X

ಇನ್ನಾದರು ಅರಿಯಿರಿ, ಗೋವುಗಳೇ ದೇಶದ ಸಂಪತ್ತು

ಗೋವು ಇದು ಕೇವಲ ಒಂದು ಧರ್ಮದ ಪಾವಿತ್ರ್ಯತೆಯ ಸಂಕೇತ ಅಲ್ಲ. ಇದು ಪ್ರತಿಯೊಬ್ಬ ಭಾರತೀಯನ ಜೀವನದಲ್ಲೂ ಅಳವಡಿಸಿಕೊಂಡ ತತ್ವ. ಭಾರತದಲ್ಲಿ ಸಾಕಷ್ಟು ಹೊಸ ಮತಗಳು ಹುಟ್ಟಿಕೊಂಡು ಇಂದು ಬೆಳೆದು ಬಲಿತಿದೆ. ಎಲ್ಲಾ ಮತಗಳಲ್ಲೂ ಗೋವಿಗೆ ಪಾವಿತ್ರ್ಯದ ಸ್ಥಾನವನ್ನೇ ನೀಡಲಾಗಿದೆ. ಅದಕ್ಕಾಗಿ ಗೋವು ಪರಿಪಾಲಿಸುವದಷ್ಟೇ ಅಲ್ಲ ಬದಲಾಗಿ ಅವುಗಳನ್ನು ಪೂಜಿಸುವುದು, ತನ್ಮೂಲಕವಾಗಿ ತನ್ನ ಜೀವನದ ಒಂದು ಭಾಗವೇ ಆಗಿ ರಕ್ಷಿಸುವುದೇ ಭಾರತೀಯನ ಪರಂಪರಾಗತವಾಗಿ ಬೆಳದ ಬಂದ ಸಂಸ್ಕಾರ.

ಪೌರಾಣಿಕ ಹಿನ್ನೆಲೆಯಲ್ಲಿ ಗೋವನ್ನು ಐಶ್ವರ್ಯದ, ಪ್ರತಿಷ್ಠೆಯ ಸಂಕೇತವಾಗಿ ಬಳಸುತ್ತಿದುದು ನಮಗೆಲ್ಲ ತಿಳಿದ ವಿಚಾರ. ಅತಿ ಹೆಚ್ಚು ಗೋ ಸಂಪತ್ತನ್ನ ಹೊಂದಿರುವವನು ಸಿರಿವಂತ ಎಂದು ಸಮಾಜ ಗುರುತಿಸುತ್ತಿತ್ತು. ಇದಕ್ಕೆ ನಿದರ್ಶನ ಎಂಬಂತೆ ಅರ್ಜುನ ಸೆಣೆಸಿದ್ದು ತನ್ನ ಒಡೆಯನಾಗಿದ್ದ ವಿರಾಟ ರಾಜನ ಗೋ ಸಂಪತ್ತನ್ನ ಉಳಿಸಲೇ ಹೊರತು, ಉತ್ತರನ ಮುಂದೆ ತನ್ನ ಪೌರುಷ ಪ್ರದರ್ಶಿಸಲು ಅಲ್ಲ. ಮುಂದೆ ಬದಲಾದ ಪರಿಸ್ಥಿತಿಯಲ್ಲಿ ಗೋವು ಕೇವಲ ರಾಜನ ಸಂಪತ್ತಾಗಿರದೆ ರಾಜ್ಯದ ಸಂಪತ್ತಾಗಿ ಪರಿಣಮಿಸಿತು. ಕೃಷಿಯೇ ಆಧಾರ ಸ್ತಂಭವಾಗಿ ಬೆಳೆದು ಬಂದ ಈ ದೇಶದಲ್ಲಿ ಗೋವು ಇದರ ಮುಖ್ಯ ಪಾತ್ರ ವಹಿಸಿತು. ಭೂಮಿಯನ್ನು ಉಳಲು, ಮಣ್ಣಿನ ಫಲವತ್ತೆತೆಯನ್ನ ಹೆಚ್ಚಿಸುವ ಗಂಜಲಿನಿಂದಲೂ, ನಮ್ಮ ಆಹಾರದಲ್ಲಿ ವಿಶೇಷ ಪ್ರಾಮುಖ್ಯತೆ ಹೊಂದಿರುವ ಹಾಲಿನ ರೂಪದಲ್ಲೂ ತನ್ನ ವಿವಿಧ ವಿಶೇಷಗಳಿಂದ ಕಾಮಧೇನುವಾಗಿ ದೇಶವನ್ನ ಸಂಪಧ್ಬರಿತಗೊಳಿಸಿದೆ.

