X

ಬೊಂಬೆ ಆಡ್ಸೋನೂ ಮ್ಯಾಲೆ ಕುಂತವ್ನೆ…

ಉಟ್ಟಿದ ಊರನು ಬಿಟ್ಟು ಬಂದಾ ಮ್ಯಾಲೆ.. ಅಂತ ಯೋಗ್ರಾಜು ಭಟ್ರ ಪರ್ಪಂಚ ಸಿನ್ಮಾ ಸಾಂಗ್ ಜೋರಾಗಿ ಹೇಳ್ತಾ ಪಟ್ಣಾ ಕಡೆ ಹೊಂಟಿದ್ದ ಕಲ್ಲೇಶಿನ ಮುರುಗನ್ “ವಸಿ ತಡೀಲಾ ಕಲ್ಲೇಶೀ, ಗ್ವಾಪಾಲಣ್ಣನ್ ಮಾತಾಡ್ಸ್ಬಿಟ್ಟು ಓಗೋಣಾ” ಅಂತ ಗೋಪಾಲಣ್ಣನ ಹಟ್ಟಿ ಮುಂದೆ ಕರ್ಕೊಂಡ್ ಬರತ್ತೆ.

ಏನಲಾ ಸಮಾಚಾರ ಮಿಸ್ಟರ್ ಕೋಳೀ ಅಂತ ಮಾತು ಆರಂಭಿಸ್ತು ಗೋಪಾಲಣ್ಣ.

ಏನೂಂತ ಹೇಳ್ಲೀ ಗ್ವಾಪಾಲಣ್ಣಿ.. “ಅವಯ್ಯ ದರ್ಸನ್ನ್ ಲಕ್ಕೇ ಚೆನ್ನಾಗಿಲ್ಲ. ಫಿಲಿಮ್ಮ್ ಮೇಲೆ ಫಿಲಿಮ್ಮ್ ಮಾಡ್ದ್ರೂ ಯಾವ್ದೂ ಹಿಟ್ಟೇ ಅಗ್ತಿಲ್ಲ. ಯಶ್ಶ್ ಫಿಲಿಮ್ಮ್ ಎರ್ಡ್ ಕಿತ, ಮೂರ್ಕಿತ ನೋಡೋ ಜನ ದರ್ಸನ್ನ್ ಫಿಲಿಮ್ಮ್ ಒಂದ್ಸರ್ತಿ ಕೂಡಾ ನೋಡಲ್ಲ ಕಣ್ಲಾ…”

ಊ ಕಣ್ಲಾ ಮಿ. ಕೋಳೀ ಮುರುಗನ್.. ಆ ಹುಡ್ಗ ಯಶ್ಶು ಬಂದ್ಮೇಲೇ ಅದ್ಯಾಕೋ ದರ್ಸನ್ನ್ ಮಂಕಾಗೈತೆ. ಯಶ್ಶು ಬರೋಗಂಟ ಮಾತ್ರ ದರ್ಸನ್ನ್ ಹವಾ ನಡೀತಿತ್ತು. ಬಂದ್ಮೇಲೆ ಯಶ್ಶುದೇ ಹವಾ ಅಂತೇಳ್ತು ಗೋಪಾಲಣ್ಣ.

ಥತ್ತೇರಿಕೆ ಬೆಳ್ಕ್ ಹರ್ಯೋ ಮುಂಚೆ ಸಿನ್ಮಾ ಸುದ್ದಿ ಮಾತಾಡ್ತಿದ್ದೀರಲ್ಲೋ ಪೆದ್ದ್ಮುಂಡೆಗಳಾ?? ಏನಾರ ರಾಜ್ಕೀಯ ಇಚಾರ ಹೇಳ್ರಲಾ ಅಂತ ವರಾತ ಎತ್ಬುಡ್ತು ಕಲ್ಲೇಶಿ..

