X

ವಾಚ್ ಮ್ಯಾಟರ್ರು ಬಂದ್ಮಾಕೆ ಹಗ್ಲೊತ್ತು ಬುಡ್ರಪ್ಪಾ ರಾತ್ರೇನೇಯಾ ಸರೀ ನಿದ್ದಿ ಬರಾಕಿಲ್ಲ!!!

ಅಗಳಗಳಗಳೋ… ಎನಾಯ್ತ್ಲಾ ನಿಮ್ಮ್ ಸಿದ್ಧಣ್ಣಂಗೆ, ಅದ್ಯಕ್ಲಾ ಕದ್ದ್ ವಾಚ್ನಾ ಕಟ್ಕೊಂಡೈತೆ?? ಯಾರಲಾ ಈ ಮನೆ ಹಾಳು ಸಜೆಶನ್ನು ಕೊಟ್ಟೋನೂ??? ಬೇಕಾಗಿದ್ರೆ ನಾನೇಯಾ ಮಾರ್ಕೆಟ್ ಮುಲ್ಲಾಸಾಬ್’ಗೆ ಯೋಳ್ಬಿಟ್ಟು ಸೆಕೆಂಡ್ ಹ್ಯಾಂಡ್ ವಾಚ್ ಭಾಳ ಕಮ್ಮಿ ರೇಟ್ನಾಗೆ ಕೊಡುಸ್ತಿದ್ದೆ ಅಂತೇಳ್ತಾ ಕಲ್ಲೇಶಿ ಜೊತೆ ಗೋಪಾಲಣ್ಣ ಹಟ್ಟಿ ಮುಂದೆ ಹಾಜರಾಯ್ತು ಕೋಳೀ ಮುರುಗನ್.

ಉಗೀರೀ ನನ್ನ ಮಗನ ಮಖಕ್ಕೆ, ಬರೇಯಾ ಕುಮಾರಣ್ಣನ್ ಮಾತ್ ಕೇಳ್ಕೊಂಡ್ ನೀನೇ ಯಾಕಲಾ ನ್ಯಾಯಾಧೀಸನ್ ತರ ಆಡ್ತಾ ಇದೀಯಾ?? ಕುಮಾರಣ್ಣ ಯೋಳಿದ್ ಕೂಡ್ಲೇಯಾ ಅದೆಂಗಲಾ ಕದ್ದ ಮಾಲು ಆಗ್ಬುಡತ್ತೆ?? ದುಬ್ಯಾನಾಗಿರೋ ಪ್ರೆಂಡ್ ಗಿಫ್ಟ್ ಕೊಟ್ಟೈತೆ ಅಂತ ಸ್ಪಷ್ಟೀಕರಣ ಕೊಟ್ಟಿಲ್ವೇನ್ಲಾ ಸಿದ್ಧಣ್ಣ?… ಕುಮಾರಣ್ಣನ್ ಮಗ ಹೀರೋ ಆಗಿ ಬರೋದು ಖಾತ್ರಿ ಆಗಿಲ್ವೇನ್ಲಾ??.. ಅಲ್ನೋಡಿದ್ರೆ ದೊಡ್ಡ್ ಗೌಡ್ರು ಪಾಪ ಆಪೀಸ್ ಕಟ್ಟಕ್ಕೆ ಹಣ ಇಲ್ಲ ಅಂತ ಸಂಕ್ಟ ಪಟ್ಕೊಂಡ್ ಕಣ್ಣೀರು ಹಾಕವ್ರೆ. ಎಲ್ಲಿಂದಲಾ ಬಂತು ಕುಮಾರಣ್ಣಂಗೆ ಸಿನ್ಮಾ ಮಾಡಾಕೆ ಕೋಟಿ ಕೋಟಿ ದುಡ್ಡು.? ಅವಯ್ಯ ಸಿದ್ದಣ್ಣಂಗೆ ಒಂದು ರೂಲು ನಿಮ್ಮ್ ಕುಮಾರಣ್ಣಂಗೆ ಒಂದು ರೂಲೇನ್ಲಾ ?? ಅಂತ ಸಿದ್ಧಣ್ಣನ್ ಡಿಫೆಂಡ್ ಮಾಡ್ತು ಗೋಪಾಲಣ್ಣ..