ಇಂದಿನ ದಿನಮಾನಗಳಲ್ಲಿ ಹಸುಗಳನ್ನ ಸಾಕುವವರ ಸಂಖ್ಯೆ ಗಣನೀಯವಾಗಿ ಕಡಿಮೆ ಆಗಿದೆ. ದೈನಂದಿನ ಆರೈಕೆ, ಮೇವು, ಔಷಧ ಎಲ್ಲವುಗಳ ಬೆಲೆ ಏರಿರುವಾಗ ಅವುಗಳನ್ನ ಸಾಕುವುದು ಕಷ್ಟವು ಹೌದು. ಇಂತಹ ಸಂದರ್ಭದಲ್ಲಿ ದೈರ್ಯಮಾಡಿ ಸಾಕುತ್ತಿರುವ ರೈತರ ಬೆನ್ನಿಗಿರಬೇಕಾಗಿದ್ದ ನಮ್ಮ ಸರಕಾರ ಇವುಗಳನ್ನ ನಿರ್ಲಕ್ಷಿಸುತ್ತಿರುವುದು ಖಂಡನೀಯ. ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದೆ. ಚಾಮರಾಜ ನಗರದಂತ ಜಿಲ್ಲೆಗಳಲ್ಲಿ ಕುಡಿಯುವ ನೀರಿಗೂ ತುಟ್ಟಿಯಾಗಿ ರೈತರು ಹಸುಗಳೊಂದಿಗೆ ಗುಳೆ ಹೊರಟಿದ್ದಾರೆ. ಈ ರೈತರ ಆಕ್ರಂದನ ನಿಮಗೆ ಕೇಳುವುದಿಲ್ಲವೇ ಮುಖ್ಯಮಂತ್ರಿಗಳೆ? “ನಾನು ಗೋಮಾಂಸ ತಿಂತೀನಿ ಏನಿವಾಗ?” ಹೇಳುವ ನೀವು, ನಿಮ್ಮಂತೆ ಅದರನ್ನ ತಿನ್ನುವವರಿಗೆ ರಿಯಾಯತಿ ಬೆಲೆಯಲ್ಲಿ ಸಿಗಲಿ ಎನ್ನುವ ದೃಷ್ಟಿಯಲ್ಲಿ ಸುಮ್ಮನಿದ್ದಿರೋ್?

