X

ಹೆಚ್ಚುತ್ತಿರುವುದು ಅಸಹಿಷ್ಣುತೆಯಲ್ಲ ಆತ್ಮ ಗೌರವ

ಅಸಹಿಷ್ಣುತೆ ಅಸಹಿಷ್ಣುತೆ ಅಂತ ಕೇಳಿ ಕೇಳಿನೇ ನಮ್ಮಲ್ಲಿ ಅಸಹಿಷ್ಣುತೆ ಹುಟ್ಟಲು ಶುರುವಾಗಿದೆ. ನಿಜವಾಗಿಯೂ ಅಸಹಿಷ್ಣುತೆಗೆ ಕಾರಣವೇನು ಅಂತ ಕೇಳಿದರೆ ಯಾರಿಗೂ ಗೊತ್ತಿಲ್ಲ. ಆದರೆ ಅಸಹಿಷ್ಣುತೆ ಇದೆ ಎನ್ನುವ ಕೂಗಂತೂ ಜೋರಾಗಿ ಕೇಳಿ ಬರ್ತಾ ಇದೆ. ಸದ್ಯದ ಮಟ್ಟಿಗೆ ಈ ಅವಾರ್ಡ್ ವಾಪಾಸಿಗಳೆಲ್ಲ ನಿತ್ತಿವೆಯಾದರೂ ಅದಿನ್ನೂ ಬೂದಿ ಮುಚ್ಚಿದ ಕೆಂಡದಂತಿದೆ.

ಸ್ನೇಹಿತರೇ ಕೆಲವು ವಿಷಯಗಳ ಕಡೆಗೆ ಗಂಭೀರವಾಗಿ ಗಮನ ಕೊಡೋಣ.

