಂಬಂತೆ ಬಿಂಬಿಸುತ್ತಾ ಬೀದಿಗಿಳಿದಿರುವ ಈ ಮತಿಗೆಟ್ಟ ಅನುಯಾಯಿಗಳನ್ನು ಮುಸಲ್ಮಾನರಲ್ಲ ಎನ್ನಬೇಕೆ!? ಅದಿರಲಿ, ಇನ್ನು ಇದೇ ಬುರ್ಹನ್‍ನ ಶವವನ್ನು ಮೆರವಣಿಗೆಯಲ್ಲಿ ಹೊತ್ತೊಯ್ದು ದಫನ ಮಾಡಿದ್ದು ಮಸೀದಿಯ ದಫನ ಭೂಮಿಯಲ್ಲಿಯೇ ಅಲ್ಲವೇ!? ಭಯೋತ್ಪಾದಕ ಮುಸಲ್ಮಾನನೇ ಅಲ್ಲ ಎಂದಾದರೆ ಅವನಿಗ್ಯಾಕೆ ಇಸ್ಲಾಂನ ವಿಧಿ ವಿಧಾನಗಳು ಎಂಬ ಪ್ರಶ್ನೆ ಸಹಜವಾದುದೇ ಅಲ್ಲವೇ!? ಇದು ಕೇವಲ ಬುರ್ಹನ ಕತೆಯಲ್ಲ. ಅಂದು ಕಸಬ್ ಎಂಬ ಭಯೋತ್ಪಾದಕನನ್ನು ಗಲ್ಲು ಶಿಕ್ಷೆಗೆ ಗುರಿಪಡಿಸಿದಾಗ ಮಹಾರಾಷ್ಟ್ರದಲ್ಲೂ  ಇದೇ ಪರಿಸ್ಥಿತಿ ನಡೆದಿತ್ತು.  ಪಾಕಿಸ್ಥಾನವು ಅದೆಷ್ಟೋ ಸಂದರ್ಭದಲ್ಲಿ ಸತ್ತ ಭಯೋತ್ಪಾದಕರುಗಳನ್ನು ಅವರು ಪಾಕಿಸ್ಥಾನದ ಪ್ರಜೆಯಾಗಿದ್ದರೂ ಕೂಡ ಅವರು ನಮ್ಮವರಲ್ಲವೆನ್ನುತ್ತಾ ಮುಖ ಉಳಿಸುವ ಪ್ರಯತ್ನ ಪಟ್ಟಿದೆ! ಅದೇ ರೀತಿ ಇಲ್ಲಿನ ಮುಸಲ್ಮಾನರುಗಳು ಕೂಡ  ಭಯೋತ್ಪಾದಕರುಗಳನ್ನು ದೂರ ಮಾಡುತ್ತಿದ್ದರೆ, ಕನಿಷ್ಟ ಪಕ್ಷ ತಮ್ಮ ಧಫನ ಭೂಮಿಯಿಂದಲಾದರೂ ದೂರವಿರಿಸುತ್ತಿದ್ದರೆ ‘ಭಯೋತ್ಪಾದಕರು ಮುಸಲ್ಮಾನರಲ್ಲ ಎಂಬ ಮಾತಿಗೆ ಒಂದಷ್ಟು ಪುಷ್ಠಿಯಾದರೂ ಸಿಗುತ್ತಿತ್ತು! ಆದರೆ ತಮಾಷೆಯೆಂದರೆ ಭಯೋತ್ಪಾದಕರುಗಳು ಮಡಿದಾಗಲೆಲ್ಲಾ ಅವರನ್ನು ಕೊಂಡೋಗಿ ದಫನ ಮಾಡುವುದು, ರಿತಿ ರಿವಾಜುಗಳನ್ನು ಅನುಸರಿಸುವುದು ಇಸ್ಲಾಂ ಸಂಪ್ರದಾಯದ ಪ್ರಕಾರವೇ! ಆದರೂ ಅವರು ಮುಸಲ್ಮಾನರಲ್ಲವೆಂದು ಹೇಳಿ ಬಿಟ್ಟರೆ ನಾವೆಲ್ಲಾ ಹೌದು ಹೌದು ಎಂದು ತಲೆಯಾಡಿಸಬೇಕಂತೆ!