ಅಲ್ಲಾ ಕಲ್ಲಾ ಗೋಪಾಲಣ್ಣ. ಸಿದ್ಧಣ್ಣನ್ ಇಳೀಸ್ತಾರಂತೆ?? ಖರ್ಗೆ ಸಾಹೇಬ್ರನ್ನ ಕೂರುಸ್ತಾರಂತೆ ಸೀಎಮ್ಮ್ ಸೀಟ್ನಾಗೆ?? ಹೌದೇನ್ಲಾ?? ಎನಲಾ ಮಾಟರ್ರು?? ಒಸಿ ಬುಡ್ಸಿ ಏಳಲಾ ಅಂತ ಕೇಳ್ತು ಕಲ್ಲೇಶಿ…

ಖರ್ಗೆನಾ ಅದೆಂಗಲಾ ಕೂರುಸ್ತದೆ ಐಕಮಾಂಡು?? ಕಲ್ಬುರ್ಗಿದಾಗ ಪಂಚಾಯ್ತಿ ವೋಟ್ನಾಗ ಕೈ ಪಕ್ಸ ಕೆಳಗ್ ಬಿದ್ದೈತಿ, ಕಮಲ ಪಕ್ಸದೋರ್ ಗೆದ್ದಾವ್ರೆ.. ನಿಮ್ಮ್ ಮಾಜಿ ಪಸುಪಕ್ಸಿ ಮಂತ್ರಿ, ರೇವು ನಾಯಕ ಮುಂದೇನೇ ರಾಜ್ಕೀಯ ಕುಸ್ತಿ ಆಡಾಕೆ ಬರ್ದ ಖರ್ಗೆನ ಕೂರ್ಸೋದು ಡೌಟೇ ಕಣಲಾ ಅಂತೇಳ್ತು ಗೋಪಾಲಣ್ಣ.

ನಿಮ್ಮ್ ತೆನೆ ಒತ್ತ ಪಕ್ಸದೋರು ಮೂರು ಮತ್ತೊಂದು ಜಿಲ್ಲಾ ಪಂಚಾಯ್ತಿನಾಗೆ ಮೆಜಾರಿಟಿ ಪಡ್ದಿಲ್ಲ. ಅದ್ರ ಮ್ಯಾಲೂ ಅದೇಟ್ಲಾ ಕೊಬ್ಬು ನಿಂಗೆ ಅಂತ ಮುರುಗನ್ ಕಾಲೆಳೀತು ಗೋಪಾಲಣ್ಣ.

ಕೂಲ್ ಡೌನ್ ಗೋಪಾಲಣ್ಣ. ನಮ್ಮ್ ಪಾರ್ಟೀ ಎಲ್ಡು ಅಥವಾ ಮೂರೇ ಪಂಚಾಯ್ತಿ ಗೆದ್ದಿರ್ಬೋದು. ಆದ್ರೆ ಅತಂತ್ರ ರಿಸಲ್ಟ್ ಬಂದಿರೋ ಕಡೆ ಅದೆಂಗಲಾ ನಮ್ಮನ್ನ್ ಒರಗಿಟ್ಟು ರಾಜ್ಕೀಯ ಮಾಡ್ತೀರ ನೋಡೇ ಬಿಡಾವ ಅಂತ ಸವಾಲ್ ಹಾಕ್ತು ಮುರುಗನ್.

ಬುಡ್ರಲಾ ಆ ಇಶ್ಯಾನಾ.. ಯೆಡ್ಯೂರು ಎಲ್ಲಲಾ?? ಕಾಣಾಕೇ ಇಲ್ಲ?? ಪಂಚಾಯ್ತಿ ವೋಟ್ನಾಗುವೇ ಜಾಸ್ತಿ ಪ್ರಚಾರ ಮಾಡಿಲ್ಲ?? ಅಂತ ಮಧ್ಯೆ ಬಾಯಿ ಹಾಕ್ತು ಕಲ್ಲೇಶಿ..

