X

ಆಗುಂಬೆಯ ಸುತ್ತಮುತ್ತ ಮತ್ತು ಸಂಸ್ಕೃತ ಗ್ರಾಮಮತ್ತೂರು.

ಆಗುಂಬೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣಗಳಲೊಂದು, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿಗೆ ಒಳಗೊಂಡಿರುವ ಪ್ರದೇಶವಾಗಿದೆ. ಪುರಾಣಗಳ ಪ್ರಕಾರ ಆಗುಂಬೆಯು ಜಮದಗ್ನಿ-ರೇಣುಕಾದೇವಿಯರ ಮಗನಾದ ಪರಶುರಾಮನ ಊರು ಎಂಬ ನಂಬಿಕೆಯಿದೆ. ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಆಗುಂಬೆಯೂ ಒಂದು. ಈ ಕಾರಣಕ್ಕಾಗಿಯೆ ಆಗುಂಬೆಯನ್ನು “ದಕ್ಷಿಣದ ಚಿರಾಪುಂಜಿ” ಎಂದೂ ಕರೆಯುತ್ತಾರೆ, ಕೆಲವೊಮ್ಮೆ ಚಿರಾಪುಂಜಿಗಿಂತ ಹೆಚ್ಚು ಮಳೆಯಾಗಿದೆಯೆಂದು ಅಂಕಿ ಅಂಶ ಹೇಳುತ್ತೆ. ಪಶ್ಚಿಮ ಘಟ್ಟದಲ್ಲಿರುವ ಈ ಪ್ರದೇಶ ಪ್ರಮುಖ ಪ್ರವಾಸಿ ಸ್ಥಳ ಇಲ್ಲಿನ ಪ್ರಕೃತಿ ಸೌಂದರ್ಯ ಅದ್ವಿತೀಯ, ಸಂಜೆಯ ಸೂರ್ಯಾಸ್ತದ ದೃಶ್ಯವನ್ನು ನೋಡಲು ಸಾವಿರಾರು ಜನ ಬರುತ್ತಾರೆ. ಇಂದು ಆಗುಂಬೆ ವಿಶ್ವ ಮಟ್ಟದಲ್ಲಿ ಗುರುತಿಸಿಕೊಂಡಿದೆ. ಆಗುಂಬೆಯನ್ನು ಕಾಳಿಂಗ ಸರ್ಪಗಳ ತವರೆಂದೇ ಹೇಳಬಹುದು. ಮಳೆಯನ್ನು ಇಷ್ಟ ಪಡುವ ಪ್ರವಾಸಿಗಳಿಗೆ ಆಗುಂಬೆಯಲ್ಲಿ ಬರುವ ಮಳೆ ಹನಿಯು ತಂಪಾಗಿಸುತ್ತೆ. 7600 ಮಿಲಿಮೀಟರ್ ಇಲ್ಲಿಯ ವಾರ್ಷಿಕ ಮಳೆಯ ಅಂಕಿಅಂಶ, southern tropical wet evergreen ಎಂಬ ವಿಭಾಗಕ್ಕೆ ಸೇರುವ ಮಳೆಕಾಡುಗಳಾಗಿವೆ ಈ ಆಗುಂಬೆ. ಯಾವಾಗಲೂ ಮಳೆಯ ಹನಿಗಳಿಂದ ತಂಪೆರೆಗುವ ಆಗುಂಬೆಯಲ್ಲಿ ಹಲವು ಪ್ರಕೃತಿಯ ವಿಷ್ಮಯಗಳು ಕಾಣಸಿಗುತ್ತೆ.

ನಾಷ್ಯನಲ್ ಜಿಯೋಗ್ರಫಿ ಟಿವಿಯ ಕಾರ್ಯಕ್ರಮದಲ್ಲಿ ಪ್ರಸಿದ್ಧ ಉರಗ ತಜ್ಞ Romulus Earl Whitaker ಕಾಳಿಂಗ ಸರ್ಪವನ್ನು ಅಧ್ಯಯನ ಮಾಡಿ ಪರಿಚಯಸಿದ್ದು ಇದೆ ಆಗುಂಬೆಯ ಕಾಡುಗಳಲ್ಲಿ. ಆಗುಂಬೆ ಪಶ್ಚಿಮ ಘಟ್ಟದ ಜೀವ ಸಂಕುಲದ ನಿಧಿ ಶೇಖರಣೆಯಾಗಿದೆ ಆಗುಂಬೆ. ಪ್ರಸಿದ್ಧ ಉರಗ ತಜ್ಞ Romulus Earl Whitaker ಅವರು ಕಾಳಿಂಗ ಸರ್ಪದ ಕುರಿತು ಅಧ್ಯಯನ ನಡೆಸಲು ಬಂದ ನಂತರದಿಂದ ವಿಶ್ವ ಮಟ್ಟದಲ್ಲಿ ಆಗುಂಬೆ ಪ್ರಸಿದ್ದಿ ಪಡೆಯಿತು. ಇಲ್ಲಿ ಅನೇಕ ಉರಗ ತಜ್ಞರು, ವಿದ್ಯಾರ್ಥಿಗಳು ಅಧ್ಯಯನ ನಡೆಸಲು ಬರುತ್ತಿದ್ದಾರೆ.