ಭಾರತ… ನಮ್ಮದೆಂತಹಾ ದೇಶ ಅಂದ್ರೆ, ಚೀನಾದ ಉಪಟಳ ತಾಳದೆ ಸಾವಿರಾರು ಟಿಬೆಟಿಯನ್ನರು, ನಿರಾಶ್ರಿರತಾಗಿ ದೇಶಕ್ಕೆ ಬಂದರು. ನಾವವರಿಗೆ ವಾಸಕ್ಕೆ ಅವಕಾಶ ಕೊಟ್ಟೆವು  ಮಾತ್ರವಲ್ಲದೆ ಆಧಾರ್ ಕಾರ್ಡನ್ನೂ ಸಹ ನೀಡಿದೆವು.. ಯಾರ್ಯಾರೋ, ಎಲ್ಲೆಲ್ಲಿಂದಲೋ ಬಂದವರಿಗೆ ಆಶ್ರಯ ಕೊಟ್ಟು ನಮ್ಮವರನ್ನಾಗಿ ಮಾಡಿಕೊಂಡ ದೇಶದಲ್ಲಿ ಅಸಹಿಷ್ಣುತೆ ಹುಟ್ಟಲು ಸಾಧ್ಯವಿದೆಯೇ?  ಸಾವಿರಾರು ಜನ ಪಶ್ಚಿಮ ಬಂಗಾಳ ಮತ್ತು ಅಸ್ಲಾಂನಲ್ಲಿ ಬಾಂಗ್ಲಾದಿಂದ ಅಕ್ರಮವಾಗಿ ಇವತ್ತಿಗೂ ನುಸುಳಿ ಬರುತ್ತಿದ್ದಾರೆ. ಅದನ್ನು ತಡೆಯಬೇಕು ಅಂತ ನಾವು ಬೊಬ್ಬೆ ಹೊಡೆದಿದ್ದೇವೆ ಬಿಟ್ಟರೆ ಬಂದವರನ್ನು  ಕತ್ತು ಹಿಡಿದು ಹೊರದಬ್ಬಿಲ್ಲ. ಅಂತಹಾ ದೇಶದಲ್ಲಿ ಅಸಹಿಷ್ಣುತೆ ಇದೆಯೆಂದರೆ ನಂಬಲು ಸಾಧ್ಯ ಇದ್ಯಾ? ಸೈಯದ್ ಅಲಿ ಶಾ ಗಿಲಾನಿ ಅಂತ ಒಬ್ಬ ಇದಾನೆ. ನಮ್ಮ ದೇಶದೊಳಗೇ ಇದ್ದುಕೊಂಡು ನಮ್ಮದೇ ನೀರು ಕುಡಿದುಕೊಂಡು ಕಾಶ್ಮೀರ ಪಾಕಿಸ್ತಾನಕ್ಕೆ ಸೇರಬೇಕೆಂದು ಶತಾಯಗತಾಯ ಪ್ರಯತ್ನಿಸುತ್ತಿದ್ದಾನೆ. ಉಂಡ ಮನೆಗೆ ದ್ರೋಹ ಬಗೆಯುತ್ತಿರುವ ಈತನನ್ನೂ ನಾವೇನು ಗಡಿಪಾರು  ಮಾಡಿಲ್ಲ.  ಇದು ಅಸಹಿಷ್ಣುತೆಯಾ?? ಅಮಾಯಕ ನೂರಾರು ಜೀವಗಳನ್ನು ಬಲಿಕೊಟ್ಟ ತಪ್ಪಿಗೆ ಯಾರೋ ಭಯೋತ್ಪಾದಕನಿಗೆ ನೇಣುಗಂಬಕ್ಕೇರಿಸುತ್ತಾರೆ. ಅಷ್ಟು ಹೊತ್ತಿಗೆ ಎಲ್ಲಿರ್ತಾರೋ ಗೊತ್ತಿಲ್ಲ ಈ ಅರುಂಧತಿ ರಾಯ್ ಮತ್ತು ಶೋಭಾ ಡೇ ಮುಂತಾದವರು, ಮಾನವ ಹಕ್ಕನ್ನು ಹಿಡಿದು ಓಡಿ ಬರ್ತಾರೆ. ಅಂತಹವರನ್ನು ಸಹಿಸಿಕೊಂಡಿದ್ದೇವೆಂದರೆ ಮತ್ತಿನ್ನೆಲ್ಲಿಯ ಅಸಹಿಷ್ಣುತೆ?  ಯಾಕೂಬ್ ಮೆನನ್’ಅನ್ನ್ನು ಗಲ್ಲಿಗೇರಿಸಿದಾಗ ಹುತಾತ್ಮ ಯೋಧನ ಮೆರವಣಿಗೆ ಮಾಡಿದ ರೀತಿಯಲ್ಲಿ ಕೆಲವು ದೇಶದ್ರೋಹಿಗಳು ಆತನ ಶವ ಮೆರವಣಿಗೆ ಮಾಡುತ್ತಾರೆ. ಇಂತಹ  ದೇಶದ್ರೋಹಿಗಳನ್ನು, ಮತಾಂಧರನ್ನೆಲ್ಲಾ ಬಗಲಲ್ಲೇ ಇಟ್ಟುಕೊಂಡು, ಅನಾದಿ ಕಾಲದಿಂದಲೂ ಸಹಿಸಿಕೊಂಡು ಬಂದಿರುವ ಭಾರತದಂತಹ ಭಾರತ ದೇಶದಲ್ಲಿ ಎಲ್ಲಿಂದ ಬಂತು ಈ  ಅಸಹಿಷ್ಣುತೆ?

