X

ಅದ್ಭುತ ಕಲಾಕೃತಿ, ಅರ್ಥವಾಗದ ರೀತಿ !

ಮಂಕುತಿಮ್ಮನ ಕಗ್ಗ – ಟಿಪ್ಪಣಿ ೩೫.

ಇರಬಹುದು ; ಚಿರಕಾಲ ಬೊಮ್ಮ ಚಿಂತಿಸೆ ದುಡಿದು |
ನಿರವಿಸಿಹ ವಿಶ್ವ ಚಿತ್ರವ ಮರ್ತ್ಯನರನು ||
ಅರಿತೆ ನಾನೆನ್ನುವಂತಾಗೆ ಕೃತಿ ಕೌಶಲದ |
ಹಿರಿಮೆಗದುಕುಂದಲ್ತೆ ? – ಮಂಕುತಿಮ್ಮ || ೩೫ ||

ಸೃಷ್ಟಿ ರಹಸ್ಯದ ಕುರಿತಾದ ಶೋಧ, ಜಿಜ್ಞಾಸೆಗಳೆಲ್ಲ ವ್ಯರ್ಥ, ಹತಾಶ ಪ್ರಯತ್ನವೆನಿಸಿ ಆ ವಿಷಯವನ್ನು ಕೈ ಬಿಟ್ಟು ಬಿಡುವುದೇ ಸರಿ ಎಂದು ಎಷ್ಟು ಬಾರಿ ಅಂದುಕೊಂಡಿತ್ತೋ ಶೋಧಕ, ಚಿಕಿತ್ಸಕ ಕವಿ ಮನ.. ಆದರೆ ಕೊರೆಯುತ್ತಿರುವ ವಿಷಯ ಮನದಿಂದ ಅಷ್ಟು ಸುಲಭದಲ್ಲಿ ದೂರಾಗುವುದಿಲ್ಲವಲ್ಲ? ಅಂದುಕೊಂಡರು, ಅದೇನು ಅಷ್ಟು ಸುಲಭದಲ್ಲಿ ಮನದಿಂದ ತೊಲಗುವ ಕ್ಷುಲ್ಲಕ ವಿಷಯವೇ ?

ಹಿಂದಿನ ಪದ್ಯದಲ್ಲಿ ‘ಇನ್ನು ಆ ಚಿಂತನೆ ಸಾಕು’ ಎಂದು ಬೇಸತ್ತು ಕೈತೊಳೆದುಕೊಂಡಂತೆ ಕಂಡರೂ, ಬಿಡದೆ ಕಾಡುವ ಆಲೋಚನೆ ಹೊಸರೂಪದ ಚಿಂತನೆಯಾಗಿ ಆವರಿಸಿಕೊಳ್ಳುತ್ತದೆ. ನಿರಾಳವಾಗಿರಲು ಬಿಡದಲೆ ಬಂದು ಬಂದೂ ಮುತ್ತುತ್ತಲೆ ಇರುತ್ತದೆ ; ಈ ಬಾರಿ, ‘ಆ ಪರಬ್ರಹ್ಮ ಅದೇಕೆ ಈ ಗುಟ್ಟನ್ನು ಬಿಟ್ಟುಕೊಡಲು ಇಷ್ಟು ಸತಾಯಿಸುತ್ತಿರುವಾ?’ ಎಂಬ ಮತ್ತೊಂದು ದಿಕ್ಕಿನ ಆಲೋಚನೆಯಲ್ಲಿ ಮಥನ ನಡೆಸುತ್ತ.

