X

ಕುಡುಕ್ರು ತಮ್ಮ್ ಕೆಪಾಸಿಟಿಗಿಂತ ಜಾಸ್ತಿ ಕುಡುದ್ರೇನೇಯಾ ಮಲ್ಯನ್ ಸಾಲ ಸ್ವಲ್ಪನಾದ್ರೂ ತೀರಿಸ್ಬೋದು ಕಣ್ರಲಾ!!!

ಹಳ್ಳಿ ಕಟ್ಟಿ ಮ್ಯಾಲೆ ಕುಂತಿದ್ದ ಮುರುಗನ್ ನ್ಯೂಸ್ ಪೇಪರ್ ಇಡ್ಕೊಂಡು ಭಾಳ ಸೀರಿಯಸ್ಸಾಗಿ ಓದ್ತಾ ಕುಂತಿತ್ತು. ಪಕ್ಕದಲ್ಲೇ ಕಲ್ಲೇಶಿ ಕಿವಿ ಒಳ್ಕೆ ಕಡ್ದಿ ಹಾಕಿ ಲೋಕಾನೇ ಮರ್ತಂಗೆ ಗುಗ್ಗಿ ತೆಗೀತಾ ಕುಂತಿತ್ತು. ಚೊಂಬು ಇಡ್ಕೊಂಡು ಒಲ ಕಡೆಯಿಂದ ಬರ್ತಿದ್ದ ಗೋಪಾಲಣ್ಣ “ನಂಡ್ರೀ ವಣಕ್ಕಮ್ ಕೋಳೀ ಮುರುಗನ್ ಮತ್ತು ಕಲ್ಲೇಶೀ…. ಅದ್ಯೇನಾಯ್ತ್ಲಾ ನಮ್ಮ್ ಫಿಲಿಮ್ಮ್ ಸ್ಟಾರುಗಳ್ಗೆ.ಒಬ್ರಾದ್ ಮ್ಯಾಲೆ ಒಬ್ರು ಕಾಂಪಿಟೀಷನ್ನು ಮಾಡ್ಕಂಡಂಗೆ ಎಂಡ್ತೀರ ಇಚಾರದಲ್ಲಿ ಕಿರಿಕ್ ಮಾಡ್ಕಂಡವ್ರೆ?? ಥತ್ತೇರಿಕೆ..ನಮ್ಮ್ ಟೀವಿ ಚಾನೆಲ್ಲುಗಳೂ ಮೆಗಾ ಸೀರಿಯಲ್ ತರಾ ಅದ್ನೇಯಾ ತೋರುಸ್ತಾವ್ರೆ” ಅಂತ ಮಾತು ಆರಂಭಿಸ್ತು.

ಅಲೆಲೆಲೆಲೆ ಗೋಪಾಲಣ್ಣ… ನಮ್ಮ್ ಕುಮಾರಣ್ಣ ಸಿನ್ಮಾದಾಗೆ ಆಕ್ಟ್ ಮಾಡೋರ್ನ ನಂಬ್ಯಾಡ್ರೀ ಸಿವಾ ಅಂದಾಗ ನೀನು ನಿಮ್ಮ್ ರಮ್ಮೂ ಸೇರ್ಕಂಡು ಬಾಯಿಗ್ ಬಂದಂಗೆ ಬಯ್ಕಂಡು ಬಂದ್ರೀ.. ಈಗ್ನೋಡ್ಲಾ ಎಲ್ಡೆಲ್ಡು ಸರ್ತೀ ಆವಯ್ಯ ದರ್ಸನ್ನು ಮತ್ತು ಅದ್ರ ಎಂಡ್ತಿ ಜಗ್ಳ ಆಡ್ಕೋಂಡು ರಂಪ ಮಾಡ್ಕೋಂಡುಬೀದಿಗ್ ಬಂದಾವೆ. ಸುದೀಪುನೂವೆ ಡೈವೋರ್ಸ್ ಅಂತಾ ಕೋರ್ಟುಗ್ ಬಂದೈತೆ. ಉಚ್ಚ ವೆಂಕ್ಟು ಕೂಡಾ ಭಾಳ ಹಿಂದೇನೇ ಎಂಡ್ತಿ ಬುಟ್ಟೈತೆ ಅಂತ ಮೊನ್ನೇಸಾ ಟೀವಿನಾಗೆ ಬಂದೈತೆ. ಈವಾಗೇನ್ಲಾ ಯೋಳ್ತೀಯಾ ಅಂತಾ ಗೋಪಾಲಣ್ಣಂಗೆ ಮರು ಪ್ರಶ್ನೆ ಹಾಕ್ತು ಮುರುಗನ್.