ದಟ್ಟ ಮಂಜು ಆವರಿಸಿದ ಆಗುಂಬೆಯನ್ನು ಹತ್ತಿದಾಗ ಸಹ್ಯಾದ್ರಿ ಶ್ರೇಣಿಗಳಿಂದ ಮೇಲಿಂದ ಕೆಳಕ್ಕೆ ಧುಮುಕುವ ಚಿಕ್ಕ ಚಿಕ್ಕ ಜಲಪಾತಗಳಿಗೆ ಇಲ್ಲಿ ಲೆಕ್ಕವಿಲ್ಲ, ಪ್ರಕೃತಿ ದೃಶ್ಯಗಳು, ಜೈನ ಮಂದಿರಗಳು ಇಲ್ಲಿ ಬರುವ ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತೆ. ಯಾವಾಗಲೂ ಮಂಜಿನಿಂದ ಆವರಿಸಿದ ಇಲ್ಲಿಯ ಪ್ರದೇಶವು ಹಲವು ಪ್ರಕೃತಿಯ ವೈವಿಧ್ಯತೆಗೆ ಕಾರಣವಾಗುತ್ತೆ. ಮಳೆಗಾಲ ಬಂತೆಂದರೆ ಆಗುಂಬೆ ಪ್ರವಾಸಿಗರ ದಂಡೇ ಇಲ್ಲಿಯ ಪ್ರಕೃತಿಯ ಸೌದರ್ಯವನ್ನು ನೋಡಲು ಬರುತ್ತಾರೆ. ಕರ್ನಾಟಕದ ಅತ್ಯಂತ ದಟ್ಟವಾದ ಅರಣ್ಯ ಪ್ರದೇಶವಾಗಿದೆ, ಇಲ್ಲಿಯ ದಾರಿಯಲ್ಲಿ ಮುಂದೆ ಸಾಗುತ್ತಿದ್ದರೆ ಇಲ್ಲಿಯ 200′-300′ ಎತ್ತರದ ಬಗೆ ಬಗೆಯ ದೈತ್ಯವೃಕ್ಷಗಳು ತಮ್ಮನೂ ತಮ್ಮ ತಲೆಯನ್ನೆತ್ತಿ ಇಣುಕುವಂತೆ ಭಾಸವಾಗುತ್ತವೆ. ಕಾಡಿನಲ್ಲಿ ತಮ್ಮ ತಾರಸ್ವರದಿಂದ ಕಿವಿಯನ್ನು ಕೊರೆಯುವ ಮರಚಾರಟೆಗಳ ಸಂಗೀತ ಇಲ್ಲಿ ಸರ್ವಸಾಮಾನ್ಯವಾಗಿದೆ. ಅರಣ್ಯದ ಸುಮನೋಹರ ಭಯಂಕರತೆಯನ್ನು ಇಲ್ಲಿ ಅನುಭವಿಸಬಹುದು.

ಶೃಂಗೇರಿ ಮಠದಲ್ಲಿ

ತುಂಗಾ ನದಿಯ ತೀರದಲ್ಲಿ ಮುಂದೆ ಸಾಗಿದರೆ ನಾಡಿನ ಪವಿತ್ರ ತೀರ್ಥ ಕ್ಷೇತ್ರ ಶೃಂಗೇರಿ ಮಠ ದರ್ಶನವಾಗುತ್ತೆ ಇಲ್ಲಿ ಶ್ರೀ ಶಂಕರಾಚಾರ್ಯರು ತಮ್ಮ ಮೊದಲ ಅದ್ವೈತ ಪಠಣ ಸ್ಥಾಪಿಸಿದ ಸ್ಥಳವಾಗಿದೆ. ಶೃಂಗೇರಿ ಮಠದಲ್ಲಿ ಗತಕಾಲದ ಶಿಲ್ಪ ಕಲೆಗಳ ವೈಭವ ನಮ್ಮ ಕಣ್ಣ ಮುಂದೆ ಕಾಣ ಸಿಗುತ್ತೆ. ಮತ್ತೊಂದು ಕಡೆ ತೀರ್ಥಯಾತ್ರಿಗಳ ಭಕ್ತಿಯ ಕ್ಷಣಗಳು. ಇವೆಲ್ಲವನ್ನು ಶಾಂತವಾಗಿ ನೋಡಿಕೊಂಡು ಹರಿಯುವ ಪವಿತ್ರ ತುಂಗಭದ್ರಾ ನದಿ.

