X

ಗುಟೆರಸ್’ನ ಮುಂದಿರುವ ಕಲ್ಲು ಮುಳ್ಳಿನ ಹಾದಿಗಳು

ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿಯ ಹುದ್ದೆಗೆ ಬಾನ್ ಕೀ ಮೂನ್ ತರುವಾಯವಾಗಿ ಪೋರ್ಚುಗಲ್’ನ ಮಾಜಿ ಪ್ರಧಾನಿ ಹಾಗೂ ಹಿರಿಯ ಮುತ್ಸದ್ದಿಯಾದ ಆ್ಯಂಟನಿಯಾ ಗುಟೆರಸ್ ಅಧಿಕಾರವಹಿಸಿಕೊಳ್ಳಲಿದ್ದಾರೆ. ಪೋರ್ಚುಗಲ್ ದೇಶದ ಮಾಜಿ ಪ್ರಧಾನಿಯಾದ ಗುಟೆರಸ್ ಅವರೊಬ್ಬ ರಾಜಕೀಯ ಮುತ್ಸದ್ದಿ. ರಾಜಕೀಯ ನಿಪುಣ. ಹತ್ತು ವರ್ಷಗಳ ಕಾಲ ಅವರು ವಿಶ್ವಸಂಸ್ಥೆಯ ‘ನಿರಾಶ್ರಿತರ ಹೈಕಮೀಷನರ್ ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಿದ ಅಪಾರ ಅನುಭವಿ.

 

ವಿಶ್ವಸಂಸ್ಥೆಯ 193 ಸದಸ್ಯೆ ರಾಷ್ಟ್ರಗಳು ಅವರ ಆಯ್ಕೆಗೆ ಒಮ್ಮತ ಸೂಚಿಸಿವೆ. ಸರ್ವೋಚ್ಛ ರಾಜತಾಂತ್ರಿಕ ಹುದ್ದೆಯ ಹಾದಿ ಸರ್ವೇ ಸಾಮಾನ್ಯವಾದುದಲ್ಲ ಅದು ‘ಕಲ್ಲು ಮುಳ್ಳಿನ ಮೇಲಿನ ನಡಿಗೆಯ ಹಾದಿಯಾಗಿದೆ’. ಈಗಾಗಲೇ ವಿಶ್ವಸಂಸ್ಥೆಯು ಕೇವಲ ಬಲಿಷ್ಠ ಹಾಗೂ ಭದ್ರತಾ ಮಂಡಳಿ ದೇಶಗಳ ಪರವಾಗಿಯೇ ಕೆಲಸ ನಿರ್ವಹಿಸುತ್ತಿದೆ ಎಂಬ ಅಪವಾದವಿದ್ದು. ತೃತೀಯ ಜಗತ್ತಿನ ದೇಶಗಳ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲದಿರುವುದು ಸೋಜಿಗದ ಸಂಗತಿ. ಈ ನಿಟ್ಟಿನಲ್ಲಿ ಭದ್ರತಾ ಮಂಡಳಿಯೇತರ ರಾಷ್ಟ್ರದ ಗುಟೆರಸ್ ಅವರ ಆಡಳಿತ ಹಾಗೂ ಹುದ್ದೆಯ ಬಗ್ಗೆ ಇಡೀ ಜಗತ್ತೇ ಕೌತುಕದಿಂದ ನೋಡುತ್ತಿದೆ.

 