ಹಾಗೆ ಆಲೋಚಿಸುವಾಗ ಕವಿಗನಿಸಿದ್ದು ಹೀಗೆ – ಇಷ್ಟು ಸಂಕೀರ್ಣ ಸೃಷ್ಟಿಯನ್ನು ಕೇವಲ ಅರ್ಥಮಾಡಿಕೊಳ್ಳಲೆ ನಾವಿಷ್ಟು ಪರದಾಡಿ, ಹೆಣಗಾಡುತ್ತಿರಬೇಕಾದರೆ ಅದನ್ನು ಅಮೂರ್ತದಲಿ ಚಿಂತಿಸಿ, ಆಲೋಚಿಸಿ, ಕಲ್ಪನಾ ಶಕ್ತಿಗೆ ಸೃಜನಶೀಲತೆಯನ್ನು ಬೆರೆಸಿ ಈ ಸೃಷ್ಟಿಯೆಂಬ ಅಸ್ಥಿತ್ವಕ್ಕೆ ಜೀವಂತ ಮತ್ತು ಮೂರ್ತರೂಪು ನೀಡಲು ಆ ಪರಬ್ರಹ್ಮನೂ ತನ್ನಲ್ಲೆ ಅದೆಷ್ಟು ಚಿಂತನೆ ನಡೆಸಿರಬೇಕು? ಹಗಲಿರುಳೆನ್ನದೆ ದುಡಿದು ಅದೆಷ್ಟು ವಿವಿಧ ಸಂಯೋಜನೆ ವಿಕಲ್ಪಗಳನ್ನೆಲ್ಲ ಸಮೀಕರಿಸಿ ಕೊನೆಗೆ ಈ ಅಂತಿಮ ರೂಪದ ತೀರ್ಮಾನಕ್ಕೆ ಬಂದಿರಬೇಕು? ಹಾಗೊಂದು ಪೂರ್ಣತೆಯ ಹಂತ ತಲುಪಲು ಅದೆಷ್ಟು ಕಾಲ ಹಿಡಿದಿದೆಯೊ, ಅದೆಷ್ಟು ಪ್ರಯೋಗ ಚಕ್ರಗಳು ಸವೆದಿವೆಯೊ?

ಅಂತೂ ಅಷ್ಟೆಲ್ಲಾ ಶ್ರಮಿಸಿ, ಪ್ರಸವಿಸಿದ ಈ ಜಗದ ‘ಅಂತಿಮ ಕಾರ್ಯನಿರತ ತಂತ್ರ’ದ ಗುಟ್ಟನ್ನು ಕೇವಲ ನಶ್ವರ ದೇಹದ, ಮರಣದಿಂದಂತ್ಯ ಕಾಣುವ ಹುಲು ಮನುಜ – ಸಾಮಾನ್ಯ ನರನು (ಮರ್ತ್ಯ ನರ), ಸುಲಭದಲ್ಲಿ ಚಿಟಕಿ ಹೊಡೆದಂತೆ ಬಿಡಿಸಿ ಅರ್ಥ ಮಾಡಿಕೊಂಡುಬಿಟ್ಟನೆಂದರೆ, ಅಂತಹ ಅದ್ಭುತ ಕಲಾಕೃತಿಯನ್ನು ಸೃಜಿಸಿದ ಪರಬ್ರಹ್ಮದ ಕೃತಿ ಕೌಶಲ್ಯದ ಹಿರಿಮೆಗೆ ಕುಂದಲ್ಲವೆ? ಕೇವಲ ಸಾಧಾರಣ ನರಮನುಷ್ಯನೊಬ್ಬ ಬಿಡಿಸಿಬಿಟ್ಟ ಸೃಷ್ಟಿ ರಹಸ್ಯವೆಂದು ಅಪಹಾಸ್ಯಕ್ಕೊಳಗಾದಂತಾಗುವುದಿಲ್ಲವೆ? ಬಹುಶಃ ಹಾಗಾಗುವುದೆಂಬ ಅಳುಕಿನಿಂದಲೆ ಆ ಪರಬ್ರಹ್ಮನು ಯಾರಿಗೂ ಈ ಗುಟ್ಟನರಿಯಲು ಬಿಡುತ್ತಿಲ್ಲ…! ಅರಿಯಲೆತ್ನಿಸಿದವರಿಗು ಶಂಕೆಯ ಮೇಲೆ ಶಂಕೆ ಅನುಮಾನಗಳನ್ನುಟ್ಟಿಸಿ ದಾರಿ ತಪ್ಪಿಸಿ, ಅವರು ಸದಾ ಅಜ್ಞಾನದ ಕತ್ತಲಿನಲ್ಲಿಯೆ ಇರುವಂತೆ ಮಾಡಿ ದಾರಿ ತಪ್ಪಿಸುತ್ತಿದ್ದಾನೆ – ತನ್ನ ಮುಕುಟಪ್ರಾಯ ರಚನೆಯಾದ ಸೃಷ್ಟಿಯ ಗುಟ್ಟನ್ನು ಯಾರೂ ಒಡೆಯಲಾಗದಂತೆ.