ಇರಲಿ, ಇನ್ನು ಭಯೋತ್ಪಾದಕರುಗಳದ್ದು ಧರ್ಮ ಬಾಹಿರ ನಡೆ. ಅವರು ನೈಜ ಇಸ್ಲಾಂನ ಅನುಯಾಯಿಗಳಲ್ಲ ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹಾಗೂ ಅದರ ಪರ ಇರುವವರು  ಒಪ್ಪಕ್ಕೆ ತಯಾರಿದ್ದಾರೆಯೇ!? ಖಂಡಿತಾ ಇಲ್ಲ! ಬದಲಾಗಿ ಮಾನವತೆಗೆ ಶಾಪಗ್ರಸ್ತವಾಗಿರುವ ಭಯೋತ್ಪಾದಕರುಗಳು ಇಂದು ತಾವು ಮಾಡಿದ್ದೇ ಸರಿ, ತಮ್ಮದೇ ನೈಜ ಇಸ್ಲಾಂ ನಡೆ ಎಂದು ಹೇಳುತ್ತಿರುವುದಷ್ಟೇ ಅಲ್ಲದೆ ತಮ್ಮನ್ನು ವಿರೋಧಿಸುವ  ಮುಸಲ್ಮಾನರುಗಳನ್ನೇ ಅವರುಗಳು ‘ಮುಸಲ್ಮಾನರಲ್ಲ’ ಎನ್ನುತ್ತಿದ್ದಾರೆ! ಮೇಲಾಗಿ ಐಸಿಸ್‍ನಂತಹಾ ಭಯೋತ್ಪಾದಕ ಸಂಘಟನೆಯ ತತ್ವಗಳನ್ನು ಒಪ್ಪಿಕೊಂಡು ಅದನ್ನೇ ಇಸ್ಲಾಂನ ನೈಜ ಗುರಿ ಎಂದೆನ್ನುತ್ತಾ ಇಂದು ವಿದ್ಯಾವಂತ ಮುಸಲ್ಮಾನ ಯುವಕರುಗಳು ಹೆಚ್ಚು ಹೆಚ್ಚು ಆಕರ್ಷಿತರಾಗುತ್ತಿರುವುದನ್ನು ನೋಡಿದರೆ ಯಾವುದು ನೈಜ ಇಸ್ಲಾಂ ಯಾವುದ ಇಸ್ಲಾಂ ಅಲ್ಲ ಎಂಬುದರ ಬಗ್ಗೆಯೇ ಕನ್‍ಫ್ಯೂಸ್ ಆಗಬಲ್ಲುದು! ಒಟ್ಟಿನಲ್ಲಿ ಅವರಿಗೆ ಇವರು ಮುಸಲ್ಮಾನರಲ್ಲ ಇವರಿಗೆ ಅವರು ಮುಸಲ್ಮಾನರಲ್ಲ! ಹಾಗಾದರೆ ಇಲ್ಲಿ ಮುಸಲ್ಮಾನನೆಂದರೆ ಯಾರು!? ಗಡ್ಡ ಬಿಟ್ಟು ಟೋಪಿ ಧರಿಸಿ ಕಾಲ ಗಂಟಿನವರೆಗೆ ಪ್ಯಾಂಟ್ ಹಾಕುತ್ತಾ ಒಂದಷ್ಟ ಕುರಾನ್, ಬೈಬಲ್, ಸನಾನತ ಗ್ರಂಥಗಳ ಶ್ಲೋಕಗಳನ್ನು ಬೈಹಾರ್ಟ್ ಮಾಡಿಕೊಂಡು ಶಾಸ್ತ್ರಗ್ರಂಥಗಳ ಪೇಟೆಂಟ್ ಪಡೆದು ಕೊಂಡವರಂತೆ ವೇದಿಕೆಯ ಮೇಲೆ ತರ್ಕ ಮಂಡಿಸುತ್ತಿರುವ ಜಾಕಿರ್‍ನಾಯ್ಕ್ ಹಾಗೂ ಅವನಂತಹ ಇತರ ವ್ಯಕ್ತಿಗಳೇ!? ಅದನ್ನೇ ಒಪ್ಪೋಣವೆಂದರೆ ಇದೀಗ ಸ್ವತಃ ಜಾಕೀರ್ ನಾಯ್ಕ್‍ಗೂ ಭಯೋತ್ಪಾದಕತೆಯ ಕರಿ ನೆರಳು ಬಿದ್ದಿದೆ! ಜಾಕಿರ್ ಭಾಷಣದಿಂದ ಶಾಂತಿ ಧೂತರು ಹುಟ್ಟದೆ ಭಯೋತ್ಪಾದಕರೂ ಕೂಡ ಹುಟ್ಟುತ್ತಿದ್ದಾರೆ ಎಂಬ ಗಂಭೀರ ಆರೋಪವಿದೆ. ಕೆಲವೊಂದು ರಾಷ್ಟ್ರಗಳಲ್ಲಿ ಅದಾಗಲೇ ಜಾಕೀರ್‍ಗೆ ನಿಷೇಧ ಬಿದ್ದಿದೆ! ಎಲ್ಲಕ್ಕಿಂತ ಹೆಚ್ಚಾಗಿ ಕೆಲವೊಂದು ಸಾಂಪ್ರದಾಯಿಕ ಮುಸಲ್ಮಾನ ಸಂಘಟನೆಗಳೇ ಜಾಕೀರ್ ನಡೆಯನ್ನು ಇಸ್ಲಾಂ ವಿರೋಧಿ ಎಂದು ಸಾರಿದೆ! ಇನ್ನು ಅದ್ಯಾವುದೇ ರಾಜಕೀಯಕ್ಕೂ ಧುಮುಕದೇ ತಮ್ಮ ಪಾಡಿಗೆ ತಾವು ಎಂಬಂತೆ ಸಂಗೀತ ಸಾಹಿತ್ಯ ಸಿನೇಮಾಗಳಲ್ಲಿ ಹೆಸರು ಮಾಡಿಕೊಂಡಿರುವ  ಗಣ್ಯ ವ್ಯಕ್ತಿಗಳನ್ನು ನೈಜ ಮುಸಲ್ಮಾನರೆಂದು ಕರೆಯಬೇಕೆ ಎಂದರೆ ಅದು ಕೂಡ ಸಾಧ್ಯವಾಗದ ಮಾತಾಗುತ್ತದೆ. ಯಾಕೆಂದರೆ ಮುಖಕ್ಕೆ ಬಣ್ಣ ಹಚ್ಚುವುದು, ಮನರಂಜನೆಗೆ ಮನ ಒಡ್ಡುವುದು, ಸಂಗೀತ ನಾಟ್ಯಗಳಲ್ಲಿ ಭಾಗಿಯಾಗುವದು ಕುರಾನ್ ಪ್ರಕಾರ ದೊಡ್ಡ ಹರಾಮ್! ಮದಿರೆ ಮಾನಿನಿಯರ ಸಹವಾಸ ಅದೇನಿದ್ದರೂ ಸ್ವರ್ಗ ಲೋಕದಲ್ಲಿ ಎಂಬ ನಂಬಿಕೆಯಿಟ್ಟವರು ಮುಸಲ್ಮಾನರು. ಆದ್ದರಿಂದ ಇವರುಗಳನ್ನೆಲ್ಲಾ  ಮುಸಲ್ಮಾನರು ಎಂದೆನ್ನೆಲು ಭಯೋತ್ಪಾದನೆಯಲ್ಲಿ ತೊಡಗಿಕೊಂಡಿರುವ ವರ್ಗವು ಸುತಾರಾಂ ಒಪ್ಪದು. ಭಯೋತ್ಪಾದಕರು ವಿಚಾರ ಒತ್ತಟ್ಟಿಗಿರಲಿ, ಸ್ವತಃ ಜಾಕೀರ್ ನಾಯ್ಕ್ ಕೂಡ ಒಪ್ಪುವುದು ಡೌಟ್!  ಅಂದರೆ ಇವರು ಕೂಡ ಮುಸಲ್ಮಾನರಲ್ಲ ಎಂಬುದೇ ತರ್ಕ. ಬಾಂಗ್ಲಾದ ನರಹಂತಕರು ಮುಸಲ್ಮಾರಾದರೆ ನಾನು ಮುಸಲ್ಮಾನನಲ್ಲ ಎಂದಿರುವ ಭಾರತದ ಗಣ್ಯ ವ್ಯಕ್ತಿಯು ಕೂಡ ದುರಾದೃಷ್ಟಾವಶಾತ್ ಇದೇ ಸಾಲಿಗೆ ಸೇರುತ್ತಾರೆ!