ನಿಮಗೆಲ್ಲರಿಗೂ ಗೊತ್ತಿರುವಂತೆ ನಮ್ಮ ಪ್ರಧಾನಿಗಳು  ನಮ್ಮೆಲ್ಲರ ಒಳಿತಿಗಾಗಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಜಾಗತಿಕ ಮಟ್ಟದಲ್ಲಿ ಮೂರು ಕಾಸಿಗೆ ಹರಾಜಾಗಿದ್ದ ದೇಶದ  ಮಾನವನ್ನು ಇಪ್ಪತ್ತು ತಿಂಗಳುಗಳಲ್ಲಿ ಮರಳಿ ತಂದು ದೇಶವನ್ನ್ನು ಬಹು ವೈಭವೋಪೇತ ದಿನಗಳತ್ತ ಕೊಂಡುಯ್ಯುತ್ತಿದ್ದಾರೆ. ಅವರ ಕಾರ್ಯ ದಕ್ಷತೆ ಹೇಗಿದೆಯೆಂಬುದನ್ನು ಕೆಳಗಿನ ಮಾತುಗಳು ಬಿಂಬಿಸುತ್ತವೆ.

೧. ಬರಾಕ್ ಒಬಾಮ ಹೇಳ್ತಾರೆ “ ಮೋದಿ ಅತ್ಯಂತ ಪ್ರಾಮಾಣಿಕ ರಾಜಕಾರಣಿ, ಭಾರತದ ಅಭಿವೃದ್ಧಿಯ ಕುರಿತಾಗಿ ಮೋದಿಗೆ ಸ್ಪಷ್ಟವಾದ ಗುರಿಯಿದೆ”

೨. “ ಮೋದಿಯ ಅಲೋಚನೆಗಳು ಬುಲೆಟ್ ಟ್ರೈನಿಗಿಂತಲೂ ವೇಗದಲ್ಲಿ ಓಡ್ತಾ ಇದೆ” ಅಂತ ಜಪಾನ್ ಪ್ರಧಾನಿ ಹೇಳ್ತಾರೆ

೩. ಶಾಂತಿದೂತ ದಲೈಲಾಮ ಹೇಳುತ್ತಾರೆ “ಭಾರತದಲ್ಲಿ ಧಾರ್ಮಿಕ ಅಸಹಿಷ್ಣುತೆ ಎಂಬುದು ಇಲ್ಲವೇ ಇಲ್ಲ ಎಂದು. ಧಾರ್ಮಿಕ ಸಹಿಷ್ಣುತೆಗೆ ಭಾರತ ಉತ್ತಮ ಉದಾಹರಣೆಯಾಗಿದೆ”

೪. ಸಣ್ಣ ಸಣ್ಣ ತಪ್ಪೆಸಗಿದವರೂ ಕಠಿಣ ಶಿಕ್ಷೆ ನೀಡುವ ಸೌದಿ ಅರೇಬಿಯಾದ ಪತ್ರಿಕೆಯೊಂದು “ಜಗತ್ತಿನಲ್ಲಿ ಭಾರತದಂತಹ ಸಹಿಷ್ಣು ರಾಷ್ಟ್ರ ಮತ್ತೊಂದಿಲ್ಲ” ಎಂದು ಹೇಳುತ್ತದೆ.

೫. ಇದಕ್ಕೂ ಹೆಚ್ಚಿಗೆ ನಿಮ್ಮ ಮನ ಮುಟ್ಟುವಂತಹ ಉದಾಹರಣೆ ಹೇಳುತ್ತೇನೆ ಕೇಳಿ. ನಮ್ಮ ದೇಶದ ವಿರೋಧ ಪಕ್ಷದ ನಾಯಕರು ಶಾಲಾ ಮಕ್ಕಳನ್ನು ಕೇಳ್ತಾರೆ “Do you think Svaccha bharat is working?” ಜನ ‘ಯೆಸ್’ ಅಂತ ಹೇಳಿದ್ರು. ಒಂದ್ಸಲ ಕಕ್ಕಾಬಿಕ್ಕಿ ಜನ.. ಮುಂದಿನ ಪ್ರಶ್ನೆಗಾದರೂ ನೋ ಹೇಳ್ಬಹುದು ಅನ್ಕೊಂಡು “Do you think Make in India working?” ಅಂತ ಕೇಳ್ತಾರೆ , ಜನ ಇನ್ನೂ ಜೋರಾಗಿ ಯೆಸ್ ಅನ್ನುತ್ತಾರೆ.