ಯಾಕಲಾ ಪ್ರಚಾರ ಮಾಡ್ತೈತೆ?? ರಾಜ್ಯಾಧ್ಯಕ್ಸ ಮಾಡಿ ಅಂತ ಅದೆಷ್ಟು ಸರ್ತಿ ಡೆಲ್ಲಿಗ್ ಹೋದ್ರೂನೂವೇ ಕ್ಯಾರೇ ಅಂದಿಲ್ಲ ಕಮಲ ಪಕ್ಸದ ಐಕಮಾಂಡೂ… !! ಸುಮ್ನೇ ಯೆಡ್ಯೂರು ಪ್ರಚಾರ ಮಾಡಿ ಪಾರ್ಟಿ ಗೆದ್ಬುಟ್ರೆ ಇರೋ ಬರೋರೆಲ್ಲ ಕ್ರೆಡಿಟ್ಟ್ ತಗೋಳಾಕೆ ಕಾದು ಕುಂತಿರೋದ್ನ ನೋಡಿದ್ ಮ್ಯಾಕೆ ಅದೆಂಗಲಾ ಫೀಲ್ಡ್’ಗೆ ಇಳೀತೈತೆ ಅಂತ ವಾದ ಮಾಡ್ತು ಗೋಪಾಲಣ್ಣ.

ಅಲ್ಲಾ ಕಣಲಾ.. ಕುಮಾರಣ್ಣ ವಾಚ್ ಮ್ಯಾಟರ್ರು ತಂದ್ಮಾಕೆ ಸಿದ್ಧಣ್ಣ ಹಗ್ಲೊತ್ತು ಬುಡಪ್ಪಾ ಸರಿಯಾಗ್ ರಾತ್ರೆ ಹೊತ್ನಾಗೇ ನಿದ್ದಿ ಮಾಡ್ತಿಲ್ಲ. ಚೆನ್ನಾಗ್ ತಿಂದ್ಬುಟ್ಟು ಸಭೆ ಸಮಾರಂಭಗಳಲ್ಲಿ ಗಡದ್ದಾಗೇ ನಿದ್ದೆ ಮಾಡ್ತಿದ್ದ ಸಿದ್ಧಣ್ಣ ಈವಾಗ ಭಾಳ ಅಲರ್ಟ್ ಆಗಿದೆ ಬುಡಣ್ಣಾ. ಎಲ್ಲಿ ಒಸ ಬಾಂಬ್ ಬೀಳತ್ತೆ ಅಂತ ಚಿಂತೇನಲ್ಲೇ ಕಾಲ ಕಳೀತಿದೆ. ಎಂಗಿದ್ದ ಸಿದ್ಧಣ್ಣ ಎಂಗಾಗಿ ಬುಡ್ತಲಾ ಅಂತ ಗೋಪಾಲಣ್ಣನ್ ತಿವೀತು ಮುರುಗನ್.

ಥತ್ತೇರಿಕೆ …!! ಎನಾರ ಮಾಡಿ ಸಿದ್ಧಣ್ಣನ್ ಮನೆಗ್ ಕಳೀಸ್ಬೇಕೂಂತ ಆಸೆ ನಿಂಗೂವೆ ಮತ್ತು ಮತ್ತು ನಿಮ್ಮ್ ತೆನೆ ಒತ್ತ ಪಕ್ಸದೋರ್ಗೆ… ವಾಚು ಇಶ್ಯಾ ಮಾತಾಡಿ ಟೇಮ್ ಆಗಿದ್ದೆ ಗೊತ್ತಾಗಿಲ್ಲ. ನಡೀರ್ಲ್ಲಾ ಬಡ್ಡೇತಾವ ಅಂತ ಗೋಪಾಲಣ್ಣ ಹೇಳ್ತಿದ್ದಂಗೆ ಮುರುಗನ್ ಕಲ್ಲೇಶಿ ಇಬ್ರೂನೂ ಜಾಗ ಖಾಲಿ ಮಾಡ್ಬಿಟ್ರು.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post