X

ಆಧ್ಯಾತ್ಮ ರಾಮಾಯಣ-೨

ಹಿಂದಿನ ಭಾಗ:

ಅಧ್ಯಾತ್ಮ-ರಾಮಾಯಣ-1

ಕಶ್ಯಪ ಪ್ರಜಾಪತಿ ದಶರಥನಾಗಿದ್ದು, ಅಯೋಧ್ಯೆಯ ಅತ್ಯಂತ ಶ್ರೇಷ್ಠ, ಶುದ್ಧ ಮನಸ್ಸಿನ ರಾಜ. ನ್ಯಾಯವೇ ಮೈದಳೆದಂತಿದ್ದ ದಶರಥ ಮಹಾರಾಜ ದೇವತೆಗಳ ವಂಶದಲ್ಲಿ ಹುಟ್ಟಿದವನಿಗೆ ಸಮನಾಗಿದ್ದ. ಪತ್ನಿಯರಾದ ಮಹಾರಾಣಿ ಕೌಸಲ್ಯೆ, ಸುಮಿತ್ರ, ಕೈಕೆ ಹಾಗೂ ರಾಜ್ಯದ ಮಂತ್ರಿಗಳ ಸಹಕಾರದಿಂದ ಇಡೀ ಭೂಮಂಡಲದಲ್ಲಿ ಸುಭಿಕ್ಷ ರಾಜ್ಯಭಾರ ನಡೆಸುತ್ತಿದ್ದ ದಶರಥ ಮಹಾರಾಜನಿಗೆ ಹಲವು ವರ್ಷಗಳ ನಂತರವೂ ಪುತ್ರಸಂತಾನ ಪ್ರಾಪ್ತಿಯಾಗಲಿಲ್ಲ. ಇದರಿಂದ ನೊಂದ ದಶರಥ ಹಾಗೂ ಮಹಾರಾಣಿಯರು ಗುರು ವಸಿಷ್ಠರ ಮೊರೆ ಹೊಕ್ಕು, ಪುತ್ರ ಸಂತಾನ ಪ್ರಾಪ್ತಿಗೆ ಮಾರ್ಗ ಸೂಚಿಸುವಂತೆ ಬೇಡುತ್ತಾರೆ.

ದಶರಥನ ದುಃಖವನ್ನು ಆಲಿಸಿದ ತಪಸ್ವಿಗಳಾದ ವಸಿಷ್ಠರು, ನಸುನಕ್ಕು, “ನಿನಗೆ ನಾಲ್ಕು ಜನ ಪುತ್ರರು ಜನ್ಮಿಸುತ್ತಾರೆ. ಓ ರಾಜ, ತಡ ಮಾಡದೇ ಋಷಿ ಋಷ್ಯಶೃಂಗರನ್ನು ಕರೆಸಿ ಪುತ್ರಕಾಮೇಷ್ಠಿಯಾಗ ನಡೆಸು ಎಂದು ಹೇಳುತ್ತಾರೆ.

ಸಂತಾನ ಪ್ರಾಪ್ತಿಗಾಗಿ ಪುತ್ರಕಾಮೇಷ್ಠಿ ಯಾಗ ;

ಗುರು ವಸಿಷ್ಠರ ಸೂಚನೆಯಂತೆ ದಶರಥನಿಗೆ ಋಷ್ಯಶೃಂಗರ ಅನುಗ್ರಹ ಪ್ರಾಪ್ತಿಯಾಗಿತ್ತು. ಸರಯೂ ನದಿಯ ತೀರದಲ್ಲಿ ಯಾಗ ಮಂಟಪ, ವೇದಿಕೆಗಳು ಸಿದ್ಧಗೊಂಡಿತ್ತು. ಋಷಿಗಳು ದಶರಥನ ಪುತ್ರನ ರೂಪದಲ್ಲಿ ಭೂಮಿಗೆ ಮಹಾವಿಷ್ಣುವಿನ ಆಗಮನಕ್ಕೆ ಪ್ರಾರ್ಥಿಸುತ್ತಾರೆ. ಋಷ್ಯಶೃಂಗರು ನಡೆಸಿದ ಯಾಗದ ಪೂರ್ಣಾಹುತಿಯ ನಂತರ ಎಲ್ಲಾ ಋಷಿಗಳೂ ಸಂತೃಪ್ತಗೊಂಡರು. ನಂತರ ಯಾಗದ ಕುಂಡದಿಂದ ಪಾಯಸದ ಗಡಿಗೆಯೊಂದಿಗೆ ಅಗ್ನಿದೇವರು ಪ್ರತ್ಯಕ್ಷರಾಗುತ್ತಾರೆ. ದೇವತೆಗಳಿಂದ ಸಿದ್ಧಪಡಿಸಲಾಗಿದ್ದ ಪಾಯಸವನ್ನು ದಶರಥ ಮಹಾರಾಜರಿಗೆ ನೀಡಿ ಅಗ್ನಿ ದೇವರು ಅದೃಷ್ಯಗೊಂಡರು. ತಕ್ಷಣವೇ ಅಗ್ನಿ ದೇವನಿಂದ ಪ್ರಾಪ್ತವಾದ ಪಾಯಸವನ್ನು ದಶರಥ ಕೌಸಲ್ಯೆಗೆ ಅರ್ಧ, ಕೈಕೆಗೆ ಅರ್ಧ ನೀಡಿದರು. ಕೌಸಲ್ಯೆ ಹಾಗೂ ಕೈಕೆ ತಮ್ಮ ಭಾಗದ ಪಾಯಸದಲ್ಲಿ ಅರ್ಧದಷ್ಟನ್ನು ಸುಮಿತ್ರೆಗೆ ನೀಡಿದರು.

