X

ಬ್ಯಾಡ್ರೀ ಬ್ಯಾಡ್ರೀ ಅಂದ್ರೂ ಬೇಡಿ ಕರ್ಕ್ಕೊಂಡು ಬಂದು ಕೈಸುಟ್ಕಂಡ್ರು!

ಸಿವನೇ ಶಂಭುಲಿಂಗ:

“ಬುಲ್ಲೀ, ಏ ಬುಲ್ಲೀ?? ಯಾಕ್ಲಾ ಸ್ಯಾನೆ ಮಂಕಾಗಿದಿಯಾ? ಏಯ್ ದರ್ಬೇಸಿ ಎಳ್ಳಾ ಮ್ಯಾಲಕ್ಕೆ ಏನಾಯ್ತ್ಲಾ ನಿಂಗೆ?”

ಸ್ವಲ್ಪ ಸುಧಾರಿಸ್ಕೊಂಡ ಬುಲ್ಲಿ “ಅಲ್ಲಾ, ಗೋಪಾಲಣ್ಣ, ನಮ್ ಕೇಜ್ರಿಬಾಲು ವಿನ್ ಆಯ್ತಾನೆ ಅಂತ ಗೊತ್ತಿತ್ತು. ಆದ್ರೆ ಆಪ್ ಆಪ್ ಅನ್ಕೊಂಡು ಈ ಪಾಟಿ ಆಪು ಇಟ್ಟವ್ನೆ ಅಂದ್ರೆ ಸ್ಯಾನೆ ಬೇಜಾರಾಯ್ತದೆ ಗೋಪಾಲಣ್ಣ”.

“ಏಯ್ ಬಿಕನಾಸಿ ನನ್ ಮಗನೆ.. ಅವ್ರವ್ರು ಮಾಡಿದ್ ತಪ್ಗೇ ಸರ್ಯಾಗೇ ಉಣ್ತಾವ್ರೆ, ನಿನ್ಯಾಕಲಾ ತಲೆ ಕೆಡಿಸ್ ಕಳ್ತೀ?”

“ಅಂತಾ ತಪ್ಪು ಬಿಜೆಪಿಯವ್ರು ಏನ್ ಮಾಡಿದ್ರು ಗೋಪಾಲಣ್ಣ?”

“ಮತ್ತಿನೇನ್ಲಾ.. ಆ ಪೋಲೀಸಮ್ಮನ್ ತಗೊಂಡ್‍ಬಂದು ಶೀಯೆಮ್ ಅಭ್ಯರ್ಥಿ ಮಾಡಿದ್ರೆ ಅದೆಂಗಲಾ ಆಯ್ತದೆ? ಸುಮ್ನೆ ಸ್ಟೇಷನ್ನಾಗೆ ರೇಪಿಸ್ಟ್‍ಗಳಿಗೆ ಏರೋಪ್ಲೇನ್ ಹತ್ಸೋದ ಬುಟ್ಬುಟ್ಟು ಈ ಪಾಲಿಟಿಕ್ಸ್ ಎಲ್ಲಾ ಯಾಕಲಾ ಪೋಲಿಸಮ್ಮಂಗೆ?”

“ಏನ್ ಗೋಪಾಲಣ್ಣ ನೀವು? ಆಯಮ್ಮ ಒಳ್ಳೇ ಆಫೀಸರ್, ಅದಲ್ದೇ ನಮ್ ಮೋದಿ-ಶಾ ಸೆಲೆಕ್ಟ್ ಮಾಡವ್ರೆ ಆಯಮ್ಮನ್ನ, ನಿಮ್ದೇನ್ ಖ್ಯಾತೆ ಈಗ?”

“ಎಲೋ ಬೇಕೂಫಾ… ಆಯಮ್ಮ ಒಳ್ಳೆ ಆಫೀಸರ್ರೆ… ಆದ್ರೆ ಕಚ್ಚೋದಿಲ್ಲಾ ಅಂತ ಬುಡಕ್ಕೆ ಹಾವು ಬಿಟ್ಕೊಳ್ಳಕ್ಕೆ ಆಯ್ತದಾ ಕಣ್ಣಾ??”

“ಮತ್ಯಾರನ್ನ ಶಿಯಮ್ ಕ್ಯಾಂಡೇಟು ಮಾಡ್ಬೇಕಿತ್ತು ಗೋಪಾಲಣ್ಣ?”