ದರ್ಸನ್ನು ಮತ್ತು ಅದ್ರ ಎಂಡ್ತಿ ಮತ್ತೆ ಒಂದಾಗ್ತಾರೆ ನೋಡಲಾ. ಅಂಬಿ ಅಂಕಲ್ ಇಬ್ರೂನ್ನ ಕೂರಿಸ್ಕೊಂಡು ಮಕಕ್ಕೆ ಉಗ್ದೈತೆ ಅಂತೆ ಕಣಲಾ.ಚಿತ್ರರಂಗದಲ್ಲೀಗ ಅಂಬಿ ಮಾಮ ನಿಮ್ ದೊಡ್ಡ್ ಗೌಡ್ರು ಇದ್ದಂಗೆ ಕಣಲಾ. ಒಂದ್ಸರ್ತಿ ಯೋಳಿದ್ರೆ ಮುಗೀತು. ಅಟೇಯಾ.. ಖೇಲ್ ಖತಮ್ ಅಂತ ಸಮಜಾಯ್ಸಿ ಕೊಡ್ತು ಗೋಪಾಲಣ್ಣ.

ದೊಡ್ಡ್ ಗೌಡ್ರು ಅಂದಾಗ ನೆಂಪಾಯ್ತು. ಅದ್ಯೇನಾಯ್ತ್ಲಾ ಗೌಡ್ರುಗೆ?? ಎಣ್ಣೆ ಕಿಂಗು ಮಲ್ಯ ಕರ್ನಾಟಕದ ಮಣ್ಣಿಗ ಮಗ ಅಂತ ಹೇಳವ್ರೆ. ಏನಲಾ ಮ್ಯಾಟರ್ರು??? ಅಂತಾ ಗೋಪಾಲಣ್ಣಂಗೆ ಕೇಳ್ತು ಕಲ್ಲೇಶಿ.

ಎಷ್ಟೇ ಆದ್ರೂ ತೆನೆ ಒತ್ತೋರ ಬೆಂಬ್ಲ ಇದ್ದೇ ಅಲ್ವೇನ್ಲಾ ಮಲ್ಯ ರಾಜ್ಯ ಸಭೇಗ್ ಓಗಿದ್ದು. ಬೆಂಬ್ಲ ಕೊಟ್ಟಿದ್ದಕ್ಕೆ ಕುಡಿಯೋಕೆ ಬೀರೂ ಮತ್ತು ತಿನ್ನೋಕೆ ದುಡ್ಡೂ ಕೊಟ್ಟಿರತ್ತೆ ಕಣಲಾ ಮಲ್ಯ. ಅದ್ನ ನೆನ್ಸ್ಕಂಡು ಭಾಳ ಪೀಲಿಂಗಲ್ಲಿ ಯೋಳವ್ರೆ ಕಣಲಾ ಗೌಡ್ರು ಅಂತಾ ಯೋಳ್ತು ಗೋಪಾಲಣ್ಣ.

ಬುಡಲಾ. ದೊಡ್ಡ್ ಗೌಡ್ರ ಮಾತ್ಗೆ ಅಷ್ಟೇನೂ ಬೆಲೆ ಕೊಡ್ಬ್ಯಾಡ್ಲ!!! ಗೌಡ್ರುಗೆ ಒಂಚೂರು ಇಂಪಾರ್ಟೆನ್ಸ್ ಕಮ್ಮಿ ಆಗೈತೆ ಕಣ್ಲಾ ಪಕ್ಸದಾಗೇ.. ರೇವಣ್ಣನ್ ಮಗನ ಜೊತೆ ಇನ್ನಿಬ್ರು ಮೊಮ್ಮಕ್ಳೂ ಪ್ರಾಯ ಇಪ್ಪತೈದು ಆಗಾಕೆ ಕಾಯ್ತಿದಾರೆ ಕಣ್ಲಾ ಟಿಕೆಟ್ ಇಸ್ಕಾಳಾಕೆ ಅಂತೇಳ್ತು ಕಲ್ಲೇಶಿ.