ವಿಶ್ವಸಂಸ್ಥೆ ಹಾಗೂ ಮಹಾಪ್ರಧಾನ ಕಾರ್ಯದರ್ಶಿಗಳ ಕಾರ್ಯವನ್ನು ಪ್ರಸ್ತುತವಾಗಿ ಜಾಗತಿಕವಾದ ಘಟನೆಗಳಿಂದ ಅವಲೋಕಿಸಿದರೆ ಅದೊಂದು ‘ಬಾಯಿಯಿಲ್ಲದ ಹಲ್ಲಿನಂತೆ’ಯಾಗಿದೆ. ಕೇವಲ ಬಲಿಷ್ಟ ದೇಶಗಳ ಕಪಿಮುಷ್ಟಿಯಲ್ಲಿದೆ. ಜಾಗತಿಕ ಶಾಂತಿಗೆ ಕಳಂಕವಾಗಿರುವ  ಭಯೋತ್ಪಾದನೆ ಮುಖಗಳಾದ ಐಸಿಸ್, ಅಲ್ ಖೈದಾ ಉಗ್ರಗಾಮಿಗಳ ಕ್ರೌರ್ಯ  ದಿನೇ ದಿನೇ ಹೆಚ್ಚುತ್ತಿದ್ದು, ರಕ್ತಪಾತದಿಂದ ಆಮಾಯಕರು ಬೀದಿ ಹೆಣವಾಗುತ್ತಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಯ ಭಾಷಣ ಕೇವಲ ಭಾವನಾತ್ಮಕವಾದ ಮಾತುಗಳಿಂದಲೇ ಕೊನೆಗೊಳ್ಳುತ್ತಿತ್ತೇ ವಿನಾಃ ಉಗ್ರವಾದದ ವಿರುದ್ಧದ ಕಾರ್ಯಾಚರಣೆಗೆ ಮುಂದಾಗಿದ್ದು ಕಡಿಮೆ ದಿನಗಳು. ಇಂತಹ ಸಂದಿಗ್ಧ ಪರಿಸ್ಥಿತಿಗಳಲ್ಲಿ  ಕೆಲವು ಭದ್ರತಾ ಮಂಡಳಿಯ ರಾಷ್ಟ್ರಗಳೇ ಪರೋಕ್ಷವಾಗಿ ಭಯೋತ್ಪಾದನೆಗೆ ಪ್ರಚೋದಿಸುತ್ತಿರುವ ರಾಷ್ಟ್ರಗಳಿಗೆ ಬೆಂಬಲ ನೀಡುತ್ತಿವೆ. ಪಾಕಿಸ್ತಾನ, ಸಿರಿಯಾದಂತ ದೇಶಗಳೂ ಭಯೋತ್ಪಾದಕರ ಅಡಗುತಾಣಗಳಾಗಿವೆ. ಇದರಿಂದಾಗಿ ಭಾರತದಂತಹ ದೇಶಗಳು ಗಂಭೀರವಾದ ಪರಿಣಾಮಗಳನ್ನು ಎದುರುಸುತ್ತಿದೆ. ಏತನ್ಮಧ್ಯೆ ಭಯೋತ್ಪಾದನೆ ನಿರ್ಮೂಲನೆಗೆ ಶಿಸ್ತುಬದ್ಧ ಕ್ರಮ ಕೈಗೊಳ್ಳಬೇಕಾಗಿದೆ.

 

ಪರಿಸರ ಮಾಲಿನ್ಯ ಹೆಚ್ಚಳದಿಂದಾಗಿ ಜಾಗತಿಕ ತಾಪಮಾನ ಹೆಚ್ಚುತ್ತಿದೆ. ಬಲಿಷ್ಠ ರಾಷ್ಟ್ರಗಳ ಹಿಂದುಳಿದ ದೇಶಗಳಲ್ಲಿ ಆರ್ಥಿಕ, ರಾಜಕೀಯ, ಸಾಂಸ್ಕೃತಿಕವಾಗಿ  ಸಾಮ್ರಾಜ್ಯ ವಿಸ್ತರಣೆಗೆ ಹಪಿಹಪಿಸುತ್ತಿವೆ. ಕಂಡು ಕಾಣದಂತೆ ಕುರುಡು ನೀತಿಯನ್ನು ಅನುಸರಿಸುತ್ತಿರುವ ವಿಶ್ವಸಂಸ್ಥೆಗೆ ಗುಟೆರಸ್ ಎಂಬ ಮುತ್ಸದ್ದಿ ಯಾವ ಪರಿಣಾಮಕಾರಿ ನೀತಿಗಳನ್ನು ಅನುಸರಿಸಬೇಕಿದೆ. ಅದಕ್ಕಾಗಿ ನೂತನ ಸಾರಥಿಗೆ ಇದು ಸವಾಲಿನ ಹುದ್ದೆಯಾಗಿದೆ.

