X

ಹೊಸಬೆಳಗು

ನಿಶೆಯ ಛಾದರವ ಕೊಡವಿ ಉಲಿದಿದೆ;

ಜಗವು ಜಾಗರದ ಚಿಲಿಪಿಲಿ.!

ಸೂರ್ಯಕಿರಣಗಳು ಮರಳಿ ತಂದಿವೆ,

ನವ ಚೈತನ್ಯದ ಕಚಗುಳಿ.!

ಬೆಳ್ಳಿ‌ ಇಬ್ಬನಿಯು ತೆಳ್ಳಗಾಗುತಿದೆ

ಹೊನ್ನ ಕಿರಣಗಳ ಶಾಖಕೆ.!

ಬಾನ ಕೆನ್ನೆಯದು ರಂಗೇರುತಿದೆ

ಮೊಗದಿ ಮೂಡಿದೆ ನಾಚಿಕೆ.!

ಹೂವ ದಳಗಳು ತೋಳ ಚಾಚಿವೆ,

ಮಧುಗುಂಜನದಾಲಿಂಗನಕೆ!

ಸಕಲ ಜೀವಗಳು ಸಜ್ಜುಗೊಂಡಿವೆ

ಹೊಸಬೆಳಕಿನ ಸುಸ್ವಾಗತಕೆ!

ಬೆಳ್ಳಕ್ಕಿಗಳ ಬಳಗವು ಬಾನಲಿ

ಬರೆದಿವೆ ಚಂದದ ರಂಗೋಲಿ!

ಮಲ್ಲಿಗೆ ಮುಡಿದಿಹ ಮಾನಿನಿ ಬರೆದಿರೆ

ಚಿತ್ತಾರವನು ಹೊಸ್ತಿಲಲಿ!

ಒಲ್ಲದ‌ ಮನಸಲಿ ದೂರ ಸಾಗಿಹನು

ಚಂದಿರ ಈ ಭೂರಮೆಯಿಂದ!

ಮತ್ತೆ ಮತ್ತೆ ತಾ ತಿರುಗಿ ನೋಡುತಿಹ

ಮೋಡಗಳೆಡೆಯ ನಡುವಿಂದ!

Facebook ಕಾಮೆಂಟ್ಸ್

Anoop Gunaga: ಪ್ರಸ್ತುತ ಕೋಟೇಶ್ವರದ ನಿವಾಸಿ. ಸಾಫ್ಟ್ ವೇರ್ ಇಂಜಿನಿಯರಿಂಗ್ ಉದ್ಯೋಗ. ಬರವಣಿಗೆ ಮನಸಿಗೆ ಮೆಚ್ಚು. ಯಕ್ಷಗಾನ, ಸಿನಿಮಾ, ಕನ್ನಡ ಸಾಹಿತ್ಯಾಧ್ಯಯನದ ಹುಚ್ಚು. ಪೆನ್ಸಿಲ್ ಸ್ಕೆಚ್-ಹವ್ಯಾಸ. ಶಿವರಾಮ ಕಾರಂತರ ಕೃತಿಗಳಿಂದ ಪ್ರಭಾವಿತ, ಜಯಂತ ಕಾಯ್ಕಿಣಿಯವರ ಸಾಹಿತ್ಯದೆಡೆಗೆ ಮೋಹಿತ. ಮೌನರಾಗಕ್ಕೆ ಶಬ್ದಗಳ ಪೋಣಿಸುವ, ಕನಸುಗಳನ್ನು ಕಾವ್ಯವಾಗಿಸುವ, ಭಾವಗಳಿಗೆ ಬಣ್ಣ ಬಳಿಯುವ ಒಬ್ಬ ಸಂಭಾವಿತ
Related Post