X

ಬೇಗ ಬಾ ನೀನು ಮತ್ತು ವಿದಾಯ ಹೇಳುವ ಮುನ್ನ: ಎರಡು ಕವನಗಳು

ಬೇಗ ಬಾ ನೀನು

ಬೇಗ ಬಾ ನೀನು

ನನ್ನ ಸನಿಹ

ಅಳಿಸು ಬಾ ನೀನು

ನನ್ನ ವಿರಹ

ನೂತನ ಸ್ನೇಹವಿದು

ಮಾತಿಗೂ ಸಿಗದು

ಮೊಗ್ಗಾದ ಮೋಹವಿದು

ನೀ ಬರದೆ ಅರಳದು..

 

ಪಿಸುಮಾತಾಡುತ

ತುಸುದೂರ ಹೋಗೋಣ..

ತಿಳಿ ಸಂಜೆಯ

ತಂಗಾಳಿಗೆ ಜೊತೆಯಾಗೋಣ..

ಕಡಲಿನ ನೀರವ

ಧ್ಯಾನದಲ್ಲಿ ನಾವೂ ಬೇರೆಯೋಣ..

ತೀರ ತಲುಪುವ ಅಲೆಗಳನು

ಖುದ್ದಾಗಿ ಸ್ವಾಗತಿಸೋಣ..

 

ಎದೆಯ ಪುಸ್ತಕವ ತೆರೆದು

ಪುಟವಂದನು ನೀ ಓದಬೇಕಿದೆ..

ಕನಸುಗಳ ಕೂಡಿಡಲು

ನಿನ್ನೆದೆಯಲ್ಲಿ ಜಾಗ ಬೇಕಿದೆ

ಕಣ್ಣು ಮಿಟುಕಿಸದೆ ಪ್ರತಿಕ್ಷಣವೂ

ನಿನ್ನ ನಾ ನೋಡಬೇಕಿದೆ

ಗೆಳತಿ ನೀನಿಲ್ಲಿ ಬರಬೇಕಿದೆ

ನನ್ನೊಳಗೆ ನೀ ಸೇರಬೇಕಿದೆ

 

 

ವಿದಾಯ ಹೇಳುವ ಮುನ್ನ

ಅವಳಿಗೆ ವಿದಾಯ ಹೇಳುವಾಗಲೂ

ಹೃದಯ ವಿಷಾದಿಸುತ್ತಿದೆ.

ಅವಳು ಕೊಟ್ಟ ವಿರಹದ ನೋವಿಗಿಂತಲೂ

ಅವಳ ಸನಿಹ ಕ್ಷಣ ನೆನಪಾಗುತ್ತಿದೆ.

ಕಣ್ಣೀರು ಹರಿಯುತ್ತಿದೆ.

ಅವಳು ಕೊಟ್ಟು ಹೋದ

ನೋವಿನ ಸಾಲವನ್ನು

ನಾ ಬರೆದ ಸಾಲುಗಳಿಂದಲೇ

ತೀರಿಸುವ ವ್ಯರ್ಥ ಪ್ರಯತ್ನ ನನ್ನದು..

ನಾ ಬರೆದ ಸಾಲುಗಳಲ್ಲಿ

ಮೊದಲ ಪ್ರೀತಿಯ ಸೋಲಿದೆ.

ಪ್ರೀತಿಸಿದ ಹೃದಯದ ಸಾವಿದೆ.

ಅವಳಿಗೆ ಹರಿಸಿದ ಕಣ್ಣೀರ ಹನಿಗಳನು

ನೆನಪಿನ ಲೇಖನಿಯೊಳಗೆ ಸೇರಿಸಿ

ಬಾಳಪುಸ್ತಕದಲ್ಲಿ ಬರೆದ ಸಾಲುಗಳಿವು.

ಅಲ್ಲಲ್ಲಿ ಅಕ್ಷರಗಳು

ಸ್ಪಷ್ಟವಾಗಿ ಕಾಣದಿದ್ದರೆ ಕ್ಷಮಿಸಿ!

ಆ ಅಕ್ಷರದೊಳಗೆ ನನ್ನ

ಕಣ್ಣೀರೂ ಜಾಸ್ತಿಯೇ ಹರಿದಿರಬಹುದು.

ಮುಗಿಯದ ಈ ಬಾಳಪುಸ್ತಕದಲ್ಲಿ

ಕಣ್ಣೀರು ಮುಗಿಯುವರೆಗೆ ಬರೆಯುತ್ತೇನೆ.

ಬರವಣಿಗೆಯಿಂದ ಬರೀ ಅವಳ

ನೆನಪಿನ ಮೆರವಣಿಗೆ ಮಾಡಿದ ನಾನು

ನನ್ನಲ್ಲಿ ಬದಲಾವಣೆ ತಂದು

“ಕವಿ ಕಾಣದನ್ನೂ ಕಂಡು ”

ಕವಿಯಾಗಿ ಬರೆಯುತ್ತೇನೆ !

Facebook ಕಾಮೆಂಟ್ಸ್

Vinaykumar Sajjanar: Engineer by profession and Author of two poem collection books named " Enna Todalu Nudigalu " and " Bhaavasharadhi" .
Related Post