X

೦೪೮. ಒಂದು ಮುಷ್ಠಿ ತ್ರಾಸು, ಸಮಷ್ಟಿ ಬೆರೆತರೆ ಲೇಸು..!

ಒಂದಿಹುದುಪಾಯವೋರೊರ್ವನರೆಗಣ್ಣುಗಳು |

ಮೊಂದೊಂದು ಸತ್ಯಾಂಶಕಿರಣಗಳ ಪಿಡಿದು ||

ಒಂದುಗೂಡಿದೊಡವರ್ಗಳರಿವನೆಲ್ಲವನಾಗ |

ಮುಂದು ಸಾಗುವೆವಿನಿತು – ಮಂಕುತಿಮ್ಮ || ೦೪೮ ||

ಈ ಪದ್ಯವು ಹಿಂದಿನ ಪದ್ಯದ ಮುಂದಿನ ಭಾಗವೆನ್ನಬಹುದು. ಅಲ್ಲಿ ಅರೆಗಣ್ಣಿನ ಪ್ರಸ್ತಾಪವಾಗಿ ಅದರಿಂದಾದ ಕುಂದು ಕೊರತೆಯನ್ನು ಎತ್ತಿ ತೋರಿಸುವ ಪ್ರಧಾನ ಆಶಯವಾಗಿದ್ದರೆ, ಇಲ್ಲಿ ಮನುಜ ಕುಲ ಅದನ್ನು ಹೇಗೆ ನಿವಾರಿಸಿಕೊಳ್ಳಬಹುದೆಂಬ ಮಾರ್ಗೋಪಾಯವನ್ನು ಸೂಚಿಸುತ್ತದೆ.

ವಿವರಣೆಯ ಆಳಕ್ಕಿಳಿವ ಮೊದಲು ಗಮನಿಸಬೇಕಾದ ಒಂದು ಮುಖ್ಯಾಂಶವೆಂದರೆ – ನಾವೀ ಆಧುನಿಕ ದಿನಗಳಲ್ಲಿ, ಜಾಗತಿಕ ಪರಿಸರ, ಒತ್ತಡಗಳ ನಡುವೆ ಪದೇಪದೇ ಹೇಳುವ, ಪೋಷಿಸುವ ‘ಟೀಮ್ವರ್ಕ್’ ಸಿದ್ದಾಂತ ಈ ಪದ್ಯದಲ್ಲಾಗಲೆ ಅಡಕವಾಗಿರುವುದು. ಆ ಸಮಷ್ಟಿ ಬಲದ ಕುರಿತು ಸೂಚ್ಯವಾಗಿ ತೋರುತ್ತಲೆ, ಅರೆಗಣ್ಣಿರುವುದು ನಿಜವಾದರು ಎಲ್ಲರ ಕುರುಡು ಒಂದೇ ರೀತಿಯದು ಎಂದು ಹೇಳುವಂತಿಲ್ಲವಲ್ಲ ? ಎಲ್ಲರ ದೋಷವೂ ಒಂದೆ ರೀತಿಯದೆನ್ನಲು ಸಾಧ್ಯವಿಲ್ಲವಲ್ಲ ? ಒಬ್ಬನ ದೋಷ ಮತ್ತೊಬ್ಬನ ಬಲವೂ ಆಗಿರಬಹುದಲ್ಲ?