ರಾಜ್ಕೀಯ ಅಂದಾಗ ನೆನ್ಪಾಯ್ತ್ಲೇ ಮುರುಗನ್, ನಿಮ್ಮ್ ರೇವಣ್ಣ ಏನೋ ಮಿಲ್ಕ್ ಮಿನಿಸ್ಟರ್ ಮಂಜು ಮ್ಯಾಕೆ ಭಾರೀ ಉರ್ಕಂಡೈತೆ ಅಂತೆ. ಮೊನ್ನೆ ಹಾಸ್ನದ ಡೇರೀ ಸರ್ಕಲ್ ಮ್ಯಾಕೆ ನಿಂತು ಏನೋ ಪರಿಸತ್ ಚುನಾವಣೆದಾಗ ಸೋತಿರ್ಬೋದು, ತಡೀರಪ್ಪ ೨೦೧೮ ಕ್ಕೆ ತೋರಿಸ್ತೀನಿ ರೇವಣ್ಣ ಯಾರಂತಾ.. ಕರೆಂಟ್ ಮಿನಿಸ್ಟ್ರು ಡೀಕೇಶೀಗೇ ಕ್ಯಾರೇ ಅನ್ನಲ್ಲ. ಇನ್ನಾ ಈ ಮಿಲ್ಕ್ ಮಿನಿಸ್ಟ್ರಿಗ್ ಯಾರಲಾ ಹೆದ್ರವ್ರು ಅಂತಾ ರೋಸಾವೇಸಾವಾಗಿ ಮಾತಾಡ್ತಂತೆ?? ಅಂತೇಳ್ತು ಗೋಪಾಲಣ್ಣ

ಅಗಳಗಳಗಳೋ ಗೋಪಾಲಣ್ಣ ಈ ಕರ್ನಾಟಕ ಬಿಜೆಪಿನವ್ರ ಕಥೆ ಏನ್ಲಾ?? ಎಲ್ಲಾ ಲೀಡರ್ರುಗಳೂ ಅಂಬ್ಲಿ ತಿಂದ್ಕೊಂಡು

ಕಂಬ್ಳೀ ಹೊದ್ಕೊಂಡು ಮೋದಿ ಜಪ ಮಾಡ್ಕೋಂಡು ಮಲ್ಕೊಂಡಾವೇ… ಶಿದ್ದಣ್ಣನ್ ಸರ್ಕಾರ ತಪ್ಪ್ ಮ್ಯಾಲೆ ತಪ್ಪ್ ಮಾಡ್ತಾ ಇದ್ರೂ ನರ ಸತ್ತೋದಂಗೆ ಆಡ್ತಾ ಇವೆ… ಬ್ಯಾನರ್ ಕಟ್ಟಿ ಪ್ರತಿಭಟನೆ ಮಾತ್ ಹಾಗಿರ್ಲಿ, ಮಾತೇ ಆಡ್ತಿಲ್ಲ. ಏನಲಾ ಆಗೈತೆ ಇವಕ್ಕೆ ಅಂತ ಕೇಳ್ತು ಕಲ್ಲೇಶಿ

ನೋಡ್ಲಾ ಕಲ್ಲೇಶೀ ಶಿದ್ದಣ್ಣನ್ ಟೇಮ್ ಚೆನ್ನಾಗಿದೆ ಕಣಪ್ಪಾ. ಅದ್ಕೇನೇ ನೋಡು ಶಿದ್ದಣ್ಣ ಆಫೀಸರ್’ಗೆ ಹೋಡೀಲೀ ಬಡೀಲಿ, ಅದ್ರ ಮಿನಿಸ್ಟರ್ಸ್ ಆಫೀಸರ್ಸ್ನ ಸಣ್ಸಣ್ಣ ಇಶ್ಯಕ್ಕೆ ಟ್ರಾನ್ಸ್ಪರ್ ಮಾಡ್ಲೀ ಅದ್ನಾ ಅಲ್ಲಾಡ್ಸಕೇ ಆಯ್ತಿಲ್ಲ. ಯಾವಾಗ್ಲೂ ಸರ್ಕಾರದ ಇರುದ್ದ ಓರಾಡ್ತಿದ್ದ ನಿಮ್ಮ್ ವಾಟಾಳು ತಮ್ಟೆ ಸಬ್ದಾನೂ ಯಾಕೋ ಇತ್ತಿತ್ಲಾಗೇ ಕೇಳಿಸ್ತಿಲ್ಲ. ಶಿದ್ದಣ್ಣ ಆಡಿದ್ದೇ ಆಟ ಅಂತೇಳ್ತು ಮುರುಗನ್..