“ನಿಮ್ಮಪ್ಪನ್ನ… ಮಂಕ್ ದಿಣ್ಣೆ…! ಲೇಯ್… ಅರ್ಷವರ್ಧನ, ಗೊಯಲ್ಲು ಇವ್ರೆಲ್ಲಾ ಯಾಕ್ಲಾ ಇರೋದು, ಪೊರ್ಕೆ ಹಿಡ್ಕಂಡು ಪಾರ್ಟಿ ಆಪೀಸ್ ಗುಡ್ಸಕ್ಕಾ?”

“ಅದೂ ಕರೆಕ್ಟೇಯಾ ಗೋಪಾಲಣ್ಣ…”

“ಅಲ್ಲಾ ಕಣ್ಣಾ ಬುಲ್ಲೀ…ಈ ಕೇಜ್ರಿ ಬಾಬಂದು ಅದೇನ್ ಲಕ್ಕು ಕಣ್ಣಾ. ಓದ್ಕಿತಾ ನಲ್ವತೊಂಬತ್ ದಿನಕ್ಕೇ ವ್ರತ ಮುಗ್ಸಿ ಪವರ್‍ನಿಂದ ಎಸ್ಕೇಪ್ ಅದ್ಮ್ಯಾಕೂ ಮತ್ತೆ ಪವರ್‍ಗೆ ಬಂದವ್ನೆ ಅಂದ್ರೆ ಪೊರಕೆ ಹವಾ ಜೋರಾಗೇ ಐತೆ ಅನ್ನು!!”

“ಏನ್ ಗೋಪಾಲಣ್ಣ ನೀವು? ಹವಾನು ಇಲ್ಲ, ಏನೂ ಇಲ್ಲ..! ಕಮ್ಲ ಪಾರ್ಟಿಯೋರ್ ಮಾಡಿದ್ ತಪ್ಪ್ಗೆ ಬಿಟ್ಟಿ ಪವರ್ ಸಿಕ್ಕೈತೆ ಇ ನನ್ನ್ ಮಗಂಗೆ. ನಮ್ ಡೆಲ್ಲಿ ನಾಯಕ್ರುಗಳು ಬ್ಯಾಡ್ರಿ, ಬ್ಯಾಡ್ರಿ, ಬೇಡಿ ಬ್ಯಾಡ್ರಿ ಅಂದ್ರು, ಆದ್ರೂ ಕಮ್ಲ ಪಾರ್ಟಿ ಪ್ರೆಶಿಡೆಂಟು ಕೇಳ್ಳೇ ಇಲ್ಲ, ಬೇಡಿನ ತಗೊಂಡು ಬಂದು ಈಗ ಕೈ ಸುಟ್ಕಂಡವ್ರೆ ನೋಡು”

“ಅಲೆಲೆಲೆ.. ಏನ್ ಮಾತೂಂತ ಆಡಿಯೇ ಅಯೋಗ್ಯ ನನ್ ಮಗನ್ ತಗೋಬಂದು, ಸುಟ್ಕೊಳ್ಳಕೆ ಏನಯ್ತಲೇ? ನಮ್ ಕಾಂಗ್ರೆಸ್ಸ್ ಪಾರ್ಟಿ ಕಡೆ ನೋಡಲೇ ಒಂದ್ಕಿತ, ಶೀಲಾಕೀ ಜವಾನೀ ಮುಗುದ್ಮೇಲೆ ಈಗ ಆ ಕಡೆ ರಾಹುಲ್ ಬಾಬಾನೂ ಇಲ್ಲಾ ಈ ಕಡೆ ಮಾಕೇನೂ ಇಲ್ಲ. ಎಲ್ಲಾ ಮಖ ಸುಟ್ಕೊಂಡಿರೋ ಕಾಗೆ ಥರಾ ಆಗ್ಬುಟ್ಟವ್ರೆ ಕಾಂಗ್ರೆಸ್ಸ್ ಪಾರ್ಟಿಯವ್ರು!!”

“ಗೋಪಾಲಣ್ಣಾ.. ಅದ್ಯಾವ್ದು ಗೋಪಾಲಣ್ಣ ಕಾಂಗ್ರೆಸ್ಸ್ ಪಾರ್ಟಿ!?”

“ಎಲಾ ನಿನ್ನಾ!! ನಿನೂ ಕಾಂಗ್ರೆಸ್ಸ್ ಮುಕ್ತ ಭಾರತ ಮಾಡ್ಬುಟ್ಟೇನ್ಲಾ? ಮುಗೀತು ಕತೆ, ಸಿವನೇ ಸಂಭುಲಿಂಗ!!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post