ರಾಜ್ಯದ ಮುಖ್ಯಮಂತ್ರಿಗಳು ನೀವು, ಈ ಜವಾಬ್ದಾರಿ ಹೊಂದಿರತಕ್ಕವರು ರಾಜ್ಯದ ಪ್ರತಿ ಜೀವಜಂತುಗಳ ಆಗು-ಹೋಗಿಗೆ ಭಾದ್ಯಸ್ಥರಗಿರುತ್ತೀರಿ. ಇಂತಹ ಪರಿಸ್ಥಿತಿಯಲ್ಲಿ ಯಕ್ಕಶ್ಚಿತ್ ಗಮನವನ್ನು ನೀವು ನೀಡಿಲ್ಲ. ಪವಿತ್ರವಾದ ಗೋವನ್ನ ಸಮಾಜದಲ್ಲಿ ಮಂಗಲಮಾಡ ಹೊರಟ ಸ್ವಾಮಿಜಗಳು ಅವುಗಳ ಸ್ಥಿತಿ ನೋಡಲು ಸಾಧ್ಯವಾಗದೆ ಅವುಗಳಿಗೆ ಮೇವನ್ನ ಕೊಡಲಿಕ್ಕೆ ಮುಂದಾಗುತ್ತಾರೆ. ಇಲ್ಲಿಯವರೆಗೆ 500 ಟನ್’ಗೂ ಹೆಚ್ಚು ಮೇವನ್ನ ಪೂರೈಸಿದ್ದಾರೆ. ಪೂಜ್ಯ ಸಿದ್ದಗಂಗಾ ಮಠದ ಸ್ವಾಮಿಜಿಗಳ ಹುಟ್ಟುಹಬ್ಬದ ಪ್ರಯುಕ್ತ 110 ಟನ್ ಮೇವನ್ನು ನೀಡಿ, ಆ ಹಿರಿ ಜೀವದ ಹೆಸರಲ್ಲಿ ಸಾವಿರಾರು ಗೋವನ್ನು ಉಳಿಸಿದ್ದು ಶ್ರೀ ರಾಘವೇಶ್ವರ ಸ್ವಾಮಿಜಿಗಳು. ವರನಟ ರಾಜಕುಮಾರ ಅವರ 88 ನೆ ಹುಟ್ಟುಹಬ್ಬದ ಪ್ರಯುಕ್ತ ಅವರ ಕುಟುಂಬದವರಿಗೆ ಪ್ರೇರೇಪಣೆ ನೀಡಿ ಗೋವುಗಳಿಗೆ ಮೇವು ನೀಡಿ ಸಹಕಸಿದ್ದಾರೆ. ಆ ಮಠದ ಎಷ್ಟೋ ಭಕ್ತಾದಿಗಳು ತಮ್ಮ ಒಡವೆಗಳನ್ನೇ ಗೋವಿಗಾಗಿ ಸಮರ್ಪಿಸಿ ಪೂನಿತರಾಗಿದ್ದರೆ. ನಮ್ಮ ರಾಜ್ಯದಲ್ಲಿ ಕೆಲವೇ ಇಲಾಖೆ ಹೊರತು ಪಡಿಸಿ ಪ್ರತಿ ಸರಕಾರದಂತೆ ಕಾಣುವ, ಶಿಕ್ಷಣ ಕ್ಷೇತ್ರದಲ್ಲಿ, ಔದ್ಯೋಗಿಕ ಸೃಷ್ಟಿಯಲ್ಲಿ, ಆರೋಗ್ಯ ಕಾಪಾಡುವಲ್ಲಿ, ಹಸಿವನ್ನ ನೀಗಿಸುವಲ್ಲಿ, ಧರ್ಮ ಜಾಗೃತಿ ಮಾಡುವಲ್ಲಿ ತನ್ನದೇ ಆದ ಛಾಪು ಮೂಡಿಸಿದ ಶ್ರೀ ಕ್ಷೇತ್ರ ಧರ್ಮಸ್ಥಳದವರು ಗೋರಕ್ಷಣೆಗೆ ಮುಂದಾಗಿದ್ದಾರೆ. ಪ್ರಜೆಗಳು ಸರ್ಕಾರದಿಂದ ಏನನ್ನು ನಿರೀಕ್ಷಿಸದೆ ಆವರ ಕಷ್ಟಕ್ಕೂ ಓಗೊಡದ ಸರ್ಕಾರ ಇದ್ದು ಏನು ಪ್ರಯೋಜನ.