ಒಟ್ಟಾರೆ ಅಪೂರ್ವ ಚಿತ್ರಕಾರನೊಬ್ಬನು ಸೃಜಿಸಿದ ಅಪರೂಪದ ಕೃತಿಯನ್ನು ಹೇಗೆ ಎಲ್ಲರು ಪೂರ್ತಿ ಅರಿತುಕೊಳ್ಳಲು ಸಾಧ್ಯವಿಲ್ಲವೊ ಹಾಗೆಯೇ ಇದೆ ಈ ಸೃಷ್ಟಿಯ ವಿಚಾರ. ಕೃತಿಯ ಸಂಕೀರ್ಣತೆ, ಅಗಾಧತೆ, ಅದ್ಭುತತೆಯನ್ನು ಅರೆಬರೆ ಅರಿತೇ ಅನುಭವಿಸುವ ಪಾಡು ನಮ್ಮದು. ಹಾಗಿರುವುದರಿಂದಲೇ, ಅದು ಆ ಕಲಾಕಾರನ ಅರ್ಥವಾಗದ ಕೃತಿಯಂತೆ ಕಂಡು, ಅದರ ಮೌಲ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಸುಲಭದಲ್ಲಿ ಎಟುಕುವಂತಿದ್ದರೆ, ಅದರ ಮೌಲ್ಯವನ್ನೆ ಕೀಳು ಮಟ್ಟದ್ದೆನ್ನುವ ತೀರ್ಮಾನಕ್ಕೆ ಬರುವ ಜನಗಳ ಮಧ್ಯೆ ಇದೇ ಸರಿಯಾದ ವಿಧಾನವಲ್ಲವೇ ? ಎಂಬ ಪ್ರಶ್ನೆಯೆತ್ತುತ್ತಾನೆ ಮಂಕುತಿಮ್ಮ. ಘನತೆಗೆ ತಕ್ಕ ಹಾಗೆ ಒಡೆಯಲಾಗದ ಒಡಪನ್ನಿಟ್ಟರೆ ಹೆಚ್ಚು ಸಮಂಜಸವೇ ಹೊರತು, ಸುಲಭದಲ್ಲಿ ಎಟುಕುವಂತೆ ಸುನಾಯಾಸ ವಾಗಿಸುವುದರಿಂದ ಅಲ್ಲ ಎಂಬ ಸಾರ ಇಲ್ಲಿನ ಮೂಲ ಆಶಯ.

Facebook ಕಾಮೆಂಟ್ಸ್

Nagesha MN: ನಾಗೇಶ ಮೈಸೂರು : ಓದಿದ್ದು ಇಂಜಿನಿಯರಿಂಗ್ , ವೃತ್ತಿ - ಬಹುರಾಷ್ಟ್ರೀಯ ಸಂಸ್ಥೆಯೊಂದರಲ್ಲಿ.  ಪ್ರವೃತ್ತಿ - ಪ್ರಾಜೆಕ್ಟ್ ಗಳ ಸಾಂಗತ್ಯದಲ್ಲೆ ಕನ್ನಡದಲ್ಲಿ ಕಥೆ, ಕವನ, ಲೇಖನ, ಹರಟೆ ಮುಂತಾಗಿ ಬರೆಯುವ ಹವ್ಯಾಸ - ಹೆಚ್ಚಾಗಿ 'ಮನದಿಂಗಿತಗಳ ಸ್ವಗತ' ಬ್ಲಾಗಿನ ಅಖಾಡದಲ್ಲಿ . 'ಥಿಯರಿ ಆಫ್ ಕನ್ಸ್ ಟ್ರೈಂಟ್ಸ್' ನೆಚ್ಚಿನ ಸಿದ್ದಾಂತಗಳಲ್ಲೊಂದು. ಮ್ಯಾನೇಜ್ಮೆಂಟ್ ಸಂಬಂಧಿ ವಿಷಯಗಳಲ್ಲಿ ಹೆಚ್ಚು ಆಸಕ್ತಿ. 'ಗುಬ್ಬಣ್ಣ' ಹೆಸರಿನ ಪಾತ್ರ ಸೃಜಿಸಿದ್ದು ಲಘು ಹರಟೆಗಳ ಉದ್ದೇಶಕ್ಕಾಗಿ. ವೈಜ್ಞಾನಿಕ, ಆಧ್ಯಾತ್ಮಿಕ ಮತ್ತು ಸೈದ್ದಾಂತಿಕ ವಿಷಯಗಳಲ್ಲಿ ಆಸ್ಥೆ. ಸದ್ಯದ ಠಿಕಾಣೆ ವಿದೇಶದಲ್ಲಿ. ಮಿಕ್ಕಂತೆ ಸರಳ, ಸಾಧಾರಣ ಕನ್ನಡಿಗ
Related Post