ಇಸ್ಲಾಂ ಒಂದು ಶಾಂತಿ ಬಯಸುವ ಧರ್ಮವಂತೆ.  ನರಮೇಧವನ್ನಂತೂ ಅದು ಎಂದಿಗೂ ಒಪ್ಪದಂತೆ. ಹಾಗಾಂತ ಪ್ರತೀ ಬಾರಿಯೂ ವಾದ ಮಂಡಿಸಲಾಗುತ್ತಿದೆ. ಹಾಗಾದರೆ ಹಿಂಸೆಯನ್ನೇ ಪ್ರವೃತ್ತಿಯಾಗಿಸಿರುವ ಭಯೋತ್ಪಾದಕರುಗಳು ಓದಿದ ಧರ್ಮಗ್ರಂಥವಾದರೂ ಯಾವುದು!? ಅವರು ಅನುಸರಿಸುವ ಪಂಥವಾದರೂ ಯಾವುದು ಎಂಬ ಪ್ರಶ್ನೆ ಪದೇ ಪದೇ ಕಾಡುತ್ತಿದೆ!

ಇಲ್ಲಿ ಇನ್ನೂ ಒಂದು ವಿಚಾರವಿದೆ. ಅದೇನೆಂದರೆ ಇಸ್ಲಾಂನಲ್ಲಿ ಯಾರಾದರೂ ಧರ್ಮ ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡರೆ ಅವರನ್ನು ‘ಜಮಾತೆ’ಯಿಂದ ಹೊರಗಿಡುವ ಒಂದು ಸಂಪ್ರದಾಯವಿದೆ. ಅಂದರೆ ಅವರನ್ನು ಮುಸಲ್ಮಾನ ಅಲ್ಲ ಎಂದು ಬಹಿರಂಗವಾಗಿ ಘೋಷಿಸಿ ದೂರೀಕರಿಸುವುದು. ಆದರೆ ಇವತ್ತಿನವರೆಗೂ ಸಾವಿರ ಸಂಖ್ಯೆಯಲ್ಲಿ ‘ಇಸ್ಲಾಂನ’ ಹೆಸರಲ್ಲಿ ಭಯೋತ್ಪಾದನೆ ನಡೆದಿದ್ದರೂ ಅವರ್ಯಾರನ್ನೂ ನಮ್ಮ ಮೌಲ್ವಿಗಳು ಜಮಾತೆಯಿಂದ ಹೊರಗಿಟ್ಟ ನಿದರ್ಶನವಿಲ್ಲ! ಅವರ ವಿರುದ್ಧ ಫತ್ವಾ ಕೂಡ ಹೊರ ಬಿದ್ದಿಲ್ಲ! ಸಾನಿಯಾಳಂತ ಕ್ರೀಡಾ ಪ್ರತಿಭೆಯ ಹುಡುಗಿ ತುಂಡುಡಗೆ ಉಟ್ಟು ಆಡುತ್ತಾಳೆ  ಎಂಬ ಕ್ಷುಲ್ಲಕ ಕಾರಣಕ್ಕೆ ಅದನ್ನು ಧರ್ಮ ವಿರೋಧಿ ಚಟುವಟಿಕೆ ಎಂದು ಫತ್ವಾ ಹೊರಡಿಸಿರುವ ಮೌಲ್ವಿಗಳಿಗೆ ಓರ್ವನೇ ಓರ್ವ ಭಯೋತ್ಪಾದಕನ ವಿರುದ್ಧ ಫತ್ವಾ ಹೊರಡಿಸಲು ಈವರೆಗೂ ಸಾಧ್ಯವಾಗದೇ ಹೋಗಿರುವುದು ವಿಪರ್ಯಾಸವೆನ್ನಬೇಕೇ!? ಅಥವಾ ಅವರದ್ದು ಧರ್ಮ ಬಾಹಿರ ನಡೆ ಅಲ್ಲ ಎಂದು ಒಪ್ಪಿಕೊಳ್ಳಬೇಕೆ!?