ಅದರರ್ಥ ಏನು? ನಮ್ಮ ಪ್ರಧಾನಿಗಳು ಚೆನ್ನಾಗಿ ಕೆಲಸ ಮಾಡ್ತಾ ಇದಾರೆ ಅಂತ ಅಲ್ವಾ?  ಜನ ಯೆಸ್ಸ್ ಎಂದು ಜೋರಾಗಿ ಕೂಗಿಕೊಂಡ ಬಳಿಕವೂ “I dont think so” ಎಂದು ಹೇಳುತ್ತಿರುವುದು ಜನರ ಹಾದಿ ತಪ್ಪಿಸಿದಂತೆ ಅಲ್ಲವೇ? ಈ ಅಸಹಿಷ್ಣುತೆ ಎನ್ನುವುದು ಸಹ ಇದೇ ರೀತಿಯ ಹಾದಿ ತಪ್ಪಿಸುವ, ಅಪಪ್ರಚಾರದ ವ್ಯವಸ್ಥೆಯಷ್ಟೇ, ರಾಜಕೀಯ ಲಾಭಕೋಸ್ಕರ, ಪ್ರಚಾರಕ್ಕಾಗಿ ಸೃಷ್ಟಿಸಿದ ಬೃಹನ್ನಾಟಕವೇ ಹೊರತು ಮತ್ತೇನಲ್ಲ.