ಉತ್ತಮ ಆರೋಗ್ಯಕ್ಕಾಗಿ ಸಾವಯವ ಕೃಷಿಯ ಉತ್ಪನ್ನ ಸೇವಿಸಿ ಎಂದು ಪ್ರತಿ ಒಬ್ಬ ವೈದ್ಯರು ಹೇಳುತ್ತಾರೆ. ಮುಗಿಲು ಮುಟ್ಟಿರುವ ಬೆಲೆಯ ಸಾವಯವ ಪದಾರ್ಥ ಸಾಮಾನ್ಯನ ಕೈಗೆ ಹೇಗೆ ಸಿಗಲು ಸಾಧ್ಯ. ಸಾವಯವ ಕೃಷಿಯಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಕ್ಕುವ ರಾಷ್ಟ್ರ ನಾವಾಗಬೇಕು ಎನ್ನುವ ಹಂಬಲದಲ್ಲಿ ನಮ್ಮ ಪ್ರಧಾನಿಗಳಿದ್ದಾರೆ. ಇವೆಲ್ಲಕ್ಕೂ ಪೂರಕವಾದ ಗೋವನ್ನ ಉಳಿಸುವ ಕಾರ್ಯವನ್ನು ಹಲವಾರು ರಾಜ್ಯ ಸರ್ಕಾರ ಕೈಗೊಂಡರು ನಮ್ಮ ರಾಜ್ಯದಲ್ಲಿ ತದ್ ವಿರುದ್ದವಾದ ಪರಿಸ್ಥಿಯನ್ನು ನಾವು ನೋಡುತ್ತಿದ್ದೇವೆ. ಗೋವನ್ನು ಉಳಿಸುವ ನಿಟ್ಟಿನಲ್ಲಿ ಯಾಕೆ ಒಂದು ಸರಿಯಾದ ಕ್ರಮ ಕೈಗೊಳ್ಳುತ್ತಾ ಇಲ್ಲ ಮಹನೀಯರೇ?

ವಾಲ್ಮೀಕಿ, ಅಂಬೇಡ್ಕರ್ ಅವರುಗಳು ಕೇವಲ ಜಯಂತಿ ಆಚರಿಸುವುದಕ್ಕಷ್ಟೇ ಸೀಮಿತವಾದರೆ? ಅವರುಗಳು ನಮ್ಮ ಸಂಸ್ಕೃತಿ ಬಗ್ಗೆ, ಗೋವಿನ ಬಗ್ಗೆ ಅತ್ಯಂತ ಶ್ರೇಷ್ಠ ಆದರ್ಶಗಳನ್ನ ಹೊಂದಿದ್ದವರು . ಅವರ ತತ್ವಗಳ, ಮೌಲ್ಯಗಳ ಆಚರಣೆ ಕೊನೆಗಿರಲಿ ನೀವು ಮಾತಿನಲ್ಲೂ ಸಹ ಚಕಾರ ಎತ್ತುವುದಿಲ್ಲವಲ್ಲ. ‘ಅಂಬೇಡ್ಕರ್ ಅವರ ಸಮಗ್ರ ಬರಹಗಳು ಮತ್ತು ಭಾಷಣಗಳು’ ಎಂಬ ಸಂಪುಟ 12 ಭಾಗ ಒಂದರಲ್ಲಿ ಅವರು ಪ್ರಸ್ತಾಪಿಸುವಂತೆ “ಆಕಳ ಬಗ್ಗೆ ಭಾರತೀಯರಿಗಿರುವ ಭಕ್ತಿಯು ಬಹುತೇಕ ವಿದೇಶಿಗರಿಗೆ ಒಂದು ಒಗಟಾಗಿದೆ. ಹಿಂದುಗಳನ್ನು ವಂಚಿಸುವ ಸಲುವಾಗಿ ಭಾರತಕ್ಕೆ ಬಂದು ಧಾರ್ಮಿಕ ಪ್ರಚಾರ ಕೈಗೊಳ್ಳುವ ವಿದೇಶಿ ಅರೆಬೆಂದ ಮತಶಾಸ್ತ್ರಗಳು ವಿಫಲಗೊಂಡವು. ಅವುಗಳು ವಿಫಲತೆಗೆ ತಾತ್ವಿಕ ನೆಲೆಗಟ್ಟಾಗಿದೆ”.
ಇನ್ನೂ ಮುಂದುವರೆದು “ಭಾರತದಲ್ಲಿ ಎಲ್ಲಾ ಜಾನುವಾರುಗಳು ರೈತನ ಆತ್ಮವೇ ಆಗಿರುತ್ತದೆ. ನಾವು ಮಾಂಸಕ್ಕಾಗಿ ಆಕಳನ್ನ ಕೊಂದರೆ ನಮ್ಮ ಕೃಷಿ ಅಭ್ಯುದಯ ಗಂಡಾಂತರ ಸಿಲುಕಿದಂತಾಗುತ್ತದೆ. ಅದಕ್ಕಾಗಿ ಪ್ರಾಚಿನ ಹಿಂದುಗಳು ಗೋವನ್ನು ಪವಿತ್ರ ಎಂದು ತಿಳಿದು ಗೋಹತ್ಯೆ ನಿಷೇಧಿಸಿದರು” ಎಂದು ಹೇಳಿದ್ದಾರೆ. ಅಹಿಂಸೆಯ ತತ್ವಕ್ಕೆ ಶರಣಾಗಿ ಭೌದ್ಧ ಧರ್ಮ ಸ್ವೀಕರಿಸಿದ ಅಂಬೇಡ್ಕರ್ ದಿನಾಚರಣೆಯನ್ನ ರಾಜ್ಯದ ಕೆಲವೆಡೆ ಮಾಂಸ ತಿನ್ನುವುದರ ಮೂಲಕ ಆಚರಿಸುತ್ತಾರೆ ಎಂದರೆ ಅದು ಇಂದಿನ ಕಾಲಘಟ್ಟದ ಮತ್ತು ಈ ಶತಮಾನದ ಪರಮ ದುಸ್ಥಿತಿ .