ಆದ ಕಾರಣ ಅರೆಗಣ್ಣು, ಅರೆಬೆಳಕೆಂದು ಕೊರಗುತ್ತ ಕೂರುವ ಬದಲು ಮತ್ತೊಂದು ಉಪಾಯ ಮಾಡಬಹುದು – ಅರೆಗಣ್ಣಿರುವ ಪ್ರತಿಯೊಬ್ಬರು ತಂತಮ್ಮ ಅರೆಗಣ್ಣಿನ ನೆರವಿನಲ್ಲೆ ಒಂದೊಂದು ಸತ್ಯಾಂಶದ ಸುಳಿವು ನೀಡುವ ಬೆಳಕಿನ ಕಿರಣಗಳನ್ನು ಹಿಡಿದು ಅನ್ವೇಷಣೆಗೆ ಹೊರಡಲಿ. ಹೀಗೆ ಪ್ರತಿಯೊಬ್ಬರು ಬೇರೆಬೇರೆಯಾದ ತಂತಮ್ಮ ನೋಟಕ್ಕೆ ನಿಲುಕುವ ಹಲವಾರು ಸುಳಿವುಗಳನ್ನು ಎಲ್ಲಾಕಡೆಯಿಂದ ಮುತ್ತತೊಡಗಿದರೆ ಆ ರಹಸ್ಯದ ತುಣುಕುಗಳೊಂದೊಂದಾಗಿ ಅನಾವರಣವಾಗತೊಡಗುವುದಲ್ಲವೆ ? ಆ ಯತ್ನದಲ್ಲಿ ಯಶಸ್ಸು ಕಂಡ ಅರಿವು, ಜ್ಞಾನಗಳನ್ನೆಲ್ಲ ಒಟ್ಟುಗೂಡಿಸಿದರೆ ಅದರ ಸಮಗ್ರ ನೋಟದ ಇಣುಕು ನೋಟ ಸಿಕ್ಕು, ಈಗಿನಂತೆ ಒಬ್ಬಂಟಿ ಗೊಂದಲದಲ್ಲಿ ಒದ್ದಾಡುವ ಬದಲು ಅಷ್ಟಿಷ್ಟಾದರು ಮುಂದೆ ಸಾಗುವ ಸಾಧ್ಯತೆಯಾದರೂ ಇರುತ್ತದೆ. ಆ ಪ್ರಕ್ರಿಯೆ ಹಾಗೆಯೆ ಮುಂದುವರೆದರೆ ಮುಂದೊಮ್ಮೆ ಒಟ್ಟು ರಹಸ್ಯವೂ ಪೂರ್ತಿಯಾಗಿ ಅನಾವರಣವಾಗಿಬಿಡಬಹುದಲ್ಲವೆ ?

ಇಲ್ಲಿ ಕವಿ ಮನಸು ಸದ್ಯದ ಅನ್ವೇಷಣೆಯಲ್ಲಿ ನೂರೆಂಟು ವಿಧದ ಯತ್ನಗಳು ನಡೆಯುತ್ತಿದ್ದರೂ, ಅದರ ಸಂಯೋಜಿತ, ಸಮಷ್ಟಿ ಯತ್ನವಿಲ್ಲದೆ ಅವೆಲ್ಲವು ವ್ಯರ್ಥವಾಗುತ್ತಿರುವುದನ್ನು ಗಮನಿಸಿದೆ. ಹಾಗೆಯೆ ಅರಿಯಬೇಕಾದ ಉತ್ತರವು ಇಲ್ಲೆ ಎಲ್ಲೊ ಅಡಗಿರಬೇಕೆಂಬ ದೂರದಾಸೆಯೂ ಇದೆ. ಬರೆದ ಆ ಕಾಲಮಾನದಲ್ಲೂ ಎಲ್ಲವನ್ನು ಸಮಗ್ರವಾಗಿ ಸಮಷ್ಟಿಸುವ ಕೊರತೆಯಿರುವುದನ್ನು ಮನಗಂಡಿದೆ. ಸಮೂಹ ಯತ್ನದಲ್ಲಿ ಅಂತಿಮ ಫಲಿತ ಸಿಗುವುದೊ, ಬಿಡುವುದೊ ಕನಿಷ್ಠ ಈಗಿರುವುದಕ್ಕಿಂತ ಉತ್ತಮ ಫಲಿತವಾದರು ಸಿಗುವುದೆಂಬ ಆಶಯ ಇಲ್ಲಿ ವ್ಯಕ್ತವಾಗಿದೆ.

#ಕಗ್ಗಕೊಂದು-ಹಗ್ಗ

#ಕಗ್ಗ-ಟಿಪ್ಪಣಿ

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post