ನಿಜ, ಭಯೋತ್ಪಾದಕರುಗಳನ್ನು ಧರ್ಮದ ಆಧಾರದಲ್ಲಿ ಗುರುತಿಸಬಾರುದು. ಈ ದೇವರ ಸೃಷ್ಟಿಯಲ್ಲಿ ಎಲ್ಲರಿಗೂ ಬದುಕುವ ಅವಕಾಶವಿದೆ. ಅಮಾಯಕರ ಸಾವಿನ ಮೆಟ್ಟಿಲುಗಳ ಮೇಲೆ ಕೂತು ವಿಜಯದ ನಗೆ ಬೀರುತ್ತೇವೆ ಎಂದರೆ ಅದನ್ನು ಅದ್ಯಾವ ದೇವನೂ ಮೆಚ್ಚನು. ಈ ಸತ್ಯವನ್ನರಿಯಲು ಧರ್ಮ ಗ್ರಂಥದ ನೆರವು ಬೇಕಾಗಿಲ್ಲ. ಮಾನವತೆಯ ಪಾಠವಷ್ಟೇ ಸಾಕು. ಆದ್ದರಿಂದ ಭಯೋತ್ಪಾದಕನ ಧಾರ್ಮಿಕ ಹಿನ್ನೆಲೆ ಅದ್ಯಾವುದೇ ಇರಬಹುದು. ಆದರೆ ಒಮ್ಮೆ ಭಯೋತ್ಪಾದನೆಯಲ್ಲಿ ತೊಡಗಿಕೊಂಡ ಎಂದರೆ ಅವನನ್ನು ಎಲ್ಲರೂ ವಿರೋಧಿಸಬೇಕು. ಅವನ ಸಾವನ್ನು ಶಾಂತಿಯ ಪ್ರತೀಕವೆಂದು ಸ್ವಾಗತಿಸಬೇಕು. ಅದು ಬಿಟ್ಟು ಅಂತವರುಗಳನ್ನೇ ಹೀರೋ ಮಾಡುತ್ತಾ ಇನ್ನಷ್ಟು ತುಪ್ಪ ಸುರಿಯುವ ಕೆಲಸಕ್ಕೆ ಕೈ ಹಾಕಿದರೆ ಎಲ್ಲರ ಮೇಲೂ ಸಂಶಯ ಮೂಡುವುದು ಸಹಜ!

ಕೊನೆ ಮಾತು: ಭಯೋತ್ಪಾದಕರಿಗೆ ಧರ್ಮವಿಲ್ಲ. ಆದರೆ ಮಾಲೆಗಾಂವ್ ಸ್ಪೋಟ ಹಾಗು ಸಂಜೋತ ಎಕ್ಸ್‍ಪ್ರೆಸ್ ಸೋಟಗಳಲ್ಲಿ ಮಾತ್ರ ಭಯೋತ್ಪದಾಕರಿಗೆ ಧರ್ಮವಿತ್ತು! ಯಾಕೆಂದರೆ ಇಲ್ಲಿ ಆರೋಪಿ ಸ್ಥಾನದಲ್ಲಿ ಇದ್ದವರು ಹಿಂದುಗಳು!

Facebook ಕಾಮೆಂಟ್ಸ್

ಲೇಖಕರ ಕುರಿತು

Prasad Kumar Marnabail

Banker

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!