ಮಲ್ಯನ್ ಕಥೆ ಏನಾಯ್ತ್ಲಾ?? ತಿಂದು ಕುಡ್ದು ಜೂಜಾಡಿ, ಪಾರೀನ್ ಎಣ್ಮಕ್ಳ ಜೊತೆ ಮಜಾ ಮಾಡ್ತಿದ್ದ ಮಲ್ಯ ರಾತ್ರೋ ರಾತ್ರಿ ಓಡೋಯ್ತಲ್ವೇನ್ಲಾ??ಎಂಗಾಗೋಯ್ತು ನೋಡಲಾ ಕುಡುಕರ ದೊರೆ ಲೈಪೂ ಅಂತಾ ಮುರುಗನ್ ಹೇಳ್ತು.

ಮಲ್ಯನ್ ಇಮಾನ್ದಾಗೆ ಟೀ ಕಾಪಿ ಕೊಡ್ತಿದ್ದ್ ಉಡ್ಗೀರ್ ಕಥೆ ಏನ್ಲಾ?? ಅವ್ರನ್ ಏನಾರ ನಮ್ಮ್ ಬೆಂಗ್ಳೂರ್ ಬಸ್ನಲ್ಲಿ ಕಂಡಕ್ಟರ್ ಮಾಡುದ್ರೆ ಜನಗೊಳೆಲ್ಲಾ ಬಸ್ನಾಗೆ ಓಡಾಡಿ ಸ್ವಲ್ಪನಾದ್ರೂ ಟ್ರಾಪಿಕ್ಕು ಕಮ್ಮಿ ಆಗ್ಬೋದು ಕಣಲಾ ಅಂತು ಕಲ್ಲೇಶಿ..

ಭಿಕನಾಶೀ ನನ ಮಕ್ಳಾ.. ಮಲ್ಯ ಬ್ರಾಂಡ್ ಎಣ್ಣೆನಾ ಒಂದು ಅನಿನೂ ಬುಡ್ದಂಗೆ ಕುಡ್ದು ಇವಾಗ ಅವಯ್ಯಂಗೆ ತಮಾಸಿ ಮಾಡ್ತಾ ಕುಂತ್ರಲ್ಲೋ?? ಲೈಪು ಅಂದ್ರೆ ಕಷ್ಟ ನಷ್ಟಗಳು ಕಾಮನ್ ಕಣಲಾ.. ಅಂಗಂತಾ ಕುಡುಕ್ರ ಸಂಘದ ಆರಾಧ್ಯದೈವ ನಮ್ಮ್ ಮಲ್ಯ ಸಾಯೇಬ್ರನ್ನ ನಡು ನೀರ್ನಲ್ಲಿ ಬುಡಕಾಯ್ತದೇನ್ಲಾ?? ಒಬ್ಬ ಕುಡುಕನ ಕಷ್ಟ ಮತ್ತೊಬ್ಬ ಕುಡುಕನೇ ಅರ್ಥ ಮಾಡ್ಕೋಬೇಕು ಕಣಲಾ.. ನಾವೆಲ್ರೂ ನಮ್ಮ್ ಕೆಪಾಸಿಟಿಗಿಂತ್ಲೂ ಜಾಸ್ತಿ ಕುಡ್ದು ಮಲ್ಯ ಮಾಡಿರೋ ಸಾಲಾನಾ ಸ್ವಲ್ಪನಾದ್ರೂ ತೀರ್ಸೋಕೆ ಪ್ರಾಮಾಣಿಕ ಪ್ರಯತ್ನ ಮಾಡೋಣ. ನಡೀರ್ಲಾ, ಎತ್ರಲಾ ನಿಮ್ಮ್ ಗಾಡೀನಾ ಎಂಡದ್ ಅಂಗ್ಡಿ ಕಡೀಗೆ ಅಂತ ಗೋಪಾಲಣ್ಣ ಯೋಳ್ತಿದ್ದಂಗೆ ಮುರುಗನ್ ಮತ್ತು ಕಲ್ಲೇಶಿ ಇಬ್ರೂ ಜಾಗ ಖಾಲಿ ಮಾಡಿದ್ವು!!

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post