ಕವಿತೆ

ಪ್ರಕೃತಿ ಸ್ಪಂದನ

ಹೇರಿ ಹನಿಯ ಮಣಿಯ ಮಾಲೆ
ಸೀರೆ ಹಸುರ ಸೆರಗು ಭಾರ
ಸೂರೆಗೈವ ತೆನೆಯ ತೊನೆತ ನದಿಯ ಹಾಡಿಗೆ
ನೇರ ನಕ್ಕ ಸೂರ್ಯಕಾಂತಿ
ಬೀರಿ ನೋಟ ಸೃಷ್ಟಿಯರಳೆ
ಸಾರೆ ಶುಭವ ಬಾನಿನುದಯವಾಯ್ತು ಮೆಲ್ಲಗೆ ||

ಖಾರವಾಗಿ ನೋಟವೆಸಗೆ
ನೀರು ಹೆದರಿ ಮೇಲಕೇರಿ
ಸೇರಿ ಮುಗಿಲ ನಾಡಿನಲ್ಲಿ ಸಂಘ ಕಟ್ಟಿರೆ
ತಾರೆ ವರ್ಷಋತುವಿನಲ್ಲಿ
ಹೇರಿ ಬಂದ ಮುತ್ತ ಮಾಲೆ
ಧಾರೆಯುದುರೆ ಸುಪ್ರಭಾತ ಮರಳಿ ಧರಣಿಗೆ ||

ಕದ್ದು ಬಳಸಿ ತರುವನಪ್ಪಿ
ಹೊದ್ದ ಛಳಿಗೆ ಲತೆಯು ನಾಚಿ
ಸದ್ದು ಹೊರಟ ಮೌನರಾಗ ಸುತ್ತ ಮಾರ್ದನಿ
ಮುದ್ದು ಮರಿಯನಪ್ಪಿ ಮಲಗಿ
ಯೆದ್ದ ಕಾವ ಬಿಟ್ಟು ಗುಟುಕ
ಮೆದ್ದು ತರುವ ಹಕ್ಕಿ ಹಿಂಡ ಬಾನ ಕಲರವ ||

ಬಿಡದೆ ಬಿರಿದು ಬಾಡಿ ಕುಸುಮ
ಹಿಡಿದ ಫಲಗಳೆಲ್ಲವಿಲ್ಲಿ
ತುಡಿತದಾಸೆ ಹದದಿ ನೀಗಿ ನಿತ್ಯ ನೂತನ
ಮಿಡಿದ ಹೃದಯ ತಾಳ ಗತಿಗೆ
ಬಿಡದೆ ಹರಿಸಿ ರಸದ ಕಡಲು
ದಡಕೆ ಬಡಿದ ಮೊರೆತ ಭಾವ ಸಾಮರಸ್ಯವು ||

ದುಡಿವ ನೀತಿ ಕ್ಲಿಷ್ಟವೆನಿಪ
ಕುಡಿದ ಮತ್ತು ನೆತ್ತಿ ಹತ್ತಿ
ನಡಿಗೆ ಮರೆತು ಸುತ್ತಮುತ್ತ ಕೊಂಡಿ ಕಳಚಿರೆ
ಕೆಡಿಸಿ ಹಸಿರ ಹೀರಿಯೊಸರ
ಗಡುವ ದಾಟಿ ಮಹಡಿಯೇಳೆ
ಸಿಡಿದ ಧಾತ್ರಿ ಬರವೊ ನೆರೆಯೊ ಕಾಲ ಲೀಲೆಯೊಳ್ ||

 

ಭೋಗ ಷಟ್ಪದಿ

ಭೋಗ ಷಟ್ಪದಿಯು ಷಟ್ಪದಿಗಳಲ್ಲಿನ ಪ್ರಮುಖ ಪ್ರಕಾರಗಳಲ್ಲೊಂದು. ಭೋಗ ಷಟ್ಪದಿಯಲ್ಲಿ ಆರು ಪಾದಗಳಿರುತ್ತವೆ. 1,,,೫ನೆಯ ಸಾಲುಗಳು ಸಮನಾಗಿದ್ದು, ೩ ಮಾತ್ರೆಯ ೪ ಗಣಗಳಿರುತ್ತವೆ. ೩ ಮತ್ತು ೬ನೆಯ ಪಾದಗಳಲ್ಲಿ ೩ ಮಾತ್ರೆಯ ೬ ಗಣಗಳಿದ್ದು, ಕೊನೆಯಲ್ಲಿ ಒಂದು ಗುರು ಬರುತ್ತದೆ(ಲಘು ಬಂದರೂ ಗುರು ಎಂದುಕೊಳ್ಳಬೇಕು). ಗುರುಬಸವನ ವೃಷಭಗೀತೆಕಾವ್ಯಭೋಗ ಷಟ್ಪದಿಯಲ್ಲಿದೆ.

By Shyala Bhat

Facebook ಕಾಮೆಂಟ್ಸ್

ಲೇಖಕರ ಕುರಿತು

Guest Author

Joining hands in the journey of Readoo.in, the guest authors will render you stories on anything under the sun.

Subscribe To Our Newsletter

Join our mailing list to weekly receive the latest articles from our website

You have Successfully Subscribed!

ಸಾಮಾಜಿಕ ಜಾಲತಾಣಗಳಲ್ಲಿ ನಮನ್ನು ಬೆಂಬಲಿಸಿ!