ಸಂಸ್ಕೃತ ಗ್ರಾಮ

ಶಿವಮೊಗ್ಗದಿಂದ 1 ಕಿಮೀ ದೂರದಲ್ಲಿರುವ ತುಂಗಾ ನದಿ ತೀರದಲ್ಲಿ ಸಂಸ್ಕೃತ ಗ್ರಾಮವೆಂದೇ ಗುರುತಿಸಿಕೊಂಡಿರುವ ಮತ್ತೂರು, ಸಂಸ್ಕೃತ ಭಾಷೆಯಲ್ಲಿ ಮಮತೆ ಹೊಂದಿರುವ ಇಲ್ಲಿಯ ಜನರು 1980ರಿಂದ ಸಂಸ್ಕೃತವನ್ನು ದೇಶಿಯ ಭಾಷೆಯನ್ನಾಗಿ ಮಾಡಬೇಕೆಂದು ಇಲ್ಲಿಯ ಸಂಕೇತಿ ಬ್ರಾಹ್ಮಣರು ಒತ್ತಾಯಿಸುತ್ತಾ ಬಂದಿರುತ್ತಾರೆ. 1980ರಿಂದ ಮತ್ತೂರು ಸಂಸ್ಕೃತ ಗ್ರಾಮವೆಂದು ಅರಿಯಲ್ಪಟ್ಟಿದೆ, ಇಲ್ಲಿಯ ಅಗ್ರಹಾರದ ಸಂಕೇತಿ ಬ್ರಾಹ್ಮಣರು RSS ಸಂಘಟನೆಯ ಜತೆಗೂಡಿ ಈ ಗ್ರಾಮದಲ್ಲಿ ಸಂಸ್ಕೃತ ಮುಖ್ಯ ಭಾಷೆಯನ್ನಾಗಿ ಮಾಡಿರುತ್ತಾರೆ. ಇಲ್ಲಿ ಸಂಸ್ಕೃತ ಭಾಷೆಯನ್ನು ಕೇವಲ ಬ್ರಾಹ್ಮಣರು ಮಾತ್ರವಲ್ಲದೆ ಅಲ್ಲಿಯ ಸ್ಥಳೀಯ ವಿದ್ಯಾ ಸಂಸ್ಥೆಯಲ್ಲಿ ಸಂಸ್ಕೃತವನ್ನು ಮುಖ್ಯ ಭಾಷೆಯನ್ನಾಗಿ ಮಾಡಿರುತ್ತೇರೆ. ಇದರಿಂದ ಬ್ರಹ್ಮಣರು ಮಾತ್ರವಲ್ಲದೆ ಬೇರೆ ಜಾತಿಯ ಜನರು ಸಂಸ್ಕೃತ ಭಾಷೆ ಕಲಿಯಲು ಸಹಾಯವಾಗಿದೆ. ಇಲ್ಲಿ ಸಂಕೇತಿ ಬ್ರಾಹ್ಮಣರಲ್ಲಿ ಅನೇಕ ಯಜುರ್ವೇದ ಪಂಡಿತರಿದ್ದಾರೆ, ಮತ್ತು ಇವರ ಪರಂಪರಾಗತ ವಸ್ತ್ರಧಾರಣೆಯ ರೀತಿ ಇಂದಿನ ಕಾಲಕ್ಕೆ ತುಂಬಾ ವಿಷೇಶವಾಗಿದೆ. 30ಕ್ಕೂ ಅಧಿಕ ವೇದ ಪಂಡಿತರು, 70ಕ್ಕಿಂತ ಅಧಿಕ ಸಂಸ್ಕೃತ MA ಪದವೀಧರರು, 150ಕ್ಕಿಂತ ಅಧಿಕ ಇಂಜಿನಿಯರುಗಳು ಮತ್ತು IT ಉದ್ಯೋಗಸ್ಥರು ಈ ಮತ್ತೂರಲ್ಲಿದ್ದಾರೆ, ಅನೇಕ ಗಮಕ ಸಂಗೀತಕಾರರಿದ್ದಾರೆ. ನಾಶವಾಗುತ್ತಿರುವ ನಮ್ಮ ಭಾರತೀಯ ಸಂಸ್ಕೃತಿ, ಪ್ರಾಚೀನ ಪರಂಪರೆಗಳು ಮತ್ತೂರಿನಂತಹ ಗ್ರಾಮಗಳಿಂದ ಭವ್ಯ ಪರಂಪರೆಗಳು ಆದುನಿಕ ಜಗತ್ತಿನಲ್ಲಿ ಮತ್ತೆ ಹುಟ್ಟಿಕೊಳ್ಳಲು ಸಾಧ್ಯ. ಇಂದಿನ ಯುವ ಪೀಳಿಗೆಗೆ ಮತ್ತೂರು ಮಾದರಿಯಾಗಲಿ.

ರವಿವರ್ಮ.ಎ

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post