 

ವಿಶ್ವಸಂಸ್ಥೆಯ ಭದ್ರತಾಮಂಡಳಿ ರಾಷ್ಟ್ರಗಳು ತಮ್ಮಲ್ಲಿರುವ ವಿಟೋ ಅಧಿಕಾರದಿಂದ ಜಾಗತಿಕವಾಗಿ ತಮ್ಮ ಅಸ್ತಿತ್ವವನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿವೆ. ಭದ್ರತಾ ಮಂಡಳಿ ರಾಷ್ಟ್ರಗಳಿಗೆ ನೀಡಿದ ವಿಟೋ ಅಧಿಕಾರದಿಂದಾಗಿ ಇಂದು ತಮ್ಮ ಪ್ರಭುತ್ವ ತೋರ್ಪಡಿಸಿತ್ತಿವೆ. ಪೈಪೋಟಿಯೆಂಬಂತೆ ವಿಟೋ ಪರಮಾಧಿಕಾರವನ್ನು ಬಳಸಿಕೊಂಡು ಪ್ರಜಾಪ್ರಭುತ್ವವನ್ನು ಹಳ್ಳ ಹಿಡಿವಂತೆ ಮಾಡಿವೆ. ಅಮೇರಿಕಾವು ಇಸ್ರೇಲ್ ಹಾಗೂ ಪ್ಯಾಲೇಸ್ತೀನ್ ವಿವಾದಕ್ಕೆ ಸಂಬಂಧಿಸಿದಂತೆ 16 ಬಾರಿ ವಿಟೋ ಅಧಿಕಾರವನ್ನು ಬಳಸಿದೆ. ಇದಕ್ಕೆ ಸರಿಯಾಗಿ ರಷ್ಯಾ ದೇಶವು ಕೂಡ ಸಿರಿಯಾದ ಸರ್ವಾಧಿಕಾರಿ ಬಷರ್ ಅಲ್ ಅಸದ್ ಅವರಿಗೆ ವಿಟೋ ಪರಮಾಧಿಕಾರದ ಮೂಲಕ ಬೆಂಬಲ ನೀಡಿ, ಮಧ್ಯಪ್ರಾಚ್ಯ ದೇಶಗಳಲ್ಲಿ ತನ್ನ ಸಾಮ್ರಾಜ್ಯವನ್ನು ನಿರ್ಮಿಸಲು ಯತ್ನಿಸುತ್ತಿದೆ. ಚೀನಾವು ಉತ್ತರಕೋರಿಯಾಕ್ಕೆ ಗೌಪ್ಯವಾಗಿ ಅಣ್ವಸ್ತ್ರಗಳ ಬಳಕೆಗೆ ಬೇಕಾದ ಸಂಪನ್ಮೂಲಗಳನ್ನು ರಪ್ತು ಮಾಡುತ್ತಿದೆ. ಭದ್ರತಾ ಮಂಡಳಿ ದೇಶಗಳ ಅನ್ಯಾಯವನ್ನು ಕಂಡೂ ಕಾಣದಂತೆ ವಿಶ್ವಸಂಸ್ಥೆ ನೋಡುತ್ತಿದ್ದು, ಭದ್ರತಾ ಮಂಡಳೇತರ ದೇಶದವರಾದ ಗುಟೆರಸ್ ಈ ವಿಟೋ ಪರಮಾಧಿಕಾರ ಬಗೆಗಿನ ಅಸಮತೋಲನ ನಿವಾರಿಸಿ ಭದ್ರತಾ ಮಂಡಳಿ ದೇಶಗಳ ಸೊಕ್ಕನ್ನು ಮುರಿಯಬೇಕಿದೆ.

ಸ್ವಾತಂತ್ರ್ಯ ಕಾಲದಿಂದಲೂ ಭಾರತದಲ್ಲಿ ಸಮಸ್ಯೆಯಾಗಿಯೇ ಉಳಿದಿರುವ ಕಾಶ್ಮೀರ ಸಮಸ್ಯೆ ನಿವಾರಿಸಬೇಕಿದೆ. ಪಾಕಿಸ್ತಾನ ಪ್ರೇರಿತ ಉಗ್ರಗಾಮಿಗಳ ಚಟುವಟಿಕೆಗಳಿಗೆ ಕಡಿವಾಣ ಹಾಕುತ್ತಿರುವ ಪ್ರಧಾನಿ ಮೋದಿಗೆ ಸಾಥ್ ನೀಡಬೇಕಿದೆ. ಭಾರತ ದೇಶಕ್ಕೆ ಗುಟೆರಸ್’ರವರ ಜಾಗತಿಕ ನಿಲುವುಗಳು ಮಹತ್ವದೆನಿಸುತ್ತದೆ. ಜಾಗತಿಕವಾಗಿ ಎಲ್ಲ ದೇಶಗಳೊಂದಿಗೆ ಸ್ನೇಹ ಸೌಹಾರ್ದತೆಯೊಂದಿಗಿರುವ ಭಾರತಕ್ಕೆ ಭದ್ರತಾ ಮಂಡಳಿ ಸ್ಥಾನ ನೀಡಬೇಕಿದೆ.