ಉಗೀರೀ ನನ್ನ ಮಗನ ಮಖಕ್ಕೆ.. ಯಾರ್ಲಾ ಯೋಳಿದ್ದು ಶಿದ್ದಣ್ಣ ಆಡಿದ್ದೇ ಆಟ ಅಂತ. ಎಬ್ಬಾಳ ಬೈ ಎಲೆಕ್ಷನ್ದಾಗೆ ಭೈರತಿಗೆ ಟಿಕೆಟ್ ಕೊಡ್ಸಾಕೆ ಆಯ್ತೇನ್ಲಾ ಶಿದ್ದಣ್ಣಂಗೆ?? ತಾನೇ ಎಮ್ಮೆಲ್ಲೆ ಅಂತೇಳೀ ಇಡೀ ಎಬ್ಬಾಳಕ್ಕೆ ಲಾಡು ಹಂಚಿದ್ದ ಸುರೇಶ್ಗೂ, ಶಿದ್ದಣ್ಣಂಗೂ ಜಾಪರ್ ಶೆರೀಪ್ ಶಿವಾಜಿನಗರ ಕಬಾಬ್ ತಿನ್ಸಿದ್ದ್ ನೋಡಿಲ್ವೇನ್ಲಾ?? ಶಿದ್ದಣ್ಣ ಮಾತ್ಗೆ ಕಿಮ್ಮತ್ತೇ ಕೊಟ್ಟಿಲ್ಲಂತೆ ಹೈಕಮಾಂಡ್ ಅಂತೇಳ್ತು ಗೋಪಾಲಣ್ಣ.

ಇದೆಲ್ಲಾ ಖರ್ಗೆ ಕೆಲ್ಸ ಅಂತೆ ಕಣ್ಲಾ.. ಶೆರೀಪ್ನ ಮುಂದ್ಬಿಟ್ಟು ಖರ್ಗೆ ತನ್ನ ಕೆಲ್ಸ ಮಾಡ್ಕಂಡೈತೆ ಅಂತ ಮುರುಗನ್ ಹೇಳ್ತು. ಅದ್ಕೇ ಕಣ್ಲಾ ಯೋಗ್ರಾಜ್ ಭಟ್ರ ಏಳಿದ್ದು ಬೊಂಬೆ ಆಡ್ಸೋನು ಮ್ಯಾಲೆ ಕುಂತವ್ನೆ ಅಂತ. ಹೂಂ ನಡೀಲಾ ಭಾಳ ಟೇಮ್ ಆಗೈತೆ. ಅಸ್ಟ್ರೇಲಿಯಾ ಮ್ಯಾಲೆ ಇಂಡಿಯಾ ಗೆಲ್ಲುತ್ತೆ ಅಂತ ಬೆಟ್ಟಿಂಗ್ ಕಟ್ಟಿ ಎಲ್ಡು ಸಾವ್ರ ಬಂದೈತೆ. ನಡೀರ್ಲಾ ಬಡ್ಡೇತಾವ ಪಾರ್ಟಿ ಮಾಡೋಣ ಅಂತ ಮುರುಗನ್ ಹೇಳ್ತಿದ್ದಂತೆ ಮೂರೂ ಜನಾ ಜಾಗ ಖಾಲಿ ಮಾಡಿದ್ವು.

Facebook ಕಾಮೆಂಟ್ಸ್

Sudeep Bannur: Working as an Engineer, Loves being a Writer. Finds interest in Politics, Cricket, Acting, Mimicry, Cooking, Travelling.
Related Post