ಮಾಂಸಾಹಾರವೇ ಸಾಮಾನ್ಯವಾದ ಇಂಗ್ಲೆಂಡ್ ಅಂತ ದೇಶಗಳು ‘ವೇಗನ್’ ಸಂಸ್ಕೃತಿ ಹುಟ್ಟು ಹಾಕುತ್ತಿದ್ದಾರೆ. ಮಾತೆತ್ತಿದರೆ ಗಾಂಧೀಜಿಯ ಅಹಿಂಸೆ ಮಾತನಾಡುವ ನೀವು ಮಾಂಸಾಹಾರಕ್ಕೆ ಪ್ರೋತ್ಸಾಹ ನೀಡುತ್ತಿದ್ದೀರಿ. ಕರ್ನಾಟಕದ ಹಾಲಿನ ಉತ್ಪನ್ನವನ್ನ ಮುಂಬೈಗೂ ವಿಸ್ತರಿಸುತ್ತೇವೆ ಎನ್ನುವ ತವಕದಲ್ಲಿ ನೀವಿದ್ದೀರಿ, ಗೋವುಗಳಿಲ್ಲದೆ ಹಾಲು ತಯಾರು ಮಾಡುವ ಯಂತ್ರ ಕಂಡು ಹಿಡಿದಿದ್ದಿರೋ ಹೇಗೆ? ಎಲ್ಲಾ ಮುಗಿದಮೇಲೆ ಸಾಲಮನ್ನಾ ಮಾಡುವ ಅವಶ್ಯಕತೆ ಇಲ್ಲ. ತತ್ ಕ್ಷಣದಲ್ಲಿ ಸಹಾಯ ಮಾಡುವ ಮುಖ್ಯಮಂತ್ರಿಯ ಹಂಬಲದಲ್ಲಿದ್ದಾರೆ ರೈತರು. ಮಲೆಮಹದೇಶ್ವರ ಬೆಟ್ಟದ ತಪ್ಪಲಿನ ೨೦೦೦೦ ಜಾನುವಾರುಗಳ ಮತ್ತು ರಾಜ್ಯದ ಸಂಕಷ್ಟದಲ್ಲಿರುವ ಗೋಸಂಪತ್ತಿನ ಉಳಿವಿಗಾಗಿ ಮುಂದಾಗಿ.

ಕೃಷ್ಣಮೂರ್ತಿ ಭಟ್

Facebook ಕಾಮೆಂಟ್ಸ್

Guest Author: Joining hands in the journey of Readoo.in, the guest authors will render you stories on anything under the sun.
Related Post