ಸಿರಿಯಾ, ಟರ್ಕಿ, ಕಾಶ್ಮೀರಗಳಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ಇಂತಹ  ಗಂಭೀರ ಸಮಸ್ಯೆಗಳು ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿವೆ. ಇಷ್ಟು ವರ್ಷಗಳಾದರೂ ಬಗೆಹರಿದೆಲ್ಲವೆಂದರೆ ಯಾವ ಉದ್ದಾರಕ್ಕೆ ವಿಶ್ವಸಂಸ್ಥೆಯ ಸ್ಥಾಪನೆಯಾಯಿತು ಎಂಬ ಜಿಜ್ಞಾಸೆ ಮೂಡುತ್ತದೆ. ಗುಟೆರಸ್ ವಿಶ್ವಸಂಸ್ಥೆಯ ನಿರಾಶ್ರಿತರ ಹೈಕಮೀಷಶನರ್ ಆಗಿ ಕಾರ್ಯನಿರ್ವಹಿಸಿದ ಅನುಭವದ ಇದೆ. ಜೊತೆಗೆ ಸಿರಿಯಾ, ಟರ್ಕಿ, ಇಸ್ರೇಲ್, ಸೂಡಾನ್ ದೇಶಗಳಲ್ಲಿ ನಿರಾಶ್ರಿತರಿಗೆ ವಸತಿ ಕಲ್ಪಿಸಿದ್ದಾರೆ. ಇಂತಹ ಘನ ಅನುಭವಿಯಾಗಿರುವ ಇವರು ಜಾಗತಿಕವಾಗಿ ತಲೆದೋರಿರುವ ಬಿಕ್ಕಟ್ಟುಗಳನ್ನು ಶಮನಗೊಳಿಸಿ ಶಾಂತಿ ಸ್ಥಾಪನೆಗೆ ನಾಂದಿಹಾಡಬೇಕಿದೆ.

 

ವಿಶ್ವಸಂಸ್ಥೆಯ ಸ್ಥಾಪನೆಗೆ ಕಾರಣವಾದ  ಶಿಕ್ಷಣ, ಸಮಾನ ವೇತನ ಹಕ್ಕು, ಗುಲಾಮಗಿರಿ ಹೋಗಲಾಡಿಸುವುದು, ವರ್ಣಭೇದ ನೀತಿ ಶಮನ, ರಾಷ್ಟ್ರೀಯತೆ ಮೂಡಿಸುವಂತಹ ಪ್ರಮುಖ ಉದ್ದೇಶಗಳು ಈವರೆಗೂ ಈಡೇರಿಲ್ಲ. ನೂತನವಾಗಿ ಆಯ್ಕೆಯಾದ ಪೋರ್ಚುಗೀಸ್’ನ ಮುತ್ಸದ್ದಿಯಾದ ಆ್ಯಂಟೋನಿಯಾ ಗುಟೆರಸ್ ಬಹುದೊಡ್ಡ ಸವಾಲುಗಳನ್ನು ಎದುರಿಸಿ ವಿಶ್ವಸಂಸ್ಥೆ ಸ್ಥಾಪನೆಯ ಉದ್ದೇಶವನ್ನು ಎತ್ತಿಹಿಡಿಯಬೇಕಿದೆ. ಜಾಗತಿಕ ಶಾಂತಿಗೆ ನಾಂದಿ ಹಾಡುವ ಜವಾಬ್ದಾರಿ ಅವರ ಮೇಲಿದೆ.

 

ಶಿವಮಲ್ಲಯ್ಯ ಸ್ಥಾವರಮಠ

ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗ

ಎಸ್ಡಿಎಮ್ ಕಾಲೇಜು, ಉಜಿರೆ

ಪೋ.ನಂ. 9019093740

ತಾ.ಬೆಳ್ತಂಗಡಿ ಜಿ. ದಕ್ಷಿಣ ಕನ್ನಡ.

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post