ಅಸಹಿಷ್ಣುತೆಯಿದೆ ಎನ್ನುವವರೆಲ್ಲಾ  ಮೋದಿ ಬಂದ ಮೇಲೆ ಅಸಹಿಷ್ಣುತೆ ಹೆಚ್ಚಾಯಿತು ಎಂದು  ಬಡಿದುಕೊಳ್ಳುತ್ತಿದ್ದಾರೆಯೇ  ಹೊರತು ಮೋದಿ ಬರುವುದಕ್ಕೆ ಮೊದಲು ನಡೆದ ಅಪಸವ್ಯಗಳ ಬಗ್ಗೆ ಚಕಾರವೆತ್ತುವುದಿಲ್ಲ.  ನಿಜ ಹೇಳಬೇಕಾದರೆ ದೇಶದಲ್ಲಿ ಮೋದಿಯ ವಿರುದ್ಧ ಅಸಹಿಷ್ಣುತೆ ಇದೆಯೇ ಹೊರತು ಯಾವುದೇ ಧಾರ್ಮಿಕ ಅಸಹಿಷ್ಣುತೆಯಿಲ್ಲ. ಆ ಮನುಷ್ಯ ನಮಗಾಗಿ ವರ್ಷದಲ್ಲಿ ಒಂದು ದಿನವೂ ರಜೆ ಮಾಡದೆ ದಿನದ ಹದಿನೆಂಟು ಗಂಟೆ ದುಡಿಯುತ್ತಾರೆ. ಇದುವರೆಗೆ ಜಾರಿಗೆ ತಂದಿರುವ ಯೋಜನೆಗಳನೆಲ್ಲಾ ಒಂದಕ್ಕಿಂತ ಒಂದು ವಿಭಿನ್ನ. ಹಿಂದೆಲ್ಲಾ ನಮಗೆ “ಈ ಸರ್ಕಾರ ಏನು ಮಾಡೀತು? ಅಷ್ಟೇ ಬಿಡಿ” ಎನ್ನುವ ಅನುಮಾನಗಳಿರುತ್ತಿದ್ದರೆ, ಈ ಸರ್ಕಾರ ಬಂದ ಮೇಲೆ “ಸರ್ಕಾರದಿಂದ ಹೀಗೂ ಮಾಡಲು ಸಾಧ್ಯವಿದೆಯೇ? ಗ್ರೇಟ್!” ಎನ್ನುವ  ಭಾವ ಮೂಡಿದೆ. ಮೋದಿ ವಿದೇಶ ಪ್ರವಾಸ ಕೈಗೊಂಡು ಅಲ್ಲಿ ನಮ್ಮವರನ್ನುದ್ದೇಶಿಸಿ ಮಾತನಾಡಿದಾಗ, ವಿದೇಶದಲ್ಲಿ ಸಂಸ್ಕೃತ ಮೊಳಗಿದಾಗ, ಮಂತ್ರಕ್ಕೆ ಮಾವಿನಕಾಯಿ ಉದುರಿದಂತೆ ಮೋದಿಯ ಒಂದೇ ಒಂದು ಮಾತಿಗೆ ಯುಎಯಿ ಸರ್ಕಾರ ದೇವಸ್ಥಾನ ನಿರ್ಮಿಸಲು ಜಾಗ ಕೊಟ್ಟಾಗ, ನೂರಾರು ವರ್ಷಗಳ ಕಾಲ ನಮ್ಮನ್ನು ದಾಸ್ಯಕ್ಕೆ ತಳ್ಳಿದ್ದ  ಬ್ರಿಟನ್’ನ  ಪ್ರಧಾನಿ “ಅಚ್ಛೇ ದಿನ್ ಜರೂರ್ ಆಯೇಗಾ” ಎಂದು ಹೇಳಿದಾಗ ನಾವೆಲ್ಲಾ ಭಾರತೀಯರೆಂಬ ಕಾರಣಕ್ಕೆ ಹೆಮ್ಮೆ ಪಟ್ಟಿದ್ದೇವೆ, ಹಾವಾಡಿಗರೆಂದು ಕರೆಸಿಕೊಳ್ಳುತ್ತಿದ್ದ ನಮಗೆ ದೇಶದಿಂದ ಹೊರ ಹೋದರೆ ನಮಗೆ ಸಿಗುತ್ತಿದ್ದ ಗೌರವವೂ ಹೆಚ್ಚಿದೆ. ಸಾಲು ಸಾಲು ಹಗರಣಗಳಿಂದ ಭ್ರಮನಿರಸನಗೊಂಡಿದ್ದ  ನಮಗೆ ಹೊಸ ಆಶಾವಾದ ಮೂಡಿರುವುದಂತೂ ಸತ್ಯ. ನಿಜ ಹೇಳಬೇಕೆಂದರೆ ಹೆಚ್ಚುತ್ತಿರುವುದು ಅಸಹಿಷ್ಣುತೆಯಲ್ಲಿ ಆತ್ಮ ವಿಶ್ವಾಸ, ಹೆಚ್ಚುತ್ತಿರುವುದು ನಮ್ಮ  ಆತ್ಮ ಗೌರವ.

ಇಷ್ಟು ಹೇಳಿದ ಮೇಲೂ  ಅಸಹಿಷ್ಣುತೆ ಇದೆ ಎಂದು ಬೊಬ್ಬೆಹೊಡೆಯುವವರಿಗೆಲ್ಲಾ ಎರಡು ಸಾಲಿನ  ಒಂದೇ ಉತ್ತರ ಕೊಡಬಲ್ಲೆ.  ಅದು ಹೀಗಿದೆ..” ಅಲಗ್ ಭಾಷಾ, ಅಲಗ್ ವೇಷ್, ಫಿರ್ ಭೀ ಅಪ್ನಾ ಏಕ್ ದೇಶ್. ವಿವಿಧತಾ ಮೇ ಏಕತಾ, ಯಹೀ ಹೇ ಹಮಾರ ವಿಶೇಷತಾ”. ತಲೆ ಇದ್ದೋರಿಗೆ ಇದು ಅರ್ಥ ಆಗತ್ತೆ!

Facebook ಕಾಮೆಂಟ್ಸ್

Shivaprasad Bhat: Engineer by profession writer by passion, Shivaprasad Bhat finds interest in Politics, Cricket, Acting etc. He tries to express his views on various issues through his writings.
Related Post