ಪುತ್ರಕಾಮೇಷ್ಟಿ ಯಾಗದ ನಂತರವೂ ಪತ್ನಿಯರ ಗರ್ಭವನ್ನು ರಕ್ಷಿಸುವುದಕ್ಕೆ ದಶರಥ ನಿರಂತರವಾದ ಯಾಗಗಳನ್ನು ನಡೆಸಿದ. ಪುಂಸವನ ಸೇರಿದಂತೆ ಗರ್ಭ ಸಂಸ್ಕಾರಗಳನ್ನು ನಡೆಸಿದ. ಪುನರ್ವಸು ನಕ್ಷತ್ರ, ನವಮಿ ತಿಥಿ, ಕರ್ಕಾಟಕ ಲಗ್ನ. ಕೌಸಲ್ಯಾ ನಂದನ ರಾಮನಾಗಿ ಮಹಾವಿಷ್ಣು ಭೂಮಿಯಲ್ಲಿ ಅವತರಿಸಿದಾಗ 5 ಗ್ರಹಗಳು ಉಚ್ಚಸ್ಥಾನಗಳಲ್ಲಿದ್ದವು. ಸೂರ್ಯ ಉಚ್ಚಸ್ಥಾನದಲ್ಲಿ, ತುಲಾದಲ್ಲಿ ಶನಿ, ಮೀನದಲ್ಲಿ ಶುಕ್ರ, ಅತ್ಯಂತ ಶ್ರೇಷ್ಠ ಜಾತಕ. ಭೂಮಿಯಲ್ಲಿ ರಾಮರ ಜನನವಾಗುತ್ತಿದ್ದಂತೆ ದೇವತೆಗಳಿಂದ ಪುಷ್ಪವೃಷ್ಠಿ… ಅದೇ ದಿನದಂದು ಲಕ್ಷ್ಮಣ, ಭರತ, ಶತೃಘ್ನರ ಜನನ.

 

(ಮುಂದುವರೆಯುವುದು)

Facebook ಕಾಮೆಂಟ್ಸ್

ಶ್ರೀರಾಮದಾಸ ಮನೀಶ್: ಶ್ರೀರಾಮದಾಸರೆಂದೇ ಪ್ರಸಿದ್ಧರಾಗಿರುವ ಡಾ.ಮನೀಷ್ ಮೋಕ್ಷಗುಂಡಂ, ಪಿಹೆಚ್ ಡಿ, ಶ್ರೀರಾಮನ ದಾಸತ್ವವೇ ತಮ್ಮ ಗುರುತು ಎಂದು ಸಾರಿದ್ದು, ಧ್ಯಾನ ಗುರು, ಆಧ್ಯಾತ್ಮಿಕ ಬೋಧಕ, ಪತ್ರಕರ್ತ, ವಿಶ್ಲೇಷಕ, ಜೀವನ ಮತ್ತು ನಾಯಕತ್ವದ ಕೋಚ್ , ಚಿತ್ರ ನಿರ್ಮಾಪಕ, ನಿರ್ದೇಶಕ, ಮಾಧ್ಯಮ ಲಹೆಗಾರ, ತಂದೆ,ಪತಿ, ಶಿಕ್ಷಕ ಮುಂತಾದವು ತಾವು ನಿರ್ವಹಿಸುವ ಪಾತ್ರಗಳಷ್ಟೇ ಎಂದು ನಂಬಿದ್ದಾರೆ.