X

ಬದುಕು

ಬದುಕೆಂದರೆ ಹೀಗೆ..
ಬಗೆಬಗೆಯ ಭಾವಗಳ ಬೇಗೆ.!

ಒಮ್ಮೆ ಮನವರಳಿಸುವ
ತುಂಬಿರುವ ಸಂಭ್ರಮ..
ಮತ್ತೆ ಮನವನಳಿಸುವ
ಹುಚ್ಚು ಭ್ರಮನಿರಸನ.!

ಮುನ್ನಡಿಯಿಡಲಾರದಂತೆ
ಕಣ್ಣು ಮಬ್ಬಾಗಿಸುವ ಕತ್ತಲು..
ಮತ್ತೆಲ್ಲೋ ಮೂಡಿ ಬರುವ
ಭರವಸೆಯ ಬೆಳಕ ಹೊನಲು.!

ತತ್ತರಿಸಿರುವ ಬದುಕಿಗಾಗಿ
ವಿಧವೆಯರ ಅರಚಾಟ..
ಹೊಸತನದ ಭವಿಷ್ಯದೆಡೆ
ನವ ಮುತ್ತೈದೆಯ ನೋಟ.!

ಒರಗಿದರೂ ನಿದಿರೆ ಕೊಡದ
ಸಿರಿತನದ ಮೃದು ಹಾಸಿಗೆ..
ಹರಕು ಚಾಪೆಯ ತಿರುಕನಿಗೆ
ನಿದ್ರಾದೇವಿಯ ಅಪ್ಪುಗೆ.!

ಬರಡು ಕೊಂಬೆಯ ಚಿಗುರಿಸಲು
ಹಲವು ಮನಸುಗಳಿಗೆ ತವಕ..
ಎಳೆಚಿಗುರು ಚಿವುಟುವುದು
ಕೆಲವರಿಗಂತೂ ವಿಕೃತ ಸುಖ.!

ಸಾವಲ್ಲೂ ನಗುತಿರುವ
ಸಾವಿಗಿನಿತೂ ಅಂಜದವರು..
ಬದುಕಿಯು ಸತ್ತಂತಿರುವ
ಬದುಕ ಪ್ರೀತಿಸದವರು..!

ಏರಿಳಿತಗಳ ಈ ಜೀವನದ ಪಯಣ
ಸೃಷ್ಟಿ ರೂಪಿಸಿದ ಅಲಿಖಿತ ನಿಯಮ..!

Facebook ಕಾಮೆಂಟ್ಸ್

Udayabhaskar Sullia: ಮಡಿಕೇರಿ ತಾಲೂಕಿನ ಪೆರಾಜೆಯಲ್ಲಿ ಜನಿಸಿದ್ದು ಪ್ರಸ್ತುತ ಸುಳ್ಯದಲ್ಲಿ ವಾಸ್ತವ್ಯ. ಜೀವನ ನಿರ್ವಹಣೆಗಾಗಿ ಸ್ವ ಉದ್ಯೋಗ ಹೊಂದಿರುತ್ತೇನೆ. ದೇಶಭಕ್ತಿಯ ಭಾಷಣ, ಅಧ್ಯಾತ್ಮಿಕ ಪ್ರವಚನಗಳನ್ನು ಕೇಳುವುದು, ಹಳೆಯ ಸಿನೆಮಾ ಹಾಡು, ಭಾವಗೀತೆ, ಭಕ್ತಿಗೀತೆಗಳನ್ನು ಆಲಿಸುವುದು, ಸಮಾಜಸೇವೆ, ಸದ್ವಿಚಾರ ಪ್ರಸಾರ... ಇವು ನನ್ನ ಆಸಕ್ತಿಯ ಕ್ಷೇತ್ರಗಳು. ಭಜನೆ ಹಾಡುವುದು, ಕವನ ರಚನೆ, ಸಾಮಾಜಿಕ-ದೇಶಭಕ್ತಿ- ಸಂಸ್ಕೃತಿಗಳ ಕುರಿತಾದ ಚಿಕ್ಕಪುಟ್ಟ ಲೇಖನಗಳನ್ನು ಬರೆಯುವುದು ಹಾಗೂ ಬೌದ್ಧಿಕ ಮಟ್ಟವನ್ನು ಹೆಚ್ಚಿಸುವ ಸದ್ಗ್ರಂಥಗಳ ಅಧ್ಯಯನ.. ಇವು ನನ್ನ ಹವ್ಯಾಸ.
Related Post